Monday 31 December 2012

ಹೊಸ ಅಂಕದ ಅಭಿನಯ


(ಪ್ರೀತಿಯ ಸ್ನೇಹಿತರಿಗೆ ಹೊಸ ವರ್ಷದ ಶುಭಾಷಯಗಳು)

ಅಂಕದ ಹಳೆ ಪರದೆಯು ಜರಿಯಿತು.
ಹೊಸ ಅಂಕದ ಸನ್ನಿವೇಶವು ಕಣ್ಣ ಮುಂದೆ
ಮತ್ತೇ ಬಣ್ಣ ಹಚ್ಚಬೇಕು, ಗೆಜ್ಜೆಕಟ್ಟಬೇಕು.
ಥರಾವರಿ ಬಟ್ಟೆ ಹಾಕಬೇಕು.
ಹೊಸ ಅಂಕದ ಸಂಭಾಷಣೆಯನು ಬಾಯಿಪಾಠಮಾಡಿ
ಮನಸ್ಪೂರ್ವಕವಾಗಿ ಅಭಿನಯಿಸಬೇಕು
ವರ್ಷವೂ
ಎಲ್ಲರೂ ನಮ್ಮನ್ನು ನೋಡುತ್ತಿದ್ದಾರೆ.
ಚೆನ್ನಾಗಿ ಅಭಿನಯಿಸುತ್ತಿಯಾ ಅಂತ ಹೇಳುತ್ತಿದ್ದಾರೆ.
ಹಳೆಯ ಅಂಕದ ಎಲ್ಲ ಬಂಧಗಳು ಮರೆಯಾಗುತಿಹುದು
ನಾಟಕದ ಸೂತ್ರಧಾರ ಮೇಲೆ ಕೂತಿದ್ದಾನೆ.
ಒಂದು ಕೈಯಲ್ಲಿ ಅಂಕದ ದಾರ, ಇನ್ನೊಂದು ಕೈಯಲ್ಲಿ ಸನ್ನಿವೇಶಗಳ ಹಾಳೆಗಳು
 ಹಿಡಿದು ಮೇಲೆ ನಿಂತಿದ್ದಾನೆ. ಕಣ್ಣಸನ್ನೆಯಲ್ಲಿ ನಮ್ಮನ್ನು ಆಡಿಸುತ್ತಿದ್ದಾನೆ.
ಸಹನಟರ ಜೊತೆ ನಮ್ಮ ಜೀವನದ ನಾಟಕ ವರ್ಷವೂ
ಬರುವ ವರ್ಷವೂ
ಮುಗಿಯದ ನಾಟಕದ ಪಾತ್ರಧಾರಿಗಳು ನಾವಾಗಿ
ಮೇಲಿನವ  ಎಣ್ಣೆಯಾಗಿದ್ದಾನೆ.
ದೀಪವಾಗಿ ಉರಿಯಬೇಕು, ಬೆಳಕ ಹರಿಸಬೇಕು
ಇದ್ದಷ್ಟು ದಿನ



Friday 28 December 2012

ನನ್ನಾಸೆಗಳ ಕೆಣಕದಿರು



ಮತ್ತೊಮ್ಮೆ ಹೇಳುವೆ ನನ್ನಾಸೆಗಳ ಕೆಣಕದಿರು
ಅವು ಜ್ವಾಲಾಗ್ನಿಯಂಥಹವು!
ಒಳಗೊಳಗೆ ಕೆನ್ನಾಲಿಗೆಯ ಬೆಂಕಿಯನ್ನಿಟ್ಟುಕೊಂಡು
ಹರಿಯುವ ನದಿಯ ಸೊಬಗನ್ನು
ಮುಖದಲ್ಲಿಟ್ಟುಕೊಂಡಿದ್ದೇನೆ.
ಆಕರ್ಷಣೆಯ ಸಿರಿಯನು ದೂರವಿಟ್ಟು
ಇದನು ಸಾಕುತ್ತಿದ್ದೇನೆ.
ನನ್ನೊಳಗಿನ ಬೆಂಕಿಯನು ನಂದಿಸುತ್ತಿದ್ದೇನೆ.
ನನ್ನಾಸೆಗಳನು ಬತ್ತಲು ಬಿಡು... ಆರಲು ಇಡು...
ಮತ್ತೊಮ್ಮೆ ಹೇಳುವೆ, ನನ್ನಾಸೆಗಳ ಕೆಣಕದಿರು
ಅವು ಜ್ವಾಲಾಗ್ನಿಯಂಥಹವು!
ಹೆದರಿಕೆಯು ನನಗಿಲ್ಲ,
ಕೆಣಕಿದರೆ ನನ್ನಾಸೆಗಳು ನಿನ್ನನ್ನೇ ಸುಟ್ಟುಬಿಡುವವು
ಅನ್ನುವ ಕಾಳಜಿಯ ಅರಿಕೆ ಅಷ್ಟೇ !


Thursday 27 December 2012

ಬನವಾಸಿಗರು ಪುಣ್ಯವಂತರು ಅಂದ ನಾಡೋಜ ಡಾ. ದೇಜಗೌ



ಇತ್ತೀಚಿನ ಒಂದು ಸಂದರ್ಭವನ್ನು  ಬನವಾಸಿಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು.

ಕಳೆದ ವಾರ ನಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಅಧ್ಯಕ್ಷರಾಗಿ ಬನ್ನಿ ಅಂತ ಕನ್ನಡನಾಡಿನ ಹೆಸರಾಂತ ಹಿರಿಯ ಸಾಹಿತಿಗಳು, ಪಂಪ ಪ್ರಶಸ್ತಿ ಪುರಸ್ಕೃತರು ಆಗಿರುವ ನಾಡೋಜ ಡಾ. ದೇ. ಜವರೇಗೌಡರನ್ನು ಭೇಟಿ ಮಾಡಲು ಮೈಸೂರಿನ ಅವರ ಕುವೆಂಪು ಕುಟೀರಕ್ಕೆ ಹೋಗಿದ್ದೆ. ದೇಜಗೌ ಅವರಿಗೆ ಈಗಾಗಲೇ 94 ವರ್ಷವಾಗಿದೆ. ನಮ್ಮ ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಅವರು ಬರೆದ ಒಂದು ಗದ್ಯ ವಿದೆ. ನೀವೆಲ್ಲ ದೇಜಗೌರ ಗದ್ಯವನ್ನು ಓದಿರುವಿರೆಂದು ನಂಬಿರುತ್ತೇನೆ. ರಾಷ್ಟ್ರಕವಿ ಕುವೆಂಪು ಅವರ  ನೆಚ್ಚಿನ ಶಿಷ್ಯರಾಗಿರುವ ದೇಜಗೌ, ತಮ್ಮ ಇಳಿ ವಯಸ್ಸಿನಲ್ಲೂ ಕುವೆಂಪು ಹೆಸರಿನಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಕೂಡ ಆಗಿದ್ದವರು. ಕುವೆಂಪು ಹೆಸರಿನಲ್ಲಿ ಪ್ರತಿವರ್ಷ ಅನೇಕ ಸಾಹಿತ್ಯಕ ಕೆಲಸಗಳನ್ನು ಮಾಡುತ್ತಾರೆ. ಕನ್ನಡ ನಾಡಿನ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ದೇಜಗೌ ಅವರನ್ನು ರಾಜಕೀಯವಾಗಿ ಸ್ವಲ್ಪ ಪ್ರಭಾವಿ ಸಾಹಿತಿ ಅಂದರೂ ತಪ್ಪೇನಿಲ್ಲ. ದೇಜಗೌ ಯಾವುದಾದರೂ ಹೋರಾಟದಲ್ಲಿ ಭಾಗವಹಿಸುತ್ತಾರೆ ಅಂದರೆ, ಚಳುವಳಿಗೆ ಬೇರೆ ರೀತಿಯ ಶಕ್ತಿ ಸಿಗುತ್ತದೆ. ಹೀಗಾಗಿ ಅನೇಕ ಕನ್ನಡ ಪರ ಚಳುವಳಿಗಳಲ್ಲಿ ದೇಜಗೌ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.

ದೇಜಗೌ ಅವರನ್ನು ಕುಟೀರದಲ್ಲಿ ಭೇಟಿ ಮಾಡಿ ನನ್ನ ಪರಿಚಯ ಮಾಡಿಕೊಂಡೆ. `ನಾನು ಬನವಾಸಿಯವ' ಅಂತ ಹೇಳಿದ ಕೂಡಲೇ ಅವರು ಹೇಳಿದ್ದು ಒಂದೇ ಮಾತು. `ಬನವಾಸಿಯಲ್ಲಿ ಹುಟ್ಟಿದ ನೀವೆಲ್ಲಾ ಪುಣ್ಯವಂತರುಅಂತ. ಅವರ ಮಾತಿಗೆ, ನಾನು ಉತ್ತರ ಕೊಡಲಾಗಲಿಲ್ಲ. ಕೊನೆಗೆ `ಹೌದು ಸರ್ನಿಜಕ್ಕೂ ನಾವೆಲ್ಲಾ ಪಂಪನ ನಾಡಿನಲ್ಲಿ ಹುಟ್ಟಿದ್ದೇವೆ, ಹಾಗಾಗಿ ಪುಣ್ಯವಂತರು, ನಿಮ್ಮ ಮಾತು ನಿಜಅಂತ ಹೇಳಿದೆ. 94 ವರ್ಷದ ದೇಜಗೌ ಮಂಡ್ಯ-ಮೈಸೂರು ಪ್ರಾಂತ್ಯದಲ್ಲಿ ಹುಟ್ಟಿದವರು, ಆಡಿದವರು, ಒಕ್ಕಲಿಗರ ಮನೆತನದಲ್ಲಿ ಹುಟ್ಟಿದರೂ, ತುಂಬಾ ಕಷ್ಟಪಟ್ಟು ವಿದ್ಯೆಯನ್ನು ಪಡೆದವರು. ಮೈಸೂರು ಅರಸರ ಆಳ್ವಿಕೆಯನ್ನು ನೋಡಿದವರು, ಕನ್ನಡದ    ಹಳೆಯ  ಹಾಗೂ  ಸಮಕಾಲೀನ ಸಾಹಿತಿಗಳನ್ನು ಬಲ್ಲವರು. ಮೈಸೂರು, ಬೆಂಗಳೂರು ಸಾಹಿತ್ಯದ ವಲಯದಲ್ಲಿ ಗುರುತಿಸಿಕೊಂಡರೂ, ಈಗ ಅಪ್ಪಟ ಮೈಸೂರಿಗರಾಗಿರುವ ದೇಜಗೌ  ಬನವಾಸಿಯಲ್ಲಿ ಹುಟ್ಟಿದವರನ್ನು ಪುಣ್ಯವಂತರು ಅಂತ ಹೇಳಿರುವುದು ಬನವಾಸಿಗರಾದ ನಾವೆಲ್ಲ ಹೆಮ್ಮೆಪಡುವಂತಹ ವಿಷಯ
ದೇಜಗೌ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಜನವರಿ 6,2013ರಂದು ಮೈಸೂರಿನಲ್ಲಿ ನಡೆಯುವ ನಮ್ಮ ಕಾರ್ಯಕ್ರಮಕ್ಕೆ ಡಾ.ದೇಜಗೌ ಅಧ್ಯಕ್ಷರಾಗಿ ಆಗಮಿಸಲಿದ್ದಾರೆ