Friday 31 January 2014

ಗುರುವಿನ ಋಣ ತೀರಿಸುವದೆಲ್ಲಿಂದ ಬಂತು?

ಮಸಲ್ ಮ್ಯಾನ್ ಸಲ್ಮಾನ್ ಖಾನ್ ಅಭಿನಯದ`ಜೈ ಹೋ' ಸಿನಿಮಾದಲ್ಲಿ ಒಂದು ಥೀಮನ್ನು ಅಳವಡಿಸಿಕೊಂಡಿದ್ದಾರೆ. ಯಾರಾದರೂ ತಮಗೆ ಸಹಾಯ ಮಾಡಿದರೆ, ಅವರಿಗೆ ಥ್ಯಾಂಕ್ಯು ಅಂತ ಹೇಳದೇ, ಅವರು ನೀಡಿದ ಸಹಾಯವನ್ನು, ಕಷ್ಟದಲ್ಲಿರುವ ಮೂವರು ಜನರಿಗೆ ಸಹಾಯ ಮಾಡಿ ಅದರ ಆ ಋಣದ ಭಾರವನ್ನು ಕಡಿಮೆ ಮಾಡಿಕೊಳ್ಳುವುದು, ಆ ಮೂಲಕ ಎಲ್ಲರಿಗೆ ಎಲ್ಲರೂ ಸಹಾಯವಾಗಿ ಒಳ್ಳೆಯ ಸಮಾಜವನ್ನು ಕಟ್ಟುವ ವಸ್ತು ಆ ಚಿತ್ರದಲ್ಲಿತ್ತು.

`ಜೈ ಹೋ' ಸಿನಿಮಾವನ್ನು ನೋಡಿದಾಗ, ನಾನು ಎಂದೋ ಕೇಳಿದ, ಓದಿದ ಗುರುಶಿಷ್ಯರ ಸಂಬಂಧದ ಒಂದು ಘಟನೆ ನೆನಪಾಯಿತು. ಗುರು ಶಿಷ್ಯರ ಮಾತುಕತೆಯ ಈ ಘಟನೆ ಸಿನಿಮಾದಲ್ಲಿ ಕಂಡಂತೆ ನನಗೆ ಭಾಸವಾಯಿತು.

ತುಂಬಾ ಕಡು ಬಡತನದಲ್ಲಿ ಇದ್ದ ಒಬ್ಬ ಅನಾಥ ಹುಡುಗನಿಗೆ, ತಾನು ಓದಬೇಕು, ದೊಡ್ಡ ಅಧಿಕಾರಿಯಾಗಬೇಕು ಅನ್ನುವ ಗುರಿ ಇರುತ್ತದೆ. ತುಂಬಾ ಬುದ್ದಿವಂತನಾಗಿದ್ದ ಆ ಹುಡುಗನಿಗೆ ಶಿಕ್ಷಣ ಅನ್ನುವುದು ಮರೀಚಿಕೆ ಆಗಿರುತ್ತದೆ. ತನ್ನ ಆಸೆಯನ್ನು ಅನೇಕರ ಹತ್ತಿರ ಹೇಳಿಕೊಳ್ಳುತ್ತಾನೆ. ಯಾರೂ ಆತನ ಸಹಾಯಕ್ಕೆ ಬರುವುದಿಲ್ಲ. ಕೊನೆಗೆ ಆ ಅನಾಥ ಹುಡುಗನನ್ನು ತುಂಬಾ ದಿನಗಳಿಂದ ಗಮನಿಸುತ್ತಿದ್ದ, ಹತ್ತಿರ ಶಾಲೆಯ ಗುರುಗಳೊಬ್ಬರು, ಆತನ ಕನಸನ್ನು ಈಡೇರಿಸಲು ಮುಂದೆ ಬರುತ್ತಾರೆ. ಬುದ್ದಿವಂತನಾಗಿದ್ದ ಆ ಅನಾಥ ಹುಡುಗ, ಗುರುಗಳ ಸಹಾಯದೊಂದಿಗೆ ಒಳ್ಳೆಯ ಶಿಕ್ಷಣ ಪಡೆದು, ಪ್ರಜ್ಞಾವಂತನಾಗಿ ಬೆಳೆದು, ಸರ್ಕಾರದ ದೊಡ್ಡ ಅಧಿಕಾರಿಯಾಗುವ ಮಟ್ಟಿಗೆ ಬೆಳೆಯುತ್ತಾನೆ. ಹಣ, ಆಸ್ತಿ, ಅಧಿಕಾರ ಎಲ್ಲವೂ ಆತನ ಸ್ವತ್ತಿನಲ್ಲಿ ಬರುತ್ತದೆ. ಹಾಗಂತ ಆತ ಹಣ, ಶ್ರೀಮಂತಿಕೆ ಬಂದ ಮೇಲೆ ಬದಲಾಗುವುದಿಲ್ಲ. ಹಳೆಯದನ್ನು ಆತ ಮರೆತಿರುವುದಿಲ್ಲ...ತನ್ನನ್ನು ಚೆನ್ನಾಗಿ ಓದಿಸಿದ ಆ ಗುರುಗಳನ್ನು ಆತ ದೇವರಂತೆ ಪೂಜಿಸುತ್ತಿರುತ್ತಾನೆ. ಗುರುವಿನ ಋಣವನ್ನು ತಾನು ಹೊತ್ತಿದ್ದೇನೆ ಅನ್ನುವ ನೋವು ಆತನನ್ನು ದಿನವೂ ಕಾಡುತ್ತಿರುತ್ತದೆ. ಗುರು ಋಣದ ಭಾರವನ್ನು ತೀರಿಸುವ ಬಗೆ ಹೇಗೆ ಅಂತ ಚಿಂತಿಸುತ್ತಿರುತ್ತಾನೆ. ಗುರುವಿಗೆ ಏನಾದರೂ ಉಡುಗೊರೆ ಕೊಟ್ಟು ಅವರ ಸಹಾಯವನ್ನು ಹಿಂತಿರುಗಿಸುವ ಯೋಚನೆ ಮೂಡುತ್ತದೆ. ಗುರುಗಳು ಹಣವನ್ನು ಸ್ವೀಕರಿಸುವುದಿಲ್ಲ ಅನ್ನುವುದನ್ನು ಅರಿತ ಆತ, ಗುರುಗಳಿದ್ದ ಊರಿನಲ್ಲಿ ಒಂದು ದೊಡ್ಡ ಜಾಗ ಪಡೆದು ಒಂದು ಭವ್ಯವಾದ ಬಂಗಲೆಯನ್ನು ಕಟ್ಟಿಸುತ್ತಾನೆ. ಅದು ತಾನು ಗುರುವಿಗೆ ನೀಡುತ್ತಿರುವ ದೊಡ್ಡ ಕಾಣಿಕೆ ಅಂದುಕೊಳ್ಳುತ್ತಾನೆ. ಕೊನೆಗೆ ಆ ಭವ್ಯ ಮನೆ ಕಟ್ಟಿದ ಮೇಲೆ, ತನ್ನ ಕುಟುಂಬದ ಜೊತೆ, ಮನೆಯ ಕೀಯನ್ನು ತೆಗೆದುಕೊಂಡು, ಗುರುಗಳ ಮನೆಗೆ ಹೋಗುತ್ತಾನೆ. ಗುರುಗಳು ಅದೇ ಹಳೆ ಮನೆಯಲ್ಲಿ ವಾಸಿಸುತ್ತಿದ್ದರು. ಮುರುಕಲು ಮನೆಯಲ್ಲಿದ್ದ ಗುರುಗಳಿಗೆ ನಮಸ್ಕರಿಸಿ, ತಾವು ಮಾಡಿದ ಸಹಾಯಕ್ಕಾಗಿ ಗುರುಕಾಣಿಕೆ ಸಲ್ಲಿಸುತ್ತಿರುವುದಾಗಿ ಹೇಳಿ, ಹೊಸದಾಗಿ ಕಟ್ಟಿದ ಭವ್ಯ ಬಂಗಲೆಯ ಮನೆಯ ಕೀಯನ್ನು ಕೊಡುತ್ತಾನೆ. ಹೆಚ್ಚಿನ ಗುರುಗಳು, ಕಥೆಯಲ್ಲಿನ ಗುರುಗಳ ಸ್ಥಾನದಲ್ಲಿದ್ದರೆ, ಶಿಷ್ಯನ ಕಾಣಿಕೆಯನ್ನು ಏಷ್ಟು ಪ್ರೀತಿಯಿಂದ ಕಣ್ಣೊತ್ತಿಕೊಂಡು, ಸ್ವೀಕರಿಸುತ್ತಿದ್ದರೋ ಏನೋ, ಆದರೆ ಕಥೆಯಲ್ಲಿನ ಗುರುಗಳು, ಶಿಷ್ಯನು, ತಮಗೆ ಋಣ ತೀರಿಸುವ ಪರಿ ಕಂಡು ನಗುತ್ತಾರೆ, ಶಿಷ್ಯನಿಗೆ ಮತ್ತೊಮ್ಮೆ ಗುರುಗಳಾಗುತ್ತಾರೆ. ಅಂದು ಆತನಿಗೆ ಬದುಕಿನ ನಿಜವಾದ ಪಾಠವನ್ನು ಹೇಳಿಕೊಡುತ್ತಾರೆ.

`ಮಗಾ... ನಾನು ನಿನ್ನನ್ನು ಚೆನ್ನಾಗಿ ಓದಿಸಿದ್ದರಿಂದ, ನೀನು ಈ ಹಂತದವರೆಗೆ ಬೆಳೆಯಲಿಕ್ಕೆ ಸಾಧ್ಯವಾಗಿದೆ ಅಂತ ನೀನು ಅಂದುಕೊಂಡಿರುವೆ. ಗುರುವಾಗಿ ನಾನು ಅದನ್ನು ಒಪ್ಪಿಕೊಳ್ಳುವೆ. ಅದನ್ನು ನೀನು ಋಣದ ಭಾರ ಅಂತ ಅಂದುಕೊಂಡಿರುವೆ. ಅದಕ್ಕೆ ಗುರುಕಾಣಿಕೆಯಾಗಿ ಇದನ್ನು ನೀನು ನೀಡುತ್ತಿರುವೆ... ಮಗಾ... ಒಂದು ಮಾತನ್ನು ಹೇಳುವೆ, ಯಾವಾಗಲೂ ನೆನಪಿಟ್ಟಿಕೋ, ಈ ಜನ್ಮದಲ್ಲಿ ತಾಯಿಋಣ ಮತ್ತು ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಗುರುವಿನ ಋಣವನ್ನು ತೀರಿಸಬೇಕು ಅಂತ ನೀನು ಅಂದುಕೊಂಡಿದ್ಡರೆ, ಅದನ್ನು ತೀರಿಸಲು ಒಂದು ಮಾರ್ಗವಿದೆ ಅಷ್ಟೇ. ನಾನು ಕಷ್ಟದಲ್ಲಿದ್ದ ನಿನಗೆ ಹೇಗೆ ಓದಲಿಕ್ಕೆ ಸಹಾಯ ಮಾಡಿದೆನೋ,ನೀನು ಅದೇ ರೀತಿ ಇನ್ನು ಮುಂದೆ ನಿನ್ನಂತೆ ಬಡತನದಲ್ಲಿದ್ದ ಹತ್ತಾರು ಹುಡುಗರಿಗೆ ಓದಿಸಲಿಕ್ಕೆ ಸಹಾಯ ಮಾಡು, ಅವರನ್ನು ಶಿಕ್ಷಣವಂತರನ್ನಾಗಿ ಮಾಡು, ಆಗ ನನ್ನ ಋಣ ತೀರಿದಂತೆ' ಅಂತ ಹೇಳುತ್ತಾರೆ. 

ಶಿಷ್ಯನಿಗೆ ಗುರುಗಳು ಹೇಳಿದ ಬದುಕಿನ ಪಾಠ ಅರಿವಾಗುತ್ತದೆ. ಗುರುಗಳ ಮಾತು ಸತ್ಯದರ್ಶನದಂತೆ ತೋರುತ್ತದೆ. ಗುರುಗಳು ತನಗೆ ನೀಡಿದ ಮನೆಯ ಕೀಯನ್ನು ಆತನಿಗೆ ವಾಪಸ್ ಮಾಡಿ, `ನೀನು ನನಗೆ ಕೊಡಬೇಕಿಂದಿದ್ದ ಮನೆಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿಡು, ಆ ಮನೆಯಲ್ಲೇ ಹತ್ತಾರು ಮಕ್ಕಳನ್ನು ಓದಿಸು, ಅವರು ನಿನ್ನಂತೆ ವಿದ್ಯಾವಂತರಾಗಿ, ನಿನ್ನಂತೆ ನಡೆದುಕೊಂಡರೆ, ಈ ಸಮಾಜದಲ್ಲಿ ದೊಡ್ಡ ಬದಲಾವಣೆ ಖಂಡಿತ ಸಾಧ್ಯ' ಅಂತ ಅನ್ನುತ್ತಾರೆ.

ಗುರುಗಳ ಮಾತುಗಳು ಶಿಷ್ಯನ ಮನಮುಟ್ಟುತ್ತದೆ. ಗುರುಗಳಿಗೆ ನೀಡಬೇಕಿಂದಿದ್ದ ಆ ಭವ್ಯ ಬಂಗಲೆ, ಬಡ ಮಕ್ಕಳಿಗೆ ಮೀಸಲಾದ ದೊಡ್ಡ ಆಲಯವಾಗುತ್ತದೆ. ಆ ಮೂಲಕ ಹೊಸ ಪರಂಪರೆಗೆ ಆ ಗುರುಶಿಷ್ಯರು ಕಾರಣರಾಗುತ್ತಾರೆ.

ಏಷ್ಟೋ ವರ್ಷಗಳ ಹಿಂದೆ ಓದಿದ ಈ ಕಥೆ, ಸಲ್ಮಾನ್ ಖಾನನ `ಜೈ ಹೋ ' ಸಿನಿಮಾ ನೋಡಿದಾಗ ನೆನಪಾಯಿತು.