Thursday 29 December 2011

ರಸಋಷಿಯ ಮನೆಯಲ್ಲಿ....




ರಸಋಷಿ, ರಾಷ್ಟ್ರಕವಿ, ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ತಂದ ಸರಸ್ವತಿ ಪುತ್ರ ಕುವೆಂಪುರವರ ಜನ್ಮದಿನ ಇಂದು. ಕುಪ್ಪಳ್ಳಿ ವೆಂಕಟಪ್ಪ ಗೌಡ ಪುಟ್ಟಪ್ಪ ಕನ್ನಡ ಸಾಹಿತ್ಯದ 20ನೇ ಶತಮಾನದ ಆದಿಪುರುಷರಾಗಿ ಕಾಣುವ ಚಿರಸ್ಮರಣೀಯ ಶಕಪುರುಷ. ಈ ಹಿಂದೆ  ಕುವೆಂಪು ಹುಟ್ಟಿದ, ಆಟವಾಡಿದ, ಆ ಕಾಡಿನ ಮನೆಯಲ್ಲಿ ಕುವೆಂಪು ತಂದೆ ವೆಂಕಟಪ್ಪ, ಗೌಡ್ತತನ ಮಾಡುತ್ತಿದ್ದ ದರ್ಬಾರಿನ  ಮನೆಗೆ ಹೋಗುವ ಸುಯೊಗ ನನಗೆ ಸಿಕ್ಕಿತ್ತು. ಮನೆಯನ್ನು ಸಂಪೂರ್ಣವಾಗಿ ಒಂದು ಟ್ರಸ್ಟ್ ವಹಿಸಿಕೊಂಡಿದ್ದು ಕುವೆಂಪುರವರ ಮನೆಯನ್ನು ಒಂದು ಐತಿಹಾಸಿಕ ನೆಲೆಯನ್ನಾಗಿ ಮಾಡಿದ್ದಾರೆ. ಇದನ್ನು ಕನ್ನಡದ ಮುಂದಿನ ತಲೆಮಾರಿಗೆ ಕುವೆಂಪು ಎಂಬ ಶಕಪುರುಷನನ್ನು ಪರಿಚಯಸುವ ನಿಟ್ಟಿನಲ್ಲಿ ಮಾಡಿದ್ದಾರೆ. ಅವರ ಈ ಕನ್ನಡ ಕೈಂಕರ್ಯವನ್ನು ಮೆಚ್ಚಲೇಬೇಕು.   ಆ ಸುತ್ತಲಿನ ಕುವೆಂಪು ಆಂಗಣದ ಸೌಂದರ್ಯವನ್ನು ಕೇವಲ ಬಾಯಿಮಾತು, ಶಬ್ದಮಣಿಗಳ ಮೂಲಕ ಕಟ್ಟಿಕೊಡುವುದು ತುಂಬಾ ಅಸಾಧ್ಯದ ಮಾತು.
ಇಂದು ತೀರ್ಥಹಳ್ಳಿಯ ಕುಪ್ಪಳ್ಳಿಯ ಅವರ ಮನೆಯಲ್ಲಿ ಕುವೆಂಪು ಇಲ್ಲ. ಆದರೆ ಅವರ ಮಾತುಗಳು ಇಂದಿಗೂ ಕೇಳುತ್ತದೆ, ಅವರು ಓಡಾಡಿದ ಹಾಗೆ ಸದ್ದಾಗುತ್ತದೆ. ಗಾಳಿಯಲ್ಲಿ ಅವರು ಬರೆದ ಕನ್ನಡ ಅಕ್ಷರಗಳು ಮುಖಕ್ಕೆ ಬಂದು ಅಪ್ಪಳಿಸುತ್ತವೆ. ಮನೆಯ ಎದುರುಗಡೆ ಕುಳಿತ ಕುವೆಂಪುರವರು, ಇಡೀ ಜಗತ್ತಿನ ಕಣ್ಣೇ ಈ ಮನೆಯನ್ನು ನೋಡುತ್ತಿರುವಾಗ, ಕುವೆಂಪು ಮಾತ್ರ ಪ್ರಸನ್ನವದನರಾಗಿ ಪ್ರಶಾಂತ ಚಿತ್ತದಿಂದ ಮನೆಯನ್ನು ನೋಡುತ್ತಿದ್ದಾರೆ. ಕುವೆಂಪು ಮನೆಯ ಒಳಗೆ ಓಡಾಡಿದಾಗ ಆದ ಸಂತೋಷವನ್ನು ಈ ಮೂಲಕ ಹೇಳುವುದು ತುಂಬಾ ಕಷ್ಟ.
ಒಳಾಂಗಣದಲ್ಲಿ ಕುವೆಂಪುರವರು ಬಾಲ್ಯದಲ್ಲಿ ಬಳಸಿದ ವಸ್ತುಗಳು, ಅವರ ತಂದೆ ತಾತರ ಕಾಲದಿಂದಲೂ ಇರುವ ಮನೆ ಬಳಕೆಯ ವಸ್ತುಗಳು, ಪಾತ್ರೆ ಪಗಡು, ಕೃಷಿಗೆ ಸಂಬಂಧಪಟ್ಟ ಸಲಕರಣೆಗಳು, ಎತ್ತಿನಗಾಡಿ, ಪೂಜಾ ಸಾಮಾನು, ಕುವೆಂಪುರವರು ಮದುವೆಯಾದ ಮರದ ಮಂಟಪ ಜಾಗ , ಅವರಿಗೆ ಸಂದ ಪ್ರಶಸ್ತಿಗಳು, ಪದಕಗಳು, ಬರೆದ ಪುಸ್ತಕಗಳು, ನೆನಪಿನ ವಸ್ತುಗಳು, ಇಡೀ ಮನೆಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಗೌರವ ಮೌನ.
ಮನೆಯ ಪ್ರಾಂಗಣದ ಸುಂದರ ತಾಣ, ಮನೆಯ ಔಟ್ಲುಕ್, ಹಸಿರು ಅಂಗಣ, ಸುತ್ತಲಿನ ಹಸಿರು ಬೆಟ್ಟಗುಡ್ಡಗಳ ತಪ್ಪಲು, ಕವಿಶೈಲದ ಸೋಬಗು ಹೀಗೆ ಎಲ್ಲವೂ ಕ್ಯಾಮೆರಾ ಕಣ್ಣಿಗೆ ಸ್ವರ್ಗವನ್ನು ಕಟ್ಟಿಕೊಡುತ್ತದೆ. ನಮ್ಮಂತ ದೇವರು ಕೊಟ್ಟ ಕಣ್ಣಿಗೆ ಕಿಚ್ಚು ಹಚ್ಚಿಸುವ ಈ ಸೊಬಗು, ಮಾನವ ನಿರ್ಮಿತ  ಕ್ಯಾಮೆರಾ ಈ ಸಿರಿಯನ್ನು ಬಿಟ್ಟಿತೇ..?
 ನಮ್ಮ ಜೊತೆ ಇದ್ದ ಶಿವಕುಮಾರ್ ಕುಪ್ಪಳ್ಳಿಯ ಮನೆಯನ್ನು ಬಹುಸುಂದರವಾಗಿ ತಮ್ಮ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ.
ಕುವೆಂಪುರವರ ಜನ್ಮದಿನದ ಪ್ರಯುಕ್ತ ಕುವೆಂಪು ಮನೆಗೆ ಭೇಟಿ ಇಟ್ಟ ಸಾಂದರ್ಭಿಕವನ್ನಿಟ್ಟುಕೊಂಡು  ಕುವೆಂಪುರವರಿಗೆ ಸಂಬಂಧಪಟ್ಟ ಕೆಲವು ಅಪರೂಪದ ಛಾಯಾಚಿತ್ರಗಳು ಹಾಗೂ ಫೋಟೋ ಗ್ಯಾಲರಿಯ ಮಾತುಗಳು.

                                                         ಹೂಗಳ ರಾಶಿಯಲ್ಲಿ ಮನೆಯ ಸೌಂದರ್ಯ...!
(ಈ ಫೋಟೋಗಳ ಮೇಲೆ ಕ್ಲಿಕ್ ಮಾಡಿದರೆ ಹೈ ರೆಸಿಲುಷನ್ ಮೂಲಕ ಫೋಟೋ ಸೌಂದರ್ಯವನ್ನು ಸವಿಯಬಹುದು)
ಮನೆಯ ಸೋಬಗನ್ನು ಬಣ್ಣಸುವುದು ತುಂಬಾ ಕಷ್ಟ
ಕುವೆಂಪು ತಮ್ಮ ಮನೆಯನ್ನು ನೋಡುತ್ತಿದ್ದಾರೆ

 ಕುವೆಂಪುರವರಿಗೆ ಸಂದ ಪ್ರಶಸ್ತಿ, ಪದಕ, ಗೌರವಗಳ ನೆನಪಿನುಳಿಕೆಗಳು

ಬರೆದ ಪುಸ್ತಕಗಳ ಸ್ಯಾಂಪಲ್ಗಳು


`ಕರ್ನಾಟಕ ರತ್ನ' ಪ್ರಶಸ್ತಿಯ ಫಲಕವನ್ನು ಇಲ್ಲಿ ಕಾಣಬಹುದು


ಒಳಾಂಗಣವು ಮೌನಕ್ಕೆ ಹೆಚ್ಚು ಗೌರವವನ್ನು ನೀಡುತ್ತದೆ.















ಮೂಲತಃ ಒಕ್ಕಲಿಗರದಾದ ಕುವೆಂಪು ವಂಶಸ್ಥರು ಬಳಸುತ್ತಿದ್ದ ಕೃಷಿ ಉಪಕರಣಗಳು













ಕುವೆಂಪು ಇಲ್ಲಿ ಮಲಗಿದ್ದಾರೆ-ಕವಿಶೈಲ



ಸಮಾಧಿ ಸ್ಥಳ












ಇಲ್ಲಿಯ ಹಸ್ತಾಕ್ಷರಗಳನ್ನು ಗಮನಿಸಿ
ಹಸ್ತಾಕ್ಷರವನ್ನು ಗಮನಿಸಿ















ಇದು ಕೇವಲ ಮನೆಯಲ್ಲ, ಕನ್ನಡ ಕುಲತಿಲಕನ ದೇಗುಲ.ಕುಪ್ಪಳ್ಳಿಯ ಮನೆಗೆ ಹಾಗೆ ಸುಮ್ಮನೇ ಹೋಗಿ ಬನ್ನಿ.ವಾಗ್ಧೇವಿ ಪುತ್ರನ ಮನೆಯಲ್ಲಿ ಸ್ವಲ್ಪ ಹೊತ್ತು ಇದ್ದು ಮೆಂದು ರಸಋಷಿಯನ್ನು ನೆನಪಿಸಿಕೊಂಡರೆ ಕನ್ನಡ ಹೃದಯ ಶಿವ ಸಂತುಷ್ಟಗೊಳ್ಳುತ್ತಾನೆ. 



ಕುವೆಂಪುರವರ ಸಾಹಿತ್ಯ ಸಂಪತ್ತು 







ಕಾದಂಬರಿ:
  • ಕಾನೂರು ಹೆಗ್ಗಡತಿ 
  • ಮಲೆಗಳಲ್ಲಿ ಮದುಮಗಳು 
ನಾಟಕಗಳು:
ಚಿತ್ರ ಪ್ರಬಂಧ:
  • ಮಲೆನಾಡಿನ ಚಿತ್ರಗಳು
ವಿಚಾರ:
ಆತ್ಮ ಚರಿತ್ರೆ:
ಕಾವ್ಯಗಳು:
  • ಶ್ರೀ ರಾಮಾಯಣ ದರ್ಶನ೦
  • ಕೊಳಲು
  • ಅಗ್ನಿಹಂಸ
  • ಅನಿಕೇತನ
  • ಅನುತ್ತರಾ
  • ಇಕ್ಶುಗಂಗೋತ್ರಿ
  • ಕದರಡಕೆ
  • ಕಥನ ಕವನಗಳು
  • ಕಲಾಸುಂದರಿ
  • ಕಿಂಕಿಣಿ
  • ಕೃತ್ತಿಕೆ
  • ಜೇನಾಗುವ
  • ನವಿಲು
  • ಪಕ್ಷಿಕಾಶಿ
  • ಚಿತ್ರಾಂಗದಾ
  • ಪ್ರೇತಕ್ಯು
  • ಪ್ರೇಮಕಾಶ್ಮೀರ
  • ಮಂತ್ರಾಕ್ಷತೆ
  • ಷೋಡಶಿ
  • ಹಾಳೂರು
  • ಕೋಗಿಲೆ
  • ಪಾಂಚಜನ್ಯ
  • ಕುಟೀಚಕ
ಕಥಾಸಂಕಲನ:
  • ನನ್ನ ದೇವರು ಮತ್ತು ಇತರ ಕಥೆಗಳು
ವಿಮರ್ಶೆ:
  • ದ್ರೌಪದಿಯ ಶ್ರೀಮುಡಿ
ಜೀವನ ಚರಿತ್ರೆ:
  • ಸ್ವಾಮಿ ವಿವೇಕಾನಂದ
  • ಶ್ರೀ ರಾಮಕೃಷ್ಣ ಪರಮಹಂಸ


ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು

  • ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಯುಗದ ಕವಿ-ಲೇ: ಡಾ.ಕೆ.ಸಿ.ಶಿವಾರೆಡ್ಡಿ
  • ಹೀಗಿದ್ದರು ಕುವೆಂಪು - ಲೇ:ಪ್ರಭುಶಂಕರ

ಒಲಿದ ಸನ್ಮಾನಗಳು
  • ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೭)
  • ಪದ್ಮಭೂಷಣ (೧೯೫೮)
  • ಪದ್ಮವಿಭೂಷಣ (೧೯೮೯)
  • ಕರ್ನಾಟಕ ರತ್ನ (೧೯೯೨)
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೫೫)
  • ಪಂಪ ಪ್ರಶಸ್ತಿ(೧೯೮೮)
  • ರಾಷ್ಟ್ರಕವಿ ಎಂದು ಬಿರುದು (೧೯೬೪)


ಕುವೆಂಪುರವರಿಗೆ ಜ್ಞಾನಪೀಠ ತಂದುಕೊಟ್ಟ ಶ್ರೀ ರಾಮಾಯಣದರ್ಶನಂನ ಮೂಲ ಹಸ್ತಪ್ರತಿ ಹೀಗಿತ್ತು.















ಈ ಪ್ರತಿಯ ಮೇಲೆ ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣುತ್ತದೆ



ಕುವೆಂಪು ಬಗೆಗಿನ ಸಮಸ್ತ ಮಾಹಿತಿ, ವ್ತಕ್ತಿ ಚಿತ್ರಣ, ಬದುಕಿದ ಬಗೆ, ಹಸ್ತಾಕ್ಷರ, ಬಾಲ್ಯದಿಂದ ಹಿಡಿದು ಕೊನೆಯವರೆಗಿನ ಫೋಟೋಗಳು, ಕುಟುಂಬ ಹೀಗೆ ಕುವೆಂಪುರವನ್ನು ಕಾಣಲು ಈ ವೆಬ್ಸೆಟ್ಟನ್ನು ಸಂಪರ್ಕಿಸಿ http://www.kuvempu.com/












ಕುವೆಂಪುರವರು ಬರೆದ ಜಗತ್ಪ್ರಸಿದ್ಧ ಹಾಡುಗಳು

ಓ ನನ್ನ ಚೇತನ,
ಆಗು ನೀ ಅನಿಕೇತನ
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!
ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಕನ್ನಡ ಎನೆ ಕುಣಿದಾಡುವುದೆನ್ನದೆ
ಕನ್ನಡ ಎನೆ ಕಿವಿನಿಮಿರುವುದು |
ಕಾಮನಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು |

ಕನ್ನಡ ಕನ್ನಡ ಹಾ ಸವಿಗನ್ನಡ
ಬಾಳುವುದೇತಕೆ ನುಡಿ ಎಲೆ ಜೀವ |
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ |
ಕನ್ನಡತಾಯಿಯ ಸೇವೆಯ ಮಾಡೆ |



ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!