Thursday 29 December 2011

ರಸಋಷಿಯ ಮನೆಯಲ್ಲಿ....




ರಸಋಷಿ, ರಾಷ್ಟ್ರಕವಿ, ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ತಂದ ಸರಸ್ವತಿ ಪುತ್ರ ಕುವೆಂಪುರವರ ಜನ್ಮದಿನ ಇಂದು. ಕುಪ್ಪಳ್ಳಿ ವೆಂಕಟಪ್ಪ ಗೌಡ ಪುಟ್ಟಪ್ಪ ಕನ್ನಡ ಸಾಹಿತ್ಯದ 20ನೇ ಶತಮಾನದ ಆದಿಪುರುಷರಾಗಿ ಕಾಣುವ ಚಿರಸ್ಮರಣೀಯ ಶಕಪುರುಷ. ಈ ಹಿಂದೆ  ಕುವೆಂಪು ಹುಟ್ಟಿದ, ಆಟವಾಡಿದ, ಆ ಕಾಡಿನ ಮನೆಯಲ್ಲಿ ಕುವೆಂಪು ತಂದೆ ವೆಂಕಟಪ್ಪ, ಗೌಡ್ತತನ ಮಾಡುತ್ತಿದ್ದ ದರ್ಬಾರಿನ  ಮನೆಗೆ ಹೋಗುವ ಸುಯೊಗ ನನಗೆ ಸಿಕ್ಕಿತ್ತು. ಮನೆಯನ್ನು ಸಂಪೂರ್ಣವಾಗಿ ಒಂದು ಟ್ರಸ್ಟ್ ವಹಿಸಿಕೊಂಡಿದ್ದು ಕುವೆಂಪುರವರ ಮನೆಯನ್ನು ಒಂದು ಐತಿಹಾಸಿಕ ನೆಲೆಯನ್ನಾಗಿ ಮಾಡಿದ್ದಾರೆ. ಇದನ್ನು ಕನ್ನಡದ ಮುಂದಿನ ತಲೆಮಾರಿಗೆ ಕುವೆಂಪು ಎಂಬ ಶಕಪುರುಷನನ್ನು ಪರಿಚಯಸುವ ನಿಟ್ಟಿನಲ್ಲಿ ಮಾಡಿದ್ದಾರೆ. ಅವರ ಈ ಕನ್ನಡ ಕೈಂಕರ್ಯವನ್ನು ಮೆಚ್ಚಲೇಬೇಕು.   ಆ ಸುತ್ತಲಿನ ಕುವೆಂಪು ಆಂಗಣದ ಸೌಂದರ್ಯವನ್ನು ಕೇವಲ ಬಾಯಿಮಾತು, ಶಬ್ದಮಣಿಗಳ ಮೂಲಕ ಕಟ್ಟಿಕೊಡುವುದು ತುಂಬಾ ಅಸಾಧ್ಯದ ಮಾತು.
ಇಂದು ತೀರ್ಥಹಳ್ಳಿಯ ಕುಪ್ಪಳ್ಳಿಯ ಅವರ ಮನೆಯಲ್ಲಿ ಕುವೆಂಪು ಇಲ್ಲ. ಆದರೆ ಅವರ ಮಾತುಗಳು ಇಂದಿಗೂ ಕೇಳುತ್ತದೆ, ಅವರು ಓಡಾಡಿದ ಹಾಗೆ ಸದ್ದಾಗುತ್ತದೆ. ಗಾಳಿಯಲ್ಲಿ ಅವರು ಬರೆದ ಕನ್ನಡ ಅಕ್ಷರಗಳು ಮುಖಕ್ಕೆ ಬಂದು ಅಪ್ಪಳಿಸುತ್ತವೆ. ಮನೆಯ ಎದುರುಗಡೆ ಕುಳಿತ ಕುವೆಂಪುರವರು, ಇಡೀ ಜಗತ್ತಿನ ಕಣ್ಣೇ ಈ ಮನೆಯನ್ನು ನೋಡುತ್ತಿರುವಾಗ, ಕುವೆಂಪು ಮಾತ್ರ ಪ್ರಸನ್ನವದನರಾಗಿ ಪ್ರಶಾಂತ ಚಿತ್ತದಿಂದ ಮನೆಯನ್ನು ನೋಡುತ್ತಿದ್ದಾರೆ. ಕುವೆಂಪು ಮನೆಯ ಒಳಗೆ ಓಡಾಡಿದಾಗ ಆದ ಸಂತೋಷವನ್ನು ಈ ಮೂಲಕ ಹೇಳುವುದು ತುಂಬಾ ಕಷ್ಟ.
ಒಳಾಂಗಣದಲ್ಲಿ ಕುವೆಂಪುರವರು ಬಾಲ್ಯದಲ್ಲಿ ಬಳಸಿದ ವಸ್ತುಗಳು, ಅವರ ತಂದೆ ತಾತರ ಕಾಲದಿಂದಲೂ ಇರುವ ಮನೆ ಬಳಕೆಯ ವಸ್ತುಗಳು, ಪಾತ್ರೆ ಪಗಡು, ಕೃಷಿಗೆ ಸಂಬಂಧಪಟ್ಟ ಸಲಕರಣೆಗಳು, ಎತ್ತಿನಗಾಡಿ, ಪೂಜಾ ಸಾಮಾನು, ಕುವೆಂಪುರವರು ಮದುವೆಯಾದ ಮರದ ಮಂಟಪ ಜಾಗ , ಅವರಿಗೆ ಸಂದ ಪ್ರಶಸ್ತಿಗಳು, ಪದಕಗಳು, ಬರೆದ ಪುಸ್ತಕಗಳು, ನೆನಪಿನ ವಸ್ತುಗಳು, ಇಡೀ ಮನೆಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಗೌರವ ಮೌನ.
ಮನೆಯ ಪ್ರಾಂಗಣದ ಸುಂದರ ತಾಣ, ಮನೆಯ ಔಟ್ಲುಕ್, ಹಸಿರು ಅಂಗಣ, ಸುತ್ತಲಿನ ಹಸಿರು ಬೆಟ್ಟಗುಡ್ಡಗಳ ತಪ್ಪಲು, ಕವಿಶೈಲದ ಸೋಬಗು ಹೀಗೆ ಎಲ್ಲವೂ ಕ್ಯಾಮೆರಾ ಕಣ್ಣಿಗೆ ಸ್ವರ್ಗವನ್ನು ಕಟ್ಟಿಕೊಡುತ್ತದೆ. ನಮ್ಮಂತ ದೇವರು ಕೊಟ್ಟ ಕಣ್ಣಿಗೆ ಕಿಚ್ಚು ಹಚ್ಚಿಸುವ ಈ ಸೊಬಗು, ಮಾನವ ನಿರ್ಮಿತ  ಕ್ಯಾಮೆರಾ ಈ ಸಿರಿಯನ್ನು ಬಿಟ್ಟಿತೇ..?
 ನಮ್ಮ ಜೊತೆ ಇದ್ದ ಶಿವಕುಮಾರ್ ಕುಪ್ಪಳ್ಳಿಯ ಮನೆಯನ್ನು ಬಹುಸುಂದರವಾಗಿ ತಮ್ಮ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ.
ಕುವೆಂಪುರವರ ಜನ್ಮದಿನದ ಪ್ರಯುಕ್ತ ಕುವೆಂಪು ಮನೆಗೆ ಭೇಟಿ ಇಟ್ಟ ಸಾಂದರ್ಭಿಕವನ್ನಿಟ್ಟುಕೊಂಡು  ಕುವೆಂಪುರವರಿಗೆ ಸಂಬಂಧಪಟ್ಟ ಕೆಲವು ಅಪರೂಪದ ಛಾಯಾಚಿತ್ರಗಳು ಹಾಗೂ ಫೋಟೋ ಗ್ಯಾಲರಿಯ ಮಾತುಗಳು.

                                                         ಹೂಗಳ ರಾಶಿಯಲ್ಲಿ ಮನೆಯ ಸೌಂದರ್ಯ...!
(ಈ ಫೋಟೋಗಳ ಮೇಲೆ ಕ್ಲಿಕ್ ಮಾಡಿದರೆ ಹೈ ರೆಸಿಲುಷನ್ ಮೂಲಕ ಫೋಟೋ ಸೌಂದರ್ಯವನ್ನು ಸವಿಯಬಹುದು)
ಮನೆಯ ಸೋಬಗನ್ನು ಬಣ್ಣಸುವುದು ತುಂಬಾ ಕಷ್ಟ
ಕುವೆಂಪು ತಮ್ಮ ಮನೆಯನ್ನು ನೋಡುತ್ತಿದ್ದಾರೆ

 ಕುವೆಂಪುರವರಿಗೆ ಸಂದ ಪ್ರಶಸ್ತಿ, ಪದಕ, ಗೌರವಗಳ ನೆನಪಿನುಳಿಕೆಗಳು

ಬರೆದ ಪುಸ್ತಕಗಳ ಸ್ಯಾಂಪಲ್ಗಳು


`ಕರ್ನಾಟಕ ರತ್ನ' ಪ್ರಶಸ್ತಿಯ ಫಲಕವನ್ನು ಇಲ್ಲಿ ಕಾಣಬಹುದು


ಒಳಾಂಗಣವು ಮೌನಕ್ಕೆ ಹೆಚ್ಚು ಗೌರವವನ್ನು ನೀಡುತ್ತದೆ.















ಮೂಲತಃ ಒಕ್ಕಲಿಗರದಾದ ಕುವೆಂಪು ವಂಶಸ್ಥರು ಬಳಸುತ್ತಿದ್ದ ಕೃಷಿ ಉಪಕರಣಗಳು













ಕುವೆಂಪು ಇಲ್ಲಿ ಮಲಗಿದ್ದಾರೆ-ಕವಿಶೈಲ



ಸಮಾಧಿ ಸ್ಥಳ












ಇಲ್ಲಿಯ ಹಸ್ತಾಕ್ಷರಗಳನ್ನು ಗಮನಿಸಿ
ಹಸ್ತಾಕ್ಷರವನ್ನು ಗಮನಿಸಿ















ಇದು ಕೇವಲ ಮನೆಯಲ್ಲ, ಕನ್ನಡ ಕುಲತಿಲಕನ ದೇಗುಲ.ಕುಪ್ಪಳ್ಳಿಯ ಮನೆಗೆ ಹಾಗೆ ಸುಮ್ಮನೇ ಹೋಗಿ ಬನ್ನಿ.ವಾಗ್ಧೇವಿ ಪುತ್ರನ ಮನೆಯಲ್ಲಿ ಸ್ವಲ್ಪ ಹೊತ್ತು ಇದ್ದು ಮೆಂದು ರಸಋಷಿಯನ್ನು ನೆನಪಿಸಿಕೊಂಡರೆ ಕನ್ನಡ ಹೃದಯ ಶಿವ ಸಂತುಷ್ಟಗೊಳ್ಳುತ್ತಾನೆ. 



ಕುವೆಂಪುರವರ ಸಾಹಿತ್ಯ ಸಂಪತ್ತು 







ಕಾದಂಬರಿ:
  • ಕಾನೂರು ಹೆಗ್ಗಡತಿ 
  • ಮಲೆಗಳಲ್ಲಿ ಮದುಮಗಳು 
ನಾಟಕಗಳು:
ಚಿತ್ರ ಪ್ರಬಂಧ:
  • ಮಲೆನಾಡಿನ ಚಿತ್ರಗಳು
ವಿಚಾರ:
ಆತ್ಮ ಚರಿತ್ರೆ:
ಕಾವ್ಯಗಳು:
  • ಶ್ರೀ ರಾಮಾಯಣ ದರ್ಶನ೦
  • ಕೊಳಲು
  • ಅಗ್ನಿಹಂಸ
  • ಅನಿಕೇತನ
  • ಅನುತ್ತರಾ
  • ಇಕ್ಶುಗಂಗೋತ್ರಿ
  • ಕದರಡಕೆ
  • ಕಥನ ಕವನಗಳು
  • ಕಲಾಸುಂದರಿ
  • ಕಿಂಕಿಣಿ
  • ಕೃತ್ತಿಕೆ
  • ಜೇನಾಗುವ
  • ನವಿಲು
  • ಪಕ್ಷಿಕಾಶಿ
  • ಚಿತ್ರಾಂಗದಾ
  • ಪ್ರೇತಕ್ಯು
  • ಪ್ರೇಮಕಾಶ್ಮೀರ
  • ಮಂತ್ರಾಕ್ಷತೆ
  • ಷೋಡಶಿ
  • ಹಾಳೂರು
  • ಕೋಗಿಲೆ
  • ಪಾಂಚಜನ್ಯ
  • ಕುಟೀಚಕ
ಕಥಾಸಂಕಲನ:
  • ನನ್ನ ದೇವರು ಮತ್ತು ಇತರ ಕಥೆಗಳು
ವಿಮರ್ಶೆ:
  • ದ್ರೌಪದಿಯ ಶ್ರೀಮುಡಿ
ಜೀವನ ಚರಿತ್ರೆ:
  • ಸ್ವಾಮಿ ವಿವೇಕಾನಂದ
  • ಶ್ರೀ ರಾಮಕೃಷ್ಣ ಪರಮಹಂಸ


ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು

  • ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಯುಗದ ಕವಿ-ಲೇ: ಡಾ.ಕೆ.ಸಿ.ಶಿವಾರೆಡ್ಡಿ
  • ಹೀಗಿದ್ದರು ಕುವೆಂಪು - ಲೇ:ಪ್ರಭುಶಂಕರ

ಒಲಿದ ಸನ್ಮಾನಗಳು
  • ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೭)
  • ಪದ್ಮಭೂಷಣ (೧೯೫೮)
  • ಪದ್ಮವಿಭೂಷಣ (೧೯೮೯)
  • ಕರ್ನಾಟಕ ರತ್ನ (೧೯೯೨)
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೫೫)
  • ಪಂಪ ಪ್ರಶಸ್ತಿ(೧೯೮೮)
  • ರಾಷ್ಟ್ರಕವಿ ಎಂದು ಬಿರುದು (೧೯೬೪)


ಕುವೆಂಪುರವರಿಗೆ ಜ್ಞಾನಪೀಠ ತಂದುಕೊಟ್ಟ ಶ್ರೀ ರಾಮಾಯಣದರ್ಶನಂನ ಮೂಲ ಹಸ್ತಪ್ರತಿ ಹೀಗಿತ್ತು.















ಈ ಪ್ರತಿಯ ಮೇಲೆ ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣುತ್ತದೆ



ಕುವೆಂಪು ಬಗೆಗಿನ ಸಮಸ್ತ ಮಾಹಿತಿ, ವ್ತಕ್ತಿ ಚಿತ್ರಣ, ಬದುಕಿದ ಬಗೆ, ಹಸ್ತಾಕ್ಷರ, ಬಾಲ್ಯದಿಂದ ಹಿಡಿದು ಕೊನೆಯವರೆಗಿನ ಫೋಟೋಗಳು, ಕುಟುಂಬ ಹೀಗೆ ಕುವೆಂಪುರವನ್ನು ಕಾಣಲು ಈ ವೆಬ್ಸೆಟ್ಟನ್ನು ಸಂಪರ್ಕಿಸಿ http://www.kuvempu.com/












ಕುವೆಂಪುರವರು ಬರೆದ ಜಗತ್ಪ್ರಸಿದ್ಧ ಹಾಡುಗಳು

ಓ ನನ್ನ ಚೇತನ,
ಆಗು ನೀ ಅನಿಕೇತನ
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!
ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಕನ್ನಡ ಎನೆ ಕುಣಿದಾಡುವುದೆನ್ನದೆ
ಕನ್ನಡ ಎನೆ ಕಿವಿನಿಮಿರುವುದು |
ಕಾಮನಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು |

ಕನ್ನಡ ಕನ್ನಡ ಹಾ ಸವಿಗನ್ನಡ
ಬಾಳುವುದೇತಕೆ ನುಡಿ ಎಲೆ ಜೀವ |
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ |
ಕನ್ನಡತಾಯಿಯ ಸೇವೆಯ ಮಾಡೆ |



ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
 

Tuesday 27 December 2011

ಸಲ್ಮಾನ್ ಖಾನ್ ಬಗ್ಗೆ ನಿಮಗೆಷ್ಟು ಗೊತ್ತು ?




ಸಲ್ಮಾನ್ ಖಾನ್!


ಸದ್ಯದ ಮಟ್ಟಿಗೆ ಬಾಲಿವುಡ್ನ ಬೇಡಿಕೆಯ ನಟ. ಜಗತ್ತಿನ ಅತಿ ಸುಂದರ ನಟರುಗಳಲ್ಲಿ ಸಲ್ಮಾನ್ ಕೂಡ ಒಬ್ಬ ಎಂಬುದು ಉತ್ಪ್ರೇಕ್ಷೆಯಲ್ಲ. ಸೆಳೆಯುವ ಸದೃಢ ಶರೀರ, ಉದ್ದನೆಯ ಆಕರ್ಷಕ ಮುಖ, ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಭಾವುಕ ಹೃದಯವಂತಿಕೆ, ಸಲ್ಮಾನ್ ಅಂದರೆ ಅಷ್ಟೇ ಅಲ್ಲ, ಈತ ತನ್ನ ತಿಕಲುತನದ ಮನಸ್ಥಿತಿಗೂ ಅಷ್ಟೇ ಫೇಮಸ್..!
ಏಷ್ಟೋ ಬಾರಿ ನಡುರಾತ್ರಿ ಸೈಕಲ್ ಇಲ್ಲವೇ ಆಟೋದಲ್ಲಿ ಇಡೀ ಮುಂಬೈಯನ್ನು ಏಕಾಂಗಿಯಾಗಿ ಸುತ್ತುವ ಅತಿರೇಕಿ. ಬಟ್ಟೆ ಅಂದರೆ ಅಲರ್ಜಿ. ಈತನ ಪ್ರಕಾರ ಹುಡುಗಿ ಮತ್ತು ಬಟ್ಟೆ ಎರಡು ಒಂದೇ, ಆಗಾಗ ಅವುಗಳನ್ನ ಛೇಂಜ್ ಮಾಡುತ್ತಲೇ ಇರಬೇಕು. ಹಾಗಂತ ಈತನ ಹಿಂದೆ ಬೀಳುವ ಹುಡುಗಿಯರಿಗೇನು ಕಡಿಮೆ ಇಲ್ಲ. ಅವರು ಛೆಂಜ್ ಆಗುತ್ತಲೇ ಇದ್ದರೂ ಸಲ್ಮಾನ್ ಬತ್ತಳಿಕೆಯಲ್ಲಿ ಹೊಸದೊಂದು ಹಾಟ್ಕೇಕ್ ಇಂಟ್ರಡ್ಯೂಸ್ ಆಗುತ್ತಲೇ ಇರುತ್ತದೆ. ಇವನ ಗರ್ಲ್ ಫ್ರೆಂಡ್ಗಳೇ ಇವನಿಂದ ಓಡಿ ಹೋಗುತ್ತಾರೋ,  ಇವನೇ ಅವರಿಗೆ ಗೇಟ್ ಪಾಸ್  ಕೊಡುತ್ತಾನೋ ಎನ್ನುವುದೇ ದೊಡ್ಡ ಸಸ್ಪೆನ್ಸ್ ..! ಈತನಿಗೆ ಬಾಲಿವುಡ್ ಅನಿವಾರ್ಯವೋ ಗೊತ್ತಿಲ್ಲ, ಆದರೆ ಬಾಲಿವುಡ್ಗೆ ಈತ ಮಾತ್ರ ಅನಿವಾರ್ಯ. ಪ್ರತಿ ಸಿನಿಮಾಕ್ಕೆ 40 ಕೋಟಿ ಹಾಗೂ ರಿಯಾಲಿಟಿ ಶೋಗಳ ಪ್ರತಿ ಎಪಿಸೋಡ್ಗೆ ಮೂರೂವರೆ ಕೋಟಿಯಿಂದ ಐದು ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುವಷ್ಟು ದೊಡ್ಡ ಕುಬೇರ..! ಒಟ್ಟಾರೆ 800 ಕೋಟಿ ರೂ.ಗಳ ಒಡೆಯ.

ಸಲ್ಮಾನ್ ಖಾನ್ ಅಂದರೆ ನಮಗೆಲ್ಲಾ ಕಾಣುವುದು -ಹುಡುಗಿಯರ ಹುಚ್ಚ, ಜಿಮ್ ತಕ ಜಿಮ್ ಜಿಮ್ ಎನ್ನುವಂತ ಬಾಡಿ, ಪೇಜ್ ತ್ರೀ-ಪಾರ್ಟಿ, ಡೇಟಿಂಗು, ಮೀಟಿಂಗು, ಆ ಟಿಂಗು, ಈ ಟಿಂಗು! ಎರಡು ಕೃಷ್ಣಮೃಗ ಬೇಟೆ ಮತ್ತು ಕುಡಿದು ತನ್ನ ಕಾರಿನಿಂದ ರಸ್ತೆ ಬದಿ ಮಲಗಿದ್ದ ಇಬ್ಬರು ಕೂಲಿಕಾರರನ್ನು ಕೊಂದ ಕೊಲೆ ಬಸವನೀತ! ಕೆಲವು ವರ್ಷಗಳ ಹಿಂದೆ ಈತನಿಗಿದ್ದ ಮುಂಬೈ ಅಂಡರ್ ವರ್ಲ್ಡ್  ಮಾಫಿಯಾ ಒಡನಾಟ, ಈಗಲೂ ಹಳೆ ಕೇಸುಗಳ ವಿಚಾರಣೆಗೆ ಕೋರ್ಟ ಮೆಟ್ಟಿಲೇರುತ್ತಿರುವ ಭಲೇ ಅಲೆಮಾರಿ!
ಸಲ್ಮಾನ್ ಅಂದರೆ ಅಷ್ಟೇನಾ..? ಸಲ್ಮಾನ್ ಬಗ್ಗೆ ಮಾಧ್ಯಮಗಳಲ್ಲಿ ನಮಗೆ ಕಾಣುವುದು ಮೇಲಿನದಷ್ಟೇ ಅಲ್ಲ, ಆತನಿಗೂ ಒಂದು ಒಳ್ಳೆಯ ಮನಸ್ಸಿದೆ, ಹೃದಯ ಕೆಲವರ ಮಟ್ಟಿಗಾದರೂ ಪರಿಶುದ್ಧವಾಗಿದೆ!
 ಸಲ್ಮಾನ್ ಬಗೆಗಿನ ಒಂದಷ್ಟು ಮಾಹಿತಿಗಳನ್ನ ಇಲ್ಲಿ ಕಲೆಹಾಕಿದ್ದೇವೆ. ಅಕಸ್ಮಾತ್ ನೀವು ಸಲ್ಮಾನ್ ಖಾನ್ರ ಅತಿ ದೊಡ್ಡ ಫ್ಯಾನ್ ಅಥವಾ ಎಸಿ ಆಗಿದ್ದರೆ ಕೆಲವು ಮಾಹಿತಿಗಳು ನಿಮಗೆ ಗೊತ್ತಿರಬಹುದು ಅಥವಾ ಇಲ್ಲದೆಯೂ ಇರಬಹುದು. ಗೊತ್ತಿದ್ದರೆ ಇನ್ನೊಮ್ಮೆ ಓದಿ, ಇಲ್ಲದಿದ್ದರೆ ಓದಿ ನಿಮ್ಮ ನೆಚ್ಚಿನ ಹೀರೋ ಬಗೆಗಿನ ಮಾಹಿತಿಯನ್ನ ಬೇರೆಯವರಿಗೂ ತಿಳಿಸಿ. ನಿಮ್ಮ ಹೀರೋನ ಫ್ಯಾನ್ಸ್ ಕ್ಲಬ್   ಗೆ  ನೀವೇ ಹೀರೋಗಳಾಗಿರಿ...

ಸಲ್ಮಾನ್ ಖಾನ್ಗೆ ಇಬ್ಬರು ಅಮ್ಮಂದಿರು..!
ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಬಾಲಿವುಡ್ನ ಹೆಸರಾಂತ ಚಿತ್ರಕಥೆ ಹಾಗೂ ಸಂಭಾಷಣಕಾರ.
. ಕನ್ನಡದಲ್ಲಿ  ಡಾ.ರಾಜ್ ಕುಮಾರ್  ಅಭಿನಯದ  `ಪ್ರೇಮದ ಕಾಣಿಕೆ' ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದರು. ಇಡೀ ಬಾಲಿವುಡ್ದಿಗೆ ಸಲೀಂಖಾನ್ ತುಂಬಾ ಚಿರಪರಿಚಿತ. ಈತನ ಮೊದಲ ಹೆಂಡತಿಯೇ ಸಲ್ಮಾ ಖಾನ್. ಅಂದರೆ ಸಲ್ಮಾನ್ ಖಾನ್ ನ ಹೆತ್ತ ತಾಯಿ. ಸಲ್ಮಾಖಾನ್ ಮೂಲತಃ ಮಹಾರಾಷ್ಟ್ರದ ಡೋಲಾ ರಜಪೂತರ ಜಾತಿಗೆ ಸೇರಿದವಳು. ಸಲ್ಮಾಳ ಮೂಲ ಹೆಸರು ಸುಶೀಲಾ ಚರಕ್..!
1964 ರಲ್ಲಿ  ಸಲೀಂ ಖಾನ್ನನ್ನು ಮದುವೆಯಾದ ಮೇಲೆ ಮುಸ್ಲಿಂ ಧರ್ಮಕ್ಕೆ ಪರಿವರ್ತನೆಗೊಂಡು ಸುಶೀಲಾ ಸಲ್ಮಾ ಆದಳು. ಇದಾದ ಬಹಳ ವರ್ಷಗಳ ನಂತರ ಸಲೀಂ ಖಾನ್ ಎರಡನೇ ಮದುವೆಯಾದರು. ಅವಳು ಬಾಲಿವುಡ್ನ ಹೆಸರಾಂತ ನಟಿ ಮತ್ತು ಅದ್ಭುತ ನೃತ್ಯಗಾರ್ತಿ,ಕ್ಯಾಬೆರಾ ಡ್ಯಾನ್ಸರ್ .  ಹೌದು ಅವಳೇ ಹೆಲೆನ್.  ಇಂದಿಗೂ ಡಾನ್ ಸಿನಿಮಾದ `ಹೇ ಮೇರಾ ದಿಲ್' ಹಾಡಿಗೆ ಮೈ ಛಳಿ ಬಿಟ್ಟು ಕುಣಿದ ನಟಿ.
1970ರಲ್ಲಿ ಹೆಲೆನ್ ಳನ್ನು ಸಲೀಂಖಾನ್ ಮದುವೆಯಾಗಿ ಅವಳನ್ನ ಬೇರೆ ಮನೆಯಲ್ಲಿಟ್ಟಿದ್ದರು. ಆರಂಭದಲ್ಲಿ ಇದು ಅವರ ಕುಟುಂಬದಲ್ಲಿ ಸ್ವಲ್ಪ ಕೋಲಾಹಲವನ್ನುಂಟು ಮಾಡಿದರೂ ನಂತರ  ಮಕ್ಕಳು ದೊಡ್ಡವರಾದ ಮೇಲೆ ಸಲ್ಮಾನ್ ಖಾನ್ನೇ ನಂತರ ಎರಡು ಕುಟುಂಬಗಳನ್ನು ಒಂದಾಗುವಂತೆ ಮಾಡಿದ್ದ. ಹೆಲೆನ್ಗೆ ಮಕ್ಕಳಿಲ್ಲದ ಕಾರಣ ಸಲಿಂಖಾನ್ ಮತ್ತು ಹೆಲೆನ್ ಒಂದು ಹೆಣ್ಣು ಮಗುವನ್ನು ದತ್ತು ಪಡೆದರು. ಆ ಮಗುವೇ ಅರ್ಪಿತಾ ಖಾನ್. ಸಲ್ಮಾನ್ ಖಾನ್  ಮಲತಾಯಿ ಹೆಲೆನ್ ಜೊತೆ `ಖಾಮೋಷಿ 'ಮತ್ತು `ಹಮ್ ದಿಲ್ ಕೆ ಚುಕೆ ಸನಮ್' ಸಿನಿಮಾಗಳಲ್ಲಿ ಅಭಿನಯಿಸಿದ್ದ.

ಸಲ್ಮಾನ್ ಬಯೋಡಾಟಾ 

    ಮೂಲ ಹೆಸರು : ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್
  • ಪ್ರೀತಿಯಿಂದ ಕರೆಯೋ ಹೆಸರು : ಸಲ್ಲು
  • ಹುಟ್ಟಿದ ದಿನಾಂಕ : 27 ಡಿಸೆಂಬರ್, 1965
  • ಹುಟ್ಟಿದ ಸ್ಥಳ : ಇಂದೋರ್, ಮಧ್ಯಪ್ರದೇಶ್ 
  • ರಾಶಿ : ಮಕರ
  • ಎತ್ತರ : 5 ಅಡಿ 7 ಇಂಚು (170 ಸೆಂಟಿಮೀಟರ್)
  • ಅಪ್ಪನ ಹೆಸರು : ಸಲೀಂ ಖಾನ್ 
  • ಅಮ್ಮನ ಹೆಸರು : ಸಲ್ಮಾ ಖಾನ್ 
  • ಮಲತಾಯಿ : ಹೆಲೆನ್ 
  • ಅಣ್ಣಂದಿರು : ಅರ್ಬಾಜ್ ಖಾನ್, ಸೊಹೈಲ್ ಖಾನ್ 
  • ತಂಗಿಯರು : ಅಲ್ವೀರಾ ಖಾನ್, ಅರ್ಪಿತಾ ಖಾನ್ 
  • ಅತ್ತಿಗೆಯಂದಿರು : ಮಲೈಕಾ ಅರೋರಾ, ಸೀಮಾ
  • ಮೊದಲ ಸಿನಿಮಾ : ಬಿವಿ ಹೊ ತೊ ಐಸಿ (1988)
  • ಬ್ರೇಕ್ ಕೊಟ್ಟ ಸಿನಿಮಾ : ಮೈನೇ ಪ್ಯಾರ್ ಕಿಯಾ (1989)
  • ನೆಚ್ಚಿನ ಗರ್ಲ್ ಫ್ರೆಂಡ್ಗಳು : ಸಂಗೀತಾ ಬಿಜಲಾನಿ, ಐಶ್ವರ್ಯ ರೈ, ಕತ್ರೀನಾ ಕೈಫ್, 
  • ನೆಚ್ಚಿನ ನಾಯಕ :  ಸೈಲ್ವೆಸ್ಟರ್ ಸ್ಟಲ್ಲೋನ್ 
  • ನೆಚ್ಚಿನ ನಾಯಕಿ : ಹೇಮಾ ಮಾಲಿನಿ    
  • ಹವ್ಯಾಸಗಳು : ದಿನನಿತ್ಯ ವ್ಯಾಯಾಮ, ಪೇಟಿಂಗ್ 
  • ಇತ್ತೀಚಿನ ಫ್ಲಾಪ್ ಸಿನಿಮಾಗಳು : ಗಾಡ್ ತುಸ್ಸಿ ಗ್ರೇಟ್ ಹೋ, ಹೀರೋಸ್ ಮತ್ತು ಯುವರಾಜ್ 
  • ಗೊತ್ತಿರುವ ಭಾಷೆಗಳು : ಹಿಂದಿ, ಉರ್ದು, ಮರಾಠಿ, ಇಂಗ್ಲೀಷ್ 
  • ನೆಚ್ಚಿನ ಪಾನೀಯ : ಐಸ್ ಟೀ
  • ನೆಚ್ಚಿನ ಡ್ರೆಸ್ : ಫಿಟ್ಟಿಂಗ್ 501 ಜೀನ್ಸ್ 
  • ಮನೆ ವಿಳಾಸ : 3 ಗ್ಯಾಲಕ್ಸಿ ಅಪಾರ್ಟಮೆಂಟ್,
  •  ಬಿ.ಜೆ.ರೋಡ್, ಬ್ಯಾಂಡ್ ಸ್ಟಾಂಡ್, 
  • ಬಾಂದ್ರಾ, ಮುಂಬೈ-400050

ಮರಿ ಸಲ್ಮಾನ್ ಖಾನ್ ಹೀಗಿದ್ದ...!


ಸಲ್ಮಾನ್ ಖಾನ್ನ ಅತಿ ಕೆಟ್ಟ ಸಿನಮಾಗಳು ಅಂತ ಹೇಳದಿದ್ದರೂ ಅವು ಆತನಿಗೋಸ್ಕರ ಮಾಡದ ಸಿನಿಮಾಗಳು ಅಂತ ಹೇಳಬಹುದೇನೋ


ಸೂರ್ಯವಂಶಿ (1992), ಎಕ್ ಲಡ್ಕಾ ಎಕ್ ಲಡ್ಕಿ (1992),ಸಂಗ್ಧಿಲ್ ಸನಮ್ (1994),ಚಂದ್ರಮುಖಿ(1993), ದಿಲ್ ತೇರಾ ಆಶಿಖ್ (1993), ಜಾಗೃತಿ (1993)


ಸಲ್ಮಾನ್  ಇಷ್ಟವಾಗುವುದೇ ಈ  ಸಿನಿಮಾಗಳಿಂದ 
ಮೈನೇ ಪ್ಯಾರ್ ಕಿಯಾ (1989), ಬಾಘೀ(1990), ಪತ್ತರ್ ಕಿ ಫೂಲ್ (1991), ಸನಮ್ ಬೆವೆಫಾ (1991), ಕುಬರ್ಾನ್ (1991), ಸಾಜನ್ (1991), ಹಮ್ ಆಪ್ಕೆ ಹೇನ್ ಕೌನ್..! (1994), ಕರಣ್ ಅಜರ್ುನ್ (1995), ಖಾಮೋಷಿ :ದಿ ಮ್ಯೂಸಿಕಲ್(1996), ಜುದ್ವಾ (1997), ಬೀವಿ ನಂ 1 (1999), ಹುಲ್ಹನ್ ಹಮ್ ಲೆ ಜಾಯೇಂಗಿ (2000), ಚಲ್ ಮೇರಿ ಭಾಯಿ (2000), ಯೇ ಹೈ ಜಲ್ವಾ(2002), ತೇರೆ ನಾಮ್ (2003), ಭಾಗ್ಬನ್ (2003),ಗರ್ವ್ (2004), ಮುಜ್ಶೆ ಶಾದಿ ಕರೋಗಿ(2004), ಮೈನೇ ಪ್ಯಾರ್ ಕ್ಯೂ ಕಿಯಾ (2005), ನೋ ಎಂಟ್ರಿ (2005), ಪಾರ್ಟನರ್(2007) ಹಾಗೂ ಇತ್ತೀಚಿನ ಧಬಾಂಗ್, ರೆಡಿ,ಬಾಡಿಗಾರ್ಡ್  ಇನ್ನು ಹಲವು...



ಸಲ್ಮಾನ್ ಹೀಗಿದ್ದ, ಹೀಗಿರುತ್ತಾನೆ. ಹೀಗಿರಲೂಬಹುದು


  • ಶಾಲಾ ದಿನಗಳಲ್ಲಿ  ಸಲ್ಮಾನ್ ಖಾನ್ ಒಳ್ಳೆಯ ಈಜುಗಾರನಾಗಿದ್ದ
  • ಸಲ್ಮಾನ್ ಖಾನ್ ದಿನನಿತ್ಯ 2 ರಿಂದ 3 ತಾಸು ಜಿಮ್ನಲ್ಲಿ ವರ್ಕಔಟ್ ಮಾಡೋದನ್ನ ಮಿಸ್ ಮಾಡೋದಿಲ್ಲ. 
  • ಸಲ್ಮಾನ್ ತನ್ನ ಸಾರ್ವಜನಿಕ ಸೇವಾಸಂಸ್ಥೆಗೆ ಇಟ್ಟುಕೊಂಡ ಹೆಸರು `ಹುಮನ್-ಸಲ್ಮಾನ್ ಖಾನ್ ಫೌಂಡೇಷನ್'
  • ಸಲ್ಮಾನ್ಗೆ ಲಂಡನ್ ಸಿಟಿ ಅಂದರೆ ಪ್ರಾಣ. ಹಾಗಾಗಿ ಲಂಡನ್ಗೆ ಸದಾ ಭೇಟಿಕೋಡುತ್ತಲೇ ಇರುತ್ತಾನೆ. 
  • ಸಲ್ಮಾನ್ ಒಳ್ಳೆಯ ಪೇಂಟರ್. ಬಿಡುವಿನ ಸಮಯದಲ್ಲಿ ಪೇಟಿಂಗ್ ಮಾಡುವುದು ಆತನ ಹವ್ಯಾಸ. 
  • 2004 ರಲ್ಲಿ ಅಂತಾರಾಷ್ಟ್ರೀಯ ಪತ್ರಿಕೆ `ಪೀಪಲ್' ಮ್ಯಾಗಜೀನ್ ಸಲ್ಮಾನ್ಗೆ ಜಗತ್ತಿನ ಸುಂದರ ಪುರುಷರಲ್ಲಿ ಏಳನೇ ಸ್ಥಾನವನ್ನು ನೀಡಿತ್ತು.
  • ಭವಿಷ್ಯದಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳನ್ನ, ಔಷಧಿ ತಯಾರಿಕಾ ಘಟಕಗಳನ್ನ ಮತ್ತು ಎಲ್ಲೆಡೆ ಆರೋಗ್ಯ ತಪಾಸಣಾ ಘಟಕಗಳನ್ನು ತೆರೆಯಬೇಕೆಂಬ ದೊಡ್ಡ ಕನಸು ಸಲ್ಮಾನ್ ಖಾನ್ ನದು
  • ಕಾರುಗಳ ಬಗ್ಗೆ ವಿಪರೀತ ಕ್ರೇಜ್..! ಅದರಲ್ಲೂ ಐಶಾರಾಮಿ ಕಾರುಗಳಾದ ಬಿಎಮ್ಡಬ್ಲು, ಮರ್ಸಿಡೆಸ್ ಬೆಂಜ್, ಲ್ಯಾಂಡ್ ಕ್ರುಸರ್ ಕಾರುಗಳಿಗೆ ಮಹತ್ವ ಜಾಸ್ತಿ. ಈ ಕಂಪನಿಗಳ ಹಳೆಯ ಮಾಡೆಲ್ಗಳಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ  ಲೇಟೆಸ್ಟ್ ಮಾಡೆಲ್ಗಳು ಸಲ್ಮಾನ್ ಖಾನ್ ಹತ್ತಿರ ಇವೆ.
  • ಲಂಡನ್ನ ಮೆಡಾಮೆ ತುಸ್ಸಾರ್ಡ್ ಮ್ಯೂಸಿಯಂನಲ್ಲಿ ಈತನ ಮೇಣದ ಪ್ರತಿಮೆ ಇದೆ. 
  • ಬಾಲಿವುಡ್ನ ಕೆಲವೇ ಕೆಲವು ಸ್ಟಾರ್ ಗಳಲ್ಲಿ ಅತಿ ಹೆಚ್ಚು ಸಿನಿಮಾ ಮಂದಿಯ ಸ್ನೇಹಿತರನ್ನು ಸಲ್ಮಾನ್ ಹೊಂದಿದ್ದಾನೆ.  ಆತನಿಗೆ ಎಲ್ಲರೂ ಸ್ನೇಹಿತರೇ. ಯಾರು ಆತನ ವಿರುದ್ಧ ಮಾತನಾಡುವುದಿಲ್ಲ.  ಇದು ಶಾರುಖ್  ಹಾಗೂ ಅಮೀರ್ ಖಾನ್ ಗೂ ಕೂಡ ಸಲ್ಲುತ್ತದೆ. ಈತ ಕೂಡ ಬೇರೆ ಸ್ಟಾರ್ ಗಳ ಬಗ್ಗೆ ಕಾಮೆಂಟ್ ಮಾಡುವುದಿಲ್ಲ. ತಾನಾಯಿತು, ತನ್ ಸಿನಿಮಾಗಳಾಯಿತು.. ಗಾಸಿಪ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಗಾಸಿಪ್ ಕೇಳಿ ಕೇಳಿ, ನೋಡಿ ನೋಡಿ ಆತನಿಗೆ ಅದು ಸಾಮಾನ್ಯವಾಗಿದೆ. 



ಬಾಲಿವುಡ್ಗೆ ಬಾಡಿಬಿಲ್ಡಿಂಗ್
ಆರೋಗ್ಯದ ಬಗ್ಗೆ ಅತೀವ ಕಾಳಜಿ. ಬಾಲಿವುಡ್ನ  ಏಷ್ಟೋ ಹೀರೋಗಳಿಗೆ ಬಾಡಿಬಿಲ್ಡಿಂಗ್ ಮತ್ತು ಫಿಟ್ನೆಸ್ಗೆ ಸಲ್ಮಾನ್ ಖಾನ್ನೇ ಮೂಲ ಪ್ರೇರಣೆ. ಮೊದಲಿನಿಂದಲೂ ಜಿಮ್ ಅಂದರೆ ಅಲರ್ಜಿ ಎನ್ನುತ್ತಿದ್ದ ಅನಿಲ್ ಕಪೂರ್ ಇಂದು ಪ್ರತಿನಿತ್ಯ ವರ್ಕ್ ಔಟ್ ಮಾಡುತ್ತಾನೆ. ಸೈಫ್ ಅಲಿ ಖಾನ್, ಹೃತಿಕ್ ರೋಷನ್ನ ಬಾಡಿಫಿಟ್ನೆಸ್ ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ. ಇವರೆಲ್ಲರಿಗೂ ಸಲ್ಮಾನ್ ಖಾನ್ ಖುದ್ದಾಗಿ ಟ್ರೇನಿಂಗ್ ಕೊಡುತ್ತಿದ್ದ. ಹೀಗೆ ಈತನಿಂದ ಟ್ರೇನಿಂಗ್ ಪಡೆದುಕೊಂಡವರು ಬಹಳಷ್ಟು ಜನ ಬಾಲಿವುಡ್ ಅಂಗಳದಲ್ಲಿದ್ದಾರೆ.

ಕೈಯಲ್ಲಿರೋ ಬ್ರೈಸ್ಲೆಟ್..!
ಸಲ್ಮಾನ್ ಖಾನ್ನನ್ನು ಅಡಿಯಿಂದ ಮುಡಿವರಗೆ ಇಷ್ಟಪಡುವ ಅಭಿಮಾನಿಗಳಿಗೆ ಆತ ಹಾಕಿಕೊಳ್ಳುವ ಬ್ರೈಸ್ಲೇಟ್ ಬಗ್ಗೆಯೂ ಕೂಡ  ವಿಪರೀತ ವ್ಯಾಮೋಹ. ಇಂದಿಗೂ ಮಾರ್ಕೆಟಿನಲ್ಲಿ ನೀಲಿ ಬಣ್ಣದ ಹರಳಿನ ಈ ಬ್ರೈಸ್ಲೇಟ್ಗೆ ಭಾರಿ ಡಿಮ್ಯಾಂಡ್..! ಏಕೆಂದರೆ ಇದು ಸಲ್ಮಾನ್ ಕೈಯಲ್ಲಿದೆ. ಇದೊಂತರ ಸಲ್ಮಾನ್ ಬ್ರ್ಯಾಂಡ್ ಆಗಿಬಿಟ್ಟಿದೆ. ಕೆಲವರ ಪ್ರಕಾರ ಈ ನೀಲಿ ಬಣ್ಣದ ಹರಳಿನಿಂದಾನೇ ಆತನ ಅದೃಷ್ಟ ಬದಲಾಯಿತು ಅಂತ. ಆದರೆ ಒಂದು ಕಡೆಯಿಂದ ನೋಡಿದರೆ ಸುಳ್ಳು. ಇನ್ನೊಂದು ಕಡೆಯಿಂದ ನಿಜ. ಏಕೆಂದರೆ ಸಲ್ಮಾನ್ ಜೀವನದಲ್ಲಿ ಎಂದಿಗೂ ಶಾಸ್ತ್ರ, ಸಂಖ್ಯಾಶಾಸ್ತ್ರ ಅಂತೆಲ್ಲಾ ನಂಬಿದವನೇ `ಅಲ್ಲಾ'.
ಹೀಗಿದ್ದರೂ ಈತನಿಗೆ ಈ ಬ್ರೈಸ್ಲೇಟ್ ದೊಡ್ಡ ಲಕ್ಕನ್ನೇ ತಂದು ಕೊಟ್ಟಿದಿಯಂತೆ. ಪ್ರತಿದಿನ ಈ ಬ್ರೈಸ್ಲೇಟ್ ಹಾಕಿಕೊಳ್ಳದೇ ಮನೆ ಬಿಡೋದಿಲ್ಲ. ಇದು ಈತನ ಖಯಾಲಿ ಜೊತೆಗೊಂದಿಷ್ಟು ನಂಬಿಕೆ. ಈ ಬ್ರೈಸ್ಲೇಟನ್ನ ಗಿಫ್ಟಾಗಿ ಕೊಟ್ಟಿದ್ದು ಈತನ ಅಂಕಲ್. ಸುಮಾರು ಒಂದು ದಶಕಗಳಿಂದ ಇದು ಈತನ ಕೈ ಸಂಗಾತಿಯಾಗಿಯೇ ಮೆರೆಯುತ್ತಿದೆ. ಅಕಸ್ಮಾತ್ ಈ ಬ್ರೈಸ್ಲೇಟ್ನ ಬೆಳ್ಳಿ ಚೇನ್ ಕಟ್ಟಾದರೆ ಜ್ಯುವೆಲ್ಲರಿ ಶಾಪ್ಗೆ ಕೊಡೋದೆ ಅದನ್ನು ಸೀದಾ ಮತ್ತೇ ಅಂಕಲ್ಗೆ ಕೊಡುತ್ತಾನೆ. ಅದನ್ನ ಅವರ ಅಂಕಲ್ಲೇ ರಿಪೇರಿ ಮಾಡಿಕೊಡುತ್ತಾರೆ. ಇದು ಬಹಳ ವರ್ಷಗಳಿಂದ ಸಲ್ಮಾನ್ ಮಾಡಿಕೊಂಡ ಕಟ್ಟುಪಾಡು..!

ಸಲ್ಮಾನ್ ಹೇಗೆ ವಿಭಿನ್ನ 
 ಸಲ್ಮಾನ್ ಖಾನ್ ಉಳಿದ ಎಲ್ಲ ಖಾನ್ಗಳಿಗಿಂತ ಸ್ವಲ್ಪ ವಿಭಿನ್ನ ಅನ್ನೊದಕ್ಕೆ ಹಲವಾರು ಘಟನೆಗಳು ಸಾಕ್ಷಿಯಾಗುತ್ತವೆ. ಸಲ್ಮಾನ್ ಖಾನ್ನ ತಂದೆ ಸಲೀಂ ಖಾನ್ಗೆ ಇಡೀ ಬಾಲಿವುಡ್ನ  ಒಡನಾಟವಿತ್ತು. ಹಾಗಾಗಿ ಮಗ ಸಿನಿಮಾ ನಟನಾಗ್ತೀನಿ ಅಂತ ಬಯಸಿದಾಗ ನಿರ್ಮಾಪಕ/ನಿರ್ದೆಶಕರಿಗೆ ಹೇಳಿ ಅವಕಾಶ ಕೊಡಿಸೋದು ಸಲೀಂಗೆ ದೊಡ್ಡ ಕೆಲಸವಾಗಿರಲಿಲ್ಲ. ಆದರೆ ಸಲ್ಮಾನ್ ಎಂದೂ ಅಪ್ಪನ ಹತ್ತಿರ ಹೀಗೆ ಮಾಡೆಂದು ಕೇಳಲಿಲ್ಲ. ಆತನೇ ಎಲ್ಲ ಪ್ರೊಡ್ಯುಸರ್ಗಳ ಮನೆಗೆ ಹೋಗುತ್ತಿದ್ದ. ಯಾವುದಾದರೂ ಸಿನಿಮಾಗಳು ನಡೆಯುತ್ತಿದ್ದ ಶೂಟಿಂಗ್ ಸ್ಥಳಕ್ಕೆ ಹೋಗಿ ನಿರ್ದೆಶಕರನ್ನು ಕಾದು ಬೇಡಿ ಅವರ ಹತ್ತಿರ ನಟನಾಗುವ ಆಸೆಯನ್ನು ಹೇಳುತ್ತಿದ್ದ. ತನ್ನ ಫೋಟೊಗಳನ್ನ ನೀಡುತ್ತಿದ್ದ. ಸ್ಕ್ರೀನ್ ಟೆಸ್ಟ್, ಆಡಿಷನ್ ಎಲ್ಲವೂ ಆತನ ಆರಂಭದ ದಿನಗಳಲ್ಲಿ ಮಾಮೂಲಿಯಾಗಿತ್ತು. ಯಾರ ಹತ್ತಿರವೂ ತಾನು ಸಲೀಂ ಖಾನ್ನ ಮಗ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಆತನ ಆರಂಭದ ದಿನಗಳು ಜೀವನದಲ್ಲಿ ದೊಡ್ಡ ಪಾಠವನ್ನೇ ಕಲಿಸಿತ್ತು. ಅವನ ಸಿನಿಮಾಗಳಲ್ಲಿ ಹೊಸ ನಟ/ನಟಿಯರಿಗೆ ಯಾವಾಗಲೂ ಅವಕಾಶವಿರುತ್ತಿತ್ತು. ಶೂಟಿಂಗ್ನ ಬ್ರೇಕ್ ಟೈಮಲ್ಲಿ ಆತ ಹೊಸಬರ ಕಥೆಗಳನ್ನು ಕೇಳುತ್ತಾನೆ. ಅವರ ಹೊಸ ಹೊಸ ಕಾನ್ಸೆಪ್ಟ್ ಹಾಗೂ ಐಡಿಯಾಸ್ಗಳ ಬಗ್ಗೆ ಚರ್ಚೆ ಮಾಡುತ್ತಾನೆ. ಅವರ ಐಡಿಯಾಸ್ ಇಷ್ಟವಾದರೆ ಕರೆದು ಕೆಲಸ ಕೊಡುತ್ತಾನೆ. ಹೊಸಬರಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುವ ಬಗ್ಗೆ ಸಲ್ಮಾನ್ ಹೇಳುವ ಉತ್ತರ, `20 ವರ್ಷಗಳ ಹಿಂದೆ ನಾನು ಅವರ ಹಾಗೆಯೇ ಹೊಸಬನಾಗಿದ್ದೆ. ಅಂದಿನ ನನ್ನ ಸ್ಥಿತಿ ಹಾಗೂ ಮುಖವನ್ನು ಇವರ ಮೂಲಕ ನೋಡುತ್ತಿದ್ದೇನಷ್ಟೇ..!'



ಸಲ್ಮಾನ್ ನಿಜಕ್ಕೂ ಯಾಕೆ  ಗ್ರೇಟ್...!


ತನಗನಿಸಿದ್ದನ್ನು ಮಾಡಿ ಬಿಡೋದು ಸಲ್ಮಾನ್ನ ಇನ್ನೊಂದು ಗುಣ. ಅಕಸ್ಮಾತ್ ಯಾರಾದರೂ ತನಗೆ ಕಷ್ಟ ಇದೆ ಅಂತ ಹೇಳಿದರೆ ಅವರ ಹಿನ್ನೆಲೆಯನ್ನು ಕೂಡ ವಿಚಾರಿಸದೇ ಸಹಾಯ ಮಾಡಿಬಿಡುತ್ತಿದ್ದ. ಈತ ಒಳ್ಳೆಯ ಪೇಂಟರ್ ಆಗಿದ್ದುದರಿಂದ ತನ್ನ ಪೇಟಿಂಗ್ಸ್ಗಳನ್ನ ಹರಾಜು ಮಾಡುತ್ತಿದ್ದ. ಬಂದ ಕೋಟಿಗಟ್ಟಲೇ ಹಣವು ಟ್ರಸ್ಟ್ನ ಕೆಲಸಗಳಿಗೆ ವಿನಿಯೋಗವಾಗುತ್ತಿತ್ತು. ಇದಕ್ಕೆ ಒಂದು ಸಣ್ಣ ಉದಾಹರಣೆಯನ್ನು ಹೇಳುವುದಾದರೆ, ಮುಂಬೈನ ಅತಿ ದೊಡ್ಡ ಶ್ರೀಮಂತ ಉದ್ಯಮಿಯ ಮಗನ ಮದುವೆಯಲ್ಲಿ ಬಾಲಿವುಡ್ ಸ್ಟಾರ್ಗಳಾದ ಅಕ್ಷಯ್ ಕುಮಾರ್, ಶಾಹೀದ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಲಾರಾ ದತ್ ಇನ್ನು ಹಲವು ಸಿನಿಮಾ ನಟರು ಭಾಗವಹಿಸಿದ್ದರು. ಈ ಡ್ಯಾನ್ಸ್ ಪ್ರೋಗ್ರಾಂನಲ್ಲಿ ಸಲ್ಮಾನ್ ಕೂಡ ಭಾಗವಹಿಸಿದ್ದ. ಈ ಸ್ಟಾರ್ಗಳೆಲ್ಲಾ ಇದಕ್ಕಾಗಿ ಕೋಟಿಗಟ್ಟಲೇ ಹಣವನ್ನು ಡಿಮ್ಯಾಂಡ್ ಮಾಡಿದ್ದರು. ಆದರೆ ಸಲ್ಮಾನ್ ಮಾತ್ರ ಚಿಕ್ಕಾಸು ಪಡೆದಿರಲಿಲ್ಲ. ಇದಕ್ಕೆ ಕಾರಣ ಕೂಡ ಇತ್ತು. ಸಲ್ಮಾನ್ನ ಪೇಟಿಂಗ್ಗಳನ್ನು ಈ ಉದ್ಯಮಿ ಅತಿ ಹೆಚ್ಚು ಬೆಲೆಗೆ ಕೊಂಡು ಈತನ ಟ್ರಸ್ಟ್ಗೆ ಸಹಾಯ ಮಾಡಿದ್ದ. ಆ ಒಂದು ಋಣವನ್ನ ತನ್ನ ಡ್ಯಾನ್ಸ್ ಶೋ ಮೂಲಕ ತೀರಿಸಿದ್ದ. ಹಾಗಾಗಿ ಸಲ್ಮಾನ್ ನಿಜಕ್ಕೂ ಗ್ರೇಟ್ ಅಲ್ಲವೇ..!

ಸಲ್ಮಾನ್ `ಕರಿನೆರಳು'
ಸಲ್ಮಾನ್ಗೆ ಅಪವಾದಗಳು, ಕೊಲೆ ಆರೋಪ, ಮಾಫಿಯಾ ಜೊತೆಗಿನ ಒಡನಾಟ, ಹಳೆ ಪ್ರೇಯಸಿಯರ ಜೊತೆ ತಿಕ್ಕಾಟ ಮತ್ತು ಉಳಿದ ಬಾಲಿವುಡ್ ಸ್ಟಾರ್ಗಳ ಜೊತೆ ಹೊಡೆದಾಟ ಇವೆಲ್ಲವೂ ಹೊಸದಾಗಿರಲಿಲ್ಲ, ಬಾಲಿವುಡ್ಗೆ ಎಂಟ್ರಿಯಾದಾಗಿನಿಂದ ಇದೆಲ್ಲಾ ಅವನಿಗೆ ಮಾಮೂಲಾಗಿತ್ತು. ಸಂಗೀತಾ ಬಿಜಲಾನಿ, ಸೋಮಿ ಅಲಿ, ಐಶ್ವರ್ಯಾ ರೈ ಸಲ್ಮಾನ್ನ ಹಳೆಯ ಗರ್ಲ್ ಫ್ರೆಂಡ್ಗಳು. ಆತನ ಬ್ಯಾಡ್ ಬಾಯ್ ಇಮೇಜ್ ಬಂದಿದ್ದೆ ಈ ಗರ್ಲ್ ಫ್ರೆಂಡ್ಗಳ ಜೊತೆಗಿನ ತಿಕ್ಕಾಟದಿಂದ. 2003 ರಲ್ಲಿ ಐಶ್ವರ್ಯಾ ಸಾರ್ವಜಿನಿಕವಾಗಿ ತಾನು ಇನ್ನು ಮುಂದೆ ಸಲ್ಮಾನ್ ಖಾನ್ ಜೊತೆ ಯಾವುದೇ ಸಿನಿಮಾ ಮಾಡುವುದಿಲ್ಲ  ಅಂತ ಹೇಳಿಕೆ ಕೊಟ್ಟಿದ್ದಳು, ಆ ಸಮಯದಲ್ಲಿ ಐಶ್ ಜೊತೆ ವಿವೇಕ್ ಓಬಿರಾಯ್ ಬೆಂಬಲವಾಗಿದ್ದ. ಇದಾದ ಮೇಲೆ ಸಲ್ಮಾನ್ ಅವಳಿಗೆ ಫೋನ್ ಮಾಡಿ ಒಂದು ಪ್ರೋಗ್ರಾಂಗೆ ಬರಲಿಕ್ಕೆ ಬಲವಂತ ಮಾಡಿದ್ದ, ಆಕೆ ಆಗೊಲ್ಲ ಅಂದಿದ್ದಕ್ಕೆ ಅವಾಜ್ ಹಾಕಿದ್ದ. ಇದು ವಿವೇಕ್ ಒಬಿರಾಯ್ ಗೆ ಗೊತ್ತಾಗಿ, ಆತ ತನ್ನ ಸ್ನೇಹಿತರ ಜೊತೆ ಹೋಗಿ ಸಲ್ಮಾನ್ ಇದ್ದ ಒಂದು ರೆಸ್ಟೊರೆಂಟ್ನಲ್ಲಿ ದೊಡ್ಡ ಗಲಾಟೆ ಮಾಡುವುದರ ಜೊತೆಗೆ ಅವಾಚ್ಯವಾಗಿ ಬಯ್ದು ಬಂದಿದ್ದ. ಈ ಸೀನ್ ನಡೆದು ಬಹಳ ದಿನಗಳ ನಂತರ ವಿವೇಕ್ ಸಲ್ಮಾನ್ಗೆ ಕ್ಷಮೆ ಕೇಳಿದ್ದ ಅನ್ನೋದು ಜಾಸ್ತಿ ಸುದ್ದಿಯಾಗದ ಸುದ್ದಿಯಾಗಿತ್ತು.

ಶೂಟಿಂಗ್ `ಶೂಟಿಂಗ್' 
1998ರಲ್ಲಿ ಶೂಟಿಂಗ್ಗೊಸ್ಕರ ಸಲ್ಮಾನ್ ಜೋಧ್ಪುರಕ್ಕೆ ಹೋದ ಸಂದರ್ಭದಲ್ಲಿ ಸಹನಟಿ ಸೋನಾಲಿ ಬೇಂದ್ರೆ ಜೊತೆ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದಿದ್ದರು, ಈ ಪ್ರಯುಕ್ತ ಅಕ್ಟೋಬರ್ 12, 1998 ರಲ್ಲಿ ಅವರನ್ನ ಅರೆಸ್ಟ್ ಮಾಡಲಾಯಿತು. 2006 ರಲ್ಲಿ ಇದಕ್ಕೆ 5 ವರ್ಷ ಜೈಲು ಶಿಕ್ಷೆ ಕೂಡ ಆಯಿತು, ಮತ್ತೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
2000ರಲ್ಲಿ ಚೋರಿ ಚೋರಿ ಚುಪ್ಕೆ ಚುಪ್ಕೆ ಸಿನಿಮಾದ ನಿಮರ್ಾಪಕರಾಗಿದ್ದ ಭರತ್ ಶಾಗೆ ಅಂಡರ್ವಲ್ಡರ್್ ಹಣ ನೀಡಿದ ಆಪಾದನೆ ಇತ್ತು. ಹಾಗಾಗಿ ನಿಮರ್ಾಪಕರನ್ನು ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಆ ಸಂದರ್ಭದಲ್ಲಿ ಸಲ್ಮಾನ್ಗೆ ಮುಂಬೈ ಭೂಗತ ಜಗತ್ತಿನ ಜೊತೆ ನಂಟಿದೆ ಅನ್ನುವ ಆರೋಪದ ಅಡಿ ಅರೆಸ್ಟ್ ಮಾಡಲಾಗಿತ್ತು.
ಸಲ್ಮಾನ್ ಖಾನ್ ದೊಡ್ಡ ವಿಲನ್ ಅಂತ ಅನಿಸಿಕೊಂಡಿದ್ದು ಉತ್ತರ ಮುಂಬೈನ ಪ್ರಾಂತ್ಯದಲ್ಲಿ ಮನೆಯಿಲ್ಲದೇ ನಿರಾಶ್ರಿತರಾಗಿ ರಸ್ತೆಯ ಬದಿ ಮಲಗಿಕೊಂಡಿದ್ದ ಕೂಲಿ ಕಾರ್ಮಿಕರ  ಮೇಲೆ ಕಾರು ಹತ್ತಿಸಿದ್ದು. ಕುಡಿದ ಅಮಲಿನಲ್ಲಿ ಸಲ್ಮಾನ್ ಮಾಡಿದ ಈ ತಪ್ಪಿನಿಂದಾಗಿ ಒಬ್ಬನ ಸಾವು ಹಾಗೂ ಇನ್ನು ಹಲವರು ದೀರ್ಘವಾಗಿ ಗಾಯವಾಗಿದ್ದರು. ಈ ಕೇಸ್ಗೆ ಖಂಡಿತ ಸಲ್ಮಾನ್ಗೆ ದೊಡ್ಡ ಶಿಕ್ಷೆಯಾಗುತ್ತೆ, ಜೈಲಿನಲ್ಲೇ ಕೊಳೆಯಲಿದ್ದಾನೆ ಅನ್ನೋ ಮಾತು ಕೂಡ ಕೇಳಿಬಂದಿತ್ತು, ಇದಕ್ಕೆ ಕಾರಣಗಳು ಕೂಡ ಇದ್ದವು. ಡ್ರೈವಿಂಗ್ ಮಾಡೋವಾಗ ಸಲ್ಮಾನ್ ಕುಡಿದಿದ್ದ, ಜೊತೆಗೆ ಅವನು ಹೊಂದಿದ್ದ ಲೈಸೆನ್ಸ್ನ ವ್ಯಾಲಿಡಿಟಿ ಕೂಡ ಮುಗಿದು ಹೋಗಿತ್ತು. ಅಕ್ಕೊಬರ್ 2002 ರಂದು ನಡೆದ ಈ ಘಟನೆಯಿಂದ ಖಾನ್ಗೆ ಕಡಿಮೆ ಅಂದರೂ ಹತ್ತು ವರ್ಷ ಜೈಲಾಗುವ ಸಾಧ್ಯತೆ ಇತ್ತು, ಆದರೆ ಹಾಗಾಗಲಿಲ್ಲ. ಇಂದು ಆಗಾಗ ಸಲ್ಮಾನ್ ಜೈಲಿಗೆ ಹೋಗಿ ಬರ್ತಿದ್ದರೂ ಆತ ಇಂದಿಗೂ ಎಲ್ಲರ ಹೀರೋ, ಒಂದು ಹಿಟ್ ಸಿನಿಮಾ ಅವನ ಎಲ್ಲ ಕೆಟ್ಟ ಇಮೇಜನ್ನು ತೊಳೆದು ಹಾಕಿತು. ದೇಶದ ಕಾನೂನು ಕೂಡ ಅವನೇ ಪರವೇ ಆಯಿತು, ಏಕೆಂದರೆ ಸಲ್ಮಾನ್ ಹತ್ತಿರ ಹಣವಿತ್ತು, ಅವನ ಹಣ ಅವನನ್ನು ಗೆಲ್ಲಿಸಿಬಿಟ್ಟಿತು. ಸತ್ತ ಹಾಗೂ ಗಾಯಗೊಂಡ ಬಡವರಿಗೆ ಮಾತ್ರ ನ್ಯಾಯ ಸಿಗಲಿಲ್ಲ.

ರಾಂಬೋ ಅವನಲ್ಲಿ ಹೊಕ್ಕು ಕೂತ್ತಿದ್ದ 
ನೀವು 1889 ಹಾಗೂ 1990ರ ಸಲ್ಮಾನ್ ಸಿನಿಮಾಗಳನ್ನು ನೋಡಿದರೆ ಸಲ್ಮಾನ್ ಖಾನ್  ಹೇರ್ ಸ್ಟೈಲ್ ಮತ್ತು ಬಾಡಿ ಫಿಟ್ನೆಸ್ ಒಬ್ಬ ಹಾಲಿವುಡ್ ಸ್ಟಾರ್ ನನ್ನು   ನೆನಪಿಸುತ್ತದೆ. ಸಲ್ಮಾನ್ಗೆ ಈತನೇ ಪ್ರೇರಣೆ. ರಾಕಿ, ರ್ಯಾಂಬೋ ಪಾತ್ರಗಳ ಅತಿರೂಪ ಸೈಲ್ವೆಸ್ಟರ್ ಸ್ಟಲ್ಲೋನ್ ಈ ಖಾನ್ ಖದರ್ನಲ್ಲಿ ಅಡಗಿ ಕುಳಿತಿದ್ದ. ಸಲ್ಮಾನ್ ಖಾನ್ಗೆ ಸ್ಟಲ್ಲೋನ್ ಅಂದರೆ ಬಹಳ ಇಷ್ಟ. ಆತನ ಸಿನಿಮಾಗಳನ್ನು ಚಿಕ್ಕವನಾಗಿದಾಗಿಂದಲೇ ತುಂಬಾ ಇಷ್ಟ ಪಟ್ಟು ನೋಡುತ್ತಿದ್ದ. ಸಲ್ಮಾನ್ ಖಾನ್ ಇಷ್ಟೊಂದು ಬಾಡಿಬಿಲ್ಡಿಂಗ್ ಹಾಗೂ ಫಿಟ್ನೆಸ್ಗೆ ಮಹತ್ವ ಕೊಡಲು ಕಾರಣ ಇದೇ ಸೈಲ್ವೆಸ್ಟರ್ ಸ್ಟಲ್ಲೋನ್.
                                           *****************************


ಅವನಿಗೂ ಎಲ್ಲವೂ ಇದೆ. ಆಸೆಪಟ್ಟಿದ್ದೆಲ್ಲಾ ಅವನಿಗೆ ಸಿಗಲಿಕ್ಕೆ ಚಿಟಿಗೆ ಸದ್ದು ಸಾಕು. ಜೀವನವೆಂದರೆ ಕೇವಲ ಇಷ್ಟಕ್ಕೆ ಮುಗಿಯುವುದೇ? ಸಲ್ಮಾನ್ ಜೀವನದಲ್ಲಿ ಸಾಲು ಸಾಲು ಸಿನಿಮಾ ಸೋಲುಗಳು, ಕೊಲೆ ಕೇಸುಗಳು, ಮಾಫಿಯಾ ಒಡನಾಟ ಎಲ್ಲವೂ ಅವನನ್ನ ಬೆಂಬಿಡದೇ ಕಾಡಿದವು. ಎಲ್ಲವನ್ನೂ ಜಯಿಸಿ ಗೆದ್ದೇಬಿಟ್ಟ. ಒಂದೇ ರಾತ್ರಿಯಲ್ಲಿ ಆತ ಇಡೀ ಬಾಲಿವುಡ್ಡಿಗೆ ಅದನ್ನೆಲ್ಲ ಮರೆಸಿಬಿಟ್ಟ. ಈ ವಿಷಯದಲ್ಲಿ ಇಂದಿಗೂ ಆತ ವೀರ `ಯುವರಾಜ'ನೇ. ಆದರೆ ಒಂದು ವಿಷಯ ಮಾತ್ರ ಈತನಿಗಿನ್ನೂ ಮರೀಚಿಕೆಯಾಗಿಯೇ ಉಳಿದಿದೆ ಹಾಗೂ ಅದು ಎಲ್ಲರ ಪ್ರಶ್ನೆಯಾಗಿಯೇ ಉಳಿದಿದೆ.

ಸಲ್ಮಾನ್ ಮದುವೆ ಯಾವಾಗ..?








ಸಲ್ಮಾನ್ ಪೋಟೋ ಗ್ಯಾಲರಿ
ಸಲ್ಲು ಅಮ್ಮನ ಜೊತೆ











ಸಲ್ಮಾನ್ ಅದ್ಭುತ ಕುಂಚ ಕಲಾವಿದ
90 ರ ದಶಕದಲ್ಲಿ ಸಲ್ಮಾನ್ ಹೀಗಿದ್ದ








ಅಭಿಮಾನಿಗಳಿಗೆ ತನ್ನ ಶರ್ಟನ್ನು ನೀಡಿದ ಸನ್ನಿವೇಶ

ಸ್ಟೇಲ್ಲೋನ್ನನ್ನು  ಅನುಸರಿಸಿದ್ದು ಹೀಗೆ
ಮೈನೇ ಪ್ಯಾರ್  ಕಿಯಾ..!

ಧಬಾಂಗ್ ನಲ್ಲಿ ಸಲ್ಮಾನ್ 

90 ರ ದಶಕದಲ್ಲಿ ಸಲ್ಮಾನ್ ಬಾಡಿ
ಅಮ್ಮಾ ನಿನ್ನ ತೋಳಿನಲ್ಲಿ ಸಲ್ಮಾನ್ ನಾನು

ಅಪರೂಪದ ಫೋಟೋ -ಅಪ್ಪನ ಜೊತೆ





ಕುಟುಂಬದ ಜೊತೆ
ಪ್ರೀತಿಯ ಅಣ್ಣಂದಿರು, ತಂಗಿಯರ ಜೊತೆ ಸಲ್ಮಾನ್

ಅಮ್ಮ ಹಿಂದು ಆಗಿದ್ದರಿಂದ ಗಣೇಶನ ಭಕ್ತ ಕೂಡ

ಪ್ರೈಮರಿ ಸ್ಕೂಲ್ ನಲ್ಲಿದ್ದಾಗ
ಸಲ್ಮಾನ್ ಖಾನ್ ನ ಮುಂಬೈನ ಮನೆ


ಗರ್ವ ಸಿನಿಮಾದಲ್ಲಿ