Thursday 15 March 2018

ವಿಭಿನ್ನ ಅನುಭವಧಾರೆಯ ಕಾದಂಬರಿ `ಚಿರಸ್ಮಿತ'

ಸದಾ ನಗುಮುಖ, ಆಪ್ತತೆಯಿಂದ ಎಲ್ಲರಿಗೂ ಇಷ್ಟವಾಗುವ ನಮ್ಮ ನಾಡಿನ ಜನಪ್ರಿಯ ಲೇಖಕರು ಆದಂತಹ ಯತಿರಾಜ್ ವೀರಾಂಬುಧಿ ಅವರ ಕಾದಂಬರಿ 'ಚಿರಸ್ಮಿತ' ಕೃತಿಯನ್ನು‌ಓದಿ ಆ ಕೃತಿಯನ್ನು‌ಮೆಚ್ಚಿ ನನ್ನ ಮಾತುಗಳನ್ನು ಈ ಮೂಲಕ‌ ಹಂಚಿಕೊಂಡಿದ್ದೇನೆ.
ಕಾದಂಬರಿಯ ವಸ್ತು ಎಲ್ಲರಿಗೂ ಇಷ್ಟವಾಗುವಂತಹದ್ದು. ಅವರ ಸರಳ ನಿರೂಪಣೆಯೇ ಓದಿಸಿಕೊಂಡು‌ ಹೋಗುವಂತಹ‌ ಶಕ್ತಿ ಹೊಂದಿದೆ. ಅವರ ಜ್ಞಾನ, ಬದುಕಿನ‌ ಅನುಭವ ದೊಡ್ಡದು. ಅದು ಕೃತಿಯಲ್ಲಿಯೂ ವ್ಯಕ್ತವಾಗುತ್ತದೆ.

ವಿಭಿನ್ನ ಅನುಭವಧಾರೆಯ ಕಾದಂಬರಿ `ಚಿರಸ್ಮಿತ'
`ಚಿರಸ್ಮಿತ' ಕಾದಂಬರಿ ಇದುವರೆಗೆ ನಾನು ಓದಿರುವ ಕಾದಂಬರಿಗಳಲ್ಲಿ ಅತ್ಯಂತ ವಿಭಿನ್ನ ಅನುಭವ ನೀಡಿದಂತಹ ಕಾದಂಬರಿ ಎಂದು ಬಣ್ಣಿಸುವೆ. ಕಾದಂಬರಿಯ ಆಳಕ್ಕೆ ಹೋಗಿ ಅದನ್ನು ಬಣ್ಣಿಸುವ ಮುನ್ನ, ಕೃತಿಕಾರನ ಮನಸ್ಥಿತಿಯನ್ನು ಆತನ ವ್ಯಕ್ತಿತ್ವವನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಲೇಖಕರ ಅಂತರಾಳ, ಮನಸ್ಥಿತಿಯ ತಕ್ಕಹಾಗೆ ಅವರ ಭಾವನೆಗಳು ಸ್ಫುರಣೆಗೊಳ್ಳುತ್ತಲೇ ಇರುತ್ತವೆ. ಭಾವನೆಗಳಿಗೆ ತಕ್ಕಹಾಗೆ ಕೃತಿಯ ನೆಲಘಟ್ಟು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೃತಿಕಾರನ ಅಂತರಾಳವೇ ಸೂಕ್ಷ್ಮ, ನಿಷ್ಕಲ್ಮಶ ಮಮಕಾರದ ಕೊಡದಂತಿದೆ. ಇನ್ನೊಂದು ರೀತಿ ನಮ್ಮ ಆಡುಭಾಷೆಯಲ್ಲಿ ಹೇಳುವುದಾದರೆ ಕೃತಿಕಾರನ ಮನಸ್ಸು ತಾಯಿಕರುಳಿನಂತಿರುವುದರಿಂದ ಸಂವೇದನೆಯನ್ನು ಈ ಕಾದಂಬರಿಯಲ್ಲಿ ಸುಲಭವಾಗಿ ಗುರುತಿಸಬಹುದು.
ಈ ಕಾದಂಬರಿಯನ್ನು ಓದುವುದರ ಜೊತೆಗೆ ನನಗೆ ಕೃತಿಕಾರನ ಅಂತರಾಳವನ್ನು ಹೊಕ್ಕು ನೋಡಿದ ಅನುಭವವಾಯಿತು. ಲೇಖಕರ ಆಂತರಿಕ ಸಂವೇದನೆಯೇ ಈ ರೀತಿ ಇರುವಾಗ ಚಿರಸ್ಮಿತ ಕಾದಂಬರಿಯೂ ಆ ನೆಲೆಗಟ್ಟಿನಲ್ಲಿಯೇ ಬರೆಯುವ ಪ್ರಯತ್ನ ಮಾಡಿರುವುದನ್ನು ಇಲ್ಲಿ ಕಾಣಬಹುದು.
ಬದುಕು ಎಂದ ಮೇಲೆ ಏರಳಿತಗಳ ದಾರಿ, ಕಷ್ಟಸುಖಗಳ ಹಗಲು ರಾತ್ರಿ ಸಹಜ. ಕೃತಿಕಾರನ ಸಾಹಿತ್ಯವೂ ಅದೇ ರೀತಿಯಲ್ಲೇ ರೂಪುಗೊಳ್ಳುತ್ತದೆ. ಸದಾ ಬೇರೆಯವರಿಗೆ ಒಳ್ಳೆಯದನ್ನು ಬಯಸುವ ನಿರ್ಮಲ ಮನಸ್ಸಿದ್ದವರು ಮಾತ್ರ ಚಿರಸ್ಮಿತದಂತಹ ಕಾದಂಬರಿಯನ್ನು ಬರೆಯಬಲ್ಲರು, ಅರ್ಥಮಾಡಿಕೊಳ್ಳಬಲ್ಲರು. ಇಲ್ಲವಾದರೆ ಕೃತಿಯೂ ಸುಖಕ್ಕಿಂತ ಕಷ್ಟದ ವಾಸ್ತವವನ್ನೇ ರಹದಾರಿಯನ್ನಾಗಿಸಿಕೊಂಡು ಓದುಗರ ಚಿಂತನೆಗೆ ಕಾರಣವಾಗುತ್ತದೆ. ಚಿರಸ್ಮಿತದಲ್ಲಿ ಸುಹಾಸಿನಿಯ ಬದುಕು ಕಷ್ಟದ ಮಡಿಕೆಯಲ್ಲಿ ನೊಂದು ಬೆಂದರೂ ಅವಳ ಸುತ್ತಲಿನ ಪ್ರಪಂಚ ಸುಖದ ಉಯ್ಯಾಲೆಯಲ್ಲಿ ತೇಲುತ್ತಲೇ ಹೋಗುತ್ತದೆ. ಒಂದು ಶತಮಾನದ ಕಾಲಘಟ್ಟದಲ್ಲಿ ಬದುಕಿ ಬಾಳಿದ ತಲೆಮಾರನ್ನು ನಿರೂಪಿಸಿರುವ ಲೇಖಕರು ತುಂಬಾ ಆಳಕ್ಕೆ ಹೋಗದೇ ನೇರವಾಗಿ ಕಾದಂಬರಿಯನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಈ ರೀತಿಯ ನಿರೂಪಣೆ ಕೃತಿಕಾರನ ಸ್ವಾಭಾವಿಕ ಬರವಣಿಗೆಯ ಶೈಲಿಯಾಗಿದ್ದರೂ ಆಗಿರಬಹುದು, ಅಥವಾ ಈ ಕಾದಂಬರಿಗೆ ಬಳಸಿರುವ ವಸ್ತುನಿಷ್ಠತೆಯೂ ಇರಬಹುದು. 
`ಚಿರಸ್ಮಿತ' ಅನ್ನುವ ಹೆಸರಿನ ಮರ್ಮ ಕಾದಂಬರಿಯ ಕೊನೆಯ ಅಧ್ಯಾಯಗಳಲ್ಲಿ ಪ್ರಸ್ತಾಪವಾಗುತ್ತಾ, ಅದು ಕೂಡ ಒಂದು ಪಾತ್ರವಾಗಿಬಿಡುತ್ತದೆ. ಈ ಅಂಕಿತನಾಮ ಕಥಾನಾಯಕಿಯ ಅನಾಮಧೇಯ ಹೆಸರಾದರೂ ಅದು ಕೂಡ ಪಾತ್ರವಾಗಿ ಕಂಡಾಗ, ಇಡೀ ಕಾದಂಬರಿಯ ಚಿತ್ರಣವನ್ನು ಅದು ತೆರೆದಿಡುತ್ತದೆ. ನಾಯಕಿಯ ಅಷ್ಟು ವರ್ಷದ ಬದುಕನ್ನು ಚಿರಸ್ಮಿತ ಅನ್ನುವ ಪಾತ್ರ ಜನಪ್ರಿಯಗೊಳಿಸುತ್ತದೆ. ಸುಹಾಸಿನಿಯ ಬದುಕನ್ನು ಓದುತ್ತಾ ಹೋದಂತೆ ಆಕೆಯಲ್ಲಿನ ಸದ್ಗುಣಗಳು ಅವಳ ಬದುಕಿನ ಎಲ್ಲ ಕಷ್ಟಗಳನ್ನು ನುಂಗಿಬಿಡುತ್ತವೆ. ಆದರೂ ಓದುಗರಿಗೆ ಅವಳ ಬದುಕನ್ನು ಕಂಡಾಗ ಕಣ್ಣೀರು ಬರದೇ ಇರದು. ಅವಳ ಜೀವನ ಹೀಗಾಗಬಾರದಿತ್ತು ಅಂತ ಯೋಚನೆ ಮಾಡುತ್ತಲೇ ಹೋದಾಗ ಚಿರಸ್ಮಿತ ಎಂಬ ಲೇಖಕಿಯು ಹುಟ್ಟಿಕೊಳ್ಳಲು ಅದು ಕಾರಣವಾಗುತ್ತದೆ ಅನ್ನುವುದು ಕೊನೆಗೆ ಅರಿವಾಗುತ್ತದೆ.
ಕಾದಂಬರಿಯಲ್ಲಿ ಬರುವ ಸುಹಾಸಿನಿ ಮತ್ತು ಸುಫಲಾ ಎಂಬ ಇಬ್ಬರು ಸ್ನೇಹಿತೆಯರ ಬದುಕು ಒಂದೊಂದು ರೀತಿ ಸಾಗುತ್ತದೆ. ಅವಳ ಬದುಕು ಇವಳಂತೆ; ಇವಳ ಬದುಕು ಅವಳಂತೆ ಆಗದೇ ಸಾಗುತ್ತದೆ. ಆದರೆ ಅವರಿಬ್ಬರ ಸ್ನೇಹ ಮಾತ್ರ ಗಟ್ಟಿಯಾಗಿ ಕೊನೆಯವರೆಗೂ ನಿಲ್ಲುವಂತೆ ಲೇಖಕರು ಮಾಡಿದ್ದಾರೆ. ಇಲ್ಲಿ ಸುಹಾಸಿನಿಯ ಬದುಕನ್ನು ಚಿತ್ರಿಸುವಾಗ ಸುಫಲಾಳ ಬದುಕು ಕೇವಲ ಹೋಲಿಕೆಗೆ ಮಾತ್ರ ಸಿಗುತ್ತದೆ. ಇಡೀ ಕಾದಂಬರಿಯಲ್ಲಿ ಖಳನಾಯಕರು ಎಂದು ಗುರುತಿಸುವುದಾದರೆ ಆರಂಭದಲ್ಲಿ ಸುಹಾಸಿನಿಯ ತಂದೆಯೇ ಆಕೆಗೆ ಕಂಟಕವಾಗಿ ವಿರೋಧಿಸುವವನಾದರೆ, ಮಧ್ಯ ಭಾಗದಲ್ಲಿ ಗಜಾನನನೇ ಇಡೀ ಕಾದಂಬರಿಗೆ ತಿರುವು ನೀಡುತ್ತಾನೆ. ಕಾದಂಬರಿಯ ಆರಂಭದಲ್ಲಿ ಗಜಾನನ ಸಾತ್ವಿಕ ವ್ಯಕ್ತಿಯಂತೆ ಕಂಡರೂ, ಬರುಬರುತ್ತ ಅವನ ಹೋರಾಟದ ಮನೋಭಾವವು ಬದಲಾಗುತ್ತಾ ಆತನ ವ್ಯಕ್ತಿತ್ವದಲ್ಲಿಯೂ ಕೂಡ ಕೆಟ್ಟ ಬದಲಾವಣೆಯಾಗುತ್ತದೆ. ಲೇಖಕರು ಚಿತ್ರಿಸಿರುವ ಆತನ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ವಿಚಾರಗಳು ಅಂದಿನ ಮೂಡ್ಗೆ ಓದುಗರನ್ನು ಕರೆದುಕೊಂಡು ಹೋಗುತ್ತವೆ. ಮಗ ಭಾರತೀಪ್ರಿಯನ ಬದುಕು ಈ ರೀತಿ ಇರಬಾರದಿತ್ತು, ಬೇರೆ ರೀತಿ ಚಿತ್ರಿಸಬಹುದಾಗಿತ್ತು ಅಂತ ಓದುಗನಾದ ನನಗೂ ಅನಿಸಿತು. ಆತನ ದುರಂತ ಅಂತ್ಯ ಸುಹಾಸಿನಿಯ ಬದುಕನ್ನು ಇನ್ನಷ್ಟು ಗಟ್ಟಿಮಾಡುತ್ತದೆ.
ಇಡೀ ಕಾದಂಬರಿಯಲ್ಲಿ ಮೆಚ್ಚುವಂತಹ ವಿಷಯವೆಂದರೆ, ಸುಹಾಸಿನಿಗೆ ಇಲ್ಲಿ ಯಾರೂ ಖಳನಾಯಕಿಯರಿಲ್ಲ. ಕೃತಿಕಾರನ ಮಹಿಳಾಪಾತ್ರಗಳೆಲ್ಲಾ ಉದಾತ್ತ ಗುಣಸ್ವಭಾವದವರೇ ಆಗಿದ್ದಾರೆ. ಹೆಣ್ಣಿಗೆ ಹೆಣ್ಣೆ ಶತ್ರು ಅನ್ನುವ ಮಾತು ಈ ಕಾದಂಬರಿಯಲ್ಲಿ ಕಾಣುವುದೇ ಇಲ್ಲ. ಅವರೊಳಗೆ ಒಬ್ಬ ಫಿಮಿನೆಸ್ಟ್ ಕೂತಿರಬಹುದೇ? ಇದನ್ನು ನನಗೆ ಗ್ರಹಿಸಲು ಆಗಲಿಲ್ಲ. ಒಟ್ಟಾರೆಯ ಕಾದಂಬರಿಯನ್ನು ನಿರೂಪಿಸಿದ ರೀತಿ ನನಗೆ ಹೊಸದಾಗಿ ಕಂಡರೂ ಒಂದು ಕಾಲಘಟ್ಟವನ್ನು ಹೊರವರ್ತುಲದಲ್ಲಿ ಕಾಣುವಂತೆ ಹೇಳುತ್ತಾ ಹೋಗಿರುವುದು ಮುಖ್ಯ ಅಂಶವೆನಿಸಿಕೊಳ್ಳುತ್ತದೆ.
ಗಂಭೀರವಾಗಿ ಆಳವಾಗಿ ತುಂಬಾ ಶಿಷ್ಟಭಾಷೆಯಲ್ಲಿ ಬರೆದಂತಹ ಕಾದಂಬರಿಗಳಿಗೆ ಇದನ್ನು ಹೋಲಿಕೆ ಮಾಡಲಾಗದು. ಕುವೆಂಪು, ಕಾರಂತ, ಭೈರಪ್ಪರಂತಹ ಕಾದಂಬರಿಗಳನ್ನು ಅನಲೈಸ್ ಮಾಡುವವರಿಗೆ ಈ ಕಾದಂಬರಿ ರುಚಿಸದೇನೂ ಇರಬಹುದು. ಆದರೆ ಸಾಮಾನ್ಯ ಓದುಗರಿಗೆ ಇದು ಸ್ಷಪ್ಟವಾಗಿ ಓದಿಸಿಕೊಂಡು ಹೋಗುವಂತಹ ಶಕ್ತತೆಯನ್ನು ಹೊಂದಿದೆ. ಇಡೀ ಕಾದಂಬರಿಯು ಮೈಸೂರು ಪ್ರಾಂತ್ಯವನ್ನು ಒಳಗೊಂಡಂತೆ ಅಲ್ಲಿನ ವೈದಿಕ ಮನೆತನಗಳ ಕಷ್ಟನಷ್ಟಗಳ ಬವಣೆಯನ್ನು ಕೂಡ ಆಂದ್ರವಾಗಿಸುತ್ತದೆ. 80ರ ದಶಕದ ನಂತರ ಹುಟ್ಟಿದಂತಹ ನನ್ನಂತವರಿಗೆ ನಮ್ಮ ತಂದೆತಾಯಿ, ತಾತಮುತ್ತಾತರ ಕಾಲಘಟ್ಟವನ್ನು ಹೇಳುವಾಗ ಇರುವ ಕುತೂಹಲ ಇಲ್ಲಿಯೂ ವ್ಯಕ್ತವಾಗುತ್ತದೆ. ಅರವತ್ತು, ಎಪ್ಪತ್ತು ಮತ್ತು ಎಂಬತ್ತರ ದಶಕಗಳ ಸಿನಿಮಾಗಳನ್ನು ಕಾದಂಬರಿಯ ಓಘಕ್ಕೆ ಪೂರಕವಾಗಿ ಬಳಸಿಕೊಂಡಿರುವುದು ಕೂಡ ಕೃತಿಕಾರನ ಸೃಜನಶೀಲ ವಿಚಾರವೇ!
ಪುಟ 259ರಲ್ಲಿ ಬರುವ ಒಂದು ಶ್ಲೋಕವು (ಪಿತಾ ರಕ್ಷತಿ ಕೌಮಾರೇ|....) ಕೃತಿಕಾರನಿಗೆ ಇಡೀ ಕಾದಂಬರಿಯನ್ನು ಬರೆಯಲು ವೇದಿಕೆಯನ್ನು ನೀಡಿರಬಹುದು, ಪ್ರೇರಣೆಯನ್ನು ನೀಡಿರಬಹುದು ಅನ್ನುವುದು ನನ್ನ ಭಾವನೆ.
ಇಡೀ ಕಾದಂಬರಿ ನೆನಪಿನಲ್ಲಿ ಉಳಿಯುತ್ತದೆ. ಸಾಹಿತ್ಯಿಕ ವಿಮರ್ಶಾತ್ಮಕವಾಗಿ ನೋಡದೇ ಓದುಗನ ಭಾವನೆಗೆ ತಕ್ಕಂತೆ ನನ್ನ ಮಾತುಗಳನ್ನು ಬರೆಯಲಿಕ್ಕೆ ಪ್ರಯತ್ನಿಸಿದ್ದೇನೆ.
ವಂದನೆಗಳು.

Tuesday 23 January 2018

'ಎಂದಿಗೂ ಸುಗಮ ಸಂಗೀತವು ತನ್ನ ಮನೋಧರ್ಮವನ್ನು ಕಳೆದುಕೊಳ್ಳಬಾರದು'- ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕನ್ನಡ ಸುಗಮ ಸಂಗೀತ ಕ್ಷೇತ್ರ ಇಂದು ವಿಪುಲವಾಗಿ ಬೆಳೆದು ಬಹುವಿಸ್ತಾರಗೊಂಡಿದೆ. ಕವಿಗಳ ಭಾವಗೀತೆಗಳನ್ನೇ ಸುಗಮ ಸಂಗೀತಕ್ಕೆ ಒಳಪಡಿಸಿದ ಸಂಯೋಜಕರು, ಗಾಯಕರು ಕನ್ನಡಿಗರಮನೆ-ಮನಗಳಿಗೆ ತಲುಪಿಸಿದ್ದಾರೆ. ಪಿ. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಮೈಸೂರು ಅನಂತಸ್ವಾಮಿ, ಡಾ. ಸಿ. ಅಶ್ವಥ್ ಅವರಿಂದ ಹಿಡಿದು ಇವತ್ತಿನ ಯುವ ತಲೆಮಾರಿನ ಸಂಯೋಜಕರು, ಗಾಯಕರವರೆಗೂ ಸುಗಮ ಸಂಗೀತ ಕ್ಷೇತ್ರ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅನನ್ಯಗೊಂಡಿದೆ. ಸುಗಮ ಸಂಗೀತ ಕ್ಷೇತ್ರ ತನ್ನ ವಿಸ್ತಾರವನ್ನು ಬೆಳೆಸಿಕೊಂಡಂತೆ ಕವಿಗಳು ಅಷ್ಟೇ ಜನಪ್ರಿಯಗೊಂಡರು. ಕನ್ನಡದ ಶ್ರೇಷ್ಠ ಕವಿತೆಗಳು ಸುಗಮ ಸಂಗೀತದ ಮೂಸೆಯಲ್ಲಿ ಸೇರಿಕೊಂಡು ಹೊಸರೂಪ ಪಡೆದುಕೊಂಡವು. ಕವಿತೆಗಳಿಂದ ಸಂಗೀತಕ್ಕೆ ಹೆಚ್ಚು ಕಾವ್ಯಾತ್ಮಕ ಗುಣ ಸೇರಿಕೊಂಡಿತು. ತನ್ನದೇ ಮನೋಧರ್ಮವನ್ನು ಬೆಳೆಸಿಕೊಂಡಿತು. ಹೀಗೆ ಅಸ್ಪಷ್ಟ ರೂಪದಿಂದ ಸ್ಪಷ್ಟರೂಪ ಪಡೆದುಕೊಂಡು ಇಂದು ಸುಗಮ ಸಂಗೀತ ಒಂದು ಪರಂಪರೆಯಾಗಿ ಬೆಳೆದು ನಿಂತಿದೆ. ಕನ್ನಡನಾಡಿನ ಹಿರಿಯ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಇಂತಹ ಸುದೀರ್ಘ ಪರಂಪರೆಯ ಸಾಕ್ಷಿಯಾಗಿ ಯುವತಲೆಮಾರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಸುಗಮ ಸಂಗೀತದ ಬೆಳವಣಿಗೆಯನ್ನು ತುಂಬಾ ಹತ್ತಿರದಿಂದ ಕಂಡಂತಹ ಎಚ್ಎಸ್ವಿ ಈ ಪರಂಪರೆಯನ್ನು ಇಲ್ಲಿ ವಿಸ್ತಾರವಾಗಿ ಬಣ್ಣಿಸಿದ್ದಾರೆ. ಸುಗಮ ಸಂಗೀತ ಬೆಳೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಅದು ಆಯಾಯ ಕಾಲಘಟ್ಟಕ್ಕೆ ಸವಾಲುಗಳನ್ನು ಎದುರಿಸುತ್ತಾ ತನ್ನದೇ ಸ್ಪಷ್ಟ ರೂಪವನ್ನು ಪಡೆದುಕೊಂಡಿದೆ ಅನ್ನುವುದನ್ನು ಎಚ್ಎಸ್ವಿ ಗುರುತಿಸುತ್ತಾರೆ. ಸುಗಮ ಸಂಗೀತ ಪರಿಷತ್ತು ಪ್ರತಿವರ್ಷವಂತೆ ಈ ವರ್ಷವೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಗಮ ಸಂಗೀತ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಈ ಸಂದರ್ಭಕ್ಕೆ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ವಿಶೇಷ ಸಂದರ್ಶನ ಇಲ್ಲಿದೆ. ಒಟ್ಟಾರೆ ಸುಗಮ ಸಂಗೀತದ ಪರಂಪರೆಯಿಂದ ಹಿಡಿದು ಈ ಕ್ಷೇತ್ರದ ಸಾಧಕ-ಬಾಧಕಗಳನ್ನು, ಮುಂದಿನ ಸವಾಲುಗಳನ್ನು ಸಂದರ್ಶನದಲ್ಲಿ ಚರ್ಚಿಸಲಾಗಿದೆ. ಇದೊಂದು ಸುಗಮ ಸಂಗೀತದ ಮೇಲೆ ಬೆಳಕು ಚೆಲ್ಲುವ ಅಪರೂಪದ ಸಂದರ್ಶನ.
                                                                    
                                                                                               - ಶ್ರೀಧರ ಬನವಾಸಿ



ಪ್ರ : ಸರ್, ಶಿರಸಿಯಲ್ಲಿ ನಡೆಯುತ್ತಿರುವ ಸುಗಮ ಸಂಗೀತ ಸಮ್ಮೇಳನದ ಹಿನ್ನೆಲೆಯಲ್ಲಿ ಮೊದಲಿಗೆ ನಿಮಗೆ ಈ ಪ್ರಶ್ನೆ; ಅಂದಿನಿಂದ ಇಂದಿನವರೆಗೆ ಸುಗಮ ಸಂಗೀತದ ವಿವಿಧ ಮಜಲುಗಳು ಮತ್ತು ಪರಂಪರೆಯನ್ನು ನೀವು ಕಂಡಂತೆ ಬಣ್ಣಿಸುವಿರಾ?

ಎಚ್ಎಸ್ವಿ : ಸುಗಮ ಸಂಗೀತದ ಆರಂಭದ ದಿನಗಳಲ್ಲಿ ಯಾವುದೇ ಹಾಡನ್ನು ಬೇಕಾದರೂ ಹಾಡುವ ವಾತಾವರಣವಿತ್ತು. ಅಂದಿನ ಗಾಯಕರು ಕೀರ್ತನೆ, ಜಾನಪದ, ಕವಿಗಳ ಗೀತೆಗಳನ್ನು ಕೂಡ ಹಾಡ್ತಾ ಇದ್ರು. ಪ್ರಾರಂಭದ ದಿನಗಳು ಹೀಗೆಯೇ ಶುರುವಾಯಿತು. ಬಾಳಪ್ಪ ಹುಕ್ಕೇರಿ, ಕಾಳಿಂಗರಾಯರನ್ನು ನಾವು ಈ ಪರಂಪರೆಯ ಆದಿಪುರುಷರು ಅಂತ ಅಂದುಕೊಂಡರೂ, ಆರಂಭದಲ್ಲಿ ತನ್ನದೇ ಆದ ಖಚಿತ ಸ್ವರೂಪವಿಲ್ಲದೆಯೇ ಅದು ಪ್ರಾರಂಭವಾಯಿತು. ಇದು ಶಾಸ್ತ್ರೀಯ ಸಂಗೀತಕ್ಕಿಂತ ಸ್ವಲ್ಪ ವಿಭಿನ್ನವಾದ ಸಂಗೀತವಾಗಿದ್ದರಿಂದ ಇದನ್ನ ಲೈಟ್ಮ್ಯೂಸಿಕ್ ಅಂತ ಸಾಮಾನ್ಯವಾಗಿ ಕರೆಯಲಿಕ್ಕೆ ಪ್ರಾರಂಭಿಸಿದರು. ಆ ಕಾಲದಲ್ಲಿ ಆಕಾಶವಾಣಿಯ ಆಸರೆಯು ಇದಕ್ಕೆ ಸಿಕ್ಕಿದ್ದರಿಂದ ಇದರ ಬೆಳವಣಿಗೆಗೆ ಪೂರಕವಾಯಿತು. ಎಚ್ಎಂವಿ ಕಂಪನಿಯವ್ರು ಭಾವಗೀತೆಗಳ ತಟ್ಟೆಗಳನ್ನು ಪರಿಚಯಿಸಿದರು. ಈ ರೀತಿಯ ಆರಂಭದ ನಂತರ ಸುಗಮ ಸಂಗೀತವೆಂದರೆ ಕೇವಲ ಕವಿಗಳ ಗೀತೆಗಳು ಅಂತ ಸ್ಪಷ್ಟತೆಯನ್ನು ಪಡೆದುಕೊಂಡು ತನ್ನ ಎರಡನೇ ಮಜಲನ್ನು ಪಡೆದುಕೊಂಡಿತು. ಈ ಒಂದು ಘಟ್ಟವನ್ನು ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ರ ಸುವರ್ಣಯುಗವೆಂದು ನಾನು ಬಣ್ಣಿಸುವೆ. ಈ ಸಮಯದಲ್ಲೇ ಪದ್ಮಚರಣ್, ಎಚ್.ಕೆ. ನಾರಾಯಣ, ಎಚ್.ಆರ್. ಲೀಲಾವತಿ ಅವರಂತಹ ಪ್ರಮುಖರು ಈ ಪರಂಪರೆಯಲ್ಲಿ ಸೇರುತ್ತಾರೆ. ಈ ಗಾಯಕರೆಲ್ಲಾ ಹೆಚ್ಚಾಗಿ ಕವಿಗಳ ಗೀತೆಗಳನ್ನೇ ಹಾಡುತ್ತಿದ್ದರು. ಡಿವಿಜಿ ಮತ್ತು ರಾಜರತ್ನಂ ಅವರಂತಹ ಕವಿಗಳು ಅನಂತಸ್ವಾಮಿ ಅವರಿಂದಲೇ ಮನೆಮನ ಮುಟ್ಟಲಿಕ್ಕೆ ಸಾಧ್ಯವಾಯಿತು. ಶಿಶುನಾಳ ಶರೀಫ್, ಕೆ.ಎಸ್. ನರಸಿಂಹಸ್ವಾಮಿ ಅವರ ಗೀತೆಗಳು ಅಶ್ವಥ್ರಿಂದ ಅತ್ಯಂತ ಜನಪ್ರಿಯಗೊಂಡವು. ಕುವೆಂಪು, ಜಿಎಸ್ಎಸ್ರ ಕವಿತೆಗಳನ್ನು ಪದ್ಮಚರಣ್ ಹೆಚ್ಚಾಗಿ ಸಂಯೋಜನೆ ಮಾಡಿದರು. ಲೀಲಾವತಿ ಅವರು ಆಕಾಶವಾಣಿಯಲ್ಲಿ ಸದಾ ಕವಿಗಳ ಗೀತೆಗಳನ್ನು ಹಾಡ್ತಾ ಇದ್ರು. ಇವೆಲ್ಲಾ ಸುಗಮ ಸಂಗೀತದ ಆರಂಭದ ದಿನಗಳು ಅಂತ ಬಣ್ಣಿಸಬಹುದು. ಸುಗಮ ಸಂಗೀತಕ್ಕೆ ಕರ್ನಾಟಕ ಸಂಗೀತವೇ ಮುಖ್ಯ ಅಡಿಪಾಯವಾಗಿದ್ದರೂ, ಒಬ್ಬೊಬ್ಬ ಸಂಯೋಜಕರು ಒಂದೊಂದರಿಂದ ಪ್ರೇರಣೆ ಹೊಂದಿದವರೇ. ಮೈಸೂರು ಅನಂತಸ್ವಾಮಿ ಕರ್ನಾಟಕ ಮತ್ತು ಪಾಶ್ಯಾತ್ಯ ಸಂಗೀತದಿಂದ ಪ್ರಭಾವಿತರಾದರೆ, ಸಿ. ಅಶ್ವಥ್ ಅವರು ಹಿಂದುಸ್ತಾನಿ ಸಂಗೀತದಿಂದ ಪ್ರೇರಿತರಾಗಿದ್ದರು. ಪದ್ಮಚರಣ್ ಸಂಪೂರ್ಣವಾಗಿ ಕರ್ನಾಟಕ ಸಂಗೀತವನ್ನಿಟ್ಟುಕೊಂಡೆ ಸಂಯೋಜನೆ ಮಾಡುತ್ತಿದ್ದರು. ಒಟ್ಟಾರೆಯಾಗಿ ನೋಡಿದಾಗ ಮೈಸೂರು ಅನಂತಸ್ವಾಮಿ ಮತ್ತು ಅಶ್ವಥ್ ಅವರಿಂದಲೇ ಸುಗಮ ಸಂಗೀತ ಕ್ಷೇತ್ರ ಒಂದು ಸ್ವಷ್ಟ ರೂಪವನ್ನು ಪಡೆದುಕೊಂಡಿತು. ಇವರ ನಂತರ ಬಂದಂತಹ ಮೂರನೇ ಮಜಲಿನಲ್ಲಿ ಹೊಸಹೊಸ ಗಾಯಕರು, ಸಂಯೋಜಕರು ನೂತನ ಟ್ರೆಂಡನ್ನು ಹುಟ್ಟು ಹಾಕಲಿಕ್ಕೆ ಪ್ರಯತ್ನ ಮಾಡಿದರು. ಇದು ಕೂಡ ಮೆಚ್ಚುವಂತಹದ್ದು. ಇದರಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಸುಗಮ ಸಂಗೀತವನ್ನು ಅಕಾಡೆಮಿಕ್ ಆಗಿ ಕಲಿಸುವಂತಹ ಶೈಕ್ಷಣಿಕ ಸಂಗೀತ ಶಾಲೆಗಳು ಹುಟ್ಟಿಕೊಂಡಿದ್ದು.


ಸುಗಮ ಸಂಗೀತವನ್ನು ಮೊದಲು ಬೆಂಗಳೂರಿನಲ್ಲಿ ಶೈಕ್ಷಣಿಕವಾಗಿ ಕಲಿಸುವ ಪ್ರಯತ್ನ ಮಾಡಿದ್ದು ಜಿ.ವಿ. ಅತ್ರಿ ಮತ್ತು ಅವರ ತಂಡ. ಈ ರೀತಿ ಅಕಾಡೆಮಿಕ್ ಆಗಿ ಸುಗಮ ಸಂಗೀತವನ್ನು ಕಲಿಸಿದಂತಹ ಅನೇಕ ಗಾಯಕ ಗಾಯಕಿಯರು ತಮ್ಮದೇ ಸಂಗೀತ ಶಾಲೆಗಳನ್ನು ತೆರೆದು ನೂರಾರು ವಿದ್ಯಾಥರ್ಿಗಳನ್ನು ತಯಾರು ಮಾಡಿದರು. ಹೊಸಹೊಸ ಸಂಗೀತ ನಿರ್ದೆಶಕರು ಬಂದರು. ಇದು ಮುಂದುವರೆದು ಕರ್ನಾಟಕದ ಮೂಲೆಮೂಲೆಯಲ್ಲಿ ನೂರಾರು ಶಾಲಾಕಾಲೇಜುಗಳು ಸುಗಮ ಸಂಗೀತವನ್ನು ಕಲಿಸುವ ಪ್ರಯತ್ನವನ್ನು ಮಾಡಿದ್ದು-ಇವೆಲ್ಲಾ ಈ ಕ್ಷೇತ್ರದಲ್ಲಾದ ಉತ್ತಮ ಬೆಳವಣಿಗೆಗಳೇ.
ಈ ಬೆಳವಣಿಗೆಗಳ ನಡುವೆ `ಧ್ವನಿ' ಎಂಬ ಸುಗಮ ಸಂಗೀತ ಸಂಸ್ಥೆ ಪ್ರಾರಂಭವಾಯಿತು. ಇದರ ಹಿಂದೆ ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ವೈ.ಕೆ. ಮುದ್ದುಕೃಷ್ಣ ಅವರಂತವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯ ಮೂಲಕ ಸುಗಮ ಸಂಗೀತವನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ಒಯ್ಯುವಂತಹ ಪ್ರಯತ್ನಗಳಾದವು. ತದನಂತರ ಈ ಕ್ಷೇತ್ರದ ವಿಸ್ತಾರ ಇನ್ನಷ್ಟು ಬೆಳೆಯಲಿಕ್ಕೆ ಅನುಕೂಲವಾಯಿತು. ಸಂಸ್ಥೆಯ ಯಶಸ್ಸಿನ ನಂತರ ವೈ.ಕೆ. ಮುದ್ದುಕೃಷ್ಣರ ನೇತೃತ್ವದಲ್ಲಿ ಸುಗಮ ಸಂಗೀತ ಪರಿಷತ್ ಪ್ರಾರಂಭವಾಯಿತು. ಇವರು ಪ್ರತಿವರ್ಷ ಸಾಹಿತ್ಯ ಸಮ್ಮೇಳನದ ಸಂಭ್ರಮದಷ್ಟೇ ಅದ್ಧೂರಿಯಾಗಿ ಸುಗಮ ಸಂಗೀತ ಸಮ್ಮೇಳನವನ್ನು ಮಾಡುತ್ತಾ ಬರುತ್ತಿದ್ದಾರೆ. ಎರಡು ದಿನಗಳ ಈ ಸಮ್ಮೇಳನದಲ್ಲಿ ಸಾವಿರಾರು ಸಂಗೀತಾಸಕ್ತರು, ನೂರಾರು ಸುಗಮ ಸಂಗೀತ ಗಾಯಕರು ಇಲ್ಲಿ ಒಂದೆಡೆ ಸೇರುವುದು ನಿಜಕ್ಕೂ ವಿಶೇಷವೇ. ಈಗ ಪರಿಷತ್ತಿನ ನೇತೃತ್ವವನ್ನು ಕಿಕ್ಕೇರಿ ಕೃಷ್ಣಮೂರ್ತಿ ವಹಿಸಿಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಹೇಗೆ ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೋ, ಅದೇ ರೀತಿ ಸುಗಮ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಒಂದು ಪರಂಪರೆಯೂ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಒಟ್ಟಾರೆಯಾಗಿ ಕನ್ನಡ ಸುಗಮ ಸಂಗೀತದ ವಿವಿಧ ಮಜಲುಗಳು ಮತ್ತು ಪರಂಪರೆಯನ್ನು ನಾವು ಈ ಸ್ವರೂಪದಲ್ಲಿ ಕಾಣಬಹುದಾಗಿದೆ.

ಪ್ರ : ನವೋದಯ ಮತ್ತು ನವ್ಯಕವಿಗಳ ಕವಿತೆಗಳನ್ನು ಸುಗಮ ಸಂಗೀತಕ್ಕೆ ಅಳವಡಿಸಿಕೊಳ್ಳಲಾಯಿತು. ಇದು ಎಷ್ಟರಮಟ್ಟಿಗೆ ಜನಸಾಮಾನ್ಯರಿಗೆ ತಲುಪಲು ಮತ್ತು ಸುಗಮ ಸಂಗೀತದ ಬೆಳವಣಿಗೆಗೆ ಪೂರಕವಾಯಿತು?
ಎಚ್ಎಸ್ವಿ : ಸುಗಮ ಸಂಗೀತ ಕ್ಷೇತ್ರದಲ್ಲಿ ಆಯಾಯ ಕಾಲಘಟ್ಟದಲ್ಲಿ ಹೇಗೆ ಬದಲಾವಣೆಗಳು ಆಗುತ್ತಾ ಬಂದವೋ, ಅದಕ್ಕೆ ಪೂರಕವಾಗಿ ಭಾವಗೀತೆಗಳನ್ನು ಬರೆಯುವ ಕವಿಗಳು ಕೂಡ ಹಾಗೆಯೇ ಉದಯಿಸತೊಡಗಿದರು. ಆರಂಭದಲ್ಲಿ ಬೇಂದ್ರೆ, ಕುವೆಂಪು, ಪುತಿನ, ನರಸಿಂಹಸ್ವಾಮಿ, ಶಿವರುದ್ರಪ್ಪ, ಕಣವಿ ಅವರು ಭಾವಗೀತೆಗಳನ್ನು ಬರೆದರು. ಇದಾದ ಮೇಲೆ ಒಂದು ದೊಡ್ಡ ಗ್ಯಾಪ್ ನಿರ್ಮಾಣವಾಯಿತು. ನವ್ಯಕಾಲದಲ್ಲಿ ಕವಿತೆಗಳನ್ನು ಹಾಡಬಾರದು ಅನ್ನುವ ಚಳುವಳಿ ನಿರ್ಮಾಣವಾಯಿತು. ಇದರಿಂದ ಎಷ್ಟೋ ಸಂಗೀತಕ್ಕೆ ಅಳವಡಿಸಬಹುದಾದ ಅನೇಕ ಕವಿತೆಗಳು ಎಲೆಮರೆಯಲ್ಲೇ ಉಳಿದವು. ಈ ಅಂತರದ ನಂತರ ಲಕ್ಷ್ಮೀನಾರಾಯಣ ಭಟ್ಟರು, ನಿಸಾರ ಅಹಮದ್ ಅವರಂತವರು ಕವಿತೆಗಳನ್ನು ಬರೆಯಲಿಕ್ಕೆ ಪ್ರಾರಂಭಿಸಿದರು. ಇದರಿಂದ ಸುಗಮ ಸಂಗೀತ ಕ್ಷೇತ್ರ ಮತ್ತೆ ಕವಿಗಳ ಗೀತೆಗಳನ್ನು ಅಳವಡಿಸಿಕೊಳ್ಳಲಿಕ್ಕೆ ಪ್ರಾರಂಭಿಸಿತು. 1970ರ ನಂತರ ನಾನು, ಸುಬ್ರಾಯ ಚೊಕ್ಕಾಡಿ, ವ್ಯಾಸರಾವ್, ದೊಡ್ಡರಂಗೇಗೌಡ, ಲಕ್ಷ್ಮಣರಾವ್ ಭಾವಗೀತೆಗಳನ್ನು ಬರೆಯಲಿಕ್ಕೆ ಪ್ರಾರಂಭಿಸಿದೆವು. ಅಲ್ಲಿಂದ ನಿರಂತರವಾಗಿ ಸುಗಮ ಸಂಗೀತ ಕ್ಷೇತ್ರ ಬೆಳವಣಿಗೆಯಾಗುತ್ತಾ ಸಾಗಿತು. ಕವಿಗಳು ಕೂಡ ಗಾಯಕರಷ್ಟೇ ಕರ್ನಾಟಕದ ಮನೆಮನೆ ಮಾತಾದರು. 
ಸುಗಮ ಸಂಗೀತ ಕ್ಷೇತ್ರ ಒಂದು ಸಮಯದಲ್ಲಿ ಎಷ್ಟು ಜನಪ್ರಿಯವಾಯಿತು ಅಂದರೆ, ಭಾವಗೀತೆಗಳನ್ನು ಆಧರಿಸಿಯೇ ಸಿನಿಮಾಗಳು ತಯಾರಾದವು. ಶಿಶುನಾಳ ಶರೀಫ, ಚಿನ್ನಾರಿಮುತ್ತ, ಮೈಸೂರು ಮಲ್ಲಿಗೆಯಂತಹ ಸಿನಿಮಾಗಳ ಗೀತೆಗಳು ತುಂಬಾ ಸೂಪರ್ಹಿಟ್ ಆಗಿ ಬಾಕ್ಸ್ ಆಫೀಸಿನಲ್ಲಿಯೂ ಗೆದ್ದವು. ಶಾಸ್ತ್ರೀಯ ಸಂಗೀತವನ್ನಿಟ್ಟುಕೊಂಡು ಮಾಡಿದಂತಹ ಹಂಸಗೀತೆ ಸಿನಿಮಾದಂತೆಯೇ, ಭಾವಗೀತೆಗಳನ್ನಿಟ್ಟುಕೊಂಡು ಮಾಡಿದಂತಹ ಈ ಚಿತ್ರಗಳು ಅಂದಿನ ದಿನಗಳಲ್ಲಿ ಗೆದ್ದಿರುವುದನ್ನು ನಾವು ನೋಡಬಹುದು. ಯಾವಾಗ ಸಾಹಿತ್ಯಿಕ ಹಿನ್ನೆಲೆಯ ಕವಿಗಳು ಸುಗಮ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾದರೋ, ಆಗ ಭಾವಗೀತೆಗಳ ಗುಣಮಟ್ಟವೇ ಉತ್ಕೃಷ್ಟಕ್ಕೆ ಏರಿತು. ಚಲನಚಿತ್ರ ಗೀತೆಗಳಲ್ಲಿ ಹೆಚ್ಚು ಕಾವ್ಯಾತ್ಮಕತೆ ಕಾಣಿಸಿಕೊಳ್ಳತೊಡಗಿತು. ಇದರಲ್ಲಿ ಮುಖ್ಯವಾಗಿ ವ್ಯಾಸರಾವ್, ದೊಡ್ಡರಂಗೇಗೌಡ ಮತ್ತು ಜಯಂತ್ ಕಾಯ್ಕಿಣಿ ಅವರನ್ನು  ಪ್ರಮುಖವಾಗಿ ಗುರುತಿಸಬಹುದು.

ಪ್ರ : ಚಿತ್ರಗೀತೆ ಮತ್ತು ಭಾವಗೀತೆಗಳ ನಡುವಿನ ಪ್ರಮುಖ ವ್ಯತ್ಯಾಸಗಳೇನು?
ಎಚ್ಎಸ್ವಿ : ಚಿತ್ರಗೀತೆ ಅನ್ನುವುದು ಆ ಸಿನಿಮಾದ ಕಥೆಗೆ ನೇರವಾಗಿ ಸಂಬಂಧಪಟ್ಟದ್ದಾಗಿದೆ. ಆದರೆ ಭಾವಗೀತೆ ಹಾಗಲ್ಲ. ಅದು ಯಾವ ಸೀಮಿತ ಚೌಕಟ್ಟನ್ನು ಹೊಂದಿಲ್ಲ, ಅದು ತನ್ನದೇ ಸ್ವತಂತ್ರತೆಯನ್ನು ಕಾಯ್ದುಕೊಂಡಿದೆ. ಚಿತ್ರಗೀತೆ ಬರೆಯುವಾಗ ಆ ಕಥೆಯ ಪಾತ್ರ, ಸನ್ನಿವೇಶಕ್ಕೆ ಪೂರಕವಾಗಿಯೇ ಬರೆಯಬೇಕು. ಆದರೆ ಭಾವಗೀತೆ ಹಾಗಲ್ಲ, ನಮ್ಮ ಮನಸ್ಸಿಗೆ ಬಂದ ಭಾವದಂತೆ ಅದನ್ನು ಬರೆಯಲಾಗುತ್ತದೆ. ಕವಿಗೆ ಹೆಚ್ಚಿನ ಸ್ವಾತಂತ್ರ್ಯ ಭಾವಗೀತೆಯಲ್ಲಿ ಸಿಗುತ್ತೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಟ್ಯೂನ್ ಕೊಟ್ಟು ಅದಕ್ಕೆ ಗೀತೆ ರಚನೆ ಮಾಡಿಸಿದರೆ, ಸುಗಮ ಸಂಗೀತದಲ್ಲಿ ಒಂದೊಳ್ಳೆಯ ಕವಿತೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ರಾಗ ಸಂಯೋಜನೆ ಮಾಡಲಾಗುತ್ತದೆ. ಸುಗಮ ಸಂಗೀತದ ಎಲ್ಲ ಸಂಯೋಜಕರು ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ. 1960 ಮತ್ತು 70ರ ದಶಕದ ಸಿನಿಮಾ ಕ್ಷೇತ್ರದಲ್ಲಿ ಸಂಗೀತ, ಸಾಹಿತ್ಯ, ಮಾಧುರ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಒಳ್ಳೊಳ್ಳೆಯ ಪ್ರಯತ್ನಗಳನ್ನು ಮಾಡಿರುವುದನ್ನು ನಾವು ಕಾಣಬಹುದು. ಹಳೆಯ ಕನ್ನಡ, ಹಿಂದಿ ಸಿನಿಮಾ ಹಾಡುಗಳನ್ನು ನಮಗೆ ಈಗಲೂ ಕೇಳಬೇಕೆಂದು ಅನಿಸುತ್ತದೆ. ಹಾಡುಗಳಲ್ಲಿನ ಮಾಧುರ್ಯ, ಸಾಹಿತ್ಯ ನಮ್ಮನ್ನು ಈಗಲೂ ಸೆಳೆಯುತ್ತಲೇ ಇರುತ್ತದೆ. ಕು.ರಾ.ಸೀ, ಸದಾಶಿವಯ್ಯ, ಕಣಗಾಲ್ ಪ್ರಭಾಕರಶಾಸ್ತ್ರಿ, ಉದಯಶಂಕರ್, ವಿಜಯನಾರಸಿಂಹ, ಜಯಗೋಪಾಲ್ ಅವರಂತವರು ಅತ್ಯುತ್ತಮ ಗೀತೆಗಳನ್ನು ರಚನೆ ಮಾಡಿದ್ದಾರೆ. ಉದಯಶಂಕರ್ ನಂತರ ಬಂದಂತಹ ಹಂಸಲೇಖರು ಗೀತರಚನೆಯಲ್ಲಿ ಇನ್ನೊಂದು ರೀತಿಯ ಟ್ರೆಂಡನ್ನು ಹುಟ್ಟುಹಾಕಿದರು. ಈಗಿನ ಆಧುನಿಕತೆಗೆ ಯೋಗರಾಜ ಭಟ್ಟರ ಸಾಹಿತ್ಯ ಜನಪ್ರಿಯವಾಗುತ್ತಿದೆ.

ಪ್ರ : ಒಂದೇ ಕವಿತೆ ಹತ್ತಾರು ಸಂಯೋಜನೆಗಳಾದಾಗ ಅದು ಶೋತೃಗಳಿಗೆ ಗೊಂದಲವುಂಟು ಮಾಡುವುದಿಲ್ಲವೇ?
ಎಚ್ಎಸ್ವಿ : ಭಾವಗೀತೆಗಳು ಯಾವುದೇ ರೀತಿಯಲ್ಲಿ ಗೊಂದಲವನ್ನುಂಟು ಮಾಡುವುದಿಲ್ಲ. ಅದನ್ನು ಯಾವ ಶೈಲಿ, ರಾಗದಲ್ಲಿ ಬೇಕಾದರೂ ಹಾಡಬಹುದು. ಆದರೆ ನಾಡಗೀತೆಯ ವಿಚಾರದಲ್ಲಿ ಒಂದು ಗೊಂದಲವಂತೂ ಇದ್ದೇ ಇದೆ. ಈಗಾಗಲೇ ನಾಡಗೀತೆಗೆ ರಾಗ ಸಂಯೋಜನೆಯನ್ನು ಅನಂತಸ್ವಾಮಿ, ವಿಜಯಭಾಸ್ಕರ್, ಅಶ್ವಥ್ ಅವರು ಮಾಡಿದ್ದಾರೆ. ಈಗಿನ ಸಂಗೀತ ನಿರ್ದೇಶಕರು ಕೂಡ ಹೊಸದಾಗಿ ರಾಗಸಂಯೋಜನೆ ಮಾಡಿದ್ದುಂಟು. ಎಲ್ಲರೂ ತಮ್ಮತಮ್ಮ ಶೈಲಿಯಲ್ಲಿ ಮಾಡಿದ್ದಾರೆ. ಯಾವ ಶೈಲಿ ಯಾರಿಗೆ ತುಂಬಾ ಹತ್ತಿರವಾಗುತ್ತೆ ಅನ್ನುವುದು ಅವರವರ ಮನೋಧರ್ಮಕ್ಕೆ ಬಿಟ್ಟ ವಿಚಾರವೆಂದು ಹೇಳಬಹುದು. ಅವರವರ ಅಭಿರುಚಿಗೆ ತಕ್ಕಹಾಗೆ ಆಯಾ ಶೈಲಿಯನ್ನು ಆರಿಸಿಕೊಳ್ಳುತ್ತಾರೆ. ಆದರೆ ಇಂದು ನಾಡಗೀತೆಯ ವಿಚಾರದಲ್ಲಿ ಅದು ದೊಡ್ಡ ಗೊಂದಲವೇ ಆಗಿದೆ. ನನಗಿನಿಸಿದ ಪ್ರಕಾರ ಈಗಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಒಮ್ಮತದ ನಿರ್ಧಾರ ತೆಗೆದುಕೊಂಡು ನಾಡಗೀತೆಗೆ ಒಂದು ಖಾಯಂ ಆದ ಸಂಯೋಜನೆ ನಿರ್ಧರಿಸಿಬಿಟ್ಟರೆ ತುಂಬಾ ಒಳ್ಳೆಯದು. ಅನಂತಸ್ವಾಮಿ ಮತ್ತು ಅಶ್ವಥ್ ಇಬ್ಬರೂ ಎಲ್ಲರಿಗೂ ಪ್ರಿಯರೇ. ಇದರಲ್ಲಿ ಯಾರ ಸಂಯೋಜನೆಯಾದರೂ ತೊಂದರೆಯಿಲ್ಲ. ಅಂತಿಮ ನಿರ್ಧಾರ ಯಾರದ್ದೇ ಆದರೂ ಅದನ್ನು ಮನಸ್ವೀ ಸ್ವೀಕರಿಸುವ ಭಾವ ಎಲ್ಲರಲ್ಲೂ ಇದೆ ಅನ್ನುವುದು ನನ್ನ ಇಂಗಿತ. ನಾಡಗೀತೆಯನ್ನು ಎಲ್ಲ ಕಡೆಯಲ್ಲೂ ಒಂದೇ ರೀತಿ ಹಾಡಬೇಕು. ಹೇಗೆ ರಾಷ್ಟ್ರಗೀತೆಗೆ ಒಂದೇ ಧಾಟಿ ಇದೆಯೋ ಅದೇ ರೀತಿ ನಾಡಗೀತೆಗೂ ಒಂದೇ ಧಾಟಿ ಇದ್ದರೆ ತುಂಬಾ ಚೆನ್ನ. ಇದಕ್ಕಾಗಿ ನಮ್ಮಲ್ಲಿರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪರಸ್ಪರ ಮಾತಿನ ಮೂಲಕ ಒಮ್ಮತದ ನಿರ್ಧಾರ ತೆಗೆದುಕೊಂಡು ಅದನ್ನು ಸರ್ಕಾರಕ್ಕೆ ಒಪ್ಪಿಸುವುದು ಸೂಕ್ತ ಅಂತ ನನಗಿಸುತ್ತದೆ.



ಪ್ರ : ಭಾವಗೀತೆಯ ಮಾಧ್ಯಮಕ್ಕೆ ನೃತ್ಯ, ದೃಶ್ಯ, ನಿರೂಪಣೆ ಇತ್ಯಾದಿಗಳು ಸಮಂಜಸವೇ?
ಎಚ್ಎಸ್ವಿ : ಒಂದು ಭಾವಗೀತೆಯನ್ನು ಶೋತೃಗಳಿಗೆ ನೀಡುವಾಗ ಖಂಡಿತ ಇದೆಲ್ಲಾ ಅವಶ್ಯಕವೆಂದು ನನ್ನ ಭಾವನೆ. ಒಂದು ಗೀತೆಯನ್ನು ಸುಮ್ಮನೇ ಹಾಡಿಬಿಟ್ಟರೆ ಯಾವುದೇ ಉಪಯೋಗವಿಲ್ಲ. ಹಿಂದೆಲ್ಲಾ ಕೆಲವು ಪ್ರಸಿದ್ಧ ಗಾಯಕರು ಭಾವಗೀತೆಯನ್ನು ಬರೆದಂತಹ ಕವಿಗಳ ಹೆಸರನ್ನು ಕೂಡ ಹೇಳದೆ ಹಾಡುತ್ತಿದ್ದರು. ಆದರೆ ಈಗೆಲ್ಲಾ ಸ್ವಲ್ಪ ಬದಲಾವಣೆಯಾಗಿದೆ. ಆ ಗೀತೆಯನ್ನು ಬರೆದಂತಹ ಕವಿಯ ಹೆಸರು, ಪರಿಚಯ, ಆ ಗೀತೆಯ ಹಿನ್ನೆಲೆ, ಕವಿತೆಯ ಅಂತರಾಳ ಇವನ್ನೆಲ್ಲಾ ಹೇಳುವುದರಿಂದ, ಶೋತೃಗಳಿಗೆ ಕವಿತೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಒಂದು ಭಾವವಲಯವನ್ನು ನಿರ್ಮಾಣ ಮಾಡಿಕೊಟ್ಟಂತಾಗುತ್ತದೆ. ಈಗಿನ ಗಾಯಕರು ಅದನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದಾರೆ. ಒಂದೊಳ್ಳೆ ಭಾವಗೀತೆಗೆ ನೃತ್ಯ ಸಂಯೋಜನೆ ಮಾಡಿ ಶೋತೃಗಳಿಗೆ ನೀಡುವ ಯೋಚನೆಯೂ ಕೂಡ ವಿನೂತನವಾದದ್ದು. ಉಪಾಸನಾ ಮೋಹನ್ ಅವರಂತಹ ಗಾಯಕರು ಒಂದು ಗೀತೆಯನ್ನು ಮಕ್ಕಳ ನೃತ್ಯದ ಮೂಲಕ ಮಾಡಿಸುವ ಪ್ರಯೋಗಗಳನ್ನು ಮಾಡಿದ್ದಾರೆ. ಟೀವಿ ಮಾಧ್ಯಮಗಳಲ್ಲಿಯೂ ಇಂತಹ ಪ್ರಯೋಗದ ಕಾರ್ಯಕ್ರಮಗಳು ಆಗಿವೆ. ಸುಗಮ ಸಂಗೀತ ಪರಿಷತ್ನವರು 'ಕವಿಯ ನೋಡಿ; ಕವಿತೆ ಕೇಳಿ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ರಂಗಭೂಮಿಯ ನಾಟಕಗಳಲ್ಲೂ ಭಾವಗೀತೆಗಳನ್ನು ಅಳವಡಿಸಿಕೊಂಡಿದ್ದು ವಿಶೇಷವೇ. ರಾಜಾರಾಮ್ ಅವರಂತಹ ರಂಗಭೂಮಿ ತಜ್ಞರು ನರಸಿಂಹಸ್ವಾಮಿಯವರ ಭಾವಗೀತೆಗಳನ್ನು ನಾಟಕ ಮಾಡಿದ್ದುಂಟು. ಅದೇ ರೀತಿ ಲಕ್ಷ್ಮಣರಾಯರ ಗೀತೆಗಳನ್ನು ಇಟ್ಟುಕೊಂಡು 'ನಂಗ್ಯಾಕೋ ಡೌಟು' ಎಂಬ ನಾಟಕ ಮಾಡಲಾಯಿತು. ಭಾವಗೀತೆಗಳನ್ನು ಜನಮಾನಸಕ್ಕೆ ಮುಟ್ಟಿಸಲು ಮಾಡಿದ ಇಂಥ ವಿನೂತನ ಪ್ರಯೋಗಗಳನ್ನು ನಾವು ಮೆಚ್ಚಲೇಬೇಕು. ಇಂತಹ ಪ್ರಯತ್ನಗಳು ಇನ್ನಷ್ಟು ಆಗಲಿ ಅನ್ನುವುದೇ ನನ್ನ ಆಶಯ.

ಪ್ರ : ಇಂದಿನ ಸುಗಮ ಸಂಗೀತ ಮಾಧ್ಯಮದಲ್ಲಿ ಕಾವ್ಯದ ಸತ್ವವನ್ನು ಒತ್ತಿಹೇಳುವುದಕ್ಕಿಂತ ಸಂಗೀತದ ಅಬ್ಬರವೇ ಜಾಸ್ತಿಯಾಗುತ್ತಿದೆಯಲ್ಲವೇ? ಈ ದೃಷ್ಟಿಯಿಂದ ನೋಡಿದಾಗ ಸುಗಮ ಸಂಗೀತದ ಬೆಳವಣಿಗೆ ಅರ್ಥಪೂರ್ಣವಾಗುತ್ತಿದೆಯೇ?
ಎಚ್ಎಸ್ವಿ : ಈ ರೀತಿಯಾಗುವ ಮುನ್ನ ನಾವು ಇದರ ಹಿನ್ನೆಲೆಯನ್ನು ಸ್ವಲ್ಪ ಗಮನಿಸಬೇಕು. ಈಗಾಗಲೇ ನಾನು ತಿಳಿಸಿದಂತೆ ಸುಗಮ ಸಂಗೀತ ತನ್ನದೇ ಸ್ವಷ್ಟ ರೂಪವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅನಂತಸ್ವಾಮಿ ಮತ್ತು ಅಶ್ವಥ್ ಅವ್ರು ತಮ್ಮದೇ ಶೈಲಿಯಲ್ಲಿ ವಾದ್ಯಗೋಷ್ಠಿಯನ್ನು ಮಾಡಿಕೊಂಡು ಪ್ರಯೋಗಗಳನ್ನು ಮಾಡುತ್ತಿದ್ದರು. ಅನಂತಸ್ವಾಮಿಯವರು ಒಂದು ಹಾರ್ಮೊನಿಯಂ, ಒಂದು ತಬಲ ಇಷ್ಟರಲ್ಲೇ ತಮ್ಮ ಕಛೇರಿಯನ್ನು ಮಾಡಿ ಮುಗಿಸುತ್ತಿದ್ದರು. ಆದರೆ ಅಶ್ವಥ್ರದ್ದು ಆ ರೀತಿ ಇರಲಿಲ್ಲ. ಸುಗಮ ಸಂಗೀತ ಕೂಡ ಸಿನಿಮಾ ಸಂಗೀತದಂತೆ ತುಂಬಾ ವಿಜೃಂಭಣೆಯಿಂದ ಇರಬೇಕು, ಅಲ್ಲಿಯಂತೆಯೇ ಆಕರ್ೆಸ್ಟ್ರಾ ಮಾಡಿಸ್ಬೇಕು ಅಂತ ಆತ ತುಂಬಾ ದೊಡ್ಡ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಹತ್ತಾರು ಗಾಯಕರು, ನೂರಾರು ವಾದ್ಯಕಲಾವಿದರನ್ನು ಇಟ್ಟುಕೊಂಡು ಪ್ರಯೋಗ ಮಾಡಲಿಕ್ಕೆ ಪ್ರಾರಂಭಿಸಿ ಅದರಲ್ಲಿ ಯಶಸ್ವಿ ಕೂಡ ಆದರು. ಸಾವಿರಾರು ಜನರನ್ನು ಒಂದೆಡೆ ಸೇರಿಸಿ ಮಾಡುವಂತಹ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಮಾಡಿ ಗೆದ್ದರು. ಅಶ್ವಥ್ ಸುಗಮ ಸಂಗೀತಕ್ಕೆ ಹೊಸ ರೀತಿಯ ಟ್ರೆಂಡನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಾರಂಭಿಸಿದ್ದು, ಮುಂದೆ ಬರುವ ದಿನಗಳಲ್ಲಿ ಸ್ವಲ್ಪ ಹಾದಿ ತಪ್ಪಿತು ಅಂತಾನೇ ಹೇಳಬಹುದು. ಸಂಗೀತದ ಅಬ್ಬರಕ್ಕೆ ಪ್ರಾಶಸ್ತ್ಯ ಕೊಡುವುದು ಹೆಚ್ಚಾದಾಗ ಸಾಹಿತ್ಯದ ಪಾತ್ರ ಗೌಣವಾಗಲಿಕ್ಕೆ ಪ್ರಾರಂಭವಾಯಿತು. ಹೀಗೆ ಅಶ್ವಥ್ ಅವರಂತಹ ಪ್ರತಿಭಾನ್ವಿತರ ಕೈಯಲ್ಲಿ ಇದ್ದಾಗ ಇದು ಅರ್ಥಪೂರ್ಣವಾಗಿತ್ತು, ಆ ನಂತರ ಇಂತಹ ಪ್ರಯತ್ನವನ್ನು ಅಷ್ಟೊಂದು ಪ್ರತಿಭಾನ್ವಿತರಲ್ಲದವರು ಮಾಡಲು ಯತ್ನಿಸಿದಾಗ ಅದು ತನ್ನ ಸತ್ವವನ್ನು ಕಳೆದುಕೊಂಡುಬಿಟ್ಟಿತು. ಇದರ ನಡುವೆಯೂ ಕೆಲವು ಗಾಯಕರು ತಮ್ಮದೇ ತಂಡವನ್ನು ಕಟ್ಟಿಕೊಂಡು ಸಂಗೀತಾಸಕ್ತರು ಒಂದೆಡೆ ಸೇರುವ ಸ್ಥಳಗಳಲ್ಲಿ ಆಪ್ತ ಕಛೇರಿಗಳನ್ನು ಮಾಡುತ್ತಿರುವ ಪ್ರಯತ್ನಗಳು ಆಗುತ್ತಿವೆ. ಈ ರೀತಿ ಮನೆ ಮನೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಮೊದಲು ತಂದವರೇ ಉಪಾಸನಾ ಮೋಹನ್. ಅವರ `ಮನೆಯಂಗಳದಲ್ಲಿ ಕವಿತಾ ಗಾಯನ'-ಇದು ಅತ್ಯಂತ ಯಶಸ್ವಿಯಾದ ಕಾರ್ಯಕ್ರಮ. ಇವರು ನೂರಕ್ಕೂ ಹೆಚ್ಚು ಮನೆಯಂಗಳದ ಸುಗಮ ಸಂಗೀತದ ಕಾರ್ಯಕ್ರಮಗಳನ್ನು ಮಾಡಿದ್ದಾರೆ.

ಪ್ರ : ಇಂದಿನ ತಲೆಮಾರಿನವರು ಸುಗಮ ಸಂಗೀತವನ್ನು ಯಾವ ರೀತಿ ಗಂಭೀರವಾಗಿ ತೆಗೆದುಕೊಂಡು ಮುನ್ನಡೆಸುತ್ತಿದ್ದಾರೆ?
ಎಚ್ಎಸ್ವಿ : ಈಗಿರುವ ಕೆಲವು ಗಾಯಕರು ಸುಗಮ ಸಂಗೀತದ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ತುಂಬಾ ಒಳ್ಳೊಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇವರನ್ನು ನಾವು ನೆನಪಿಸಿಕೊಳ್ಳಲೇಬೇಕು. ಈಗಿರುವ ಗಾಯಕರಲ್ಲಿ ಇಂದೂ ವಿಶ್ವನಾಥ್, ನರಸಿಂಹ ನಾಯಕ್, ಡಾ. ರೋಹಿಣಿ, ಶ್ರೀನಿವಾಸ ಉಡುಪ, ಪಲ್ಲವಿ, ಸುಪ್ರಿಯಾ ರಘುನಂದನ್, ಅರ್ಚನಾ ಉಡುಪ, ಸುರೇಖಾ, ರಮೇಶ್ಚಂದ್ರ, ನಿತಿನ್ ರಾಜಾರಾಮಶಾಸ್ತ್ರಿ, ಶಂಕರ್ ಶಾನುಭಾಗ್, ಜೋಗಿ ಸುನೀತಾ, ಆನಂದ ಮೂದಲಗೆರೆ, ಮಂಗಳಾ, ಸುನೀತಾ ಚಂದ್ರಕುಮಾರ್, ನಾಗಚಂದ್ರಿಕಾ ಭಟ್, ಕಿಕ್ಕೇರಿ ಕೃಷ್ಣಮೂರ್ತಿ, ಫಲ್ಗುಣ, ಜಯಶ್ರೀ, ದೊಡ್ಡವಾಡ, ಪಂಚಮ್ ಹಳಬಂಡಿ ಮುಂತಾದವರು ತುಂಬಾ ಒಳ್ಳೆಯ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಅಬ್ಬರವಿಲ್ಲದೆ ಸಾಹಿತ್ಯಕ್ಕೆ ಮಹತ್ವ ಕೊಟ್ಟು ಸುಗಮ ಸಂಗೀತದಲ್ಲಿ ಒಳ್ಳೆಯ ಸಾಧನೆಯನ್ನು ಮಾಡುತ್ತಿದ್ದಾರೆ. ಫಲ್ಗುಣರು 'ಕವಿದನಿ' ಹೆಸರಿನಲ್ಲಿ ಗೀತಗಾಯನ ಜೊತೆಗೆ ಕವಿತಾ ವಾಚನ ಮಾಡುವ ವಿಶಿಷ್ಟ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಿಕ್ಕೇರಿ, ಶಂಕರ ಶಾನುಭಾಗ್, ರಾಘವೇಂದ್ರ ಬೀಜಾಡಿ ಅಂತವರು ಬೇರೆ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಪ್ರವೀಣ ಡಿ. ರಾವ್, ಪ್ರವೀಣ್ ಗೋಡ್ಖಿಂಡಿಯವರು ಕೂಡ ನನಗೆ ತುಂಬಾ ಇಷ್ಟವಾಗುತ್ತಾರೆ. ನಾನು ಹೊಸಬರ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದರಿಂದ ಇಂತಹ ವಿನೂತನ ಪ್ರಯೋಗಗಳನ್ನು ನೋಡಿದಾಗಲೆಲ್ಲಾ ತುಂಬಾ ಹೆಮ್ಮೆಯೆನಿಸುತ್ತದೆ. ಗುಂಪುಗಾರಿಕೆ, ವೈಮನಸ್ಸು ಎಲ್ಲವನ್ನು ಮರೆತು ಇವಕ್ಕೆ ನಾವು ಬೆನ್ನುತಟ್ಟಿ ಪ್ರೋತ್ಸಾಹಿಸಲೇಬೇಕು. ನಾನಂತೂ ಈ ತತ್ವವನ್ನು ಅನುಸರಿಸುತ್ತಾ ಬಂದಿರುವೆ. 



ಪ್ರ : ಸುಗಮ ಸಂಗೀತ ಕ್ಷೇತ್ರದಲ್ಲಿ ನೀವು ಹೆಚ್ಚು ಒಡನಾಡಿದವರ  ಬಗ್ಗೆ ತಿಳಿಸಿ? ನೀವು ಕಂಡ ಹಾಗೆ ಅವರ ಸಂಯೋಜನೆಯ ಶೈಲಿ ಹೇಗಿತ್ತು?
ಎಚ್ಎಸ್ವಿ : ಮೈಸೂರು ಅನಂತಸ್ವಾಮಿ ಮತ್ತು ಅಶ್ವಥ್ ಇಬ್ಬರೂ ನನಗೆ ತುಂಬಾ ಆಪ್ತರಾಗಿದ್ದವರು. ಈ ಇಬ್ಬರಲ್ಲೂ ಒಂದೊಂದು ವಿಶೇಷವಾದ ಶೈಲಿಯಿತ್ತು. ಎರಡನ್ನೂ ಹೋಲಿಕೆ ಮಾಡುವಂತಿರಲಿಲ್ಲ. ಅನಂತಸ್ವಾಮಿ ಅವರು ಯಾವುದೇ ಹಾಡನ್ನು ಸಂಯೋಜನೆ ಮಾಡುವ ಮುನ್ನ ಏಕಾಂಗಿಯಾಗಿ ಕುಳಿತು ರಾಗದ ಬಗ್ಗೆ ಯೋಚಿಸಿ ಆಮೇಲೆ ಕವಿಗಳನ್ನ, ಆಪ್ತರನ್ನು ಕರೆಸಿ ಆ ರಾಗವನ್ನು ಕೇಳಿಸಿ ಆನಂತರ ಕವಿತೆಗೆ ರಾಗಸಂಯೋಜನೆ ಮಾಡುತ್ತಿದ್ದರು. ಆದರೆ ಅಶ್ವಥ್ರದ್ದು ಇದಕ್ಕೆ ವಿರುದ್ಧ. ಆರಂಭದಲ್ಲೇ ಕವಿಗಳನ್ನು ಕರೆಸಿ ಅವರ ಎದುರೇ ಕವಿತೆಗೆ ರಾಗಸಂಯೋಜನೆ ಮಾಡಿ ಹಾಡಿ ತೋರಿಸುತ್ತಿದ್ದರು. ಇಬ್ಬರ ನಡುವೆಯೂ ನಾನು ಅದೆಷ್ಟೋ ಸುಂದರ ದಿನಗಳನ್ನು ಕಳೆದಿದ್ದೇನೆ. ನನಗಂತೂ ಅವರ ಜೊತೆ ಕುಳಿತುಕೊಂಡು ಸಂಯೋಜನೆಯ ಬಗ್ಗೆ ಮಾತನಾಡುವುದೇ ಅತ್ಯಂತ ಖುಷಿಯ ವಿಚಾರವಾಗಿತ್ತು. ಇಬ್ಬರೂ ಜೀನಿಯಸ್ಗಳೇ. ಇಂತವರ ಜೊತೆ ನನಗೆ ಆತ್ಮೀಯ ಒಡನಾಟವಿದ್ದದ್ದೇ ನನ್ನ ಭಾಗ್ಯವೆಂದುಕೊಳ್ಳುವೆ. ಹೊಸತಲೆಮಾರಿನವರಲ್ಲಿ ಉಪಾಸನಾ ಮೋಹನ್ ನನಗೆ ಆಪ್ತರು. ಅವರು ಕೂಡ ಈ ಕ್ಷೇತ್ರದಲ್ಲಿ ತುಂಬಾ ಕೆಲಸಗಳನ್ನು ಮಾಡುತ್ತಿದ್ದಾರೆ.

ಪ್ರ : ಭಾವಗೀತೆಗಳನ್ನು ಜನಪ್ರಿಯಗೊಳಿಸುವ ಮಾಧ್ಯಮಗಳ ಬಗ್ಗೆ ತಮ್ಮ ಅಭಿಪ್ರಾಯವೇನು?
ಎಚ್ಎಸ್ವಿ : ಇತ್ತೀಚಿನ ದಿನಗಳಲ್ಲಿ ಭಾವಗೀತೆಯ ಹಾಡುಗಳನ್ನು  ಮಾರ್ಕೆಟಿಂಗ್ ಮಾಡುವ ಹೊಸ ರೀತಿಯ ಟ್ರೆಂಡ್ ಶುರುವಾಗಿದೆ. ಟೀವಿ ಮಾಧ್ಯಮ, ಸೋಷಿಯಲ್ ಮೀಡಿಯಾ, ಆನ್ಲೈನ್ ಮಾಧ್ಯಮವನ್ನು ಬಳಸಿಕೊಂಡು ಭಾವಗೀತೆಗಳನ್ನು ಮುಟ್ಟಿಸುವ ಪ್ರಯತ್ನ ಆಗುತ್ತಿದೆ. ಯೂಟ್ಯೂಬ್ನಲ್ಲಿ ಗೀತೆಗಳನ್ನು ಗಾಯನ ಮಾಡಿ ಅದನ್ನು ಸುಂದರವಾಗಿ ಚಿತ್ರೀಕರಿಸಿ ಹಾಕುತ್ತಿದ್ದಾರೆ. ಒಂದೊಳ್ಳೆಯ ಹಾಡು ಬಂದರೆ ಅದನ್ನು ಲಕ್ಷಾಂತರ ಜನರು ನೋಡುತ್ತಾರೆ ಅನ್ನುವುದಕ್ಕೆ ನನ್ನ ಕೆಲವು ಗೀತೆಗಳೇ ಸಾಕ್ಷಿಯಾಗಿವೆ. ಸಂಗೀತ ನಿರ್ದೇಶಕರಾದ ಕೃಷ್ಣ ಉಡುಪ, ರಿಕ್ಕಿ ಕೇಜ್ ಇವರು ನನ್ನ ಭಾವಗೀತೆಗಳನ್ನು ಸಂಯೋಜನೆ ಮಾಡಿ ಯೂಟ್ಯೂಬ್ನಲ್ಲಿ ಹಾಕಿದ್ದರು. ಈಗಾಗಲೇ ಈ ಹಾಡುಗಳನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನರು ನೋಡಿದ್ದಾರೆ. ನನಗನಿಸಿದ ಮಟ್ಟಿಗೆ ಸುಗಮ ಸಂಗೀತ ತನ್ನ ವ್ಯಾಪ್ತಿಯನ್ನು ಬೆಳೆಸಿಕೊಳ್ಳಲು ಅಂತರ್ಜಾಲ ಮಾಧ್ಯಮ ಅತ್ಯಂತ ಪ್ರಭಾವಶಾಲಿಯಾಗಿದೆ. ಇದು ಅತ್ಯಂತ ಜನಪ್ರಿಯವಾಗುತ್ತಿರುವುದರಿಂದ ಹೆಚ್ಚಿನ ಗಾಯಕರು ಇದರ ಕಡೆಗೆ ವಾಲುತ್ತಿರುವುದು ಖುಷಿಯ ವಿಚಾರ.

ಪ್ರ : ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸತಲೆಮಾರಿನ ಕವಿಗಳ ಕೊಡುಗೆ ಕಾಣುತ್ತಿದೆಯೇ? 
ಎಚ್ಎಸ್ವಿ : ಭಾವಗೀತೆಗಳನ್ನು ಬರೆಯುವ ಹೊಸಕವಿಗಳು ಕಾಣಸಿಗುವುದು ಕಷ್ಟವಾಗಿದೆ. ರಂಜನಿಪ್ರಭು ಸದ್ಯ ಚೆನ್ನಾಗಿ ಬರೆಯುತ್ತಿದ್ದಾರೆ. ಇವರ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ. ಭಾವಗೀತೆ ಅನ್ನುವುದು ಕಾವ್ಯದ ಒಂದು ವಿಶಿಷ್ಟ ಪ್ರಾಕಾರ ಆಗಿರುವುದರಿಂದ ಅದನ್ನು ಎಲ್ಲ ಕವಿಗಳು ಬರೆಯಲಿಕ್ಕೆ ಆಗುತ್ತಿಲ್ಲ. ಒಳ್ಳೆ ಕವಿತೆ ಬರೆಯುತ್ತಿರುವವರು ಅಷ್ಟೇ; ಚೆನ್ನಾಗಿ ಭಾವಗೀತೆ ಬರೆಯುತ್ತಾರೆ ಅಂತ ಹೇಳುವುದು ಸ್ವಲ್ಪ ಕಷ್ಟ. ಭಾವಗೀತೆ ಬರೆಯಲಿಕ್ಕೆ ಒಂದು ಮನೋಧರ್ಮ ಬೇಕು. ಇದು ಒಬ್ಬ ಕವಿಯಲ್ಲೆ ಅಡಕವಾಗಿರುವುದರಿಂದ ಅದನ್ನು ಕವಿಯೇ ಬರೆದರೆ ಹೆಚ್ಚು ಸೂಕ್ತ. ಹಾಗಂತ ಭಾವಗೀತೆ ಬರೆಯಲಿಕ್ಕೆ ಹಠಹಿಡಿದು ಕೂತು ಬರೆದರೆ ಆಗುವಂತಹುದ್ದಲ್ಲ. ಭಾವಗೀತೆ ರಚನೆಯಲ್ಲಿ ಹೊಸಬರು ಪಳಗಬೇಕಿದೆ.   

ಪ್ರ : ಸುಗಮ ಸಂಗೀತದ ಇಂದಿನ ಸವಾಲುಗಳೇನು?
ಎಚ್ಎಸ್ವಿ : ಇಂದಿನ ಸವಾಲುಗಳ ಬಗ್ಗೆ ನಾವು ಚಿಂತಿಸುವುದಾದರೆ ಸಿನಿಮಾದಲ್ಲಿ ಒಂದು ಹೊಸ ರೀತಿಯ ಪ್ರವೃತ್ತಿ ಶುರುವಾಗಿದೆ. ಇದಕ್ಕೆ ಭಾವಗೀತೆಗಳು ಯಾವುದೇ ಕಾರಣಕ್ಕೂ ಮಾರುಹೋಗಬಾರದು. ಭಾವಶುದ್ಧಿ, ರಾಗಶುದ್ಧಿಯಂತಹ ತನ್ನ ಗುಣಧರ್ಮ ವಿಶೇಷತೆಗಳನ್ನು, ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಸ್ವಂತಿಕೆಯನ್ನು ಬಿಟ್ಟುಕೊಡಬಾರದು. ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೆ, ಭಾವಗೀತೆಯು ಇನ್ನೊಂದು ಸಿನಿಮಾ ಗೀತೆಯಾಗಿ ಗುರುತಿಸಲ್ಪಡುತ್ತದೆಯಷ್ಟೇ. ನಮ್ಮ ಹಿಂದಿನ ಗಾಯಕರನ್ನು ನಾವು ನೋಡಿದಾಗ ಶಿವಮೊಗ್ಗ ಸುಬ್ಬಣ್ಣ, ಅಶ್ವಥ್, ರತ್ನಮಾಲಾ, ಮಾಲತಿಶರ್ಮ ಅವರಂತಹ ಗಾಯಕರು ತಮ್ಮ ಕಛೇರಿಗಳಲ್ಲಿ ಸಿನಿಮಾ ಹಾಡುಗಳನ್ನು ಹಾಡುತ್ತಿರಲಿಲ್ಲ. ಆದರೆ ಇಂದಿನ ಗಾಯಕರು ಎಲ್ಲ ರೀತಿಯ ಹಾಡುಗಾರಿಕೆಗೂ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ಹಿಂದಿನವರಂತೆ ಈಗಿನವರಲ್ಲಿ ಆ ಮಾಧ್ಯಮನಿಷ್ಠೆ ಕಡಿಮೆಯಾಗಿದೆ ಅಂತ ಹೇಳಬಹುದು. ಈ ರೀತಿ ಆಗಬಾರದು ಅನ್ನುವುದು ನನ್ನ ಭಾವನೆ.


 ಪ್ರ : ಸುಗಮ ಸಂಗೀತ ಕ್ಷೇತ್ರದಲ್ಲಿ ಬೆಳವಣಿಗೆಯ ದೃಷ್ಟಿಯಿಂದ ಏನೆಲ್ಲಾ ಪ್ರಯೋಗಗಳನ್ನು ಮುಂದಿನ ದಿನಗಳಲ್ಲಿ ಮಾಡಬಹುದು?
ಎಚ್ಎಸ್ವಿ : ಮುಂದಿನ ದಿನಗಳಲ್ಲಿ ನಾನು ನಿರೀಕ್ಷೆ ಮಾಡುವುದಾದರೆ, ಈ ಭಾವಗೀತಾ ಗಾಯನ ಪದ್ಧತಿ ಇನ್ನಷ್ಟು ವಿಸ್ತಾರವಾಗಬೇಕು. ಇಂದು ಈ ಕ್ಷೇತ್ರಕ್ಕೆ ವಸ್ತುವೈವಿಧ್ಯತೆ ಅವಶ್ಯಕವಾಗಿದೆ. ಭಾವಗೀತೆಗಳು ಅಂದರೆ ಕೇವಲ ಪ್ರೀತಿ-ಪ್ರೇಮಕ್ಕೆ ಮಾತ್ರ ಸೀಮಿತವಾಗದೆ, ಮಾತೃವಾತ್ಸಲ್ಯ, ಭಕ್ತಿ, ಸ್ನೇಹ, ಸಾಮಾಜಿಕ ಕಳಕಳಿ, ಬಂಡಾಯವನ್ನು ಎತ್ತಿಹಿಡಿಯುವಂತಹದ್ದು, ದೇಶ-ಭಾಷೆಯ ಮಹಿಮೆಯ ಭಾವಗೀತೆಗಳು ಬರುವಂತಾಗಬೇಕು. ಆಗ ಈ ಕ್ಷೇತ್ರದ ವಿಸ್ತಾರ ಇನ್ನಷ್ಟು ಹಿಗ್ಗುತ್ತದೆ. ಎಲ್ಲ ಭಾವ, ರಸಗಳನ್ನು ತುಂಬಿದಂತಹ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಗಾಯನ ಮಾಡಬೇಕು.  ಉದಾಹರಣೆಗೆ ಕುವೆಂಪು ಅವರಂತಹ ಮೇರುಕವಿಗಳು ಎಲ್ಲ ರೀತಿಯ ಕವಿತೆಗಳನ್ನು ರಚನೆ ಮಾಡಿದ್ದಾರೆ. ಆದರೆ ಅವರ ಪ್ರಕೃತಿ, ಪ್ರೇಮಕ್ಕೆ ಸೀಮಿತವಾದ ಭಾವಗೀತೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಗಾಯನ ಮಾಡಲಾಗುತ್ತಿದೆ. ಅವರ ಬೇರೆಬೇರೆ ವಿಷಯಗಳ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಮುಂಬರುವ ಹೊಸ ಗಾಯಕರು ಹಾಡುವಂತಾಗಬೇಕು. ಕವಿತೆಗಳ ಆಯ್ಕೆಯಲ್ಲಿ ಇನ್ನಷ್ಟು ಮುಕ್ತವಾಗಿ ಯೋಚಿಸಬೇಕಾಗಿದೆ. ಕನರ್ಾಟಕದ ಎಲ್ಲ ಪ್ರಾಂತ್ಯಗಳ ಕವಿಗಳ ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಬರುವ ಹೊಸಬರಿಗೆ ಬಹಳಷ್ಟು ಸವಾಲುಗಳಿವೆ.

ಪ್ರ : ಈ ಬಾರಿ ಶಿರಸಿಯಲ್ಲಿ ಸುಗಮ ಸಂಗೀತ ಸಮ್ಮೇಳನ ನಡೆಯುತ್ತಿರುವುದಕ್ಕೆ ತಮ್ಮ ಅನಿಸಿಕೆ ಏನು?
ಎಚ್ಎಸ್ವಿ : ಸುಗಮ ಸಂಗೀತ ಪರಿಷತ್ನವರು ಪ್ರತಿವರ್ಷ ಇಂತಹ ದೊಡ್ಡ ಸಮ್ಮೇಳನವನ್ನು ಮಾಡುತ್ತಿರುವುದೇ ಖುಷಿಯ ವಿಚಾರ. ಒಂದೆಡೆ ಸಾವಿರಾರು ಸಂಗೀತಾಸಕ್ತರನ್ನು ಸೇರಿಸಿ ಸಮ್ಮೇಳನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಮುದ್ದುಕೃಷ್ಣ ತುಂಬಾ ಚೆನ್ನಾಗಿ ಮಾಡಿದರು. ಈಗ ಕಿಕ್ಕೇರಿ ಕೃಷ್ಣಮೂರ್ತಿ ಆ ಕೆಲಸವನ್ನು ಮುಂದುವರಿಸಿದ್ದಾರೆ. ಸುಗಮ ಸಂಗೀತ ಕ್ಷೇತ್ರದ ಇಷ್ಟು ವರ್ಷಗಳ ಪರಂಪರೆಗೆ ಇಂತಹ ಸಮ್ಮೇಳನಗಳು ತುಂಬಾ ಅವಶ್ಯಕ. ಈ ಬಾರಿ ಸಮ್ಮೇಳನವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆಗುತ್ತಿದೆ. ಈ ಜಿಲ್ಲೆಯಲ್ಲಿ ಗಾಯಕರು ಮತ್ತು ಸಂಗೀತ ಪ್ರೇಮಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಸಂಭ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಲೆಂದು ನಾನು ಹಾರೈಸುತ್ತೇನೆ.


                                        

Wednesday 3 January 2018

`ಬೇರು' ಕಾದಂಬರಿ



ಪ್ರೀತಿಯ ಸ್ನೇಹಿತರೇ,
 ನಾನೊಂದು ಕಾದಂಬರಿ ಬರೆಯಬೇಕೆಂಬ ಅನೇಕ ವರ್ಷಗಳ ಆಸೆ ಈ ವರ್ಷ ಈಡೇರಿದೆ. 
ಈ ವರ್ಷ ನಾನು ಬರೆದಿರುವ ಕಾದಂಬರಿಯ ಹೆಸರು `ಬೇರು'. ಸತತ ಮೂರ್ನಾಲ್ಕು ವರ್ಷಗಳ ಕಾಲ ಒಂದು ಕಥಾವಸ್ತುವಿನ ಚಿಂತನ-ಮಂಥನದಿಂದಾಗಿ ಅದು ಈ ಕಾದಂಬರಿಯ ರೂಪ ಪಡೆದುಕೊಂಡಿದೆ. ವಾಸ್ತವ ಜಗತ್ತಿನ ಕೆಲವು ಎಳೆಗಳು, ಅವುಗಳ ನಡುವಿನ ಬದುಕಿನ ಹೋರಾಟದ ವಸ್ತುವನ್ನಿಟ್ಟುಕೊಂಡು ಈ ಕಾದಂಬರಿ ಬರೆಯುವ ಪ್ರಯತ್ನ ಮಾಡಿರುವೆ.
ಈ ಕೃತಿಗೆ ಕನ್ನಡದ ಖ್ಯಾತ ವಿಮರ್ಶಕರಾಗಿರುವ ಪ್ರೊ.O L ನಾಗಭೂಷಣಸ್ವಾಮಿಗಳು ಬೆನ್ನುಡಿ ಬರೆದುಕೊಟ್ಟಿರುವುದು ನನ್ನ ಭಾಗ್ಯವೆಂದುಕೊಳ್ಳುವೆ.
ಕಾದಂಬರಿಯನ್ನು ಓದಿ ಅದರ ವಸ್ತುವಿಗೆ ತಕ್ಕಂತೆ ಮುಖಪುಟ ಡಿಸೈನ್ ಮಾಡಿದ ಸೌಮ್ಯ ಕಲ್ಯಾಣಕರ್ 
ಮತ್ತು ಕಾದಂಬರಿ ರಚನೆಯ ಸಂದರ್ಭ ಮತ್ತು ಬರೆದ ನಂತರ ಕಥಾವಸ್ತುವಿನ ಚಚರ್ೆ, ಚಿಂತನೆಯಲ್ಲಿ ಭಾಗಿಯಾಗಿ ಅದನ್ನು ಒಳ್ಳೆಯ ಕಾದಂಬರಿಯನ್ನಾಗಿ ರೂಪಿಸುವಲ್ಲಿ ನೆರವಾದ ಆತ್ಮೀಯ ಸ್ನೇಹಿತರನ್ನೂ ಈ ಕ್ಷಣ ನೆನಪಿಸಿಕೊಳ್ಳುತ್ತೇನೆ.
ನನ್ನ ಹಿಂದಿನ ಕಥಾಸಂಕಲನಗಳಾದ ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಮತ್ತು ಕವನ ಸಂಕಲನ `ತಿಗರಿಯ ಹೂಗಳು' -ಎಲ್ಲವೂ ನಿಮ್ಮೆಲ್ಲರ ಓದು, ಸಹಕಾರ, ಪ್ರೋತ್ಸಾಹದಿಂದ ಉತ್ತಮ ಕೃತಿಗಳೆಂದು ಗುರುತಿಸಿಕೊಂಡಿವೆ. ನಿಮ್ಮ ಪ್ರೋತ್ಸಾಹವನ್ನು `ಬೇರು' ಕಾದಂಬರಿಗೂ ನಿರೀಕ್ಷಿಸುತ್ತೇನೆ.
ಹೆಸರು: ಬೇರು
ಪುಟಗಳು: 372
ಬೆಲೆ: 330/-
ಪ್ರಕಾಶನ : ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
ಪುಸ್ತಕ ಜನವರಿ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಹೆಚ್ಚಿನ ಮಾಹಿತಿಗಳನ್ನು ತಿಳಿಸುವೆ.
ಧನ್ಯವಾದಗಳು
ಇಂತಿ
ತಮ್ಮವ
ಫಕೀರ
(ಶ್ರೀಧರ ಬನವಾಸಿ ಜಿ ಸಿ)

Monday 25 July 2016

`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು’ ಪುಸ್ತಕ ಅನಾವರಣ

`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು’ ಪುಸ್ತಕ ಅನಾವರಣ
ನಮ್ಮ ಸಂಸ್ಥೆಯ ಹಿತೈಷಿಗಳು ಮತ್ತು ನನ್ನ ಆತ್ಮೀಯರು ಆಗಿರುವ ಚನ್ನಗಿರಿ ಕೇಶವಮೂರ್ತಿಯವರು ಕ್ರಿಕೆಟ್ ಅಂಕಿ ಅಂಶ ಕ್ಷೇತ್ರದಲ್ಲಿ ನಮ್ಮ ದೇಶದಲ್ಲೇ ಅತ್ಯಂತ ವಿಶಿಷ್ಟ ಸಾಧನೆಯನ್ನು ಮಾಡಿದವರು. ಇಂದಿಗೂ ಪ್ರತಿದಿನ ಸುಮಾರು 18 ಗಂಟೆಗಳ ಕಾಲ ಕ್ರಿಕೆಟ್ ಅಂಕಿ ಅಂಶಗಳ ಕುರಿತು ದಾಖಲೆಗಳ ಕ್ರೋಢಿಕರಣ, ಪತ್ರಿಕೆಗಳಿಗೆ ಅಂಕಿಅಂಶಗಳ ಕುರಿತು ಲೇಖನ, ಸಂಶೋಧನೆ ಮತ್ತು ಕ್ರಿಕೆಟ್ ಕುರಿತ ಗ್ರಂಥಗಳ ರಚನೆಯಲ್ಲಿ ಸದಾ ತೊಡಗಿಕೊಂಡಿದ್ದಾರೆ. 78ರ ಈ ಇಳಿವಯಸ್ಸಿನಲ್ಲೂ ಅವರ ಈ ಹುಮ್ಮಸ್ಸನ್ನು ಎಂತವರಾದರೂ ಮೆಚ್ಚುವಂತಹದ್ದು. ಹಾಗಾಗಿಯೇ ಇವರನ್ನು `ಕ್ರಿಕೆಟ್ ಅಂಕಿ ಅಂಶಗಳ ಲಿಟ್ಲ್ಮಾಸ್ಟರ್' ಮತ್ತು `ದೇಸಿ ಕ್ರಿಕೆಟ್ನ ಗೂಗಲ್' ಅಂತ ಗೌರವದಿಂದ ಕರೆಯುತ್ತಾರೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಮಾಹಿತಿಪೂರ್ಣ ಗ್ರಂಥವನ್ನು ಮಾಡಬೇಕೆಂಬುದು ನಮ್ಮ ಸಂಸ್ಥೆಯ ಅಭಿಲಾಷೆಯಾಗಿತ್ತು. ನಮ್ಮ ಈ ಆಸೆಯನ್ನು ಕೇಶವಮೂರ್ತಿಯವರ ಹತ್ತಿರ ಕೇಳಿಕೊಂಡಾಗ ಸತತ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿ, ವಿಶ್ವಕ್ರಿಕೆಟ್ನಲ್ಲಿ ಮಿಂಚಿದ ಕರ್ನಾಟಕದ 29 ಪ್ರಸಿದ್ಧ ಶ್ರೇಷ್ಟ ಆಟಗಾರರ ಪರಿಚಯ ಮತ್ತು ಸಾಧನೆಯನ್ನು ಅಂಕಿಅಂಶಗಳ ಮೂಲಕ ರಚಿಸಿದ ಈ ಗ್ರಂಥವನ್ನು ಸಂಸ್ಥೆಯ ಪ್ರಕಾಶನಕ್ಕೆ ನೀಡಿದರು. ಇಂತಹ ಶ್ರೇಷ್ಟ ಕೃತಿಯನ್ನು ಪ್ರಕಾಶನ ಮಾಡಲು ಅನುಮತಿಯನ್ನು ನೀಡಿರುವುದು ನಮ್ಮ ಭಾಗ್ಯವೇ ಸರಿ.

ನಮ್ಮ ಸಂಸ್ಥೆ ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ಪ್ರಕಟಿಸಿರುವ `ವಿಶ್ವಕ್ರಿಕೆಟ್ನಲ್ಲಿ ಕರ್ನಾಟಕದ ಆಟಗಾರರು’ ಈ ಗ್ರಂಥವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಪಿ.ಆರ್ .ಅಶೋಕ್ ಆನಂದ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನಾವರಣ ಮಾಡಿದರು. ಉಳಿದಂತೆ ಕ್ರಿಕೇಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಬ್ರಿಜೇಶ್ ಪಟೇಲ್ ಅವರಿಗೆ ಮತ್ತು ಭಾರತೀಯ ಕ್ರಿಕೇಟ್ನ ಮಾಸ್ಟರ್ ಪೀಸ್ ಆಟಗಾರರಾಗಿರುವ ಬಿಎಸ್ ಚಂದ್ರಶೇಖರ್ ಅವರ ಮನೆಗೆ ಹೋಗಿ ಆಟಗಾರರ ಪರವಾಗಿ ಮೊದಲ ಕೃತಿಯನ್ನು ಗೌರವದಿಂದ ನೀಡಲಾಯಿತು.
`ವಿಶ್ವಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು' ಈ ಬೃಹತ್ಗ್ರಂಥ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮಹತ್ವಪೂರ್ಣ ಮತ್ತು ಸಂಗ್ರಹ ಯೋಗ್ಯ ಕೋಶವೆಂದರೆ ತಪ್ಪಾಗಲಾರದು. ಗ್ರಂಥದಲ್ಲಿರುವ ಜಗತ್ಪ್ರಸಿದ್ದ ಆಟಗಾರರಾಗಿರುವ ಜಿ ಆರ್ ವಿಶ್ವನಾಥ್, ಚಂದ್ರಶೇಖರ್, ಪ್ರಸನ್ನ, ಕುಂಬ್ಳೆ, ಶ್ರೀನಾಥ್, ದ್ರಾವಿಡ್ರಂತಹ ಕ್ರಿಕೆಟರ್ಗಳ ಜೀವನಚರಿತ್ರೆಯನ್ನು ಸಂಪೂರ್ಣವಾಗಿ ಓದಲಾಗದಿದ್ದವರು, ಈ ಗ್ರಂಥದ ಮೂಲಕ ತುಂಬಾ ಸರಳವಾಗಿರುವ ಅವರ ಜೀವನ ಮತ್ತು ಸಾಧನೆಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿಯೇ ಈ ಗ್ರಂಥ ಓದುಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಲೇಖಕರು ಈ ಗ್ರಂಥದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ 29 ಶ್ರೇಷ್ಟ ಆಟಗಾರರ ಸಂಪೂರ್ಣ ಪರಿಚಯ ಮತ್ತು ಸಾಧನೆಯನ್ನು ಹೇಳುವ ಮೂಲಕ, ಅವರಿಗೆ ಬಹುದೊಡ್ಡ ಗೌರವವನ್ನು ಸಲ್ಲಿಸಿದ್ದಾರೆ. ಈ ಗ್ರಂಥದ ರಚನೆಯನ್ನು ಒಂದು ತಪಸ್ಸಿನಂತೆ ಆಚರಿಸಿರುವ ಲೇಖಕರು ಆಟಗಾರರ ಸಾಧನೆಯ ಸಮಾನರಾಗಿ ನಮಗೆ ಕಾಣುತ್ತಾರೆ. ಕ್ರಿಕೇಟ್ ಪ್ರೇಮಿಗಳಿಗೆ ಓದುಗರಿಗೆ, ಇಂತಹ ಮಹತ್ವಪೂರ್ಣ ಕೃತಿಯನ್ನು ರಚಿಸಿಕೊಟ್ಟಿರುವ ಚನ್ನಗಿರಿ ಕೇಶವಮೂರ್ತಿಯವರಿಗೆ ಸಂಸ್ಥೆಯ ಅಭಿನಂದನೆಗಳು. ಈ ಕೃತಿಯ ಆರಂಭದಿಂದ ಇಂದಿನವರೆಗೆ ನನ್ನ ಜೊತೆ ಹೆಗಲು ಕೊಟ್ಟು ದುಡಿದಿರುವ ಸಹೋದ್ಯೋಗಿ, ಶ್ರೀ ಕಗ್ಗೆರೆ ಪ್ರಕಾಶ್ ಅವರಿಗೂ ಕೂಡ ವಂದನೆಗಳು. ಈ ಗ್ರಂಥಕ್ಕೆ ಮುಖಪುಟ ಡಿಸೈನ್ ಮಾಡಿದ ಪ್ರದೀಪ್ ಶಾನಭೋಗ್, ಒಳಪುಟಗಳನ್ನು ಅಂದವಾಗಿಸಿದ ಶ್ರೇಷಾದ್ರಿ ಧನಗುರು, ಸುಂದರವಾಗಿ ಪ್ರಿಂಟ್ ಮಾಡಿದ ಮುದ್ರಕರನ್ನು ಈ ಕ್ಷಣ ನೆನಪಿಸಿಕೊಳ್ಳುತ್ತೇನೆ. ಎಂದಿನಂತೆ ಓದುಗರ ಪ್ರೋತ್ಸಾಹವಿಲ್ಲದೆ ಇದ್ದರೆ, ಖಂಡಿತ ಈ ಗ್ರಂಥ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಈ ಗ್ರಂಥವನ್ನು ಕೊಂಡು ಓದಬೇಕು, ಕ್ರಿಕೆಟ್ ಪ್ರೇಮಿಗಳ ಪ್ರತಿ ಮನೆಯಲ್ಲೂ ಈ ಅಪರೂಪದ ಗ್ರಂಥವಿದ್ದರೆ, ನಮ್ಮ ಈ ಶ್ರಮ ಸಾರ್ಥಕವೆಂದುಕೊಳ್ಳುವೆ.
ಓದುಗರ ಪ್ರೋತ್ಸಾಹ, ಕೊಂಡು ಓದುವ ಸಂಸ್ಕೃತಿ, ಪುಸ್ತಕ ಪ್ರೇಮ- ಕನ್ನಡ ಸಾಹಿತ್ಯವಲಯಕ್ಕೆ ಅವಶ್ಯಕವಿದ್ದು, ಇದರಿಂದ ಲೇಖಕರಿಗೆ ಮಾತ್ರವಲ್ಲದೇ ಪ್ರಕಾಶಕರ ಬೆಳವಣಿಗೆಗೂ ಇದು ಸಹಕಾರವಾಗಲಿ ಅಂತ ಆಶಿಸುತ್ತೇನೆ.
ಪ್ರತಿಗಳಿಗಾಗಿ ಸಂಪರ್ಕಿಸಿ ; 9242744854/9739561334

Thursday 2 June 2016

ಸಿದ್ಧವನದ ಅಮೃತಮಹೋತ್ಸವವೂ, ಎಸ್ ಡಿ ಎಮ್ ಕಾಲೇಜಿನ ಸುವರ್ಣ ಉತ್ಸವವೂ...

`ಶ್ರೀಧರ್, ಸಿದ್ದವನ ಗುರುಕುಲದ 75 ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನೀನು ಬರಬೇಕು' ಅಂತ ಗುರುಕುಲದ ವಾರ್ಡನ್ ಆಗಿರುವ ಪ್ರೀತಿಯ ಮಹಾಬಲೇಶ್ವರ ಭಟ್ ಅವರು ಫೋನ್ ಮಾಡಿ ಖುದ್ದಾಗಿ ತಿಳಿಸಿದಾಗ, `ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ಯಾವುದಿದೆ, ನನಗೆ' ಅಂತ ಅಂತರಾಳದಿಂದ ನನ್ನ ಮನಸ್ಸು ಅವರ ಆಹ್ವಾನದಿಂದ ತುಂಬಿಹೋಗಿತ್ತು. ಬರದೇ ಇರಲಿಕ್ಕೆ, ಹೋಗದೇ ಇರಲಿಕ್ಕೆ ವೈಯಕ್ತಿಕ ಕೆಲಸಗಳ ಅಡ್ಡಿ ಇದ್ದರೂ, ಅದನ್ನೂ ಮೀರಿ, ನನ್ನ ಗುರುಕುಲದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲೇ ಬೇಕು ಅನ್ನುವ ಧೃಡಸಂಕಲ್ಪ ಆ ಕ್ಷಣವೇ ಗಟ್ಟಿಯಾಗಿತ್ತು. ಗುರುಕುಲ ಪ್ರಾರಂಭವಾಗಿ 75 ವರ್ಷಗಳು ಕಳೆದಿವೆ. ನನ್ನಂತೆ, ಬಡತನ, ಅವಕಾಶವಂಚಿತ ಗ್ರಾಮೀಣ ಪ್ರದೇಶದ ಸಾವಿರಾರು ವಿಧ್ಯಾರ್ಥಿಗಳಿಗೆ ಅನ್ನ, ವಿದ್ಯೆ, ಅಭಯ, ಆಶ್ರಯವನ್ನು ನೀಡಿದಂತಹ ಮಹಾನ್ ವಿದ್ಯಾಲಯದ ಋಣವನ್ನು ಈ ಜನ್ಮದಲ್ಲಿ ತೀರಿಸುವುದು ಕಷ್ಟವಾದರೂ, ಅದರ ಅಮೃತ ಮಹೋತ್ಸವದ ಸಂತಸದಲ್ಲಿ ನಾನು ಭಾಗಿಯಾದೆ ಅನ್ನುವ ಸಾರ್ಥಕತೆ ನನಗೆ ಬೇಕಾಗಿತ್ತು. ಅದು ಈಡೇರಿದ್ದು ಕೂಡ ನನ್ನ ಸೌಭಾಗ್ಯವೇ ಸರಿ.
ಸಿದ್ಧವನ ಗುರುಕುಲವನ್ನು ನೆನೆಸಿಕೊಂಡಾಗಲೆಲ್ಲಾ ನನ್ನ ಕಣ್ಣಮುಂದೆ ಅನೇಕ ನೆನಪುಗಳು ಬಂದು ಕಾಡುತ್ತವೆ. ಎಸ್ಎಸ್ಎಲ್ಸಿ ನಂತರ ನನ್ನ ಮುಂದಿನ ಬದುಕು ಏನು? ಅನ್ನುವ ದೊಡ್ಡ ಪ್ರಶ್ನೆಗೆ ಉತ್ತರ ಕೊಟ್ಟಿದ್ದೆ ಈ ನಂದನವನ. ಓದಲಿಕ್ಕೆ ಬಡತನ, ಆರ್ಥಿಕ ಸಮಸ್ಯೆ, ಸರಿಯಾದ ಮಾರ್ಗದರ್ಶನವಿಲ್ಲದೇ ಒದ್ದಾಡುತ್ತಿದ್ದ ನನಗೆ ಜೀವನದ ಸರಿಯಾದ ಮಾರ್ಗದರ್ಶನ ತೋರಿಸಿದ್ದೇ ಈ `ಸಿದ್ಧರ' ವನ. ಅಂದಿನ ದಿನಗಳನ್ನು ನೆನಪಿಸಿಕೊಂಡಾಗಲೆಲ್ಲಾ, ನನ್ನ ಇಂದಿನ ಬದುಕು ಹೀಗೆ ಇರುತ್ತಿತ್ತಾ? ಅಕಸ್ಮಾತ್ ಸಿದ್ಧವನ, ಎಸ್ಡಿಎಮ್ ಕಾಲೇಜಿನಲ್ಲಿ ನನಗೆ ಅವಕಾಶ ದೊರೆಯದೇ ಹೋಗಿದ್ದರೇ, ನನ್ನ ಇಂದಿನ ಜೀವನವನ್ನು ಕಲ್ಪನೆ ಕೂಡ ಮಾಡಿಕೊಳ್ಳಲಾಗುವುದಿಲ್ಲ. ಹೌದು, ಬದುಕೆಂದರೆ ನಿಂತ ನೀರಿನಂತಲ್ಲ...! ಅದು ಹರಿಯುತ್ತಲೇ ಇರುತ್ತದೆ. ಹೀಗೆ ಹರಿಯುವ ನದಿಗೂ ಮಾರ್ಗವಿಲ್ಲದಿದ್ದರೆ, ಅದು ಎತ್ತಿಂದತ್ತಲೋ ಲಂಗುಲಗಾಮಿಲ್ಲದೇ ಹರಿಯುತ್ತಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಜೀವನಕ್ಕೂ ಒಂದು ಮಾರ್ಗದರ್ಶನ ಬೇಕೇ ಬೇಕು. ಒಮ್ಮೆ ಅಂತಹ ದಾರಿ ಸಿಕ್ಕಿಬಿಟ್ಟರೆ, ಜೀವನ ಸುಂದರವಾಗಿ ಸಾಗುತ್ತಿರುತ್ತದೆ. ಕಳೆದ 75 ವರ್ಷಗಳಲ್ಲಿ ಸಿದ್ಧವನದಲ್ಲಿ ಆಶ್ರಯವನ್ನು ಪಡೆದು ತಮ್ಮ ಬದುಕನ್ನು ರೂಪಿಸಿಕೊಂಡ ಸಾವಿರಾರು ವಿದ್ಯಾಥರ್ಿಗಳು ಪ್ರಪಂಚದ ಮೂಲೆಮೂಲೆಗಳಲ್ಲಿ ವಾಸಿಸುತ್ತಿದ್ದಾರೆ. ಇಂದಿಗೂ ಅವರ ಜೀವನದಲ್ಲಿ ಸಿದ್ಧವನ ಮತ್ತು ಎಸ್ಡಿಎಮ್ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದು, ಬದುಕಿನ ಪ್ರಮುಖ ಘಟ್ಟವಾಗಿದೆ. ವಿದ್ಯೆ, ಆಶ್ರಯ, ಅಭಯವನ್ನು ನೀಡಿದ ಧರ್ಮಸ್ಥಳ ಸಂಸ್ಥೆ ಮತ್ತು ವೀರೆಂದ್ರ ಹೆಗ್ಗಡೆಯವರ ಕುಟುಂಬದವರ ಬಗ್ಗೆ ಅದಮ್ಯವಾದ ಪ್ರೀತಿ, ಗೌರವವನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ತುಂಬುವ ಮತ್ತು ಶಿಕ್ಷಣದಿಂದ ಅವಕಾಶವಂಚಿತರಾದಂತಹ ವಿದ್ಯಾರ್ಥಿಗಳಿಗಂತಲೇ ಪ್ರಾರಂಭವಾದಂತಹ ಸಿದ್ಧವನ ಗುರುಕುಲ, ಪರಮಪೂಜ್ಯ ಮಂಜಯ್ಯ ಹೆಗ್ಗಡೆಯವರ ಕನಸಿನ ಕೂಸಾಗಿದೆ. ಬಂಗಾಳದಲ್ಲಿ ರವೀಂದ್ರನಾಥ ಠಾಗೋರ್ರವರು ಪ್ರಾರಂಭಿಸಿದಂತಹ ಶಾಂತಿನಿಕೇತನದಂತಯೇ ಕರ್ನಾಟಕದಲ್ಲಿಯೂ ಕೂಡ ಇಂತಹ ಗುರುಕುಲ ಪದ್ಧತಿಯನ್ನು ಪ್ರಾರಂಭಿಸಬೇಕೆಂದು ಸಂಕಲ್ಪ ಮಾಡಿದ್ದ ಪೂಜ್ಯ ಶ್ರೀ ಮಂಜಯ್ಯ ಹೆಗ್ಗಡೆಯವರು, ತಮ್ಮ ಕನಸಿನ ಬೀಜಕ್ಕೆ ನೀರು, ಫಲವತ್ತಾದ ಮಣ್ಣು, ಗೊಬ್ಬರ, ಆರೈಕೆಯನ್ನು ಮಾಡಿ, ಪ್ರಾಚೀನ ಗುರುಕುಲ ಪದ್ಧತಿಯ ಬೇರುಗಳನ್ನು ಹೊಂದಿರುವ ದೇಶದ ಶ್ರೇಷ್ಟ ಸಂಸ್ಥೆಯನ್ನಾಗಿ ಮಾಡಿದ್ದು ಈಗ ಇತಿಹಾಸ. ಈ ಇತಿಹಾಸವನ್ನು ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಉಳಿಸಿಕೊಂಡು ಬೆಳೆಸಿಕೊಂಡು, ಅದು ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದು ಕೂಡ ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದು. ಇಂತಹ ಶ್ರೇಷ್ಟ ಸಂಸ್ಥೆಯಲ್ಲಿ ಓದಿ, ಆಶ್ರಯ ಪಡೆದು, ಹೇಗೆ ಬದುಕಬೇಕು ಅನ್ನುವ ಮಾರ್ಗದರ್ಶನ ಮತ್ತು ಸಂಸ್ಕಾರವನ್ನು ಅಳವಡಿಸಿಕೊಂಡಿರುವ ಅಸಂಖ್ಯ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ ಎಂಬ ಹೆಮ್ಮೆಯೇ ಸಂಸ್ಥೆಯ ಮೇಲಿನ ನನ್ನ ಅಭಿಮಾನಕ್ಕೆ ಕಾರಣ.

ಮೇ 7 ರಂದು ಸಿದ್ಧವನ ಗುರುಕುಲದ ಅಮೃತಮಹೋತ್ಸವ ಮತ್ತು ಮೇ 8 ರಂದು ಎಸ್ಡಿಎಮ್ ಕಾಲೇಜಿನ ಸುವರ್ಣಮಹೋತ್ಸವ- ಈ ಎರಡು ಉತ್ಸವಗಳು ಒಟ್ಟಿಗೆ ಬಂದಿರುವುದು ಅಪ್ಪ-ಮಗನ ಜನ್ಮದಿನದ ಸಂಭ್ರಮ ಒಂದೇ ದಿನ ಬಂದಿರುವಂತೆ ಬಣ್ಣಿಸುವಂತಿತ್ತು. ಏಕೆಂದರೆ, ಸಿದ್ಧವನದಲ್ಲಿ ಆಶ್ರಯ ಪಡೆದವರು, ಎಸ್ಡಿಎಮ್ನಲ್ಲಿ ಓದಿರುತ್ತಾರೆ, ಎಸ್ಡಿಎಮ್ ಕಾಲೇಜು 50 ವರ್ಷಗಳ ಹಿಂದೆ ಸಿದ್ಧವನದಲ್ಲೇ ಪ್ರಾರಂಭವಾದಾಗ, ಅಲ್ಲಿಯೇ ಆರಂಭದ ತರಗತಿಗಳು ನಡೆಯುತ್ತಿದ್ದವು. ಹೊಸ ಕಟ್ಟಡ ಆಗುವವರೆಗೂ ಸಿದ್ಧವನ ಗುರುಕುಲದ ಆವರಣವೇ ಎಸ್ಡಿಎಮ್ ಕಾಲೇಜಿನ ಆಲಯವಾಗಿತ್ತು. ಹಾಗಾಗಿ ಹೆಚ್ಚಿನ ವಿದ್ಯಾಥರ್ಿಗಳಿಗೆ ಎರಡೂ ಸಂಸ್ಥೆಗಳ ನಂಟು ಬಿಡಿಸಲಾಗದ್ದು.
14 ವರ್ಷಗಳ ನಂತರ ಗುರುಕುಲದ ಅಮೃತಮಹೋತ್ಸವದ ಕಾರ್ಯಕ್ರಮಕ್ಕೆ ಕಾಲಿಟ್ಟಾಗ, ನಾನು ಮೊದಲ ದಿನ ಸಿದ್ಧವನಕ್ಕೆ ಬಂದಂತಹ ದಿನವೇ ಕಣ್ಣಮುಂದಿತ್ತು. ಅಂದು ಕೂಡ ಗುರುಕುಲದ ವಿದ್ಯಾರ್ಥಿಗಳು ನನ್ನನ್ನು ಆಹ್ವಾನಿಸಿ ಪಾಲಕರ ಕೋಣೆಗೆ ಕರೆದುಕೊಂಡು ಹೋದ ಹಾಗೆ, ಉತ್ಸವದ ದಿನವೂ ಕೂಡ ವಿದ್ಯಾರ್ಥಿಗಳು ನನ್ನನ್ನು ಪಾಲಕರ ಕೋಣೆಯ ಹತ್ತಿರವೇ ಕರೆದುಕೊಂಡು ಹೋಗಿದ್ದರು. ಮರೆತೆನಂದರೂ ಮರೆಯೋದು ಹ್ಯಾಂಗ... ಆ ಸಂಭ್ರಮದ ದಿನದಂದು, ಸಿದ್ಧವನದಲ್ಲಿ ಇದ್ದ ಪ್ರತಿಕ್ಷಣವೂ ನಾನು ಭಾವುಕನಾಗಿಬಿಟ್ಟಿದ್ದೆ. ಹಳೆಯ ನೆನಪುಗಳು ಕ್ಷಣಕ್ಷಣವೂ ನನ್ನ ಕಣ್ಣ ಮುಂದೆ ಬಂದುಹೋಗುತ್ತಿದ್ದವು. ಸಂಭ್ರಮದ ಹಿಂದಿನ ದಿನವೇ ನೂರಾರು ಹಳೆಯ ವಿದ್ಯಾರ್ಥಿಗಳು ಸೇರಿ, ಸ್ವಯಂ ಸೇವಕರಾಗಿ ದುಡಿಯುತ್ತಿದ್ದರು. ಎಲ್ಲರಿಗೂ ತಮ್ಮ ಮನೆಯ ಸಂಭ್ರಮಕ್ಕೆ ಅಂತಲೇ ದುಡಿಯುತ್ತಿದ್ದೇವೆ ಅನ್ನುವ ಭಾವನೆ... ಪ್ರತಿಯೊಬ್ಬರ ಮುಖದಲ್ಲೂ ಆ ಸಂಭ್ರಮದ ಸಂತಸ ಎದ್ದು ಕಾಣುತ್ತಿತ್ತು. ಹಳೆಯ ವಿದ್ಯಾರ್ಥಿಗಳು ಗುಂಪುಗುಂಪಾಗಿ ಸೇರಿಕೊಂಡು ಸಿದ್ಧವನದ ಮೂಲೆಮೂಲೆಯೂ ಓಡಾಡುತ್ತಾ, ಅಂದಿನ ನೆನಪುಗಳಿಗೆ ಜಾರಿದ್ದರು. ಹೆಚ್ಚಿನವರ ವಯಸ್ಸು 50 ದಾಟಿತ್ತು, ಇನ್ನೂ ಹೆಚ್ಚಿನವರು 70 ದಾಟಿದವರೂ ಕೂಡ ಇದ್ದರು. ಅಬ್ಬಾ... ಈ 75 ವರ್ಷಗಳಲ್ಲಿ ಎಂತೆಂತಹ ಮಹಾನುಭಾವರನ್ನು, ವಿದ್ಯಾವಂತರನ್ನು, ಸಂಸ್ಕಾರವಂತರನ್ನು, ಸಿರಿವಂತರನ್ನಾಗಿ ಯಾವ ಜಾತಿ/ಧರ್ಮದ ಭೇದವಿಲ್ಲದೇ ಬೆಳೆಸಿದ್ದರೂ, ಸಿದ್ಧವನ ಮಾತ್ರ ಯಾವ ಹಮ್ಮಿಲ್ಲದೇ ನಿಗುಮ್ಮನಾಗಿ ತನ್ನ ಸರಳತೆ, ಪ್ರಶಾಂತತೆಯಿಂದಲೇ ನಮ್ಮನ್ನು ನೋಡಿ ಬರಮಾಡಿಕೊಳ್ಳುತ್ತಿತ್ತು. ತನ್ನ ಮಡಿಲಲ್ಲಿ ಬೆಳೆದಂತಹ ಮಕ್ಕಳನ್ನು ಎಷ್ಟೋ ವರ್ಷಗಳ ನಂತರ ಮತ್ತೆ ನೋಡುತ್ತಿದ್ದೇನೆ ಅನ್ನುವ ಸಾರ್ಥಕತೆಯ ಖುಷಿಯನ್ನು ಅದು ಒಳಗೊಳಗೆ ಅನುಭವಿಸುತ್ತಿತ್ತೋ? ಸಿದ್ಧವನ ಆಂತರ್ಯವನ್ನು ಹೊಕ್ಕು ಅರಿತಾಗಲೇ ಅದರ ಆಳವನ್ನು ಅರಿಯಬಹುದೇನೋ? ಏಷ್ಟೋ ವರ್ಷಗಳ ನಂತರ ಹೆತ್ತಮಕ್ಕಳನ್ನು ನೋಡಿ, ಕಣ್ಣುತುಂಬಿಕೊಳ್ಳುವ ತಂದೆತಾಯಿಗಳ ಆಂತರ್ಯದ ಪ್ರೀತಿ, ವಾತ್ಸಲ್ಯವನ್ನು ಬಣ್ಣಿಸುವುದು ಕಷ್ಟ ಅಂತ ಹೇಳುವಾಗ, 75 ವರ್ಷಗಳಲ್ಲಿ ಅಸಂಖ್ಯ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿ ಸಲುಹಿದ ಸಿದ್ಧವನವೆಂಬ ತಾಯಿಯ ಒಡಲಾಳದ ಪ್ರೀತಿಯನ್ನು ಬಣ್ಣಿಸಲಾದಿತೇ? ಬಣ್ಣಿಸಿದರೂ, ಇದೊಂಥರ ಆಗಸದ ವಿಸ್ತಾರವನ್ನು ಲೆಕ್ಕಮಾಡಿ ಹೇಳಿದಂತೆ...! ಕಲ್ಪನೆ ನಿಲುಕದ್ದು... ಅಂತಹದ್ದುರಲ್ಲಿ ಅಲ್ಲಿ ಓದಿ,ಆಡಿ ಬೆಳೆದ ನಮ್ಮಂತ ವಿದ್ಯಾಥರ್ಿಗಳು ಮತ್ತೇ ಏಷ್ಟೋ ವರ್ಷಗಳ ನಂತರ ಮತ್ತೇ ಆ ನೆಲದಲ್ಲಿ ನಿಂತಾಗ ಕಾಡಿದ ನೆನಪುಗಳು, ಅದರಿಂದ ಸಿಕ್ಕ ಖುಷಿಯನ್ನು ಬಣ್ಣಿಸುವುದು ಕೂಡ ಕಷ್ಟವೇ... ಅದನ್ನು ಅನುಭವಿಸಿದಂತಹ ಎಲ್ಲ ಹಳೆಯ ವಿದ್ಯಾರ್ಥಿಗಳಿಗೆನೇ ಕೇಳಬೇಕಷ್ಟೇ...! 14 ವರ್ಷಗಳ ನಂತರ ನನಗೆ ಪಾಲಕರಾಗಿದ್ದಂತಹ ಶ್ರೀ ಮಹಾಬಲೇಶ್ವರ ಭಟ್ ಮಾತನಾಡಿಸಿದಾಗ, ಇಂದಿಗೂ ಅವರ ಮಾತಿನಲ್ಲಿ ಅದೇ ಪ್ರೀತಿ, ವಾತ್ಸಲ್ಯ, ಕಾಳಜಿ... ಅವರ ಮುಂದೆ ಮತ್ತೇ ನಾನು ಸಣ್ಣವನಾಗಿಬಿಟ್ಟೆ. ಮಾತುಗಳೇ ಹೊರಡಲಿಲ್ಲ. ನನ್ನ ಜೊತೆಗೆ ಓದಿದ ಅನೇಕ ಸ್ನೇಹಿತರು ಅಂದು ಬರದೇ ಇದ್ದುದು ನನ್ನ ನಿರಾಶೆಗೆ ಕಾರಣವಾಗಿತ್ತು. ಹೀಗಿದ್ದರೂ, ನನ್ನ ಸಹಪಾಠಿಗಳಾದ ಶಿವಕುಮಾರ್ ಗೌಡ, ರಾಜೇಶ್ ಜೈನ್, ಪ್ರದೀಪ್ ಶೆಟ್ಟಿ, ಪ್ರವೀಣ್ಕುಮಾರ್ರಂತಹ ಕೆಲವು ಸ್ನೇಹಿತರು ಮಾತ್ರ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. 
ಅಂದು ಸೇರಿದ್ದ ಹಿರಿಯ ಹಳೆಯ ವಿದ್ಯಾರ್ಥಿಗಳೆಲ್ಲಾ ಸಿದ್ಧವನದ ಸಮವಸ್ತ್ರವಾದ ಬಿಳಿ ಅಂಗಿ ಮತ್ತು ಬಿಳಿಪಂಚೆ ಉಟ್ಟು ಮತ್ತೆ ತಾವು ಹಳೆಯ ವಿದ್ಯಾಥರ್ಿಗಳಂತೆ ಇಡೀ ಸಿದ್ಧವನದ ತುಂಬಾ ಓಡಾಡುತ್ತಿದ್ದರು. ಅವರು ಕಳೆಯುತ್ತಿದ್ದ ಪ್ರತಿಕ್ಷಣದ ಹಿಂದೆಯೂ ಹಳೆಯ ನೆನಪುಗಳ ದೊಡ್ಡ ಸಡಗರವೇ ಎದ್ದು ಕಾಣುತ್ತಿತ್ತು. ಅಮೃತಮಹೋತ್ಸವದ ಕಾರ್ಯಕ್ರಮ 11 ಗಂಟೆಗೆ ಪ್ರಾರಂಭವಾಗಿರುವಾಗಲೇ ಪರಮಪೂಜ್ಯ ಖಾವಂದರು ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ಅಧ್ಯಕ್ಷರಾಗಿ ಆಗಮಿಸಿದ್ದರು. 30-40 ವರ್ಷಗಳ ಹಿಂದೆ ಸಿದ್ದವನದಲ್ಲಿ ಓದಿ ಕಲಿತು, ಒಳ್ಳೆಯ ಹುದ್ದೆಯಲ್ಲಿದ್ದ ಅನೇಕರು ತಮ್ಮ ಬದುಕಿನಲ್ಲಿ ಸಿದ್ಧವನ ನೀಡಿದ ಪ್ರಮುಖ ಪಾತ್ರವನ್ನು, ಹಳೆಯ ನೆನಪುಗಳಿಗೆ ಜಾರಿ, ಅಲ್ಲಿ ಸೇರಿದ್ದ ನೂರಾರು ಹಳೆಯ ವಿದ್ಯಾರ್ಥಿಗಳ ಮುಖವಾಣಿಯಾಗಿ ಮಾತನಾಡಿದ್ದರು. ಅಂದು ಸೇರಿದ್ದ ಪ್ರತಿಯೊಬ್ಬರ ಹಿಂದೆಯೂ ಸಿದ್ಧವನದ ಹಳೆಯ ನೆನಪುಗಳ ದೊಡ್ಡ ಮೂಟೆಯೂ ಇದೆ. ಎಲ್ಲರಿಗೂ ತಮ್ಮ ತಮ್ಮ ಅವಕಾಶಗಳನ್ನು ಹೇಳಿಕೊಳ್ಳಲಿಕ್ಕೆ ಅವಕಾಶ ಸಿಗದೇ ಇದ್ದರೂ, ಅದನ್ನು ಮನಸ್ಸಿನಲ್ಲೇ ಮತ್ತೆ ಮೆಲುಕು ಹಾಕಿ ಆ ಸ್ವಾದವನ್ನು ಒಳಗೊಳಗೆ ಅನುಭವಿಸಿದಂತೆ ಭಾಸವಾಗುತ್ತಿತ್ತು. ಪೂಜ್ಯ ವೀರೇಂದ್ರ ಹೆಗ್ಗೆಡೆಯವರು ಕೂಡ ಸಿದ್ಧವನದೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದು ಕೂಡ ವಿಶೇಷವಾಗಿತ್ತು. ಕಾರ್ಯಕ್ರಮದ ನಂತರ ಸಿದ್ಧವನವನ್ನು ಪ್ರಾರಂಭಿಸಿ, ಬೆಳೆಸಿದ ಶ್ರೀ ಮಂಜಯ್ಯ ಹೆಗ್ಗಡೆ, ಶ್ರೀ ರತ್ನವರ್ಮ ಹೆಗ್ಗಡೆ ಮತ್ತು ಶ್ರೀ ವೀರೆಂದ್ರ ಹೆಗ್ಗಡೆಯವರ ಸಾಧನೆಯ ಕುರಿತು ಮಾತನಾಡಿದ್ದು ಇಡೀ ಕಾರ್ಯಕ್ರಮಕ್ಕೆ ಕಳಶಭೂಷಣದಂತಿತ್ತು. ಸಿದ್ಧವನದಲ್ಲಿ ಮತ್ತೆ ಎಂದಿನಂತೆ ಮುಂಜಾನೆಯ ಗಂಜಿ ಊಟ, ಕೊಬ್ಬರಿ ಚಟ್ನಿ, ಉಪ್ಪಿನಕಾಯಿ ಜೊತೆಗೆ ಥರಾವರಿ ವಿವಿಧ ತಿಂಡಿ, ಮಧ್ಯಾಹ್ನದ ಭಾರಿ ಮೃಷ್ಟಾನ್ನ ಭೋಜನ ಸಿದ್ಧವನದ ಅಮೃತಮಹೋತ್ಸವದ ವಿಶೇಷವಾಗಿತ್ತು. ಸಾಯಂಕಾಲ ಮತ್ತೆ ಹಳೆಯ ನೆನಪುಗಳು, ಮನರಂಜನೆ, ಎಸ್ಡಿಎಮ್ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಅಭಿನಯಿಸಿದ್ದ ನಾಟಕ ಇತ್ಯಾದಿ ಕಾರ್ಯಕ್ರಮಗಳು, ರಾತ್ರಿ ಮತ್ತೆ ಮೃಷ್ಟಾನ ಭೋಜನ ಇಂತವುಗಳಿಂದ ಭಾಗವಹಿಸಿದ ನಮ್ಮಂತ ಹಳೆಯ ವಿದ್ಯಾರ್ಥಿಗಳಿಗೆ ಇಡೀ ಅಮೃತ ಮಹೋತ್ಸವದ ನೆನಪು ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ.
ಮರುದಿನ ಎಸ್ಡಿಎಮ್ ಕಾಲೇಜಿನ 50 ವರ್ಷದ ಸಂಭ್ರಮ ಕೂಡ ಇನ್ನಷ್ಟು ಭರ್ಜರಿಯಾಗಿ ನೆರವೇರಿತು. ಸಿದ್ಧವನದ ಅಮೃತಮಹೋತ್ಸವಕ್ಕೆ ಬಂದವರೆಲ್ಲಾ ಕಾಲೇಜಿನ ಚಿನ್ನದ ಮಹೋತ್ಸವಕ್ಕೆ ಭಾಗವಹಿಸಿದ್ದರು. 50 ವರ್ಷಗಳಲ್ಲಿ ಕಾಲೇಜಿನಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳು ದೇಶವಿದೇಶದ ಮೂಲೆಗಳಿಂದ ಕಾಲೇಜಿನ ಚಿನ್ನದಂತಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈಗಾಗಲೇ ನಿವೃತ್ತಿ ಹೊಂದಿದ ಹಳೆಯ ಪ್ರಾಧ್ಯಾಪಕರು, ನಿವೃತ್ತಿಯ ಅಂಚಿನಲ್ಲಿದ್ದವರು, ಸಕ್ರಿಯವಾಗಿದ್ದ ಎಲ್ಲ ಪ್ರಾಧ್ಯಾಪಕರು ಸ್ವಾಗತಕಾರರಾಗಿ, ಸ್ನೇಹಿತರಂತೆ ಹಳೆಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿದ್ದು ಎಲ್ಲರಿಗೂ ಆತ್ಮೀಯತೆಯನ್ನು ಹುಟ್ಟಿಸುವಂತಿತ್ತು. ಅದು ಗುರುಶಿಷ್ಯರ ಸಮಾಗಮವಾದರೂ, ಇಬ್ಬರು ಹಳೆಯ ಸ್ನೇಹಿತರ ಸಮ್ಮೀಲನದಂತೆ ಕಾಣುತ್ತಿತ್ತು. ಅಂದು ಯಾವ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ತಮಗೆ ಗೌರವ ಕೊಡಬೇಕೆಂದು ನಿರೀಕ್ಷಿಸುತ್ತಿರಲಿಲ್ಲ. ಪ್ರಾಂಶುಪಾಲರಾಗಿದ್ದ ಯಶೋವರ್ಮರೂ ಕೂಡ ತುಂಬಾ ಉತ್ಸಾಹದಿಂದ ಎಲ್ಲ ಹಳೆಯ ವಿದ್ಯಾರ್ಥಿಗಳ ಜೊತೆ ಪ್ರೀತಿಯಿಂದ ಬರೆಯುತ್ತಾ, ಖುದ್ದಾಗಿ ಅವರೇ ಎಲ್ಲರ ಆತಿಥ್ಯವನ್ನು ನೋಡಿಕೊಳ್ಳುತ್ತಿದ್ದುದು, ಕಾರ್ಯಕ್ರಮದ ವಿಶೇಷವಾಗಿತ್ತು. ಆಯಾ ವರ್ಷಗಳಲ್ಲಿ ಓದಿದದವರು ಒಂದೊಂದು ಕೋಣೆಯಲ್ಲಿ ಸೇರುವಂತೆ ಮಾಡುವ ಯೋಜನೆಯು ಕೂಡ ಹಳೆಯ ವಿದ್ಯಾರ್ಥಿಗಳ ಸಂತೋಷಕ್ಕೆ ಕಾರಣವಾಗಿತ್ತು. ಅಂದು ಪ್ರತಿಯೊಬ್ಬರ ಮುಖದಲ್ಲಿ ಸಂತೋಷ, ಸಂತಸ ವರ್ಣಿಸಲಾಗದಷ್ಟು ಸಡಗರದಲ್ಲಿ ಮೊಳಗಿತ್ತು. ಹೆಚ್ಚಿನವರು ತಮ್ಮ ಹೆಂಡತಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಬಂದವರಿದ್ದರು. ತಮ್ಮ ಕುಟುಂಬದವರನ್ನು ಇಡೀ ಕಾಲೇಜಿನ ಇಂಚು ಇಂಚನ್ನು ಬಿಡದೇ ಎಲ್ಲ ಕಡೆಯೂ ಓಡಾಡಿ ಹಳೆಯ ನೆನಪುಗಳಿಗೆ ಜಾರಿದ್ದರು. ಇದಕ್ಕೆ ನಾನು ಕೂಡ ಹೊರತಾಗಿಲ್ಲ. ಕಾಲೇಜಿನ ಮುಖ್ಯ ಗೇಟ್ನಿಂದ ಹೊರಟು, ಲೈಬ್ರೈರಿಯ ಸುತ್ತಮುತ್ತ, ಕ್ಯಾಂಟೀನ್, ಗ್ರಂಥಾಲಯದ ಒಳಗೆ, ನಾವು ಓದುತ್ತಿದ್ದ ಜಾಗ ಎಲ್ಲಡೆ ಮತ್ತೆ ಓಡಾಡಿ ಲೈಬ್ರರಿಯಲ್ಲಿನ ನೆನಪುಗಳನ್ನು ಮತ್ತೆ ಮೆಲುಕುಹಾಕಿದ್ದಾಯಿತು. ನಾನು ವಿಜ್ಞಾನದ ವಿದ್ಯಾರ್ಥಿಯಾಗಿದ್ದರಿಂದ ಫಿಸಿಕ್ಸ್, ಕೆಮಸ್ಟ್ರಿ, ಬಯಾಲಜಿ ಡಿಪಾರ್ಟ್ಮೆಂಟ್ಗಳಿಗೆ ಹೋಗಿ, ಪಾಠ ಮಾಡಿದ ಗುರುಗಳು, ಲ್ಯಾಬ್ಗಳಲ್ಲಿ ಗಂಟೆಗಟ್ಟಲೇ ನಿಂತು ಮರೆತುಹೋದ ಏಷ್ಟೋ ನೆನಪುಗಳನ್ನು ಮತ್ತೆ ತಲೆಯಲ್ಲಿ ತುಂಬಿಕೊಂಡು ಹೊರಬಂದಿದ್ದೆ. ಮಧ್ಯಾಹ್ನದ ಮೃಷ್ಟಾನ್ನ ಭೋಜನ, ಅದರ ಜೊತೆಗೆ ಮನರಂಜನಾ ಕಾರ್ಯಕ್ರಮ, ಸಾಯಂಕಾಲದ ಮುಖ್ಯ ಕಾರ್ಯಕ್ರಮ ಪ್ರಾರಂಭವಾಗುವವರೆಗೂ ಸಮಯ ಹೇಗೆ ಕಳೆಯಿತೋ ಅನ್ನುವುದೇ ತಿಳಿಯಲಿಲ್ಲ. ಪೂಜ್ಯ ಖಾವಂದರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆ, ಡಾ.ಎಸ್.ಪ್ರಭಾಕರ್, ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಬೆಳ್ತಂಗಡಿಯ ಶಾಸಕರಾಗಿದ್ದ ವಸಂತ ಬಂಗೇರ ಇನ್ನು ಹಲವು ಗಣ್ಯರು ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದರು. 50ತುಂಬಿದ ಕಾಲೇಜಿಗೆ ದುಡಿದ ಎಲ್ಲರಲ್ಲಿಯೂ ಬೆಟ್ಟದಷ್ಟು ನೆನಪುಗಳಿದ್ದವು. ಅನೇಕರು ಹೃದಯತುಂಬಿದ್ದ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅಂದು ವೇದಿಕೆಯಾಗಿತ್ತು. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ, ಇಂದು ಕಲಾ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿರುವ ವಿಲಾಸ್ ನಾಯಕ್ ವೇದಿಕೆಯಲ್ಲೇ ಅದ್ಭುತ ಸ್ಥಿರಚಿತ್ರವನ್ನು ಬಿಡಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ನಮ್ ಬ್ಯಾಚ್ 2001-02 ಬ್ಯಾಚ್ನನವರಲ್ಲಿ ಹೆಚ್ಚಿನವರು ಅಂದು ಬರದೇ ಇರುವುದು ಅತ್ಯಂತ ಬೇಸರ ಹುಟ್ಟಿಸಿತು. ಖಂಡಿತ ಅವರೆಲ್ಲಾ ಒಂದು ಅದ್ಭುತ ಕ್ಷಣಗಳ ದಿನವನ್ನು ಮಿಸ್ ಮಾಡಿಕೊಂಡರು ಅನ್ನುವ ಭಾವನೆ ನನ್ನಲ್ಲಿ ಮೂಡಿತು. ಅಂದು ಅನೇಕ ಸ್ನೇಹಿತರನ್ನು ಭೇಟಿಮಾಡಬೇಕೆಂದು ಅಂದುಕೊಂಡಿದ್ದ ನನಗೆ ದೊಡ್ಡ ನಿರಾಸೆ ಕಾಡಿತು. ಹೀಗಿದ್ದರೂ ಬೆಳಗ್ಗೆಯಿಂದ ರಾತ್ರಿ 8 ಗಂಟೆಯವರೆಗೂ ಕಾಲೇಜಿನ ಆವರಣದ ಆ ಸಡಗರವನ್ನು ಕ್ಷಣಕ್ಷಣವೂ ಆಸ್ವಾದಿಸುತ್ತಿದ್ದೆ. ನನ್ನಂತೆ ಎಲ್ಲರೂ... ಎಲ್ಲರ ಜೀವನದಲ್ಲಿ ಎಲ್ಲದಿನಗಳೂ ಕಾಡುವ ದಿನಗಳಾಗಿರುವುದಿಲ್ಲ. ಯಾವುದೋ ಒಂದು ದಿನ, ಕ್ಷಣ ವರವಾಗಿ ಬಂದಿರುತ್ತೆ. ಅಂತಹ ವರ ಸಿದ್ಧವನದ ಅಮೃತಮಹೋತ್ಸವ ಮತ್ತು ಎಸ್ಡಿಎಮ್ ಕಾಲೇಜಿನ 50ರ ಸಂಭ್ರಮದ ದಿನವಾಗಿತ್ತು ಅಂದರೆ ಅತಿಶಯೋಕ್ತಿಯೆನಲ್ಲ.

50 ನೇ ವರ್ಷದ ಕಾರ್ಯಕ್ರಮದಂದು ಪ್ರತಿ ವರುಷ ಮೇ1 ನೇ ತಾರೀಖನ್ನು ಎಸ್ ಡಿ ಎಮ್ ಹಳೆಯ ವಿದ್ಯಾರ್ಥಿಗಳ ಸಮ್ಮೀಲನಕ್ಕೆ ಮೀಸಲಾಗಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಪ್ರತಿ ವರ್ಷ ಮೇ1 ಕಾರ್ಮಿಕರ ದಿನಾಚರಣೆ ಎಲ್ಲರಿಗೂ ಸರ್ಕಾರಿ ರಜೆ ಇರುತ್ತದೆ. ಅಂದು ಮತ್ತೆ ಎಲ್ಲರೂ ಸೇರಲು ಒಳ್ಳೆಯ ಸುವರ್ಣಾವಕಾಶ.













Monday 6 April 2015

ನನ್ನ ಮೂರು ಪುಸ್ತಕಗಳು

ಪ್ರೀತಿಯ ಸ್ನೇಹಿತರೇ,

ನನ್ನ ಹಿಂದಿನ ಪುಸ್ತಕಗಳಾದ `ಅಮ್ಮನ ಆಟೋಗ್ರಾಫ್’ ಮತ್ತು `ದೇವರ ಜೋಳಿಗೆ’ ಪುಸ್ತಕಗಳನ್ನು ಕೊಂಡು ಓದಿ ಅಭಿಪ್ರಾಯ ತಿಳಿಸಿದ ನಿಮಗೆಲ್ಲರಿಗೂ ವಂದನೆಗಳನ್ನು ತಿಳಿಸುತ್ತಾ, ನನ್ನ ಮೂರನೇ ಪುಸ್ತಕ `ತಿಗರಿಯ ಹೂಗಳು’ ಕವನ ಸಂಕಲನದ ಬಗ್ಗೆಯೂ ನಿಮ್ಮಿಂದ ಅಷ್ಟೇ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇನೆ. `ತಿಗರಿಯ ಹೂಗಳು’ ಸಂಕಲನವು ಈ ಕೆಳಕಂಡ ಬುಕ್ ಸ್ಟೋರ್ ಗಳಲ್ಲಿ ಲಭ್ಯವಿದೆ. ನಿಮ್ಮ ಹತ್ತಿರದ ಬುಕ್ ಸ್ಟೋರ್ ಗಳಲ್ಲಿ ಲಭ್ಯವಿರುವ ಈ ಸಂಕಲನವನ್ನು ಕೊಂಡು, ಓದಿ ಅಭಿಪ್ರಾಯ ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ.

• ಸಪ್ನಾ ಬುಕ್ ಸ್ಟಾಲ್, ಗಾಂಧಿನಗರ ಮತ್ತು ಕರ್ನಾಟಕದ ಎಲ್ಲ ಬ್ರಾಂಚ್ ಗಳು
• ಸ್ಪರ್ಧಾ ಚೈತ್ರಾ ಬುಕ್ ಹೌಸ್, ಗ್ರೀನ್ ಹೌಸ್ ಹತ್ತಿರ, ಗಾಂಧಿನಗರ, ಬೆಂಗಳೂರು
• ಬೆಳೆಗೆರೆ ಬುಕ್ಸ್ ಆಂಡ್ ಕಾಫಿ, ಗಾಂಧಿಬಝಾರ್, ಬೆಂಗಳೂರು
• ಓಂಕಾರ್ ಬುಕ್ ಹೌಸ್, ಗಿರಿನಗರ, ಬೆಂಗಳೂರು
• ಟೋಟಲ್ ಕನ್ನಡ, ಜಯನಗರ 4ನೇ ಬ್ಲಾಕ್
• ಅಂಕಿತ ಬುಕ್ ಸ್ಟೋರ್, ಗಾಂಧಿಬಝಾರ್ ,ಬೆಂಗಳೂರು
ಪುಸ್ತಕ ಮಳಿಗೆಗಳಿಗೆ ಹೋಗಿ, ಕೊಂಡುಕೊಳ್ಳಲು ಆಗದಿದ್ದರೆ, ಆನ್ಲೈನ್ ನಲ್ಲಿಯೂ ಕೂಡ ಪುಸ್ತಕವನ್ನು ಕೊಂಡುಕೊಳ್ಳಬಹುದು.
https://sapnaonline.com/tigariya-hoogalu-fakeer-panchami-pu…
http://www.totalkannada.com/tigariya-hoogalu--P29385


ನನ್ನ ಕಥಾ ಸಂಕಲನಗಳಾದ `ಅಮ್ಮನ ಆಟೋಗ್ರಾಫ್,' `ದೇವರ ಜೋಳಿಗೆ'  ಮತ್ತು ಕವನ ಸಂಕಲನ `ತಿಗರಿಯ ಹೂಗಳು' ಈ ಮೂರು ಪುಸ್ತಕಗಳನ್ನು ಒಟ್ಟಿಗೆ ಕೊಳ್ಳುವುದಾದರೆ,  ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ..

https://sapnaonline.com/shop/search/fakeer

http://www.totalkannada.com/search.html#?q=panchami%20publications


ದೇವರ ಜೋಳಿಗೆ ಮತ್ತು ಅಮ್ಮನ ಆಟೋಗ್ರಾಫ್ ಪುಸ್ತಕಗಳು ಫ್ಲಿಫ್ ಕಾರ್ಟ್ ಮತ್ತು ಅಮೆಜಾನ್ ನಲ್ಲಿ ಲಭ್ಯವಿದೆ. ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ, ಬುಕ್ ಮಾಡಿಕೊಳ್ಳಬಹುದು.

http://www.flipkart.com/devara-jolige/p/itmefs9ypez7xxzf
http://www.amazon.in/Devara-Jolige-Fakeera-Shridhar-Banavaasi/dp/B00MEALAZS

http://www.flipkart.com/ammana-autograph/p/itmefs92gsdnayhx
http://www.amazon.in/Ammana-Autograph-Phakeera-Shreedhar-Banavaasi/dp/B00LCHGZLS

ಪುಸ್ತಕವನ್ನು ಕೊಂಡು, ಓದಿ ಅಭಿಪ್ರಾಯ ತಿಳಿಸಿದರೆ, ಇದಕ್ಕಿಂತ ದೊಡ್ಡ ಪ್ರೋತ್ಸಾಹವಿಲ್ಲ ಅಂತ ಅಂದುಕೊಳ್ಳುವೆ.
`ಬರಹಗಾರನಿಗೆ ಓದುಗ ಮಹಾಶಯನೇ ನಿಜವಾದ ಹಿತೈಷಿ'
ಧನ್ಯವಾದಗಳೊಂದಿಗೆ
ಇಂತಿ ನಿಮ್ಮವ
ಫಕೀರ
(ಶ್ರೀಧರ ಬನವಾಸಿ)




Monday 9 February 2015

ಕದಂಬೋತ್ಸವ ನೆಪದಲ್ಲಾದರೂ ಬನವಾಸಿ ಉಳಿಸಿ...!!


ಪ್ರತಿವರ್ಷವೂ ಐತಿಹಾಸಿಕ ಸ್ಥಳವಾಗಿರುವ ಬನವಾಸಿಯಲ್ಲಿ ಹಮ್ಮಿಕೊಳ್ಳುವ ಕದಂಬೋತ್ಸವವೂ ಸಕರ್ಾರಕ್ಕೆ ಆಗಾಗ ಬಿಸಿತುಪ್ಪದಂತೆ ತೋರ್ಪಟ್ಟಿದೆ. ಸಾಹಿತ್ಯ ವಲಯ, ಚಿಂತಕರು ಮತ್ತು ಬನವಾಸಿಗರ ವಿರೋಧಗಳು, ಟೀಕೆಗಳಿಂದ ಹೇಗಾದರೂ ತಪ್ಪಿಸಿಕೊಳ್ಳಲೇಬೇಕು ಅನ್ನುವ ಯೋಚನೆಗಳನ್ನಿಟ್ಟುಕೊಂಡು ಉತ್ಸವವನ್ನು ಹಮ್ಮಿಕೊಳ್ಳುತ್ತಿರುವುದನ್ನು ಅನೇಕ ವರ್ಷಗಳಿಂದ ಕಾಣಬಹುದು. ಪ್ರತಿವರ್ಷದ ಕದಂಬೋತ್ಸವವೂ ಸರ್ಕಾರದ ಆಶ್ವಾಸನೆಗಳು ಮತ್ತು ಇನ್ನೀತರ ಸಾಧನೆಗಳ ತೋರ್ಪಡಿಕೆ, ಮನರಂಜನೆ, ಜಿಲ್ಲೆಯ ರಾಜಕೀಯ ಮುಖಂಡರು ಈ ನೆಪದಲ್ಲಾದರೂ ಬನವಾಸಿಗೆ ಬಂದುಹೋಗುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇದು ಪಂಪನ ನಾಡು ಬನವಾಸಿಗೆ ಒದಗಿರುವ ದುರ್ಗತಿ ಅನ್ನಬೇಕೋ, ಸದವಕಾಶ ಅನ್ನಬೇಕೋ ಅಂತ ಹೇಳುವುದು ಸ್ವಲ್ಪ ಕಷ್ಟ.
ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯನ್ನು ನೋಡಲು ಅತಿ ಉತ್ಸಾಹದಿಂದ ಅನೇಕ ಕಡೆಯಿಂದ ಜನರು, ಪ್ರವಾಸಿಗರು, ಸಂಶೋಧನಾ ವಿದ್ಯಾ ರ್ಥಿಗಳು ಬಂದುಹೋಗುತ್ತಾರೆ. ಹೀಗೆ ಒಮ್ಮೆ ಬನವಾಸಿಯನ್ನು ನೋಡಿಕೊಂಡು ಹೋದವರು ಮತ್ತೆ ಬರುವುದು ತುಂಬಾ ಕಡಿಮೆ, ಇದರಿಂದ ಇಲ್ಲಿನ ಪ್ರವಾಸೋದ್ಯಮದಲ್ಲೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಇಲ್ಲ ಮತ್ತು ಮಧುಕೇಶ್ವರ ದೇವಸ್ಥಾನದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾದಂತೆ ಕಂಡಿಲ್ಲ. ಈ ರೀತಿಯ ವಾತಾವರಣ ನಿರ್ಮಾಣವಾಗಲಿಕ್ಕೆ, ಮುಖ್ಯ ಕಾರಣವೇ, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಬನವಾಸಿಯ ಇತಿಹಾಸದ ಮೂಲಬೇರುಗಳನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನಗಳು ಇದುವರೆಗೂ ಆಗದೇ ಇರುವುದು. ಬನವಾಸಿಯಲ್ಲಿ ಶ್ರೀ ಮಧುಕೇಶ್ವರ ದೇವಸ್ಥಾನ ಬಿಟ್ಟರೆ, ಈ ನಾಡನ್ನು ಕಟ್ಟಿ ಬೆಳೆಸಿದ ಕದಂಬ ಮನೆತನಗಳು, ಸೋದೆ ಅರಸರು ಕುರಿತಾದ ಶಾಸನಗಳು, ಐತಿಹಾಸಿಕವಾಗಿ ದೊರೆಯುವಂತಹ ಯಾವುದೇ ಕುರುಹುಗಳನ್ನು ಉಳಿಸಿಕೊಳ್ಳುವ, ಬೆಳೆಸುವ ಯಾವುದೇ ಪ್ರಯತ್ನಗಳು ಕ್ಷೇತ್ರದಲ್ಲಿ ಕಾಣಸಿಗುವುದಿಲ್ಲ ಅನ್ನುವುದು ಎಲ್ಲರ ದೂರು. ಇದು ಬನವಾಸಿಯ ಮೇಲೆ ಅಭಿಮಾನವಿಟ್ಟುಕೊಂಡಂತಹ ಎಂತಹವರಿಗಾದರೂ ನಿರಾಸೆಯನ್ನು ಹುಟ್ಟಿಸುವಂತಹ ಸಂಗತಿಯಾಗಿದೆ. ಆದಿಕವಿ ಪಂಪ, ಅಲ್ಲಮ, ಹರ್ಡೆಕರ್ ಮಂಜಪ್ಪರಂತಹ ಮಹಾನ್ ತೇಜಸ್ವಿಗಳು ಬದುಕಿ ಬಾಳಿದ ಬನವಾಸಿಯಲ್ಲಿ, ಈ ವ್ಯಕ್ತಿಗಳು ಮಾಡಿರುವ ಸಾಧನೆ, ಅವರ ಗ್ರಂಥಗಳ ಸಂಗ್ರಹ ಮತ್ತು ಪೋಷಣೆ, ಇವರ ಕುರಿತಾದ ಸಂಶೋಧನಾ ಕೇಂದ್ರಗಳು, ಮ್ಯೂಸಿಯಂಗಳ ನಿರ್ಮಾಣ ಇಂತಹ ಯಾವ ಪ್ರಯತ್ನಗಳು ಇದುವರೆಗೂ ಆಗಿಲ್ಲ. ಈ ಹಿಂದೆ ಪುರಾತತ್ವ ಇಲಾಖೆಯವರು ಬನವಾಸಿ ಮತ್ತು ಅದರ ಸುತ್ತಮುತ್ತಲೂ ಉತ್ಕನನ ಮಾಡಿದಾಗ ಸಿಕ್ಕಿರುವ ಅನೇಕ ಶಾಸನಗಳು, ವಿಗ್ರಹಗಳು, ಭಗ್ನಗೊಂಡ ಜೈನ ತೀರ್ಥಂಕರರ ವಿಗ್ರಹಗಳು ದೇವಸ್ಥಾನದ ಒಂದು ಕೋಣೆಯಲ್ಲಿ ಧೂಳು ತಿನ್ನುತ್ತಿವೆ. ಬನವಾಸಿಯ ಇತಿಹಾಸವನ್ನು ಇನ್ನಷ್ಟು ತೆರೆದಿಡುವ ಇಂತಹ ಕುರುಹುಗಳು ಮೊದಲು ಹೇಗೆ ಭೂಮಿಯಲ್ಲಿ ಅಡಗಿದ್ದವೋ, ಅದೇ ರೀತಿ ಧೂಳು ತುಂಬಿಕೊಂಡು ಇಂದು ದೇವಸ್ಥಾನದಲ್ಲಿ ಅನಾಥವಾಗಿ ಮಲಗಿಕೊಂಡಿವೆ. ಅವುಗಳ ಬಗ್ಗೆ ಮಾಹಿತಿ ನೀಡುವವರು ಯಾರೂ ಇಲ್ಲ. ಸಂಶೋಧನೆ ಇಲ್ಲ. ಪ್ರವಾಸಿಗರಿಗೂ ಅಲ್ಲಿ ಪ್ರವೇಶವಿಲ್ಲ. ದೂರದಿಂದಲೇ ಅವುಗಳನ್ನು ನೋಡಿಕೊಂಡು ಕಣ್ಣೀರು ತುಂಬಿಕೊಂಡು ಬರಬೇಕಷ್ಟೇ. ಕನ್ನಡ ರಾಜಮನೆತನಗಳ ಬಗ್ಗೆ ಅಪಾರವಾದ ಸಂಶೋಧನೆ ಮಾಡಬೇಕೆನ್ನುವರಿಗೆ ಬನವಾಸಿಯೇ ಮೊದಲ ಸಾಕ್ಷಿಯಾಗುತ್ತದೆ. ಈಗ ಸಿಕ್ಕಿರುವ ಕುರುಹುಗಳು, ಶಾಸನಗಳು ಪ್ರಬಲವಾದ ಸಾಕ್ಷ್ಯವನ್ನು ನೀಡುತ್ತವೆ, ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಆಳವಾದ ಸಂಶೋಧನೆ ಆಗಬೇಕಷ್ಟೇ. ಹೀಗೆ ಸಾಹಿತ್ಯಕವಾಗಿ ಮತ್ತು ಐತಿಹಾಸಿಕವಾಗಿ ಸಂಶೋಧನೆ ಮಾಡುವಂತಹ ಪ್ರಯತ್ನಗಳು ಬನವಾಸಿಯಲ್ಲಿ ಆಗದೇ ಇರುವ ದೂರುಗಳ ಜೊತೆಗೆ,  ಕರ್ನಾಟಕದ ಪ್ರಮುಖ ಪ್ರವಾಸೋದ್ಯಮದ ಕೇಂದ್ರವಾಗಿರುವ ಈ ನೆಲೆಯಲ್ಲಿ ಮೂಲಭೂತ ಸೌಲಭ್ಯಗಳು ಕೂಡ ಇಲ್ಲ. ಪ್ರವಾಸಿಗರು ಉಳಿದುಕೊಳ್ಳಲಿಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲ, ಒಂದು ಅತಿಥಿ ಗೃಹ ಇದ್ದರೂ, ಅದು ಕೂಡ ಜನಸಾಮಾನ್ಯರಿಗೆ ದುಬಾರಿಯಾಗಿದೆ. ಖಾಸಗಿಯವರಿಗೆ ವಹಿಸಲಾಗಿದೆ. ಹೊರಗಡೆಯಿಂದ ಬರುವ ಪ್ರವಾಸಿಗರು, ಇತಿಹಾಸದ ವಿದ್ಯಾರ್ಥಿ ಗಳು, ಸಂಶೋಧಕರು ಉಳಿದುಕೊಳ್ಳಬೇಕಾದರೆ ಶಿರಸಿಗೆ ಹೋಗಬೇಕು. ಇದು ಇಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳಲ್ಲಿ ಪ್ರಮುಖವಾದುದು.

ಸೊರಬ ಮತ್ತು ಶಿರಸಿ ತಾಲೂಕಿನ ಮಧ್ಯದಲ್ಲಿರುವ ಬನವಾಸಿ, ಈ ಎರಡು ತಾಲೂಖುಗಳ ವಿಧಾನಸಭಾ ಕ್ಷೇತ್ರಗಳಿಗೆ ಸೇರಿಕೊಳ್ಳದೇ, ಕ್ಷೇತ್ರ ಮರುಗಣನೆ ಸಮಯದಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ಸೇರಿಕೊಂಡಿದೆ. ಯಲ್ಲಾಪುರ ಬನವಾಸಿಯಿಂದ ಸುಮಾರು 73  ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಸಮಸ್ಯೆಗಳು ಮತ್ತು ಕುಂದುಕೊರತೆಗಳಿಗೆ 20ಕಿಲೋಮೀಟರ್ ದೂರದಲ್ಲಿರುವ ಶಿರಸಿಗಿಂತ, 70 ಕಿಲೋಮೀಟರ್ ದೂರದ ಯಲ್ಲಾಪುರದಲ್ಲಿರುವ ಸ್ಥಳೀಯ ಎಮ್ಮೆಲ್ಲೆಗಳನ್ನು ಕಾಣಬೇಕು. ಇನ್ನೂ ಕ್ಷೇತ್ರದ ರಾಜಕೀಯ ಮುಖಂಡರುಗಳಿಗೆ ಬನವಾಸಿ ಎಂಬುದು, ಕದಂಬೋತ್ಸವ, ಮಧುಕೇಶ್ವರ ಜಾತ್ರೆ ಮತ್ತು ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡಲಿಕ್ಕೆ ಕಾರಣವಾಗಿದೆ. ಶಾಸಕರ ಕುಂದುಕೊರತೆ ಕಛೇರಿ ಇದ್ದರೂ ಇಲ್ಲದಂತಿದೆ. ಇದು ಕೂಡ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ರಾಜಕೀಯ ವ್ಯಕ್ತಿಗಳ ಇಚ್ಚಾಶಕ್ತಿಯ ಕೊರತೆಯನ್ನು ಎತ್ತಿ ಹಿಡಿಯುತ್ತದೆ. ಪ್ರತಿವರ್ಷ ಕದಂಬೋತ್ಸವ ನಡೆಯುವಾಗ ಬನವಾಸಿಯು `ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಂತೆ' ಸಿರಿ ಸಿಂಗಾರಗೊಂಡಿರುತ್ತದೆ. ರಸ್ತೆ ರಿಪೇರಿ, ಇನ್ನೀತರ ಅಭಿವೃದ್ದಿ ಕೆಲಸಗಳು ಕದಂಬೋತ್ಸವವೆಂಬ ನೆಪಕ್ಕೆ ಮಾತ್ರ ನಡೆಯುತ್ತವೆ. ಇದಾದ ಮೇಲೆ ಮುಂದಿನ ಕದಂಬೋತ್ಸವ ಬರುವವರೆಗೂ ಬೇರೆ ರೀತಿಯ ಅಭಿವೃದ್ಧಿಯ ಕೆಲಸಗಳು ಅಷ್ಟಕಷ್ಟೇ. ಹೀಗೆ ಪ್ರತಿವರ್ಷ ಕೋಟಿಗಟ್ಟಲೇ ಹಣ ಖರ್ಚು  ಮಾಡುವ ಕದಂಬೋತ್ಸವದಲ್ಲಿ ಸ್ವಲ್ಪ ಭಾಗವನ್ನಾದರೂ, ಕ್ಷೇತ್ರದ ಮೂಲ ಇತಿಹಾಸ, ಸಾಹಿತ್ಯ ಮತ್ತು ಮೂಲಭೂತ ಸಮಸ್ಯೆಗಳಿಗೆ ಮೀಸಲಿಟ್ಟರೆ, ಸರ್ಕಾರದ ಕದಂಬೋತ್ಸವಕ್ಕೆ ಹಿರಿಮೆ ಅನ್ನಬಹುದು. ಈ ಉತ್ಸವದ ನೆಪದಲ್ಲಿ ಕ್ಷೇತ್ರವನ್ನು ಆಳಿದ ರಾಜಮನೆತನಗಳ ಇತಿಹಾಸ, ಶಾಸನಗಳ ರಕ್ಷಣೆ, ಪರಿಚಯ, ಸಂಶೋಧನೆ ಆಗುವ ನಿಟ್ಟಿನಲ್ಲಿ ಮ್ಯೂಸಿಯಂಗಳು, ಸಂಶೋಧನಾ ಕೇಂದ್ರಗಳು ಸ್ಥಾಪನೆಯಾಗಬೇಕು. ಇದರ ಜೊತೆಗೆ ಆದಿಕವಿ ಪಂಪ, ವಚಕಕಾರ ಅಲ್ಲಮರ ತಾಳೆಗರಿಗಳು, 80ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಕರ್ನಾಟಕದ  ಗಾಂಧಿ ಹರ್ಡೆಕರ್  ಮಂಜಪ್ಪನವರ ಗ್ರಂಥಗಳ ಸಂರಕ್ಷಣೆ, ಪಂಪ, ಅಲ್ಲಮರ ಹಳಗನ್ನಡ ಸಾಹಿತ್ಯದ ಕುರಿತಾಗಿ ಸಂಶೋಧನೆ ಮಾಡುವವರಿಗೆ ಧನ ಪ್ರೋತ್ಸಾಹ, ಇವರು ರಚಿಸಿದ ಗ್ರಂಥಗಳ ಮರುಮುದ್ರಣ, ಭಾಷಾಂತರ, ಇಂಟರ್ನೆಟ್ ಮಾಧ್ಯಮಕ್ಕೆ ಅಳವಡಿಸುವುದು, ಹೀಗೆ  ಇತ್ಯಾದಿ ಇತ್ಯಾದಿ ಕೆಲಸಗಳನ್ನು ಕದಂಬೋತ್ಸವದ ನೆಪದಲ್ಲಾದರೂ, ಸರ್ಕಾರ ಖಂಡಿತ ಮಾಡಲಿಕ್ಕೆ ಸಾಧ್ಯವಿದೆ. ದಕ್ಷಿಣ ಭಾರತದಲ್ಲಿ ಜೈನ ಧರ್ಮದ ಪ್ರಮುಖ ಸ್ಥಳಗಳಾಗಿರುವ ಶ್ರವಣಬೆಳಗೊಳ, ದಕ್ಷಿಣ ಕನ್ನಡ ಜಿಲ್ಲೆಯಂತೆ ಪ್ರಾಚೀನ ಬನವಾಸಿಯಲ್ಲಿಯೂ ಕೂಡ ಜೈನ ಧರ್ಮ ಅತ್ಯಂತ ಉತ್ತುಂಗದಲ್ಲಿತ್ತು ಅನ್ನುವುದಕ್ಕೆ ಈಗಾಗಲೇ ಇರುವ ಬಸದಿ, ಸಿಕ್ಕಿರುವ  ಅನೇಕ ಶಾಸನಗಳು, ವಿಗ್ರಹಗಳು ಕ್ಷೇತ್ರದ ಜೈನಧರ್ಮದ ಅಸ್ತಿತ್ವವನ್ನು, ಪ್ರಾಚೀನತೆಯನ್ನು ಎತ್ತಿ ಹಿಡಿಯುತ್ತವೆ. ಆದಿಕವಿ ಪಂಪನೂ ಜೈನ ಧರ್ಮಕ್ಕೆ ಸೇರಿದವನಾಗಿರುವುದು, ಬನವಾಸಿಯಲ್ಲಿನ ಜೈನಪರಂಪರೆಯ ಇತಿಹಾಸಕ್ಕೆ ಇದು ಪೂರಕವಾಗಿದೆ. ಕರ್ನಾಟಕ ಜೈನಧರ್ಮದ ಇತಿಹಾಸದಲ್ಲಿ ಬನವಾಸಿಯ ಜೈನರ ಇತಿಹಾಸ ಸೇರಿಕೊಂಡಿಲ್ಲ ಮತ್ತು ಜೈನ ಇತಿಹಾಸಕಾರರು ಬನವಾಸಿಯನ್ನು ಕಡೆಗಣಿಸಿದ್ದು, ಸಂಶೋಧನೆಯನ್ನೂ ಕೂಡ ಮಾಡಿಲ್ಲ. ಹೀಗೆ ಬನವಾಸಿಯ ಮೂಲಬೇರುಗಳನ್ನು ಉಳಿಸುವಂತಹ, ಅನೇಕ ಕಾರ್ಯಕ್ರಮಗಳನ್ನು ಒಂದೇ ಹಂತದಲ್ಲಿ ಮಾಡಲಿಕ್ಕೆ ಸಾಧ್ಯವಾಗದಿದ್ದರೂ, ಪ್ರತಿವರ್ಷ ಕದಂಬೋತ್ಸವಕ್ಕೆ  ಸಿಗುವ ಅನುದಾನದಲ್ಲಿ ಈ ಯೋಜನೆಗಳನ್ನು ಪ್ರಾಚೀನ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಹಂತ ಹಂತವಾಗಿ ಮಾಡಬಹುದು. ಉತ್ಸವದಲ್ಲಿ ಲಕ್ಷ ಲಕ್ಷಗಟ್ಟಲೇ ಹಣಕೊಟ್ಟು ಪರಭಾಷಾ ಗಾಯಕರು, ಸಿನಿಮಾ ಸಂಗೀತ ನಿರ್ದೇಶಕರ  ಮನರಂಜನೆ ಕಾರ್ಯಕ್ರಮಗಳನ್ನು ಮಾಡುವುದು ಖಂಡಿತ ಬನವಾಸಿಗರಿಗೆ ಬೇಕಾಗಿಲ್ಲ. ಇಂತಹ ಮನರಂಜನಾ ಕಾರ್ಯಕ್ರಮಗಳು ಆದಿಕವಿ ಪಂಪನ ಈ ಉತ್ಸವಕ್ಕೆ ಭೂಷಣವೂ ಅಲ್ಲ, ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಇಲ್ಲಿನ ಇತಿಹಾಸವನ್ನು ಉಳಿಸುವ ಕಾರ್ಯದ ಮೂಲಕ ಉತ್ಸವ ಆಚರಿಸಿದರೆ, ಪಂಪಪ್ರಶಸ್ತಿಗೆ ಅರ್ಥ ಸಿಕ್ಕಹಾಗಾಗುತ್ತದೆ, ಇಲ್ಲವಾದರೆ ಪಂಪ ಪ್ರಶಸ್ತಿಯನ್ನು ಬನವಾಸಿಗೆ ಬಂದು ಪಡೆಯುವ ಹಿರಿಯ ಸಾಹಿತಿಗಳು ಕೂಡ ಸರ್ಕಾರಕ್ಕೆ  ಮನವಿ ಮಾಡಿಕೊಂಡರೆ, ಆ ಪ್ರಶಸ್ತಿಗೆ ಅವರು ನೀಡುವ ದೊಡ್ಡ ಗೌರವವಾಗುತ್ತದೆ.
ಪಂಪ ಪ್ರಶಸ್ತಿ ಕಾರ್ಯಕ್ರಮದ ಹೊರತಾಗಿ ಮನರಂಜನೆಗಂತಲೇ ಸುರಿಯುವ ಲಕ್ಷಗಟ್ಟಲೇ ಹಣದಲ್ಲಿ ಬನವಾಸಿಯ ಐತಿಹಾಸಿಕ ಮತ್ತು ಸಾಹಿತ್ಯಿಕ ನೆಲೆಗಳನ್ನು ಉಳಿಸುವ ಪ್ರಯತ್ನಗಳಾಗಬೇಕು. ಈಗಾಗಲೇ ಐತಿಹಾಸಿಕ ಕ್ಷೇತ್ರ ಹಂಪಿಯಲ್ಲಿ ಇಂತಹ ಕಾರ್ಯಗಳನ್ನು ಸಾಧಿಸಿರುವ ಸರ್ಕಾರಕ್ಕೆ ಬನವಾಸಿಯ ಮೂಲಬೇರುಗಳನ್ನು ಉಳಿಸುವುದು ಖಂಡಿತ ಕಷ್ಟವಾಗದು. ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಕುರುಹುಗಳು, ಶಾಸನಗಳ ಸಂಶೋಧನೆ ಮತ್ತು ಅದರ ಉಳಿವಿಗೆ ಬನವಾಸಿ ಅತ್ಯಂತ ಪ್ರಶಸ್ತವಾದ ಪ್ರಮುಖ ಕೇಂದ್ರವಾಗಿದೆ. `ನಮ್ಮ ಬನವಾಸಿ ಉಳಿಸಿ' ಅನ್ನುವ ಸಪ್ತಾಹಕ್ಕಿಂತ ಕನ್ನಡಿಗರ ಮೊದಲ ರಾಜಧಾನಿಯನ್ನು ಉಳಿಸಿ ಅಂತ ಹೇಳಿದರೆ ಉತ್ಪ್ರೇಕ್ಷೆಯಾಗದು. ಇದು ಪ್ರತಿಯೊಬ್ಬ ಬನವಾಸಿಗನ ಅಂತಃಕರಣದ ನಿವೇದನೆ ಕೂಡ ಹೌದು. ಈ ಬಾರಿಯ ಕದಂಬೋತ್ಸವ ಇಂತಹ ಯೋಜನೆಗಳಿಗೆ ಮುನ್ನುಡಿಯಾಗಲಿ...


Friday 31 January 2014

ಗುರುವಿನ ಋಣ ತೀರಿಸುವದೆಲ್ಲಿಂದ ಬಂತು?

ಮಸಲ್ ಮ್ಯಾನ್ ಸಲ್ಮಾನ್ ಖಾನ್ ಅಭಿನಯದ`ಜೈ ಹೋ' ಸಿನಿಮಾದಲ್ಲಿ ಒಂದು ಥೀಮನ್ನು ಅಳವಡಿಸಿಕೊಂಡಿದ್ದಾರೆ. ಯಾರಾದರೂ ತಮಗೆ ಸಹಾಯ ಮಾಡಿದರೆ, ಅವರಿಗೆ ಥ್ಯಾಂಕ್ಯು ಅಂತ ಹೇಳದೇ, ಅವರು ನೀಡಿದ ಸಹಾಯವನ್ನು, ಕಷ್ಟದಲ್ಲಿರುವ ಮೂವರು ಜನರಿಗೆ ಸಹಾಯ ಮಾಡಿ ಅದರ ಆ ಋಣದ ಭಾರವನ್ನು ಕಡಿಮೆ ಮಾಡಿಕೊಳ್ಳುವುದು, ಆ ಮೂಲಕ ಎಲ್ಲರಿಗೆ ಎಲ್ಲರೂ ಸಹಾಯವಾಗಿ ಒಳ್ಳೆಯ ಸಮಾಜವನ್ನು ಕಟ್ಟುವ ವಸ್ತು ಆ ಚಿತ್ರದಲ್ಲಿತ್ತು.

`ಜೈ ಹೋ' ಸಿನಿಮಾವನ್ನು ನೋಡಿದಾಗ, ನಾನು ಎಂದೋ ಕೇಳಿದ, ಓದಿದ ಗುರುಶಿಷ್ಯರ ಸಂಬಂಧದ ಒಂದು ಘಟನೆ ನೆನಪಾಯಿತು. ಗುರು ಶಿಷ್ಯರ ಮಾತುಕತೆಯ ಈ ಘಟನೆ ಸಿನಿಮಾದಲ್ಲಿ ಕಂಡಂತೆ ನನಗೆ ಭಾಸವಾಯಿತು.

ತುಂಬಾ ಕಡು ಬಡತನದಲ್ಲಿ ಇದ್ದ ಒಬ್ಬ ಅನಾಥ ಹುಡುಗನಿಗೆ, ತಾನು ಓದಬೇಕು, ದೊಡ್ಡ ಅಧಿಕಾರಿಯಾಗಬೇಕು ಅನ್ನುವ ಗುರಿ ಇರುತ್ತದೆ. ತುಂಬಾ ಬುದ್ದಿವಂತನಾಗಿದ್ದ ಆ ಹುಡುಗನಿಗೆ ಶಿಕ್ಷಣ ಅನ್ನುವುದು ಮರೀಚಿಕೆ ಆಗಿರುತ್ತದೆ. ತನ್ನ ಆಸೆಯನ್ನು ಅನೇಕರ ಹತ್ತಿರ ಹೇಳಿಕೊಳ್ಳುತ್ತಾನೆ. ಯಾರೂ ಆತನ ಸಹಾಯಕ್ಕೆ ಬರುವುದಿಲ್ಲ. ಕೊನೆಗೆ ಆ ಅನಾಥ ಹುಡುಗನನ್ನು ತುಂಬಾ ದಿನಗಳಿಂದ ಗಮನಿಸುತ್ತಿದ್ದ, ಹತ್ತಿರ ಶಾಲೆಯ ಗುರುಗಳೊಬ್ಬರು, ಆತನ ಕನಸನ್ನು ಈಡೇರಿಸಲು ಮುಂದೆ ಬರುತ್ತಾರೆ. ಬುದ್ದಿವಂತನಾಗಿದ್ದ ಆ ಅನಾಥ ಹುಡುಗ, ಗುರುಗಳ ಸಹಾಯದೊಂದಿಗೆ ಒಳ್ಳೆಯ ಶಿಕ್ಷಣ ಪಡೆದು, ಪ್ರಜ್ಞಾವಂತನಾಗಿ ಬೆಳೆದು, ಸರ್ಕಾರದ ದೊಡ್ಡ ಅಧಿಕಾರಿಯಾಗುವ ಮಟ್ಟಿಗೆ ಬೆಳೆಯುತ್ತಾನೆ. ಹಣ, ಆಸ್ತಿ, ಅಧಿಕಾರ ಎಲ್ಲವೂ ಆತನ ಸ್ವತ್ತಿನಲ್ಲಿ ಬರುತ್ತದೆ. ಹಾಗಂತ ಆತ ಹಣ, ಶ್ರೀಮಂತಿಕೆ ಬಂದ ಮೇಲೆ ಬದಲಾಗುವುದಿಲ್ಲ. ಹಳೆಯದನ್ನು ಆತ ಮರೆತಿರುವುದಿಲ್ಲ...ತನ್ನನ್ನು ಚೆನ್ನಾಗಿ ಓದಿಸಿದ ಆ ಗುರುಗಳನ್ನು ಆತ ದೇವರಂತೆ ಪೂಜಿಸುತ್ತಿರುತ್ತಾನೆ. ಗುರುವಿನ ಋಣವನ್ನು ತಾನು ಹೊತ್ತಿದ್ದೇನೆ ಅನ್ನುವ ನೋವು ಆತನನ್ನು ದಿನವೂ ಕಾಡುತ್ತಿರುತ್ತದೆ. ಗುರು ಋಣದ ಭಾರವನ್ನು ತೀರಿಸುವ ಬಗೆ ಹೇಗೆ ಅಂತ ಚಿಂತಿಸುತ್ತಿರುತ್ತಾನೆ. ಗುರುವಿಗೆ ಏನಾದರೂ ಉಡುಗೊರೆ ಕೊಟ್ಟು ಅವರ ಸಹಾಯವನ್ನು ಹಿಂತಿರುಗಿಸುವ ಯೋಚನೆ ಮೂಡುತ್ತದೆ. ಗುರುಗಳು ಹಣವನ್ನು ಸ್ವೀಕರಿಸುವುದಿಲ್ಲ ಅನ್ನುವುದನ್ನು ಅರಿತ ಆತ, ಗುರುಗಳಿದ್ದ ಊರಿನಲ್ಲಿ ಒಂದು ದೊಡ್ಡ ಜಾಗ ಪಡೆದು ಒಂದು ಭವ್ಯವಾದ ಬಂಗಲೆಯನ್ನು ಕಟ್ಟಿಸುತ್ತಾನೆ. ಅದು ತಾನು ಗುರುವಿಗೆ ನೀಡುತ್ತಿರುವ ದೊಡ್ಡ ಕಾಣಿಕೆ ಅಂದುಕೊಳ್ಳುತ್ತಾನೆ. ಕೊನೆಗೆ ಆ ಭವ್ಯ ಮನೆ ಕಟ್ಟಿದ ಮೇಲೆ, ತನ್ನ ಕುಟುಂಬದ ಜೊತೆ, ಮನೆಯ ಕೀಯನ್ನು ತೆಗೆದುಕೊಂಡು, ಗುರುಗಳ ಮನೆಗೆ ಹೋಗುತ್ತಾನೆ. ಗುರುಗಳು ಅದೇ ಹಳೆ ಮನೆಯಲ್ಲಿ ವಾಸಿಸುತ್ತಿದ್ದರು. ಮುರುಕಲು ಮನೆಯಲ್ಲಿದ್ದ ಗುರುಗಳಿಗೆ ನಮಸ್ಕರಿಸಿ, ತಾವು ಮಾಡಿದ ಸಹಾಯಕ್ಕಾಗಿ ಗುರುಕಾಣಿಕೆ ಸಲ್ಲಿಸುತ್ತಿರುವುದಾಗಿ ಹೇಳಿ, ಹೊಸದಾಗಿ ಕಟ್ಟಿದ ಭವ್ಯ ಬಂಗಲೆಯ ಮನೆಯ ಕೀಯನ್ನು ಕೊಡುತ್ತಾನೆ. ಹೆಚ್ಚಿನ ಗುರುಗಳು, ಕಥೆಯಲ್ಲಿನ ಗುರುಗಳ ಸ್ಥಾನದಲ್ಲಿದ್ದರೆ, ಶಿಷ್ಯನ ಕಾಣಿಕೆಯನ್ನು ಏಷ್ಟು ಪ್ರೀತಿಯಿಂದ ಕಣ್ಣೊತ್ತಿಕೊಂಡು, ಸ್ವೀಕರಿಸುತ್ತಿದ್ದರೋ ಏನೋ, ಆದರೆ ಕಥೆಯಲ್ಲಿನ ಗುರುಗಳು, ಶಿಷ್ಯನು, ತಮಗೆ ಋಣ ತೀರಿಸುವ ಪರಿ ಕಂಡು ನಗುತ್ತಾರೆ, ಶಿಷ್ಯನಿಗೆ ಮತ್ತೊಮ್ಮೆ ಗುರುಗಳಾಗುತ್ತಾರೆ. ಅಂದು ಆತನಿಗೆ ಬದುಕಿನ ನಿಜವಾದ ಪಾಠವನ್ನು ಹೇಳಿಕೊಡುತ್ತಾರೆ.

`ಮಗಾ... ನಾನು ನಿನ್ನನ್ನು ಚೆನ್ನಾಗಿ ಓದಿಸಿದ್ದರಿಂದ, ನೀನು ಈ ಹಂತದವರೆಗೆ ಬೆಳೆಯಲಿಕ್ಕೆ ಸಾಧ್ಯವಾಗಿದೆ ಅಂತ ನೀನು ಅಂದುಕೊಂಡಿರುವೆ. ಗುರುವಾಗಿ ನಾನು ಅದನ್ನು ಒಪ್ಪಿಕೊಳ್ಳುವೆ. ಅದನ್ನು ನೀನು ಋಣದ ಭಾರ ಅಂತ ಅಂದುಕೊಂಡಿರುವೆ. ಅದಕ್ಕೆ ಗುರುಕಾಣಿಕೆಯಾಗಿ ಇದನ್ನು ನೀನು ನೀಡುತ್ತಿರುವೆ... ಮಗಾ... ಒಂದು ಮಾತನ್ನು ಹೇಳುವೆ, ಯಾವಾಗಲೂ ನೆನಪಿಟ್ಟಿಕೋ, ಈ ಜನ್ಮದಲ್ಲಿ ತಾಯಿಋಣ ಮತ್ತು ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಗುರುವಿನ ಋಣವನ್ನು ತೀರಿಸಬೇಕು ಅಂತ ನೀನು ಅಂದುಕೊಂಡಿದ್ಡರೆ, ಅದನ್ನು ತೀರಿಸಲು ಒಂದು ಮಾರ್ಗವಿದೆ ಅಷ್ಟೇ. ನಾನು ಕಷ್ಟದಲ್ಲಿದ್ದ ನಿನಗೆ ಹೇಗೆ ಓದಲಿಕ್ಕೆ ಸಹಾಯ ಮಾಡಿದೆನೋ,ನೀನು ಅದೇ ರೀತಿ ಇನ್ನು ಮುಂದೆ ನಿನ್ನಂತೆ ಬಡತನದಲ್ಲಿದ್ದ ಹತ್ತಾರು ಹುಡುಗರಿಗೆ ಓದಿಸಲಿಕ್ಕೆ ಸಹಾಯ ಮಾಡು, ಅವರನ್ನು ಶಿಕ್ಷಣವಂತರನ್ನಾಗಿ ಮಾಡು, ಆಗ ನನ್ನ ಋಣ ತೀರಿದಂತೆ' ಅಂತ ಹೇಳುತ್ತಾರೆ. 

ಶಿಷ್ಯನಿಗೆ ಗುರುಗಳು ಹೇಳಿದ ಬದುಕಿನ ಪಾಠ ಅರಿವಾಗುತ್ತದೆ. ಗುರುಗಳ ಮಾತು ಸತ್ಯದರ್ಶನದಂತೆ ತೋರುತ್ತದೆ. ಗುರುಗಳು ತನಗೆ ನೀಡಿದ ಮನೆಯ ಕೀಯನ್ನು ಆತನಿಗೆ ವಾಪಸ್ ಮಾಡಿ, `ನೀನು ನನಗೆ ಕೊಡಬೇಕಿಂದಿದ್ದ ಮನೆಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿಡು, ಆ ಮನೆಯಲ್ಲೇ ಹತ್ತಾರು ಮಕ್ಕಳನ್ನು ಓದಿಸು, ಅವರು ನಿನ್ನಂತೆ ವಿದ್ಯಾವಂತರಾಗಿ, ನಿನ್ನಂತೆ ನಡೆದುಕೊಂಡರೆ, ಈ ಸಮಾಜದಲ್ಲಿ ದೊಡ್ಡ ಬದಲಾವಣೆ ಖಂಡಿತ ಸಾಧ್ಯ' ಅಂತ ಅನ್ನುತ್ತಾರೆ.

ಗುರುಗಳ ಮಾತುಗಳು ಶಿಷ್ಯನ ಮನಮುಟ್ಟುತ್ತದೆ. ಗುರುಗಳಿಗೆ ನೀಡಬೇಕಿಂದಿದ್ದ ಆ ಭವ್ಯ ಬಂಗಲೆ, ಬಡ ಮಕ್ಕಳಿಗೆ ಮೀಸಲಾದ ದೊಡ್ಡ ಆಲಯವಾಗುತ್ತದೆ. ಆ ಮೂಲಕ ಹೊಸ ಪರಂಪರೆಗೆ ಆ ಗುರುಶಿಷ್ಯರು ಕಾರಣರಾಗುತ್ತಾರೆ.

ಏಷ್ಟೋ ವರ್ಷಗಳ ಹಿಂದೆ ಓದಿದ ಈ ಕಥೆ, ಸಲ್ಮಾನ್ ಖಾನನ `ಜೈ ಹೋ ' ಸಿನಿಮಾ ನೋಡಿದಾಗ ನೆನಪಾಯಿತು.

Monday 9 December 2013

‘ನಟರಂಗ್’ ಎಂಬ ಅದ್ಭುತ ಮರಾಠಿ ಸಿನಿಮಾ



ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಕೆಲವು ಸಿನಿಮಾಗಳಲ್ಲಿ ನನ್ನನ್ನು ಅತ್ಯಂತ ಕಾಡಿದ ಸಿನಿಮಾವೆಂದರೆ ಮರಾಠಿಯ ನಟರಂಗ್’ ಚಿತ್ರ. ಸಿನಿಮಾವನ್ನು ಕಳೆದ ಒಂದು ವಾರದಲ್ಲೇ ನಾಲ್ಕೈದು ಬಾರಿ ನೋಡಿಬಿಟ್ಟೆ. ಚಿತ್ರದ ಒಂದೊಂದು ಸನ್ನಿವೇಶಗಳು, ನಾಯಕನ ಅಭಿನಯ, ಸಂಗೀತವು ನೋಡುಗರನ್ನು ಸೆಳೆದುಕೊಂಡು ನೋಡಿಸಿಕೊಂಡು ಹೋಗುತ್ತದೆ. ಅದ್ಭುತ ಹಾಗೂ ಮನಸ್ಸಿಗೆ ತುಂಬಾ ನಾಟುವಂತಹ, ಬದುಕಿಗೆ ತುಂಬಾ ಹತ್ತಿರವಾದಂತಹ ಸಿನಿಮಾ ಅಂತ ಹೇಳಬಹುದು. ಇಡೀ ಸಿನಿಮಾ ನೋಡಿದ ಮೇಲೆ ಯಾರಿಗೇ ಆಗಲಿ ಒಂದು ಅಮೂರ್ತವಾದಂತಹ ಅನುಭವ ನಿಮ್ಮನ್ನು ಕಾಡದೇ ಬಿಡದು. ‘ನಟರಂಗ್’ ಚಿತ್ರದಲ್ಲಿ ಯಾವ ವಿಭಾಗ ಚೆನ್ನಾಗಿಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ.  ನಟಿಸಿದ ಎಲ್ಲ ನಾಯಕ ನಾಯಕಿಯರು, ಕಲಾವಿದರು, ಸಹಕಲಾವಿದರು, ನಿರ್ದೇಶನ, ಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತ ನಿರ್ದೇಶನ, ಸಂಕಲನ, ಮೇಕಪ್ ಉಡುಗೆತೊಡುಗೆ ಹೀಗೆ ಎಲ್ಲರೂ ಎಲ್ಲ ರೀತಿಯಿಂದಲೂ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಚಿತ್ರದ ಕಥೆಯೇ ಅಂತಹ ದೊಡ್ಡ ಶಕ್ತಿಯನ್ನು ಹೊಂದಿದೆ. 
 
ಸಿನಿಮಾದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಮರಾಠಿ ಚಿತ್ರರಂಗದ ಬಗ್ಗೆ ಎರಡು ಮಾತನ್ನು ಹೇಳಲೇಬೇಕು. ಮರಾಠಿ ಚಿತ್ರರಂಗ ಬಾಂಬೆಯಲ್ಲೇ ನೆಲೆಸಿದ್ದರೂ, ಬಾಲಿವುಡ್‌ನ ಅಬ್ಬರದ ನಡುವೆ ಅದು ತನ್ನ ಅಸ್ಥಿತ್ವಕ್ಕಾಗಿ ಇಂದಿಗೂ ತುಂಬಾ ಹೆಣಗಾಡುತ್ತಿದೆ. ಮರಾಠಿ ಚಿತ್ರರಂಗ ಸತ್ತೇ ಹೋಯಿತು ಅಂತ  ಹೆಚ್ಚಿನವರು ಮಾತನಾಡಿದ್ದು ಕೂಡ ಉಂಟು. ಈ ಹಿಂದೆ ಮರಾಠಿ ಚಿತ್ರರಂಗದಲ್ಲಿ ಮೂಡಿ ಬರುತ್ತಿದ್ದ ಹೆಚ್ಚು ಸಿನಿಮಾಗಳು ಈಗ ನಿರ್ಮಾಣವಾಗುತ್ತಿಲ್ಲ. ಸಿನಿಮಾಗಳ ನಿರ್ಮಾಣ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ ಅಂತ ಹೇಳುವುದುಂಟು. ಮರಾಠಿ ಸಿನಿಮಾಗಳ ಬೆಳವಣಿಗೆಗೆ ಹಿಂದಿ ಸಿನಿಮಾಗಳೇ ನೇರ ಕಾರಣ ಅನ್ನುವವರಿದ್ದಾರೆ. ಇದರ ನಡುವೆಯೂ ಒಳ್ಳೆಯ ಮರಾಠಿ ಚಿತ್ರಗಳಿಗೆ ಥಿಯೇಟರ್‌ಗಳು, ಜನರ ಪ್ರೋತ್ಸಾಹ ಸಿಗದೇ ನಿರ್ಮಾಪಕರು, ನಿರ್ದೇಶಕರು ನಷ್ಟ ಅನುಭವಿಸಿದ್ದರು. ಪ್ರಸ್ತುತ ಮರಾಠಿ ಚಿತ್ರರಂಗದಲ್ಲಿ ಪ್ರತಿವರ್ಷ ಸುಮಾರು ೪೦-೫೦ರಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕೆಲವೊಮ್ಮೆ ಇವುಗಳ ಸಂಖ್ಯೆ ಕಡಿಮೆಯಾದದ್ದು ಕೂಡ ಉಂಟು. ಇಂತಹ ಹತ್ತು ಹಲವು ಸವಾಲುಗಳ ನಡುವೆಯೂ ರಾಷ್ಟ್ರಮಟ್ಟದ
ಲ್ಲಿ ಗುರುತಿಸಿಕೊಳ್ಳುವಂತಹ ಅದ್ಭುತ ಸಿನಿಮಾಗಳು ನಿರ್ಮಾಣವಾಗುವುದುಂಟು. ಮರಾಠಿ ಸಿನಿಮಾಗಳು ಆಸ್ಕರ್‌ಗೆ ನಾಮಿನೇಟ್ ಕೂಡ ಆಗಿವೆ. ಈ ವರ್ಷ ಕೂಡ ಹೀಗೆ ಮರಾಠಿ ಚಿತ್ರರಂಗದಲ್ಲಿ ಅರಳಿದ ಅತಿಶ್ರೇಷ್ಟ ಚಿತ್ರಗಳಲ್ಲಿ ಅತುಲ್ ಕುಲಕರ್ಣಿ ಅಭಿನಯದ ‘ನಟರಂಗ್’ ಚಿತ್ರ ಕೂಡ ಒಂದು.
ಮೊದಲೇ ಹೇಳಿದಾಗೆ ಚಿತ್ರದ ಕಥೆಯೆ ಅಷ್ಟು ಚೆನ್ನಾಗಿದೆ. ನಮ್ಮ ಕರ್ನಾಟಕದಂತೆಯೇ, ಮರಾಠಿ ರಂಗಭೂಮಿ ಕೂಡ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಕಾಲಘಟ್ಟ ಕೂಡ ಸುಮಾರು ೫೦ ವರ್ಷಗಳ ಹಿಂದೆಯೇ ತೆರೆದುಕೊಳ್ಳುತ್ತೆ. ಚಿತ್ರದ ಆರಂಭದಲ್ಲಿ ಅಸಂಖ್ಯ ಜನರ ಚಪ್ಪಾಳೆ, ಕೂಗಾಟದ ನಡುವೆ ದೊಡ್ಡ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿಯಿಂದ ಪ್ರಾರಂಭವಾಗುವ ಸನ್ನಿವೇಶ, ಇಷ್ಟು ದೊಡ್ಡ ಗೌರವವನ್ನು ಪಡೆದಂತಹ ವ್ಯಕ್ತಿ ಯಾರು, ಆತನಿಗೆ ಯಾಕೆ ಈ ಪ್ರಶಸ್ತಿ ನೀಡುತ್ತಿದ್ದಾರೆ ಅನ್ನುವ ಕುತೂಹಲದಿಂದ ಕಥೆ ಪ್ರಾರಂಭವಾಗುತ್ತದೆ. ಹಳ್ಳಿಯ ಕೂಲಿ ಕೆಲಸದವನಾಗಿದ್ದ ಗುಣನಿಗೆ ದಿನದಲ್ಲಿ ಮೂರೂತ್ತೋ ಹೊಲಗದ್ದೆಗಳಿಗೆ ನೀರನ್ನು ಹೊತ್ತು ಹಾಕುವುದೇ ಕೆಲಸ. ಆಗೆಲ್ಲಾ ಹಳ್ಳಿಗಳಲ್ಲಿ ಮೋಟಾರ್‌ಗಳು ಇರದೇ ಇರುವುದರಿಂದ ಕೂಲಿಗಳೆ ನೀರು ಹೊತ್ತು ಗದ್ದೆಗಳಿಗೆ ಹಾಕುತ್ತಿದ್ದರು. ನಾಯಕ ಗುಣ ನೋಡಲು ಪೈಲ್ವಾನನ ರೀತಿ ಇರುತ್ತಾನೆ. ದಷ್ಟಪುಷ್ಟವಾಗಿ ಬೆಳೆದಿರುತ್ತಾನೆ. ಇಡೀ ಹಳ್ಳಿಯಲ್ಲಿ ಅವನ ರೀತಿ ಯಾರು ಇರುವುದಿಲ್ಲ. ಅವನ ಅಜಾನುಬಾಹುವಂತಹ ದೇಹ,ನಾಯಕಮೀಸೆಗೆ ಮನಸೋಲದವರು ಆ ಹಳ್ಳಿಯಲ್ಲೇ ಇರುವುದಿಲ್ಲ. ಅಂತಹ ಆಳ್ತನ ನಾಯಕನದ್ದು.  ಹೀಗೆ ಕೂಲಿ ಕೆಲಸದಿಂದ ಹೆಂಡತಿ ಮಕ್ಕಳ ಜೊತೆ ಸಂಸಾರ ಮಾಡುತ್ತಿದ್ದ ಗುಣನಿಗೆ ವಿಪರೀತ ನಾಟಕ ಹುಚ್ಚು, ತಾನು ನಾಟಕದಲ್ಲಿ ಅಭಿನಯಿಸಬೇಕು, ರಾಜನ ಪಾತ್ರ, ಮಹಾಭಾರತದ ಅರ್ಜುನನ ಪಾತ್ರ ಮಾಡಬೇಕೆಂಬ ಅದಮ್ಯ ಆಸೆ ಅವನಿಗೆ. ಎಲ್ಲಾದರೂ ನೃತ್ಯ, ನಾಟಕ ಇದೆಯೆಂದರೆ ಸಾಕು, ತನ್ನ ಸ್ನೇಹಿತರೊಡನೆ ಹೋಗಿ ನೋಡಿಕೊಂಡು ಬರುವ ವ್ಯಕ್ತಿ. ಅಷ್ಟೊಂದು ನಾಟಕದ ಹುಚ್ಚು ಅವನಿಗೆ.  
  ಒಮ್ಮೆ ನಾಯಕ ಗುಣ ವಾಸಿಸುತ್ತಿದ್ದ ಹಳ್ಳಿಯ ಹೊಲಗಳಿಗೆ ನೀರು ಹಾಕುವ ಮೋಟಾರುಗಳು ಬಂದ ಮೇಲೆ, ಕೂಲಿ ಮಾಡುವ ಗುಣನಿಗೆ ಕೆಲಸವಿಲ್ಲದಂತಾಗುತ್ತದೆ. ಎಲ್ಲಿಯೂ ಕೂಲಿ ಕೆಲಸ ಸಿಗುವುದಿಲ್ಲ. ಆಗ ಆತನ ಜೊತೆ ಕೂಲಿ ಕೆಲಸ ಮಾಡುತ್ತಿದ್ದವರೆಲ್ಲಾ ನಾಟಕದಲ್ಲಿ ಆಸಕ್ತಿ ಇದ್ದವರೇ, ತಾವೇ ಯಾಕೆ ಒಂದು ನಾಟಕ ಕಂಪನಿ ಪ್ರಾರಂಭ ಮಾಡಬಾರದು ಅಂತಂದುಕೊಂಡು ನಾಟಕ ಕಂಪನಿ ಶುರುಮಾಡುತ್ತಾರೆ. ಅವರ ತಂಡಕ್ಕೆ ಆಗಲೇ ನಾಟಕದಲ್ಲಿ ಕೆಲಸ ಮಾಡಿದ್ದ ಅದೇ ಊರಿನ ವ್ಯಕ್ತಿ ಸೇರಿಕೊಳ್ಳುತ್ತಾನೆ. ನಾಟಕ ಮಂಡಳಿ ಕಟ್ಟಲು ಹಣವಿರುವುದಿಲ್ಲ. ನಾಟಕದ ಪರಿಕರಗಳಿಗಾಗಿ ಅವರವರ ಮನೆಯಿಂದ ಅದು ಇದು ಕದಿಯಲಿಕ್ಕೆ ಪ್ರಾರಂಭಿಸುತ್ತಾರೆ. ಬರೀ ಗಂಡಸರೇ ಇದ್ದ ಮಂಡಳಿಗೆ ಒಂದು ಹೆಣ್ಣು ಬೇಕೆ ಬೇಕು ಅಂತ ನಿರ್ದೇಶಕ ಹೇಳುತ್ತಾನೆ. ಇಡೀ ಊರು ಅಲಿಯುತ್ತಾರೆ. ಯಾವ ಮನೆಯ ಹೆಣ್ಣುಮಕ್ಕಳು ಅವರ ನಾಟಕದಲ್ಲಿ ಅಭಿನಯಿಸಲು ಬರುವುದಿಲ್ಲ. ದೊಡ್ಡ ನಿರಾಸೆ ಕಾಡತೊಡಗುತ್ತದೆ. ನಾಯಕ ಗುಣನಿಗೆ ಹೇಗಾದರೂ ಮಾಡಿ ನಾಟಕ ಮಂಡಳಿ ಕಟ್ಟಿ ಅಭಿನಯಿಸಬೇಕೆಂಬ ಆಸೆ ಇರುತ್ತದೆ. ಕೊನೆಗೂ ಕೊಲ್ಲಾಪುರದಲ್ಲಿ ನಾಟಕ, ನೃತ್ಯದ ಹಿನ್ನಲೆ ಇರುವ ಹುಡುಗಿ ಸಿಗುತ್ತಾಳೆ. ಆಕೆ ಇವರ ತಂಡದಲ್ಲಿ ಸೇರಲಿಕ್ಕೆ ಒಪ್ಪುತ್ತಾಳೆ. ಸೇರುವುದಕ್ಕೂ ಮುನ್ನ ಆಕೆಯ ತಾಯಿ ಎರಡು ಕಂಡಿಷನ್ ಹಾಕುತ್ತಾಳೆ. ಮೊದಲನೇ ಕಂಡೀಷನ್ ಪ್ರಕಾರ ನಾಟಕದ ಲಾಭದಲ್ಲಿ ಆಕೆಗೂ ಒಂದು ಪಾಲು ನೀಡಬೇಕು, ಎರಡನೇಯದ್ದು ನಾಟಕದಲ್ಲಿ ಯಾರಾದರೂ ಒಬ್ಬರು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಬೇಕು. ಎಲ್ಲರಿಗೂ ಆಶ್ಚರ್‍ಯ. ಮೊದಲನೆಯ ಕರಾರಿಗೆ ಒಪ್ಪಿದರಾದರೂ, ಎರಡನೇ ಕರಾರಿನಂತೆ ಯಾರೋಬ್ಬರು ನಾಟಕದಲ್ಲಿ ಹಿಜಡಾ ಪಾತ್ರ  ಮಾಡಲು ಒಪ್ಪಲಿಲ್ಲ. ಯಾರು ಮಾಡದಿದ್ದರೆ ನಾವು ವಾಪಾಸ್ ಹೋಗುತ್ತೇವೆ ಅಂತ ಆಕೆಯ ತಾಯಿ ಹೇಳುತ್ತಾಳೆ. ನಾಯಕ ಗುಣನಿಗೆ ತನ್ನ ಕನಸು ಸತ್ತು ಹೋಗುತ್ತಿದೆಯೆಲ್ಲ ಅನ್ನುವ ಚಿಂತೆ ಕಾಡಲಾರಂಬಿಸುತ್ತದೆ. ತಂಡದಲ್ಲಿ ಯಾರೋಬ್ಬರೂ ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲಿಕ್ಕೆ ಒಪ್ಪುವುದಿಲ್ಲ. ಕೊನೆಗೆ ನಾಯಕಿಯನ್ನು ಕರೆದುಕೊಂಡು ಬಂದಿದ್ದ ನಿರ್ದೇಶಕ ಮಾತ್ರ ಗುಣನಿಗೆ ನೀನೇ ಆ ಪಾತ್ರ ಮಾಡು ಅಂತ ಬಲವಂತ ಮಾಡುತ್ತಾನೆ. ಇಲ್ಲವಾದರೆ ನಾಟಕ ಕಂಪನಿ ಕಟ್ಟಬೇಕೆಂಬ ಆಸೆ ಬಿಟ್ಟು ಬಿಡು ಅಂತ ಹೇಳುತ್ತಾನೆ. ನಾಯಕ ಗುಣನಿಗೆ ನಾಟಕದಲ್ಲಿ ರಾಜ, ಅರ್ಜುನ ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಈಗ ಅದು ಕೂಡ ಆಗುವುದಿಲ್ಲವಲ್ಲ ಅನ್ನುವ ನೋವು ಕಾಡಲಾರಂಭಿಸುತ್ತದೆ. ಕೊನೆಗೆ ತನ್ನ ಕನಸಿನ ನಾಟಕ ಕಂಪನಿಯನ್ನು ಉಳಿಸಿಕೊಳ್ಳಬೇಕೆಂಬ ಆಸೆಯಿಂದ ತನ್ನೆಲ್ಲಾ ಆಸೆನೋವುಗಳನ್ನು ಬದಿಗಿಟ್ಟು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲು ಒಪ್ಪಿಕೊಳ್ಳುತ್ತಾನೆ. ಗುಣ ನೋಡಲಿಕ್ಕೆ ಬಲಭೀಮನಂತೆ ಆಜಾನುಬಾಹು ದೇಹದ ಪೈಲ್ವಾನನಂತೆ ಇರುತ್ತಾನೆ. ಹಿಜಡಾ ಪಾತ್ರಧಾರಿಗೆ ಬೇಕಾಗಿರುವುದು ಕೃಶ ದೇಹ, ಹೆಣ್ಣುಮಕ್ಕಳ ಸೊಂಟದಂತೆ ದೇಹವನ್ನು ಬದಲಾಯಿಸಿಕೊಳ್ಳುವುದು. ನಾಯಕ ಗುಣ ತನ್ನ ಕನಸಿಗಾಗಿ ಹಿಜಡಾ ಆಗಿ ಪರಿವರ್ತಿತನಾಗುತ್ತಾನೆ. ಹೆಣ್ಣುಮಕ್ಕಳ ಹಾವಭಾವ, ನೃತ್ಯ, ಹಿಜಡಾಗಳು ವರ್ತಿಸುವ ರೀತಿ, ಮಾತನಾಡುವ ಶೈಲಿ, ಅವರಂತೆ ದನಿ ಎಲ್ಲವನ್ನೂ ರೂಢಿಸಿಕೊಳ್ಳುತ್ತಾನೆ. ನೋಡಲು ಪೈಲ್ವಾನನಂತೆ ಇದ್ದವನು ಪಾತ್ರದ ಆಳಕ್ಕೆ ಹೋದಂತೆ ಸಂಪೂರ್ಣವಾಗಿ ಬದಲಾಗಿ ಕೃಶ ದೇಹದವನಾಗಿ, ಮೀಸೆ ಬೋಳಿಸಿಕೊಂಡು, ಅತ್ತ ಗಂಡಸು ಅಲ್ಲದ, ಹೆಣ್ಣು ಅಲ್ಲದ ವ್ಯಕ್ತಿಯ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಪಾತ್ರಕ್ಕಾಗಿ ನಾಯಕಿಯಿಂದ ನೃತ್ಯ ಕಲಿಯುತ್ತಾನೆ. ಚಿತ್ರದ ನಾಯಕಿ ಎಲ್ಲ ರೀತಿಯಿಂದಲೂ ಆತನನ್ನು ತಯಾರಿ ಮಾಡುತ್ತಾಳೆ. ಅವರ ಮೊದಲ ನಾಟಕ ಪ್ರಾರಂಭವಾಗುವುದರೊಳಗೆ ನಾಯಕ ಗುಣ, ನಾಟಕದಲ್ಲಿ ಬರುವ ಪ್ರಮುಖ ಹಿಜಡಾ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಅವರ ಹಳ್ಳಿಯಲ್ಲೇ ಅಭಿನಯಿಸಿದ ಮೊದಲ ನಾಟಕ ಎಲ್ಲರ ಮನಸೂರೆಗೊಳ್ಳುತ್ತದೆ. ಅಕ್ಕ ಪಕ್ಕದ ಹಳ್ಳಿ, ಊರುಗಳಿಂದ ಇವರ ನಾಟಕ ಕಂಪನಿಗೆ ಆಹ್ವಾನ ಸಿಗತೊಡಗುತ್ತದೆ. 
ಗುಣನ ನಾಟಕ ಕಂಪನಿಗೆ ಒಳ್ಳೆಯ ಹೆಸರು ಬರುವುದರೊಳಗೆ ಆತನ ವೈಯಕ್ತಿಕ ಬದುಕು ಮೂರಾಬಟ್ಟೆಯಾಗಿರುತ್ತದೆ. ತನ್ನ ಗಂಡ ನಾಟಕದಲ್ಲಿ ಹಿಜಡಾ ಪಾತ್ರ ಮಾಡುತ್ತಿದ್ದಾನೆ ಅನ್ನುವ ನೋವು ಆಕೆಯನ್ನು ವಿಪರೀತ ಕಾಡುತ್ತಿರುತ್ತದೆ. ಊರಲ್ಲಿರುವ ಹೆಂಗಸರು, ಗಂಡಸರು, ಮಕ್ಕಳು ಆಕೆಯನ್ನು ಅವಮಾನ ಮಾಡುತ್ತಿರುತ್ತಾರೆ. ಗುಣನ ತಂದೆಗೂ ಕೂಡ ಮಗ ನಾಟಕದ ಹುಚ್ಚು ಅಂಟಿಸಿಕೊಂಡು ಹಾಳಾಗುತ್ತಿದ್ದಾನೆ ಅಂತ ನೋವನ್ನು ಅನುಭವಿಸುತ್ತಿರುತ್ತಾನೆ. ಅದೇ ಕೊರಗಿನಲ್ಲಿ ಹಾಸಿಗೆ ಹಿಡಿಯುತ್ತಾನೆ. ಆತನ ಮಾವ ಕೂಡ ನಾಟಕ ಬಿಟ್ಟು ಬೇರೆ ಬದುಕು ಮಾಡು ಅಂತ ಕಾಲು ಹಿಡಿಯುತ್ತಾನೆ, ಮನೆಯಲ್ಲಿ ಇಷ್ಟೇಲ್ಲಾ ವಿರೋಧ ಬಂದರೂ, ಗುಣ ಮಾತ್ರ ನಾಟಕದ ಮೇಲಿನ ಹುಚ್ಚಿನಿಂದ ಯಾವುದಕ್ಕೂ ಒಪ್ಪುವುದಿಲ್ಲ. ಇದರ ಪ್ರತಿಫಲವಾಗಿ ಕಟ್ಟಿಕೊಂಡ ಹೆಂಡತಿ ಆತನ ಮುಖಕ್ಕೆ ಕಟ್ಟಿದ ತಾಳಿ ಎಸೆದು ಹೊರಗೆ ಹಾಕುತ್ತಾಳೆ.  ಹುಟ್ಟಿಸಿದ ಮಗ ಕೂಡ ಅಪ್ಪನ ಮುಖಕ್ಕೆ ಉಗುಳಿ, ನೀನು ನನ್ನ ಅಪ್ಪನೇ ಅಲ್ಲ ಅಂತ ಹೇಳುತ್ತಾನೆ. ಮಗ ನಾಟಕ ಸೇರಿ ಹಾಳಾದನಲ್ಲ ಅನ್ನುವ ಕೊರಗಿನಲ್ಲೇ ತಂದೆ ಕೂಡ ತೀರಿಕೊಳ್ಳುತ್ತಾನೆ.  ತಂದೆ ತೀರಿಕೊಂಡ ಸಮಯದಲ್ಲಿಯೂ ಅಪ್ಪನ ಅಂತ್ಯಕ್ರಿಯೆಗೆ ಹೋಗದೇ ಇರೋ ಪರಿಸ್ಥಿತಿಯಲ್ಲಿ ನಾಯಕ ಸಿಕ್ಕಿಹಾಕಿಕೊಳ್ಳುತ್ತಾನೆ.  ಹೀಗೆ ನಾಟಕದ ಹುಚ್ಚಿನಿಂದಾಗಿ ವೈಯಕ್ತಿಕ ಬದುಕು ಹಾಳಾಗಿ ಹೋಗುತ್ತದೆ. ಒಳಗೊಳಗೆ ದೊಡ್ಡ ನೋವನ್ನು ಅನುಭವಿಸತೊಡಗುತ್ತಾನೆ. 
ಒಳಗೊಳಗೆ ತಾನೊಬ್ಬ ಗಂಡಸು ಅನ್ನುವ ಭಾವದೊಂದಿಗೆ ಆತ ಇದ್ದರೂ, ಕೆಲವು ಸಂದರ್ಭಗಳಲ್ಲಿ ಆತನ ಹಿಜಡಾಗಳಂತಯೇ ವರ್ತಿಸಬೇಕಾದ ಪರಿಸ್ಥಿತಿ ಆತನಿಗೆ ಒದಗುತ್ತದೆ. ಈತನ ನಾಟಕ ಕಂಪನಿಯ ಪ್ರದರ್ಶನದ ವಿಚಾರದಲ್ಲಿ ಎರಡು ರಾಜಕೀಯ ನಾಯಕರುಗಳ ನಡುವೆ ಗಲಾಟೆ ಆಗುತ್ತದೆ. ತನಗೆ ಗುಣ ಅವಮಾನ ಮಾಡಿದ ಅನ್ನುವ ಸೇಡಿನಲ್ಲಿ ಇನ್ನೊಬ್ಬ ರಾಜಕೀಯ ವ್ಯಕ್ತಿ ಈತನ ನಾಟಕ ಕಂಪನಿಗೆ ಬೆಂಕಿ ಹಚ್ಚುತ್ತಾನೆ. ಆತನ ಕಂಪನಿ ಸಂಪೂರ್ಣವಾಗಿ ಭಸ್ಮವಾಗುತ್ತದೆ. ಅದೇ ನೋವಿನಲ್ಲಿರುವಾಗಲೇ ಆತನ ಮೇಲೆ ರಾಜಕೀಯ ವ್ಯಕ್ತಿ ಮತ್ತು ಆತನ ಬೆಂಬಲಿಗರು ಬಲಾತ್ಕಾರ ಮಾಡುತ್ತಾರೆ.  ಈತನ ಮೇಲೆ ಮಾನಭಂಗ ಮಾಡಿದ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಆಗಲೇ ಈತನ ಹೆಂಡತಿ, ಮಗ ಇವನಿಂದ ದೂರವಾಗುತ್ತಾರೆ. ಒಂದು ಹಂತದಲ್ಲಿ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗುತ್ತಾನೆ. ಕಂಪನಿಯಲ್ಲಿದ್ದ ಆತನ ಜೊತೆಗಾರರೆಲ್ಲಾ ದೂರವಾಗುತ್ತಾರೆ. ಬನ್ನಿ ಮತ್ತೊಮ್ಮೆ ನಾಟಕ ಕಂಪನಿ ಮಾಡೋಣ ಅಂತ ಹೇಳುತ್ತಾನೆ ಯಾರು ಆತನ ಹಿಂದೆ ಬರುವುದಿಲ್ಲ. ಇಡೀ ಪ್ರಪಂಚವೇ ತನ್ನ ವಿರುದ್ಧವಾಗಿದೆ ಅಂತಂದುಕೊಳ್ಳುತ್ತಾನೆ. ಅಂತಹ ಕೊನೆ ಕ್ಷಣದಲ್ಲಿ ಆತನ ಕೈಹಿಡಿಯುವಳೊಬ್ಬಳೇ ಕತೆಯ ನಾಯಕಿ ನೈನಾ. ಗುಣನಿಗೆ ಗುರುವಾಗಿ ನೃತ್ಯ, ಅಭಿನಯವನ್ನು ಕಲಿಸಿಕೊಟ್ಟಿದ್ದ ಆಕೆಯನ್ನು ಆಂತರಂಗಿಕವಾಗಿ ಗುಣ ತುಂಬಾ ಪ್ರೀತಿಸುತ್ತಿದ್ದ. ಆಕೆಯೂ ಕೂಡ ಈತನ ಮೇಲೆ ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿರುತ್ತಾಳೆ. ಅವರಿಬ್ಬರ ನಡುವೆ ದೇಹಸಂಬಂಧ ಕೂಡ ಬೆಳೆದಿರುತ್ತದೆ. ನನ್ನನ್ನು ಮದುವೆಯಾಗು ಅಂತ ಕೇಳಿರುತ್ತಾಳೆ. ನಾಟಕದಲ್ಲಿ ಹಿಜಡಾ ಪಾತ್ರ ಮಾಡುವ ನಿನ್ನನ್ನು ಮದುವೆಯಾಗಿ ಇಡೀ ಸಮಾಜವನ್ನು ನಾನು ಎದುರಿಸಲಾರೆ ಅಂತ ಹೇಳುತ್ತಾನೆ. ತನ್ನ ಇಷ್ಟೆಲ್ಲಾ ನೋವುಗಳಿಗೆ ತನಗಿರುವ ನಾಟಕದ ಹುಚ್ಚು ಮತ್ತು ಮಾಡುತ್ತಿದ್ದ ಹಿಜಡಾ ಪಾತ್ರವೇ ಕಾರಣ ಅನ್ನುವುದು ಆತನಿಗೆ ಮನವರಿಕೆಯಾಗಿರುತ್ತದೆ. ಆದರೂ ನಿಸ್ಸಾಹಯಕನಂತೆ ಬದುಕುವ ಪರಿಸ್ಥಿತಿಯಲ್ಲಿ ಇರುತ್ತಾನೆ.  
ಕಥೆಯ ಕೊನೆಯಲ್ಲಿ ನಾಯಕಿ ನೈನಾಳೇ ಆತನ ಕನಸುಗಳಿಗೆ ಹೆಗಲು ಕೊಡುತ್ತಾಳೆ. ಇವರಿಬ್ಬರೇ ಸೇರಿ ಎರಡೇ ಪಾತ್ರಗಳನ್ನು ಇಟ್ಟುಕೊಂಡು ನಾಟಕಗಳನ್ನು, ನೃತ್ಯಗಳನ್ನು ಮಾಡುತ್ತಾ ದೊಡ್ಡ ಹೆಸರು ಮಾಡತೊಡಗುತ್ತಾರೆ. ನೋಡ ನೋಡುತ್ತಿದ್ದಂತಯೇ ಗುಣನ ಹೆಸರು ನಾಟಕ, ನೃತ್ಯರಂಗದಲ್ಲಿ ದೊಡ್ಡ ಹೆಸರು ಆಗುತ್ತದೆ. ಅನೇಕಾನೇಕ ಪ್ರತಿಷ್ಟಿತ ಪ್ರಶಸ್ತಿಗಳು ಆತನನ್ನು ಅರಸಿ ಬರುತ್ತವೆ. ನೈನಾ ಮತ್ತು ಗುಣ ಇವರಿಬ್ಬರೂ ಸೇರಿ ಸಾವಿರಾರು ಪ್ರದರ್ಶನಗಳನ್ನು ಮಾಡುತ್ತಾರೆ. ಅಲ್ಲಿಯರೆಗೂ ಕೇವಲ ಹಿಜಡಾ ಪಾತ್ರವನ್ನು ಮಾಡುತ್ತಿದ್ದ ಗುಣ, ತನಗಿರುವ ಇಮೇಜನ್ನು ಬದಲಿಸಿಕೊಳ್ಳಲು ಎಲ್ಲ ರೀತಿಯ ಪಾತ್ರಗಳನ್ನು, ವೇಷಭೂಷಣಗಳನ್ನು ಹಾಕಿಕೊಳ್ಳತೊಡಗುತ್ತಾನೆ. ಜನರು ಎಲ್ಲ ಪಾತ್ರದಲ್ಲೂ ಆತನನ್ನು ಇಷ್ಟಪಡತೊಡಗುತ್ತಾರೆ. ಯಾವ ಕಲೆಯನ್ನು ನಂಬಿ, ಹೆಂಡತಿ, ಮಕ್ಕಳು ಎಲ್ಲ ರಕ್ತಸಂಬಂಧಗಳಿಂದ ದೂರವಾಗಿದ್ದನೋ, ಅದೇ ಗುಣ ಸಾವಲ್ಕರ್ ಮುಂದೊಂದು ದಿನ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸುತ್ತಾರೆ. ದೊಡ್ಡ ಸಾಧಕನೆಂದು ಬಿರುದಾಂಕಿತರಾಗುತ್ತಾನೆ.
ಇಡೀ ಚಿತ್ರದ ಕೇಂದ್ರಬಿಂದುವೇ ಗುಣನ ಪಾತ್ರದಲ್ಲಿ ಮಿಂಚಿದ ಅತುಲ್ ಕುಲಕರ್ಣಿ. ಇಡೀ ಪಾತ್ರದ ಅಂತರಂಗವನ್ನು ಹೊಕ್ಕು ಅಭಿನಯಿಸಿದ್ದಾರೆ. ಪೈಲ್ವಾನನ ಪಾತ್ರಕ್ಕೆ ಅವರ ದೇಹವನ್ನು ಹೊಂದಿಸಿಕೊಂಡಿದ್ದಕ್ಕೂ, ಹಿಜಡಾ ಪಾತ್ರಕ್ಕೆ ತಮ್ಮ ದೇಹವನ್ನು ಮೌಲ್ಡ್ ಮಾಡಿಕೊಂಡಿದ್ದು ಅವರು ಪಾತ್ರಕ್ಕೆ ಎಷ್ಟು ಬದ್ಧರಾಗಿದ್ದಾರೆ ಅನ್ನುವುದನ್ನು ತೋರಿಸುತ್ತದೆ. ಪೈಲ್ವಾನನಂತೆ ಇರುವಾಗ ಪೈಲ್ವಾನನಂತೆಯೂ, ಹಿಜಡಾ ಆಗಿ ಅಭಿನಯಿಸುವಾಗ ಅವರಂತಯೇ ಕಾಣುವಂತೆ ತಮ್ಮ ದೇಹವನ್ನು ದಂಡಿಸಿಕೊಂಡಿದ್ದಾರೆ. ಅತುಲ್ ಕುಲಕರ್ಣಿ ನಟರಂಗ್ ಚತ್ರದಲ್ಲಿನ ತಮ್ಮ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ೨೦೧೦ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಮಹಾರಾಷ್ಟ್ರದಲ್ಲಿ ಸುಮಾರು ೨೦ ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಚಿತ್ರದ ಸಂಗೀತವು ಕೂಡ ಅತುಲ್ ಕುಲಕರ್ಣಿಯ ಅಭಿನಯದಷ್ಟೇ ಇಷ್ಟವಾಗುತ್ತದೆ. ಸಾಂಪ್ರದಾಯಿಕ ಮರಾಠಿ ನೃತ್ಯಗಳಿಗೆ ಹೊಂದುವ ಹಾಡುಗಳು, ರಂಗಗೀತೆಗಳು, ಹಾಡುಗಳ ಒಂದಕ್ಕೊಂದು ಚೆನ್ನಾಗಿವೆ. ಎಲ್ಲ ಹಾಡುಗಳು ಕೇಳಲು ಇಂಪಾಗಿವೆ. ಹಿನ್ನಲೆ ಸಂಗೀತ ಕೂಡ ಪ್ರತಿ ಸನ್ನಿವೇಶವನ್ನು ಎತ್ತಿ ಹಿಡಿಯುತ್ತದೆ. 
ಒಟ್ಟಾರೆಯಾಗಿ ನಟರಂಗ್ ಸಿನಿಮಾ ವಿಭಿನ್ನ ಅನುಭವವನ್ನು ನೀಡುವಂತಹ ಸಿನಿಮಾ. ಸಾಧ್ಯವಾದರೆ ಈ ಸಿನಿಮಾವನ್ನು ತಪ್ಪದೇ ನೋಡಿ.