Thursday 22 December 2011

ಜೈಲಿನ ಭೋಗ, ಸೂಪರ್ ಸ್ಟಾರ್ ಯೋಗ ! ಕನ್ನಡದಲ್ಲಿ ದರ್ಶನ್ ಗೆ ಮಾತ್ರ!! ಬಾಲಿವುಡ್ ನಲ್ಲಿದ್ದ ಲಕ್ ಈಗ ಸ್ಯಾಂಡಲ್ ವುಡ್ ನಲ್ಲಿ


  ದರ್ಶನ್ ದುನಿಯಾದಲ್ಲಿ ಒಂದು ಪಯಣ: ನೋವಿನ ತಟ್ಟೆಯಲ್ಲಿ ಮೃಷ್ಟಾನ್ನ ಭೋಜನ!!!


ಸಿನಿಮಾ ಸ್ಟಾರ್ ಗಳು ಜೈಲಿಗೆ ಹೋಗಿ ಬರುವುದು ಸಾಮಾನ್ಯ. ಸ್ಟಾರ್ ಪಟ್ಟ  ತಲೆಗೇರಿಸಿಕೊಂಡ ಅನೇಕ ಸ್ಟಾರ್ ನಟರುಗಳು ಕೆಲವು ಕಾನೂನು ಬಾಹಿರ ಚಟುವಟಿಕೆ, ಕೊಲೆ, ಹತ್ಯೆ, ಮೋಸ, ವರದಕ್ಷಿಣೆ ಕಿರುಕುಳ, ಸೈಖೋಗಳಂತೆ ವರ್ತಿಸುವುದು 
 ಹೀಗೆ ಇನ್ನು ಹಲವು ಕೆಟ್ಟ ದಂಧೆಗಳಲ್ಲಿ ಒಳಗೊಂಡು ಜೈಲಿಗೆ ಹೋಗಿ, ರಾಗಿ ಮುದ್ದೆ, ಬಸ್ಸಾರು ಮುರಿದು ಮನೆಗೆ ಬಂದ ಮೇಲೆ ಮತ್ತೇ ಸ್ಟಾರ್ ಗಳಾಗಿ ಸಿನಿಮಾಗಳಲ್ಲಿ ಮಿಂಚುತ್ತಾ, ಕ್ರಿಮಿನಲ್ ಎಂಬ ಹಣೆಪಟ್ಟೆಯನ್ನು ಕಟ್ಟಿಕೊಂಡಿದ್ದರೂ `ಸೂಪರ್ ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದಲ್ಲಿ ಕಂಡುಬರುವ ಸಾಮಾನ್ಯ ಸಂಗತಿ. ಸಂಜಯ್ ದತ್ , ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಶೈನಿ ಅಹುಜಾ ಇನ್ನು ಹಲವು ನಾಯಕರು ಇಂದಿಗೂ ಕ್ರಿಮಿನಲ್ ಹಿನ್ನೆಲೆಯ ಪ್ರಯುಕ್ತ ಜೈಲಿನಲ್ಲಿ ಕಳೆದು, ಈಗ `ಬೇಲ್'ನ ಮೂಲಕ ಹೊರಗಡೆ ಬಂದು `ಬೇಲ್ ಪುರಿ' ತಿನ್ನುತ್ತಿದ್ದಾರೆ. 


ಬಾಲಿವುಡ್ ಇನ್ ಜೈಲ್! 
ಬಾಂಬೆ ಬ್ಲಾಸ್ಟ್ನಲ್ಲಿ ಅನಧಿಕೃತವಾಗಿ ಶಸ್ತಾಸ್ತ್ರಗಳನ್ನು ಸಂಗ್ರಹಿಸಿದ ಹಾಗೂ ಉಗ್ರರಿಗೆ ಕುಮ್ಮಕ್ಕು ನೀಡಿರುವುದರಲ್ಲಿ ಸಂಜಯ್ ದತ್ ಪಾತ್ರವಿತ್ತು. ಇದಕ್ಕಾಗಿ ಆತ ಟಾಡಾ ಕಾಯ್ದೆ ಅಡಿ ಸುಮಾರು 16 ತಿಂಗಳು ಜೈಲಿನಲ್ಲಿ ಕೊಳೆದಿದ್ದ. ಆ ನಂತರ 1995 ಅಕ್ಟೋಬರ್ನಲ್ಲಿ ಬೇಲ್ ಮೇಲೆ ಹೊರಗಡೆ ಬಂದ ಸಂಜಯ್ ದತ್ ಆ ನಂತರ ರಿಯಾ ಪಿಳ್ಳೆಯನ್ನು ಮದುವೆಯಾಗಿ ಸಿನಿಮಾ 
 ಕ್ಯಾರಿಯರ್ಯನ್ನು  ಮತ್ತೇ ಪ್ರಾರಂಭಿಸಿದ. ಜೈಲಿವಾಸಿಯಾಗಿ ಕ್ರಿಮಿನಲ್ ಅಂತೆನಿಸಿಕೊಂಡ  ಸಂಜಯ್ದತ್ ಇಂದು    ನಿರ್ಮಾಪಕರ  ಪಾಲಿನ ಅಕ್ಷಯಪಾತ್ರೆ. ಇಂದು ಪ್ರತಿ ಸಿನಿಮಾಕ್ಕೆ `ಮುನ್ನಾಬಾಯಿ' ಸುಮಾರು  10ರಿಂದ 15ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾನೆ. ಇಂದಿಗೂ ಈತನ ಸಿನಿಮಾಗಳು ನೂರಾರು ಕೋಟಿ ವ್ಯವಹಾರ ಮಾಡುತ್ತಿವೆ. ಮಿತ್ರ ಸಂಜಯ್ ಗುಪ್ತಾ ಜೊತೆ `ವೈಟ್ ಫೀದರ್' ಅನ್ನುವ ಸಿನಿಮಾ ಪ್ರೊಡಕ್ಷನ್ ಕಂಪನಿಯನ್ನು ಕೂಡ ಸಂಜುಬಾಬಾ ನಡೆಸುತ್ತಿದ್ದಾನೆ. ಮುದ್ದಿನ ಹಿರಿಮಗಳು ತ್ರಿಶಲಾ(22 ವರ್ಷ) ಅಜ್ಜ-ಅಜ್ಜಿಯ ಜೊತೆ ಯುಎಸ್ನಲ್ಲಿದ್ದಾಳೆ. ಜೈಲಿಗೆ ಹೋಗಿ ಕ್ರಿಮಿನಲ್ ಅನ್ನುವ ಪಟ್ಟ ಕಟ್ಟಿಕೊಂಡರೂ ಸಂಜು ಬಾಬಾಗೆ ಜಗತ್ತಿನಾದ್ಯಂತ ಕೊಟ್ಯಂತರ ಅಭಿಮಾನಿಗಳಿದ್ದಾರೆ. ಜೈಲಿಗೆ ಹೋಗಿ ಬಂದ ಮೇಲೆ ಆತನ ದುನಿಯಾ ಬದಲ್ ಗಯಾ! ಸದ್ಯ ಈತನದು ಸುಂದರ ಸಂಸಾರ. ಪ್ರೀತಿಯ ಮಡದಿ ಮಾನ್ಯತಾ ಜೊತೆ ಇಬ್ಬರು ಅವಳಿ ಜವಳಿ ಮಕ್ಕಳು.


ಸಲ್ಮಾನ್ ಖಾನ್ ಸಂಜುಬಾಬಾಗಿಂತ ಇನ್ನು ಎರಡು ಹೆಜ್ಜೆ ಮುಂದೆ ನಿಲ್ಲುತ್ತಾನೆ. ಇಂದು ಸಲ್ಮಾನ್ ಖಾನ್ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ. ಒಂದು ಲೆಕ್ಕದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ಗಿಂತಲೂ ಹೆಚ್ಚು ಹಣ ಪಡೆಯುತ್ತಿದ್ದಾನೆ. 2011ರಲ್ಲಿ ಸಲ್ಮಾನ್ ಖಾನ್ ಬಾಲಿವುಡ್ ನಂ.1 ನಾಯಕನಾಗಿ ಮಿಂಚಿದ್ದಾನೆ. ಧಭಾಂಗ್, ಬಾಡಿಗಾರ್ಡ, ರೆಡಿ ಚಿತ್ರಗಳೂ 100 ಕೋಟಿಗಿಂತಲೂ ಹೆಚ್ಚು ವಹಿವಾಟು ಮಾಡಿವೆ. ಇಡೀ ಬಾಲಿವುಡ್ 2011 ರ ವಹಿವಾಟಿನಲ್ಲಿ ಶೇ.15ರಷ್ಟು ಪಾಲು ಸಲ್ಮಾನ್ ಖಾನ್ನಿಂದಲೇ ಬಂದಿದೆ. ಇದೇ ತೆರೆಯ ಹೀರೋ ಒಂದು ಕಾಲದಲ್ಲಿ ಕೃಷ್ಣ ಮೃಗಗಳ ಬೇಟೆ, ಕುಡಿದ ಅಮಲಿನಲ್ಲಿ ರಸ್ತೆ ಬದಿ ಮಲಗಿದ ಇಬ್ಬರ ದಾರುಣ ಸಾವು ಹಾಗೂ ಇನ್ನು ನಾಲ್ವರು ಕೂಲಿಗಳ ಗಂಭೀರ ಸ್ಥಿತಿಗೆ ಕಾರಣರಾಗಿದ್ದ. ಈ ಕ್ರಿಮಿನಲ್ ಕೇಸ್ ಇಂದಿಗೂ ನಡೆಯುತ್ತಿದೆ. ಅದು ಮತ್ತೆ ಒಪನ್ ಆಗುವುದೋ ಆ ದೇವರೇ ಬಲ್ಲ! ಹೀಗೆ ಎರಡು ಜನರನ್ನು ಕೊಂದು ಕೆಲವು ದಿನಗಳ ಕಾಲ ಜೈಲು ಸೇರಿದ ಸಲ್ಮಾನ್ ಕೂಡ ಕೊಟ್ಯಂತರ ಜನರ ದೇವರಾಗಿದ್ದಾನೆ. ಇದೇ ರೀತಿ ರೇಪ್ ಕೇಸ್ ಎದುರಿಸುತ್ತಿರುವ ಶೈನಿ ಅಹುಜಾ, ವನ್ಯಮೃಗ ಬೇಟೆಯಲ್ಲಿ ಭಾಗಿಯಾಗಿದ್ದ ಸೈಫ್ ಅಲಿ ಖಾನ್ ಕೂಡ ಸೇರುತ್ತಾರೆ.
  
ಈ ಮೇಲಿನ ಎಲ್ಲ ಉದಾಹರಣೆಗಳನ್ನಿಟ್ಟುಕೊಂಡು ನೋಡಿದಾಗ ಒಂದು ಮಾತಂತೂ ಖಂಡಿತ ಸತ್ಯ. ಜನರಿಗೆ ಬೇಕಾಗಿರುವುದು ಆಯಾ ಸ್ಟಾರ್ಗಳ ಮನರಂಜನೆ ಅಷ್ಟೇ. ಆತ ತೆರೆ ಮೇಲೆ ಕುಣಿದು, ಪೇಜುಗಟ್ಟಲೇ ಡೈಲಾಗ್ ಹೇಳುತ್ತಾ, ಹಿರೋಯಿನ್ನೊಂದಿಗೆ ರೋಮ್ಯಾನ್ಸ ನಡೆಸುವ ಮುಖವನ್ನು ಮಾತ್ರ ಇಷ್ಟಪಡುತ್ತಿದ್ದಾರೆ. ವಿನಹ ಆತನ ವೈಯಕ್ತಿಕ ಜೀವನದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅದು ಆಯಾ ಸ್ಟಾರ್ ಗಳ ಇನ್ನೊಂದು ಕೆಟ್ಟಮುಖ ಆ ದಿನದ ಮಾಧ್ಯಮಗಳಲ್ಲಿ ವರದಿಯಾಗಿ ಸ್ವಲ್ಪ ಕೆಲವು ದಿನಗಳ ಕಾಲ ಆತನನ್ನು ವಿಲನ್ ತರ ನೋಡಿ ಆಮೇಲೆ ಮತ್ತೇ ಆತನ ಯಾವುದಾದರೂ ಒಂದು ಒಳ್ಳೆಯ ಸಿನಿಮಾ ನೋಡಿದಾಗ, ಆತನ ಮುಖದಲ್ಲಿದ್ದ ಈ ಹಿಂದಿನ ಕರಿನೆರಳು ನಮ್ಮ ಜನರಿಗೆ ಕಾಣುವುದೇ ಇಲ್ಲ. 




ದರ್ಶನ್ ಗುಡ್ಲಕ್ !
ಈ ಮೇಲಿನ ಮಾತು ನಮ್ಮ ಛಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೂಡ ಬೀಳುತ್ತದೆ. ಈತನದು ಸಂಜು ಮತ್ತು ಸಲ್ಮಾನ್ ಸ್ಥಿತಿ ತರವೇ ಆಯಿತು. ಜೈಲಿಗೆ ಹೋಗಿ ಬಂದ ಮೇಲೆ ಆತನ ಸ್ಟಾರ್ಗಿರಿ ಎರಡರಷ್ಟು ಹೆಚ್ಚಾಗಿದೆ. ಇದಕ್ಕೆ ಆತನ ಬಾಕ್ಸ್ ಆಫೀಸ್ ಲೆಕ್ಕ ಕೂಡ ಕಾರಣವಾಗಿರಬಹುದು. ಮೊದಲ ಬಾರಿ ಆತನ ಹೆಂಡತಿ ವಿಜಯಲಕ್ಷ್ಮಿ ತನ್ನ ಗಂಡನ ಮೇಲೆ ಕಿರುಕುಳ, ಹೆಣ್ಣಿನ ಸಂಗ, ಕೊಲೆಬೆದರಿಕೆ ಇನ್ನು ಹಲವು ರೀತಿಯ ಗುರುತರವಾದ ಆಪಾದನೆಗಳನ್ನು ಮಾಡಿದ ಮೇಲೆ ದರ್ಶನ್ ಕತೆ ಇಲ್ಲಿಗೆ ಮುಗಿಯಿತು, ಇನ್ನು ಮುಂದೆ ಆತ ಕನ್ನಡದಲ್ಲಿ ಏಳುವುದು ಕಷ್ಟ ಅಂತ ಎಲ್ಲರೂ ಮಾತನಾಡಿದರು. ಮೊದಲಿನಿಂದಲೂ ಮಾಧ್ಯಮಗಳನ್ನು ತನ್ನ ಶೂಟಿಂಗ್ ಸೆಟ್, ಮನೆಯ ಬಾಗಿಲಿಗೆ ಕೂಡ  ಸೇರಿಸಿದ ದರ್ಶನ್ಗೆ, ಆ ಸಮಯದಲ್ಲಿ ಮಾಧ್ಯಮಗಳು ಕೊಟ್ಟ ಹೊಡೆತವನ್ನು ದರ್ಶನ್ ಖಂಡಿತ ತಪ್ಪಿಸಿಕೊಳ್ಳದ 
ಹಾಗೆ ಮಾಡಿಬಿಟ್ಟಿತ್ತು. ಪತ್ರಿಕೆಗಳು, ಟಿವಿ ಮಾಧ್ಯಮಗಳು ತಮ್ಮ ಈ ಹಿಂದಿನ ದರ್ಶನ್ ಮೇಲಿನ ಸಿಟ್ಟನ್ನು  ಒಮ್ಮಿದೊಮ್ಮೆಲೆ ತೀರಿಸಿಕೊಂಡವು. ದರ್ಶನ್ ಕಾಲ್ಶೀಟ್ ಕೊಡದೆ ಆಟವಾಡಿಸಿದ ನಿರ್ಮಾಪಕರು, ನಿರ್ದೇಶಕರೆಲ್ಲ ದರ್ಶನ್ ವಿರುದ್ಧ ತೆರೆಮರೆಯಲ್ಲಿ ಕೆಲಸ ಮಾಡಿ ಆತನ ಮಾರ್ಕೆಟನ್ನು ಮುಂದಿನ ಸಿನಿಮಾಗಳನ್ನು ಆದಷ್ಟು ಮುಗಿಸಲು ಶುರುಮಾಡಿದರು.  ಹೆಂಡತಿಯ ಮೇಲಿನ ಹಲ್ಲೆಮಾಡಿದ ಈ ಕೇಸು ತುಂಬಾ ಸ್ಟ್ರಾಂಗಾಗಿ ಕೂತುಬಿಟ್ಟಿತ್ತು. 
ಪ್ರತಿನಿತ್ಯ ದರ್ಶನ್ ಜೈಲಿನ ಬಗ್ಗೆ ಪುಟಗಟ್ಟಲೇ ಮಾಹಿತಿ ಬರಲಿಕ್ಕೆ ಪ್ರಾರಂಭವಾಯಿತು. ಈ ನಡುವೆ ಸಿನಿಮಾ ಉದ್ಯಮದ ಅನೇಕರು ಗಂಡಹೆಂಡತಿ ನಡುವೆ ರಾಜಿ ಮಾಡಿ ಕೇಸನ್ನು ಖುಲ್ಲಾಸೆ ಮಾಡಲು ಪ್ರಯತ್ನಸಿದರೂ ಹೆಂಡತಿ ಕೊಟ್ಟ ಸ್ಟೇಟ್ಮೆಂಟ್ಗಳು ವಕೀಲರನ್ನೇ ತಬ್ಬಿಬ್ಬಾಗಿಸಿತ್ತು. ಅಂತೂ ಸುಮಾರು ಒಂದು ತಿಂಗಳು ದರ್ಶನ್ಗೆ ಜೈಲಿನಿಂದ ಹೊರಬರಲೇ ಆಗಲೇ ಇಲ್ಲ. ಇನ್ನು ಆತನ ಸಿನಿಮಾಗಳನ್ನು ಕೂಡ ಜನರು ನೋಡುವುದಿಲ್ಲ, ಕೋಟಿಗಟ್ಟಲೆ ಡಿಮ್ಯಾಂಡ್ ಮಾಡುತ್ತಿದ್ದ ಏರಿಯಾಗಳಲ್ಲೇ ದರ್ಶನ್ ಸಿನಿಮಾಗಳನ್ನು ಕೇಳುವರೇ ಇರಲಿಲ್ಲ. ದರ್ಶನ್ ಕಥೆ ಮುಗಿಯಿತು ಅಂತ ಮತ್ತೇ ಅಂದುಕೊಂಡರು. ಈಗಾಗಲೇ ದರ್ಶನ್ನನ್ನು ಹಾಕಿಕೊಂಡು ಕೊಟ್ಯಂತರ ಹಣವನ್ನು ಖರ್ಚು ಮಾಡಿದ್ದ ನಿರ್ಮಾಪಕರು ಹಾಗೂ ಹಂಚಿಕೆದಾರರು ಕಂಗಾಲ್ ಆದರು. 


ಫಿನಿಕ್ಸ್ನಂತೆ ಮತ್ತೆ ಎದ್ದು ಗೆದ್ದ ದರ್ಶನ್!
ಸಾರಥಿ ಸಿನಿಮಾ ಆಗಲೇ ಡಬ್ಬಿಂಗ್ ಎಲ್ಲಾ ಆಗಿ ಬಿಡುಗಡೆಗೆ ಕಾದು ಕುಳಿತಿತ್ತು. ಈ ಸಮಯದಲ್ಲಿ ಇದನ್ನು ರಿಲೀಸ್ ಮಾಡಿದರೆ ತಮ್ಮ ದಿನಕರ್ ಹಾಗೂ ಕೆಸಿಎನ್ ಫ್ಯಾಮಿಲಿಯ ನಿರ್ಮಾಪಕ ಸತ್ಯಪ್ರಕಾಶ್ ಮನೆಸೇರುವುದಂತೂ ಖಂಡಿತ ಅಂತ ಎಲ್ಲರೂ ಹೇಳಿದ್ದರಿಂದ ಬಿಡುಗಡೆಯ ದಿನವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿದರು. ದರ್ಶನ್ ಜೈಲು ಸೇರಿ ತಿಂಗಳ ನಂತರ ಸ್ವಲ್ಪ ಅವನ ಬಗೆಗಿನ ವರದಿ, ಹವಾ ಕಡಿಮೆಯಾಗಿತ್ತು. ಸಾರಥಿ ಬಿಡುಗಡೆ ಮಾಡುವಾಗಲೂ ಮಾಡಬೇಕೋ, ಬೇಡವೋ ಅಂತಲೇ ಅರ್ಧಮನಸ್ಸಿನಲ್ಲಿ ದೇವರ ಮೇಲೆ ಭಾರ ಹಾಕಿ ಸಿನಿಮಾ ನಿರ್ಮಾಣ ಮಾಡಿಯೇ ಬಿಟ್ಟರು.  ಸಾರಥಿಯ ಬಿಡುಗಡೆಯ ಹಿಂದಿನ ದರ್ಶನ್ ಜೈಲಿನಲ್ಲಿ ವಿಪರೀತ ಹೆದರಿ ಕುಳಿತಿದ್ದ.ರಾತ್ರಿಯೆಲ್ಲ ನಿದ್ದೆ ಇರಲಿಲ್ಲ. ಏನಾಗುವುದೋ ಎಂಬ ಭಯ ಆತನನ್ನು ಕಾಡಿತ್ತು.. ಜೊತೆಗಿದ್ದ ಕಟ್ಟಾ ಜಗದೀಶ್ ಮಾತ್ರ ಆತನಿಗೆ ಧೈರ್ಯವನ್ನು ಹೇಳಿ `ಸಾರಥಿ ಸಿನಿಮಾ ಟೈಟಲ್ನಲ್ಲೆ  ಮ್ಯಾಜಿಕ್ ಇದೆ. ಖಂಡಿತ ಈ ಸಿನಿಮಾ ಸೂಪರ್ಹಿಟ್ ಆಗುತ್ತೆ ನೋಡ್ತಾ ಇರು' ಅಂತ ಧೈರ್ಯ ಹೇಳಿದ್ದ. ಅಂತಹ ಕಷ್ಟದ ಸಂದರ್ಭದಲ್ಲಿ, ಏಕಾಂಗಿಯಾಗಿದ್ದ ಆತನಿಗೆ ಜೈಲಿನಲ್ಲಿ ಜೊತೆಯಾದವನು ಕಟ್ಟಾ ಜಗದೀಶ್ ಒಬ್ಬನೇ! ಸಾರಥಿ ಅಂದುಕೊಂಡ ಹಾಗೆ ರಿಲೀಸ್ ಆಯಿತು. ಜೈಲಿನಿದ್ದಾಗ ಒಬ್ಬ ನಾಯಕನ ಸಿನಿಮಾ ರಿಲೀಸ್ ಆದ ಒಂದು ದಾಖಲೆ ಕೂಡ ಕನ್ನಡದಲ್ಲಿ ಸೇರಿಹೋಯಿತು. ಇದು ನಮ್ಮ ಭಾರತೀಯ ಚಿತ್ರರಂಗದಲ್ಲಿ ಕೂಡ ಒಂದು ದಾಖಲೆಯೇ.  ಸಾರಥಿ ಬಿಡುಗಡೆಯಾಗಿ ಇಂದು ನೂರುದಿನದತ್ತ ಸಾಗುತ್ತಿದೆ. ದರ್ಶನ್ ಜೈಲಿನಿಂದ ಬಿಡುಗಡೆಯಾದರು. ಆಗಲೇ ಸಿನಿಮಾ ಬಾಕ್ಸಾಫೀಸ್ ದೋಚಿ ಕೋಟಿಗಟ್ಟಲೇ ಹಣವನ್ನು ಕೊಳ್ಳೆಹೊಡೆಯುತ್ತಿತ್ತು. ಈ ತರಹದ ಪವಾಡವನ್ನು ಸ್ವತಃ ದರ್ಶನ್, ನಿಮರ್ಾಪಕ ಸತ್ಯಪ್ರಕಾಶ್ ಜೊತೆಗೆ ಮಾಧ್ಯಮ ಮಿತ್ರರೂ ಕೂಡ ನಿರೀಕ್ಷಿಸಿರಲಿಲ್ಲ.  ದರ್ಶನ್ಗೆ ಸಾರಥಿ ಕೊಟ್ಟ ಮರುಜನ್ಮ ಆತ ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ಮಾಡಿದೆ. ಜೈಲಿಗೆ ಸೇರಿ ಮೈಲಿಗೆಯಾದವ ಅಂತ ಯಾರು ದರ್ಶನ್ನನ್ನು ಹೊರಗೆ ನಿಲ್ಲಿಸಲಿಲ್ಲ. ಹೆಂಡತಿ ಪೀಡಕ ಅಂತ ಕರೆಸಿಕೊಂಡ ನಟ, ತನ್ನ ಸಿನಿಮಾವನ್ನು ಗಂಡ-ಹೆಂಡತಿ ಇಬ್ಬರೂ ಸೇರಿ ಸಾರಥಿಯನ್ನು ನೋಡಿಬರುವ ಹಾಗೆ ಆಯಿತು. ಕಳೆಗುಂದಿದ್ದ ದರ್ಶನ್ ಸಿನಿಮಾಗಳು, ಆತಂಕದಲ್ಲಿದ್ದ ಹಣ ಖರ್ಚುಮಾಡಿಕೊಂಡ ನಿರ್ಮಾಪಕರು ಈಗ ನಿರಾಳರಾಗಿದ್ದಾರೆ. ಅವರ ಮುಖದಲ್ಲಿ ಈಗಾಗಲೇ ಗೆದ್ದ ಹಸನ್ಮುಖ ಕಾಣುತ್ತಿದೆ. 
ಇದುವರೆಗಿನ ಸಾರಥಿಯ ಬಾಕ್ಸಾಫೀಸ್ ಕಲೆಕ್ಷನ್ ಸುಮಾರು 25 ಕೋಟಿ ದಾಟಿದೆ. ಕೇವಲ ನಾಲ್ಕು ಕೋಟಿಯಲ್ಲಿ ತಯಾರಾದ ಸಿನಿಮಾ 20ಕ್ಕೂ ಹೆಚ್ಚು ಲಾಭವನ್ನು ನಿರ್ಮಾಪಕರಿಗೆ ಮಾಡಿಕೊಟ್ಟಿದೆ. ಈ ಸಿನಿಮಾದಲ್ಲಿ ದರ್ಶನ್ ಪಾಲು ಸುಮಾರು 5 ಕೋಟಿ ದಾಟಬಹುದು ಅನ್ನುತ್ತದೆ ಒಂದು ಮೂಲ. ಮುಂಬರುವ ದರ್ಶನ್ ಸಿನಿಮಾಗಳ ಹವಾ ಹೇಗಿದೆಯಂದರೆ ಲಕ್ಷ ಕೇಳುತ್ತಿದ್ದ ಏರಿಯಾಗಳೆಲ್ಲಾ ಕೋಟಿ ದಾಟುತ್ತಿದ್ದಾರೆ. ಕೇವಲ ಮೈಸೂರುವಲಯವನ್ನೇ 3 ಕೋಟಿಗೆ ಕೇಳುತ್ತಿದ್ದಾರೆ. ಇದು ಜೈಲು ಸೇರಿ ದರ್ಶನ್ಗೆ ಆದ ದೊಡ್ಡ ಪವಾಡ. ಸಲ್ಲು, ಸಂಜು ತರಹ ದರ್ಶನ್ ಕೂಡ ಈ ಲಿಸ್ಟಿಗೆ ಸೇರಿದ ಹಾಗಾಯ್ತು. ತಮ್ಮ ಸಿನಿಮಾಗಳು ಓಡುತ್ತಿಲ್ಲವೆಂದು, ಮಾರ್ಕೆಟಿಲ್ಲದ ಹೀರೋಗಳು ಇದೇ `ಜೈಲು-ಭವಿಷ್ಯ' ನಂಬಿಕೆಯಲ್ಲಿ ಒಳಗೆ ಹೋಗಿ ಬಂದರೆ ತಮ್ಮ ಮಾರುಕಟ್ಟೆ  ಹಾಗೂ ಅದೃಷ್ಟ ಖುಲಾಯಿಸುವುದು ಅಂತ ಅಂದುಕೊಂಡರೆ ಅದರಂತ ದೊಡ್ಡ ಕಾಮಿಡಿ, ಕೆಟ್ಟ ಸೀನು ಮತ್ತೊಂದಿಲ್ಲ. 




ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಿಂದಿನ ನೋಟ, ಆತನ ಸೋಲು-ಗೆಲುವು, ವಿವಾದಗಳು, ಹವ್ಯಾಸ, ಮೋಜು ಮಸ್ತಿಯ ಬಗ್ಗೆ  ಒಂದು ನೋಟ.


ಹಿಟ್ ಮೇಲೆ ಹಿಟ್!
ಇಂದಿಗೂ ದರ್ಶನ್ಗೆ ಡಿಮ್ಯಾಂಡ್ ಇರಲಿಕ್ಕೆ ಮುಖ್ಯಕಾರಣ ಆತನ ಸಿನಿಮಾಗಳ ಸಕ್ಸಸ್!  `ಮಿನಿಮಮ್ ಗ್ಯಾರೆಂಟಿ ನಟ' ಅಂತ ದರ್ಶನ್ನನ್ನು ಗಾಂಧಿನಗರದ ಭಾಷೆಯಲ್ಲಿ ಹೇಳಲಾಗುತ್ತದೆ. ಆತನ ಕಾಲ್ಶೀಟ್ ಹಣ, ಶೂಟಿಂಗ್ ಎಲ್ಲ ಸೇರಿ 3-5 ಕೋಟಿಯಲ್ಲಿ ಆತನ ಸಿನಿಮಾ ಮುಗಿದುಬಿಡುತ್ತದೆ. ಸ್ಯಾಟಲೈಟ್ ರೈಟ್ಸ್ ಕಡಿಮೆ ಅಂದರೂ ಒಂದು ಕೋಟಿಗೆ ಹೋಗುತ್ತದೆ. ಜೊತೆಗೆ ಆಡಿಯೋ ರೈಟ್ಸ್, ಬಿಕೆಟಿ ಏರಿಯಾ, ಮೈಸೂರು ಎಲ್ಲ ಮಾರಿಕೊಂಡರೂ ಅಸಲು ಬಂದು ಇನ್ನಷ್ಟು ಲಾಭವಾಗಿರುತ್ತದೆ. ಇನ್ನು ಆ ಕಡೆ ಬಾಂಬೆ ಕನರ್ಾಟಕ, ಹೈದ್ರಾಬಾದ್ ಕರ್ನಾಟಕ ಎಲ್ಲವೂ ಲಾಭದ ಹೊಳೆಯೇ. ಸೂಪರ್ ಹಿಟ್ ಅನ್ನಿಸಿಕೊಂಡ, ನೂರುದಿನ ಹಾಗೂ ಸಿಲ್ವರ್ಜ್ಯೂಬಿಲಿ ಸಿನಿಮಾಗಳ ಲಿಸ್ಟ್ ಹೇಳೋದಾದ್ರೆ, ಮೆಜೆಸ್ಟಿಕ್(100 ಡೇಸ್), ಕರಿಯ (700ಡೇಸ್), ಲಾಲಿಹಾಡು(100 ಡೇಸ್), ದಾಸ(100 ಡೇಸ್), ಕಲಾಸಿಪಾಳ್ಯ (175 ಡೇಸ್), ಅಯ್ಯ (100 ಡೇಸ್), ಶಾಸ್ತ್ರಿ(100 ಡೇಸ್), ಸುಂಟರಗಾಳಿ(100 ಡೇಸ್), ಜೊತೆಜೊತೆಯಲಿ (175 ಡೇಸ್), ನವಗ್ರಹ (100 ಡೇಸ್), ಗಜ ((175 ಡೇಸ್), ಪೋಕರ್ಿ (100 ಡೇಸ್), ಸಾರಥಿ (ನೂರನೇ ದಿನದತ್ತ), ಉಳಿದೆಲ್ಲ ಚಿತ್ರಗಳು ಐವತ್ತು ದಿನಗಳನ್ನು ಪೂರೈಸಿವೆ. ದರ್ಶನ್ ಸಿನಿಮಾದಿಂದ ಲಾಸ್ ಮಾಡಿಕೊಂಡ ನಿಮಾಪಕರ ಸಂಖ್ಯೆ ಕಡಿಮೆ. ಜೈಲು ಸೇರುವ ಮುಂಚೆ ದರ್ಶನ್ ಕಾಲ್ಶೀಟ್ ಬೆಲೆ 70 ಲಕ್ಷದಿಂದ ಒಂದು ಕೋಟಿವರೆಗೆ ಇತ್ತು. ಈಗ `ಸಾರಥಿ' ಹೋಗುತ್ತಿರುವ ರಭಸ ನೋಡಿದರೆ  ದರ್ಶನ್ ಕಾಲ್ಶೀಟ್ ಬೆಲೆ ಎರಡೂವರೆ  ಕೋಟಿಯಿಂದ ಮೂರು  ಕೋಟಿ ಅನ್ನುತ್ತದೆ ಒಂದು ಮೂಲ. ಈ ಮಧ್ಯೆಯೂ ಒಂದು ಆಶ್ಚರ್ಯದ ಮಾತೆಂದರೆ `ಸಾರಥಿ'ಗೆ ಮೊದಲೇ ಆರು ಸಿನಿಮಾಗಳು ಸೋತಿದ್ದವು. ಆದರೂ ಆ ಸೋಲು ದರ್ಶನ್ರ ಸ್ಟಾರ್ವ್ಯಾಲ್ಯೂವನ್ನು ಪಣಕ್ಕೆ ಇಟ್ಟಿತ್ತೇ ಹೊರತು ನಿಮರ್ಾಪಕರು ದಾರಿಗೆ ಬಂದಿರಲಿಲ್ಲ. ಆಗೇನ್ ಮಿನಿಮಂ ಗ್ಯಾರಂಟಿ ಮಹಿಮೆ. ಕನ್ನಡದಲ್ಲಿ ಕೆಲವು ನಟರು ಇಂದು ಮಿನಿಮಂ ಗ್ಯಾರಂಟಿ ಮಹಿಮೆ. ಕನ್ನಡದಲ್ಲಿ ಕೆಲವು ನಟರು ಇಂದು ಮಿನಿಮಂ ಗ್ಯಾರಂಟಿಗೂ ತುಟ್ಟಿ ಆಗಿರುವ ವಸ್ತುಸ್ಥಿತಿಯಲ್ಲಿ  ದರ್ಶನ್ ಈಸ್ ದಿ ಗ್ರೇಟ್... ಜಯ್ ಹೋ!


ನಿರ್ಮಾಪಕನಾಗಿ ದರ್ಶನ್
ನಾಯಕನಾಗಿ ಯಶಸ್ವಿಯಾದ ಮೇಲೆ ನಿರ್ಮಾಪಕನಾಗಿ ದರ್ಶನ್ ಒಂದು ಹೆಜ್ಜೆ ಮುಂದಿಟ್ಟರು. 'ತೂಗುದೀಪ ಪ್ರೊಡಕ್ಷನ್' ಸಂಸ್ಥೆಯ ಮೊದಲ ಸಿನಿಮಾದ ಮೂಲಕ, ಸೋದರ ದಿನಕರ್ ತೂಗುದೀಪ್, ಸಂಗೀತ ನಿರ್ದೇಶಕ  ಹರಿಕೃಷ್ಣ ಮತ್ತು `ನೆನಪಿರಲಿ' ಪ್ರೇಮ್ರ ಸಿನಿ ಕೆರಿಯರ್ಗೆ ಒಂದು ಬ್ರೇಕ್ ಕೊಟ್ಟರು. ಈ ಚಿತ್ರದಲ್ಲಿ ದರ್ಶನ್ ಸಣ್ಣ ಗೆಸ್ಟ್ರೋಲ್ ಕೂಡ ಮಾಡಿದ್ದರು. ಸ್ವಂತ ನಿರ್ಮಾಣದ `ಜೊತೆಜೊತೆಯಲಿ' ಭರ್ಜರಿ ಹಾಡುಗಳ ಮೂಲಕ ಹಿಟ್ ಆಗುವುದರ ಜೊತೆಗೆ ಆಥರ್ಿಕವಾಗಿ ದರ್ಶನ್ಗೆ ನಾಲ್ಕರಿಂದ ಐದು ಕೋಟಿ ಲಾಭ ತಂದುಕೊಟ್ಟಿತ್ತು. 2008ರಲ್ಲಿ ಬಿಡುಗಡೆಯಾದ 'ನವಗ್ರಹ' ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ದಂತಕತೆಯಾಗಿರುವ ಖಳನಾಯಕರ ಮಕ್ಕಳನ್ನು ಒಂದೇ ಚಿತ್ರದಲ್ಲಿ ಪರಿಚಯಿಸುವುದರ ಮೂಲಕ ಎರಡನೇ ಬಾರಿ ನಿರ್ಮಾಪಕರಾಗಿದ್ದರು. ಈ ಸಿನಿಮಾ ಕೂಡ ಶತದಿನ ಪೂರೈಸಿತ್ತು. ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿಯಾಗಿ ಓಡುತ್ತಿರುವ `ಸಾರಥಿ' ಸಿನಿಮಾದಲ್ಲಿ ಕೂಡ ಪರೋಕ್ಷವಾಗಿ ದರ್ಶನ್ ಸಹಭಾಗಿತ್ವ ಇತ್ತು. ಕೆಲವು ಜಿಲ್ಲೆಗಳ ಡಿಸ್ಟ್ರಿಬ್ಯೂಷನನ್ನು ದರ್ಶನ್ ಮತ್ತು ದಿನಕರ್ ವಹಿಸಿಕೊಂಡಿದ್ದರು. ಈಗಾಗಲೇ 15 ಕೋಟಿ ರೂಪಾಯಿ ವ್ಯವಹಾರ ಮಾಡಿರುವ `ಸಾರಥಿ' ಇನ್ನಷ್ಟು ಬಾಕ್ಸಾಫೀಸ್ ದೋಚುವ ಎಲ್ಲ ಸಾಧ್ಯತೆ ಇದೆ. ದರ್ಶನ್ ನಿರ್ಮಾಣದ ಎಲ್ಲ ಸಿನಿಮಾಗಳನ್ನು ಆತನ ತಮ್ಮ ದಿನಕರ್ ನಿರ್ದೇಶನ ಹಾಗೂ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿರುವುದು ಒಂದು ವಿಶೇಷ.   

ಕಿರುತೆರೆಯಿಂದ.... 
ಈಗಿರುವ ದೊಡ್ಡ ಸ್ಟಾರ್ಗಳೆಲ್ಲ ಒಂದಾನೊಂದು ಕಾಲದಲ್ಲಿ ಟಿವಿಯಲ್ಲಿ ಮಿಂಚಿದವರೇ. ಇದಕ್ಕೆ ದರ್ಶನ್ ಕೂಡ ಹೊರತಾಗಿಲ್ಲ.  ನೀನಾಸಂನಲ್ಲಿ ಅಗತ್ಯ ತರಬೇತಿ ಪಡೆದು ಅವಕಾಶಗಳಿಗಾಗಿ ದರ್ಶನ್ ಅಲೆದಾಡುತ್ತಿದ್ದಾಗ ಸಿಕ್ಕಿದ ನೆಲೆ ಧಾರಾವಾಹಿಯಲ್ಲಿ. ಆಗಿನ ಸಮಯದಲ್ಲಿ ಎಸ್.ನಾರಾಯಣ್ ನಿರ್ದೇಶನದ `ಭಾಗೀರಥಿ' ಅತ್ಯಂತ ಜನಪ್ರಿಯವಾದ ಸೀರಿಯಲ್ ಆಗಿತ್ತು. ಈ ಸೀರಿಯಲ್ನಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು. ಇದೇ ಕೊನೆ. ಆ ನಂತರ ಸಿನಿಮಾಗಳಲ್ಲಿ ಅವಕಾಶ ಹೆಚ್ಚಾದೊಡನೆ ಟೀವಿ ಸೀರಿಯಲ್ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. 


ದರ್ಶನ್ ವಿವಾದಗಳು
ದರ್ಶನ್ ಮಾಧ್ಯಮಗಳಲ್ಲಿ ಕಾಣಿಸುವುದು ಅಪರೂಪ, ಹಾಗೆ ಮಾತನಾಡಿದ್ದು ಕೂಡ ಅಷ್ಟಕಷ್ಟೇ. ಕೆಲವೊಂದು ಸಂದರ್ಭಗಳಲ್ಲಿ ಖಾರವಾಗಿ ಮಾತನಾಡಿದ್ದು ಕೂಡ ದೊಡ್ಡ ಸುದ್ದಿಯಾಗಿದೆ. ದರ್ಶನ್ ಸಿಕ್ಕಾಪಟ್ಟೆ ಕಮರ್ಷಿಯಲ್ , ಹಣಬಾಕ ಅಂತ ಕರೆಯಲು ಆತನ ಕೆಲವು ಮಾತುಗಳು ಸಾಕ್ಷಿಯಾಗಿದ್ದವು. ದುಡ್ಡು ಕೊಟ್ರೆ ಅಂಡರ್ವೇರ್ನಲ್ಲಿ ಕೂಡ ಆಕ್ಟ್ ಮಾಡುತ್ತೇನೆ ಅಂತ ಹೇಳಿದ ಆತನ ಮಾತು ಹೆಚ್ಚು ನಗೆಪಾಟಲಾಗಿತ್ತು. ಈ ಮಾತಿಗೆ ಮಧ್ಯಮದವರ ಹತ್ತಿರ ಸಮರ್ಥನೆ ಕೂಡ ಮಾಡಿಕೊಂಡಿದ್ದರು. `ನನ್ನ ಪ್ರೀತಿಯ ರಾಮು' ಸಿನಿಮಾ ಸೋತಾಗ  ಇನ್ನು ಮುಂದೆ ಇಂತಹ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ. ನಿರ್ಮಾಪಕರಿಗೆ ಹಣ ತಂದುಕೊಡುವ ಹೊಡಿ-ಬಡಿ-ಕಡಿ ಸಿನಿಮಾಗಳಲ್ಲಿ ಹೆಚ್ಚು ಅಭಿನಯಿಸುವುದಾಗಿ ಹೇಳಿದ್ದರು. ಹೀಗೆ ಹೇಳಿದ ಮೇಲೆ ಅವರ `ಮಚ್ಚಿನ' ನೆಚ್ಚಿನ ಸಿನಿಮಾಗಳು ನೆಲಕಚ್ಚ್ಚಿದೊಡನೆ ಅವರ ಸಿನಿಮಾ ನಿಲುವು ಬದಲಾಯಿತು. 75 ವರ್ಷಗಳ ಕನ್ನಡ ಚಿತ್ರರಂಗದ ಅಮೃತಮಹೋತ್ಸವ ನೆನಪಿನಲ್ಲಿ ಹೊರತಂದ 75 ಪುಸ್ತಕಗಳಲ್ಲಿ, ತಂದೆ ತೂಗುದೀಪ ಶ್ರೀನಿವಾಸ್ರ ಪುಸ್ತಕ ಇಲ್ಲ ಅಂತ ಆಗ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿದ್ದ ಜಯಮಾಲಾ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರು. ತಾವೆ ಸ್ವಂತ ದುಡ್ಡಿನಿಂದ ತಂದೆಯ ಪುಸ್ತಕ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದರು. ಆ ಸಮಯದಲ್ಲಿ ದರ್ಶನ್ನ ಉದ್ಧಟತನದ ಹೇಳಿಕೆಗಳನ್ನು ಅನೇಕರು ಖಂಡಿಸಿದ್ದರು.  ಇದಾದ ಮೇಲೆ ಅನೇಕ ವರ್ಷಗಳ ಕಾಲ ಮಾಧ್ಯಮದವರನ್ನು ದೂರವಿಟ್ಟಿದ್ದರು. ಪರ್ತಕರ್ತರಿಗೆ ಯಾವುದೇ ಸಂದರ್ಶನ ಕೊಡುತ್ತಿರಲಿಲ್ಲ. ಪತ್ರಕರ್ತರ ಫೋನ್ ಕರೆಗಳನ್ನು ಕಟ್ ಮಾಡುತ್ತಾರೆ, ಸಿನಿಮಾ ಬಿಟ್ಟು ಬೇರೆ ವಿಷಯಗಳ ಬಗ್ಗೆ  ತಲೇನೆ ಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ಉದ್ಯಮದ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಹೇಳಿಕೆ ಕೊಡುವುದಿಲ್ಲ, ಸಿನಿಮಾ ಹಾಗೂ ಟೀವಿ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಈ ತರಹದ ಅನೇಕ ಆಪಾದನೆಗಳು ದರ್ಶನ್ ಮೇಲೆ ಇದ್ದವು. ಇವೆಲ್ಲಕ್ಕಿಂತ ದೊಡ್ಡ ಆಪಾದನೆ ಇತ್ತೀಚಿನ ವಿಜಯಲಕ್ಷ್ಮಿ-ನಿಖಿತಾ ಕೇಸ್! ಕೈಹಿಡಿದ ಹೆಂಡತಿಯೇ ದರ್ಶನ್ ಮೇಲೆ ಶೋಷಣೆ, ಪರಸ್ತ್ರೀಯ ಸಂಗ, ಡಿವೋರ್ಸ  ಕೊಡಿಸಿ ಅಂತ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದು. ಈಗ ಎಲ್ಲವೂ ಸರಿಯಾಗಿದೆ. ಗಂಡಹೆಂಡತಿ ಮತ್ತೆ ಒಂದಾಗಿದ್ದಾರೆ. ಒಟ್ಟಿಗೆ ಸಂಸಾರ ಮಾಡುತ್ತೇವೆ ಅಂತ ಹೇಳಿಕೆ ಕೂಡ ಕೊಟ್ಟಿದ್ದಾರೆ. ಸಾರಥಿಯ ಗೆಲವು ಈ ಎಲ್ಲ ಆಪಾದನೆಗಳನ್ನು ಸ್ವಲ್ಪ ಮರೆಮಾಚುವಂತೆ ಮಾಡಿದೆ. ನಡೆಯುವವನು ಎಡವುವನಲ್ಲದೆ, ಕುಳಿತವನು ಎಡವುವನೇ? `ಕಾಲ'ಕ್ಕಿಂತ ದೊಡ್ಡ ವೈದ್ಯ ಮಾರ್ಗದರ್ಶಿ ಯಾರಿದ್ದಾರೆ?!


ನೆಚ್ಚಿನ ತಂತ್ರಜ್ಞರು 
ದರ್ಶನ್ ಚಿತ್ರಗಳನ್ನು ಹೆಚ್ಚು ನಿರ್ದೇಶನ ಮಾಡಿರುವವರಲ್ಲಿ ಪಿ.ಎನ್.ಸತ್ಯ(5 ಸಿನಿಮಾ) ಹಾಗೂ ಎನ್.ಓಂಪ್ರಕಾಶ್ ರಾವ್(6 ಸಿನಿಮಾ)ಪ್ರಮೂಖರು, ಉಳಿದಂತೆ ಸೋದರ ದಿನಕರ್, ಸಾಧುಕೋಕಿಲ ತಲಾ ಮೂರು ಸಿನಿಮಾಗಳನ್ನು ನಿದರ್ೇಶನ ಮಾಡಿದ್ದಾರೆ. ಸ್ಟಂಟ್ ಮಾಸ್ಟರ್ ರವಿವರ್ಮ ದರ್ಶನ್ರ ಬಹಳಷ್ಟು ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ವಿ.ಹರಿಕೃಷ್ಣ ನೆಚ್ಚಿನ ಸಂಗೀತ ನಿರ್ದೇಶಕ. ಕೆಕೆ(ಕೃಷ್ಣಕುಮಾರ್)ಆಪ್ತ ಛಾಯಾಗ್ರಾಹಕ, ಬಿಟ್ಟರೆ ಅಣಜಿ ನಾಗರಾಜ್.


ಕಾರುಬಾರಿನ  ಲೈಫ್ ಸ್ಟೈಲ್ 
ಕಾರು ಮತ್ತು ಸಾಕುಪ್ರಾಣಿಗಳು ಛಾಲೆಂಜಿಂಗ್ ಸ್ಟಾರ್ನ ಆಲ್ಟೈಮ್ ಫೇವರಿಟ್ಸ್ ಅಂತಾನೇ ಹೇಳಬಹುದು. ದುಬಾರಿ ಬೆಲೆಯ ಐಶಾರಾಮಿ ಕಾರುಗಳು ದರ್ಶನ್ ಗ್ಯಾರೇಜ್ನಲ್ಲಿವೆ. ಕನ್ನಡ ಸಿನಿಮಾ ಮಟ್ಟಿಗೆ ದರ್ಶನ್ ಹೊಂದಿರುವ ಲಕ್ಸುರಿ, ಇಂಪೋಟರ್ೆಡ್ ಕಾರುಗಳನ್ನು ಬೇರೆ ಯಾವ ನಾಯಕ ನಟರೂ ಹೊಂದಿಲ್ಲ. ಕಾರುಗಳ ಬಗ್ಗೆ ವಿಪರೀತ ಕ್ರೇಜ್ ಇರುವ ದರ್ಶನ್ನ ಹತ್ತಿರ `1.5 ಕೋಟಿ ಬೆಲೆ ಬಾಳುವ `ಹಮ್ಮರ್-ಹೆಚ್3' ಕಾರು ಇದೆ. ಬೆಂಗಳೂರಿನಲ್ಲಿ ಕೆಲವೇ ಬೆರಳಣಿಕೆಯಷ್ಟು ಮಾತ್ರ ವ್ಯಕ್ತಿಗಳು ಹಮ್ಮರ್ ಕಾರುಗಳನ್ನು ಹೊಂದಿದ್ದಾರೆ. ಬಾಲಿವುಡ್ನ ಸುನಿಲ್ ಶೆಟ್ಟಿ, ಹರ್ಭಜನ್ ಸಿಂಗ್ ಹತ್ತಿರ ಈ ಕಾರ್ ಇದೆ. ದರ್ಶನ್ ಇದನ್ನು ನೇರವಾಗಿ ದುಬೈನಲ್ಲಿರುವ ತನ್ನ ಸ್ನೇಹಿತರ ಮೂಲಕ ತರಿಸಿಕೊಂಡಿದ್ದರು. ತಂದ ಆರಂಭದಲ್ಲಿ ಗಾಡಿಯ ರಿಜಿಸ್ಟ್ರೇಷನ್ ಆಗಿಲ್ಲ ಅಂತ 7 ಲಕ್ಷ ದಂಡ ಕಟ್ಟಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಜೊತೆಗೆ `ಟೋಯೋಟಾ ಫಾರ್ಚುನ್', `ಆಡಿ-ಎ6' ನಂತಹ ಇಂಪೋರ್ಟೆಡ್ ಲಕ್ಸುರಿ ಕಾರುಗಳಿವೆ. ರಾಜರಾಜೇಶ್ವರಿನಗರದಲ್ಲಿ ಮನೆ, ಮೈಸೂರಿನಲ್ಲಿ ತೋಟದ ಮನೆ, ಜಮೀನು ಇವೆಲ್ಲಾ ದರ್ಶನ್ ಸಾಮ್ರಾಜ್ಯದ ಸಣ್ಣ ಸ್ಯಾಂಪಲ್ಗಳು. 

ಪ್ರಾಣಿಪ್ರಿಯ
ದರ್ಶನ್ನ ಬಿಡುವಿನ ಸಮಯವೆಲ್ಲಾ ಈ ಪ್ರಾಣಿಪಕ್ಷಿಗಳ ಜೊತೆಯಲ್ಲಿ. ಬೇರೆ ಬೇರೆ ಜಾತಿಯ ಅನೇಕ ಪಕ್ಷಿಗಳು ಅವರ ಮನೆಯಲ್ಲಿವೆ. ಅವರ ತೋಟದ ಮನೆಯಲ್ಲಿ ಕೂಡ ಬೇರೆ ಬೇರೆ ಪ್ರಾಣಿಪಕ್ಷಿಗಳಿವೆ. ಮೈಸೂರು ಮೃಗಾಲಯದಲ್ಲಿನ ಚಿಂಪಾಜಿಯನ್ನು ದರ್ಶನ್ ದತ್ತು ತೆಗೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದರ ಜೊತೆಗೆ ಶ್ವೇತವರ್ಣದ ಕುದುರೆಯನ್ನು ಕೂಡ ಸಾಕಿಕೊಂಡಿದ್ದಾರೆ. ಪ್ರಾಣಿಪಕ್ಷಿಗಳನ್ನು ಸಾಕಲಿಕ್ಕೆ ಲಕ್ಷಾಂತರ ಹಣ ಕೂಡ ವ್ಯಯವಾಗುತ್ತಿದೆ.