Sunday 4 November 2012

ಮನಸಿನ ಭಾಷೆ ಯಾವುದೇ ಆಗಿರಲಿ, ಮಾತೃಭಾಷೆ ಮಾತ್ರ ಕನ್ನಡವಾಗಿರಲಿ


(ನವೆಂಬರ್ 2 ರಂದು ಕನ್ನಡದ ಜನಪ್ರಿಯ ದಿನಪತ್ರಿಕೆ `ಹೊಸದಿಗಂತ’ ದ  ಸಂಪಾದಕೀಯ ಪುಟಗಳಲ್ಲಿ ಪ್ರಕಟವಾದ ನನ್ನ ಒಂದು ಚಿಂತನ ಬರಹ)
ಕನ್ನಡ ರಾಜ್ಯೋತ್ಸವದ ನೆನಪಿನಲ್ಲಿ ಒಂದು ಲೇಖನ
ಕನ್ನಡ ಭಾಷೆಯ ಮೇಲಾಗುತ್ತಿರುವ ಪರೋಕ್ಷ ದಾಳಿಯ ಕುರಿತು ಬೆಂಗಳೂರಿನಂತಹ ನಗರ ಪ್ರದೇಶದಲ್ಲಾಗುತ್ತಿರುವ ಎರಡು ಘಟನೆಗಳನ್ನು ನವಂಬರ್ ತಿಂಗಳಿನ ಆರಂಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ.  ನನ್ನ ಸ್ನೇಹಿತರಾಗಿದ್ದ ಶಿಕ್ಷಕರೊಬ್ಬರು ಬಂದು ನಿಮ್ಮ ಮನಸಿನ ಭಾಷೆ ಯಾವುದು ಅಂತ ನನ್ನನ್ನು ಕೇಳಿದರು. ಮನಸಿನ ಭಾಷೆ ಅಂದರೆ ಒಂದು ಕ್ಷಣ ಯೋಚಿಸುವವರೇ ಹೆಚ್ಚು. ನನಗೆ ಅವರ ಮಾತು ಅರ್ಥವಾಗಿ `ನನ್ನ ಮನಸಿನ ಭಾಷೆ ಕನ್ನಡವೆಂದೆ'. ಅದಕ್ಕೆ ಪ್ರತಿಯಾಗಿ ಅವರು `ನೋಡಿ, ನಾವು ನೀವೆಲ್ಲಾ ಕನ್ನಡ ಮಾಧ್ಯಮದಲ್ಲಿ ಓದಿದೋರು. ಹಾಗಾಗಿ ನಮ್ಮ ನಿಮ್ಮ ಮನಸಿನ ಭಾಷೆ ಕನ್ನಡವಾಗಿದೆ. ನಮ್ಮ ಮನೆಯ ಮಾತೃಭಾಷೆ ಕನ್ನಡವಾಗಿದ್ದರಿಂದ ನನ್ನ ಮಗಳು ಕೂಡ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾಳೆ. ಆದರೆ ದುರಂತವೆಂದರೆ ಅವಳ ಮನಸಿನ ಭಾಷೆ ಮಾತ್ರ ಇಂಗ್ಲಿಷ್ ಆಗಿದೆ. ನಾನು ಆಕೆಗೆ ಕನ್ನಡದಲ್ಲಿ ಹೇಳಿದರೂ, ಮಾತನಾಡಿಸಿದರೂ ಅದನ್ನು ಆಕೆಯ ಮನಸಿನ ಭಾಷೆ ಇಂಗ್ಲಿಷ್ನಲ್ಲಿ ಅರ್ಥಮಾಡಿಕೊಂಡು ಕನ್ನಡದಲ್ಲಿ ಉತ್ತರ ನೀಡುತ್ತಾಳೆ ಅಂತ ತಮ್ಮ ಅಳಲನ್ನು ತೋಡಿಕೊಂಡರು. ಏಕೆಂದರೆ ಅವರ ಮಗಳು ಇಂಗ್ಲಿಷ್ ಕಾನ್ವೆಂಟ್ನಲ್ಲಿ ಓದುತ್ತಿದ್ದಳು. ಮಕ್ಕಳ ಮುಂದಿನ ಭವಿಷ್ಯಕ್ಕೆ ಇಂಗ್ಲಿಷ್ ಬೇಕೆ ಬೇಕು. ಇದೆಲ್ಲದರ ನಡುವೆ ಮಕ್ಕಳ ಮನಸಿನ ಭಾಷೆಯನ್ನು ಅರ್ಥಮಾಡಿಕೊಂಡ ಬಹಳಷ್ಟು ಹೆತ್ತವರ ಸೂಕ್ಷ್ಮ ಸಂವೇದನೆಯ ನೋವಿನ ಮಾತಿದು. ಇತ್ತೀಚಿಗೆ ಬಿಡುಗಡೆಯಾದ ಬಾಲಿವುಡ್ ಸಿನಿಮಾ `ಇಂಗ್ಲಿಷ್-ವಿಂಗ್ಲಿಷ್' ಸಿನಿಮಾದಲ್ಲಿ ಶ್ರೀದೇವಿಯ ಪಾತ್ರವೂ ಕೂಡ ನೋವಿನ ಚಿಂತನೆಗೆ ಸ್ವಲ್ಪ ಇಂಬು ನೀಡುತ್ತದೆ.

ಮನಸಿನ ಭಾಷೆ ಅಥವಾ ಯೋಚನಾ ಭಾಷೆ, ಇದನ್ನು ಇಂಗ್ಲೀಷ್ನಲ್ಲಿ `ಥಿಂಕಿಂಗ್ ಲಾಂಗ್ವೇಜ್ ಅಂತ ಸರಳವಾಗಿ ಹೇಳಬಹುದಷ್ಟೇ. ಸಾಮಾನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು, ಮಾತೃಭಾಷೆ ಕನ್ನಡವಾಗಿದ್ದವರು, ಮೊದಲು ಕನ್ನಡವನ್ನು ತುಂಬಾ ಸ್ಪಷ್ಟವಾಗಿ, ಆಳವಾಗಿ ಕಲಿಯುತ್ತಾರೆ. ಹಾಗಾಗಿ ಕನ್ನಡ ಭಾಷೆಯ ಎಲ್ಲ ಅಕ್ಷರಗಳು ಅವರ ತಲೆಯಲ್ಲಿ ಹೊಕ್ಕು ಬಿಟ್ಟಿರುತ್ತವೆ. ಸುತ್ತಲಿನ ಕನ್ನಡದ ವಾತಾವರಣ ಕೂಡ ಅವರ ಮನಸ್ಸಿನ ಮೇಲೆ ಗಾಢವಾಗಿ ಬೀರಿರುತ್ತೆ.  ಮನಸ್ಸಿನಲ್ಲಿ ಕನ್ನಡದ ಅಡಿಪಾಯ ಸರಿಯಾಗಿ ಬಿದ್ದಮೇಲೆ ಇಂಗ್ಲಿಷ್ ಕಲಿಯಲಿಕ್ಕೆ ಪ್ರಾರಂಭಿಸುತ್ತಾರೆ. ಸಾಧಾರಣವಾಗಿ ಇಂಗ್ಲಿಷ್ನ್ನು ಕಲಿತ ಮೇಲೆ ಪುಸ್ತಕದಲ್ಲಿನ ಇಂಗ್ಲಿಷ್ ಪದಗಳು,ವಾಕ್ಯಗಳು ಮತ್ತು ನಾಮಪದಗಳನ್ನು  ಓದಿದರೂ ಮೊದಲು ಅದನ್ನು ಮನಸ್ಸಿನಲ್ಲಿ ಕನ್ನಡಕ್ಕೆ ಭಾಷಾಂತರ/ಟ್ರಾನ್ಸ್ಲೇಟ್ ಮಾಡಿಕೊಂಡು ಆಂಗ್ಲ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಹಾಗಾಗಿ ಇಂಗ್ಲಿಷ್ ನಮಗೆ ಸುಲಭವಾಗಿ ಅರ್ಥವಾಗಿಬಿಡುತ್ತದೆ. ಮಾರ್ಕೆಟ್ನ ಹಣ್ಣಿನ ಅಂಗಡಿಯಲ್ಲಿ ಕಣ್ಣಿಗೆ ಕಾಣುವ ಆ್ಯಪಲ್ ನಮ್ಮ ಮನಸಿನ ಭಾಷೆಯಲ್ಲಿ ಸೇಬು ಹಣ್ಣು ಅಂತ ಭಾಷಾಂತರಿಸಿಕೊಂಡು ಅರ್ಥಮಾಡಿಕೊಳ್ಳುತ್ತದೆ.  ನಮ್ಮ ಎದುರಿಗೆ ಯಾರೇ ಇಂಗ್ಲಿಷ್ನಲ್ಲಿ ಮಾತನಾಡಿದರೂ, ನಮ್ಮ ಮನಸ್ಸು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಅರ್ಥಮಾಡಿಕೊಳ್ಳುತ್ತದೆ, ಆಮೇಲೆ ನಾವು ಅದಕ್ಕೆ ಉತ್ತರವಾಗಿ ಇಂಗ್ಲಿಷ್ನಲ್ಲೇ ಪ್ರತಿಕ್ರಯಿಸುತ್ತೇವೆ. ಹೀಗೆ ನಮ್ಮ ಮನಸಿನ ಭಾಷೆ ಇಲ್ಲವೇ ಯೋಚನಾ ಭಾಷೆ ರೀತಿಯಾಗಿ ಕೆಲಸ ಮಾಡುತ್ತದೆ. ಇಂದಿಗೂ  ಕನ್ನಡಭಾಷೆಯ ಬೇರನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಅನೇಕರಿಗೆ ಇದರ ಸ್ಪಷ್ಟತೆ ಕಣ್ಣಿಗೆ ಕಟ್ಟುತ್ತದೆ. ಆಂಗ್ಲ ಸಾಹಿತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡವರು, ಓದಿದವರು, ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವವರು ವಿಶೇಷವಾಗಿ ಮನಸ್ಸಿನ ಭಾಷೆ ಕನ್ನಡ ಆಗಿದ್ದವರಿಗೆ ಇದು ದಿನನಿತ್ಯದ ಪರಿಪಾಠವಾಗಿರುತ್ತದೆ. ನಾವು ಯಾವುದೇ ಭಾಷೆಯನ್ನು ಕಲಿಯುವಾಗಲೂ ಮನಸಿನ ಭಾಷೆಯ ಭಾಷಾಂತರ ಆದಾಗಲೇ ಮಾತ್ರ ಅನೇಕ ಭಾಷೆಗಳನ್ನು ನಾವು ಅರ್ಥಮಾಡಿಕೊಳ್ಳಬಹುದು, ಕಲಿಯಬಹುದು. ಹೀಗೆ ಕರ್ನಾಟಕದವನಿಗೆ ಕನ್ನಡ ಮನಸಿನ ಭಾಷೆಯಾದರೆ, ತಮಿಳು, ಮಲಯಾಳಿ, ಭೋಜ್ಪುರಿ, ಅಸ್ಸಾಮಿಯವನಿಗೆ ಆತನ ಮಾತೃಭಾಷೆಯೇ ಯೋಚನಾ ಭಾಷೆಯಾಗಿರುತ್ತದೆ. ಮುಖ್ಯವಾಗಿ ಆತ ಮಾತೃಭಾಷೆಯಲ್ಲಿ ಮೂಲ ಶಿಕ್ಷಣ ಪಡೆದಿರಬೇಕು.

ಇತ್ತೀಚಿನ ದಿನಗಳಲ್ಲಿ ನಮ್ಮ ಜನರೇಷನ್ನ ಮಕ್ಕಳ ಮನಸಿನ ಭಾಷೆ ಬದಲಾಗುತ್ತಿದೆ. ಕನ್ನಡ, ತಮಿಳು, ಮರಾಠಿ ಇನ್ನೂ ಮುಂತಾದ ನಮ್ಮ ದೇಶದ ಪ್ರಾದೇಷಿಕ ಜನರ ಮನಸಿನ ಭಾಷೆ ಕೂಡ ಇಂಗ್ಲಿಷ್ ಆಗುತ್ತಿದೆ. ಇದಕ್ಕೆ ಕಾರಣ ಕೂಡ ತುಂಬಾ ನೇರವಾಗಿದೆ. ಇಂಗ್ಲಿಷ್ ಭಾಷೆಯ ಅತಿಯಾದ ಹೇರಿಕೆ. ಇಂಗ್ಲಿಷ್ ಕಲಿಯದೇ ಇದ್ದರೇ ಮಕ್ಕಳಿಗೆ ಭವಿಷ್ಯವೇ ಇಲ್ಲ ಅನ್ನುವ ಕೆಟ್ಟ ನಂಬಿಕೆ ಎಲ್ಲೆಡೆ ತಳವೂರಿದೆ. ಇಂದಿಗೂ ಜಪಾನಿಗರು, ಚೀನಿಯರು, ಫ್ರಾನ್ಸ್ನವರು ತಮ್ಮ ತಮ್ಮ ಮಾತೃಭಾಷೆಯಲ್ಲೇ ಎಲ್ಲವನ್ನು ಕಲಿಯುತ್ತಿದ್ದಾರೆ. ಜಗತ್ತನ್ನು ಅರಿಯುತ್ತಿದ್ದಾರೆ. ಅವರಿಗೆ ಇಂಗ್ಲಿಷ್ ಬೇಕೆ ಬೇಕು ಅನ್ನುವ ಅನಿವಾರ್ಯತೆ ಕಾಡುತ್ತಿಲ್ಲ. ಹೀಗಿದ್ದರೂ ಇಂಗ್ಲಿಷನ್ನು ಕಲಿಯದೇ ಜಗತ್ತಿನಲ್ಲಿ ಅವರು ಸಾಧನೆ ಮಾಡುತ್ತಿಲ್ಲವೇ? ಇಂದಿಗೂ ನೀವು ಬಳಸುವ ನೋಕಿಯಾ ಕಂಪನಿಯ ಮೊಬೈಲ್ನಲ್ಲಿ, ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಚೀನಿಯರ ಹಾಗೂ ಜಪಾನ್ ಭಾಷೆಯನ್ನುಕಾಣಬಹುದು. ಅವರು ತಮ್ಮ ರಾಷ್ಟ್ರಭಾಷೆಗೆ ಕೊಟ್ಟ ಪ್ರಾಮುಖ್ಯತೆಯನ್ನು ನಾವು ನಮ್ಮ ಹಿಂದಿ ಭಾಷೆಗೆ ನೀಡಿಲ್ಲ. ತಮ್ಮ ಮಕ್ಕಳನ್ನು ಒಳ್ಳೆಯ ಇಂಗ್ಲಿಷ್ ಕಲಿಸುವ ಕಾನ್ವೆಂಟ್ಗೆ ಸೇರಿಸಬೇಕು ಅನ್ನುವ ಗುಂಗಿನಲ್ಲಿ ಮಕ್ಕಳನ್ನು ಕ್ರೈಸ್ರ ಮಿಷನರಿಗಳು ನಡೆಸುವ ಕಾನ್ವೆಂಟ್ಗಳು, ಇಲ್ಲವೇ ಇವುಗಳಿಂದ ಪ್ರೇರೇಪಿತವಾದಂತಹ ಸ್ಕೂಲ್ಗಳಲ್ಲಿ ಮಕ್ಕಳನ್ನು ಸೇರಿಸುತ್ತಾರೆ. ಕ್ಲಾಸ್ನಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುವ ಸ್ಕೂಲ್ಗಳು, ಅತಿಯಾಗಿ ಇಂಗ್ಲಿಷ್ ಭಾಷೆಯನ್ನು ಎಳೆಯ ಮಕ್ಕಳ ಮನಸ್ಸಿನ ಮೇಲೆ ಹೇರುತ್ತಾರೆ. ಹೀಗಾಗಿ ದಂಡ, ಶಿಕ್ಷೆ ಅನ್ನುವ ಹೆದರಿಕೆಯಲ್ಲಿ ಮಕ್ಕಳು ಕೂಡ  ಸಂಪೂರ್ಣವಾಗಿ ಇಂಗ್ಲಿಷ್ನಲ್ಲಿ ಚಿಂತಿಸಲು, ಬರೆಯಲು, ಓದಲು ಪ್ರಾರಂಭಿಸುತ್ತಾರೆ. ಹೀಗೆ ಮಕ್ಕಳ ಮನಸ್ಸಿನ ಭಾಷೆಯಲ್ಲಿ ಇಂಗ್ಲಿಷ್ ಬಂದು ಆವರಿಸಿಕೊಳ್ಳುತ್ತದೆ. ಅವರವರ ಮಾತೃಭಾಷೆಯ ಮೇಲಿನ ಮೋಹ ಕಡಿಮೆಯಾಗುತ್ತದೆ. ಮನೆಯಲ್ಲಿ ಅಮ್ಮ-ಅಪ್ಪ ಏನೇ ಹೇಳಿದರೂ, ಕಾನ್ವೆಂಟ್ನಲ್ಲಿ ಓದುವ ಮಗು ಮೊದಲು ಮನೆಭಾಷೆಯಲ್ಲಿ ಕೇಳಿಸಿಕೊಂಡು ಇಂಗ್ಲಿಷ್ನಲ್ಲಿ ಅರ್ಥಮಾಡಿಕೊಳ್ಳುತ್ತದೆ. ಅಮ್ಮ `ಸಕ್ಕರೆ ತಗೊಂಡು ಬಾ' ಅಂತ ಮಗುವಿಗೆ ಹೇಳಿದರೆ, `ಎನು ಶುಗರ್ ಅಲ್ವಾ?' ಅಂತ ಕೇಳಲಾರಂಭಿಸುತ್ತವೆ. ನಾವು ಕನ್ನಡದಲ್ಲಿ ಏನೇ ಹೇಳಿದರೂ, ಅದು ಮಕ್ಕಳ ಮನಸ್ಸಿಗೆ ಅರ್ಥವಾಗುವುದು ಇಂಗ್ಲಿಷ್ನಲ್ಲೇ. ಹೀಗೆ ಮಕ್ಕಳು ಯಾವುದನ್ನೇ ನೋಡಿದರೂ, ಏನೇ ಅರ್ಥಮಾಡಿಕೊಳ್ಳಬೇಕಾದರೂ ಅದನ್ನು ಕನ್ನಡದಿಂದ ಇಂಗ್ಲಿಷ್ಗೆ ಭಾಷಾಂತರಿಸಿ ಅರ್ಥಮಾಡಿಕೊಳ್ಳುತ್ತಾರೆ. ಇದು ಇಂದಿನ ಮಕ್ಕಳ ಮನಸ್ಸಿನಲ್ಲಾಗುತ್ತಿರುವ ದೊಡ್ಡ ಪರಿಣಾಮ. ತಮಿಳು,ಕೇರಳದವರಿಗಿಂತ ಕನ್ನಡದಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ ಅಂತ ಅಂದಾಜಿಸಬಹುದು. ಹೀಗೆ ಮನಸಿನ ಭಾಷೆ ಮತ್ತು ಮಾತೃಭಾಷೆಯ ನಡುವೆ ಸಣ್ಣ ತಿಕ್ಕಾಟ ನಡೆಯುತ್ತಲೇ ಇದೆ. ದೂರದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಮಕ್ಕಳಲ್ಲಿ ರೀತಿಯ ಸಮಸ್ಯೆ ಶೇ.70-80ರಷ್ಟಿದೆ.

ಎರಡನೇ ಘಟನೆಯನ್ನು ಹೇಳುವುದಾದರೆ, ಕೆಲವು ದಿನಗಳ ಹಿಂದೆ, ಕನ್ನಡ ಸಾಹಿತ್ಯ, ಬರವಣಿಗೆಯಲ್ಲಿ ಈಗಾಗಲೇ ಹೆಸರುಮಾಡಿರುವವರು, ಮಾಡುತ್ತಿರುವವರು ಇನ್ನು ಅನೇಕರು ಒಬ್ಬ ಹಿರಿಯ ಸಂಗೀತ ಶಿಕ್ಷಕಿಯ ಮನೆಯಲ್ಲಿ  ಎಲ್ಲರೂ ಸೇರಿದ್ದೇವು. ಅವರ ಮನೆಯಲ್ಲಿ ಕವನ ವಾಚನ, ಮಾತುಕತೆ ನಡೆಯಿತು. ಒಟ್ಟಾರೆಯಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಕನ್ನಡದ ಸಾಹಿತ್ಯದ ಬಗ್ಗೆ ಚರ್ಚೆ ಮಾಡಿದೆವು. ನಾವು ಸೇರಿದ್ದ ಹಿರಿಯ ಸಂಗೀತ ಶಿಕ್ಷಕಿ ಮೊದಲಿನಿಂದಲೂ ಕನ್ನಡ ಕೆಲಸಕ್ಕೆ ಸಹಾಯ ಹಸ್ತ ನೀಡುತ್ತಾ ಬಂದವರು. ಅವರಿಗೆ ಸುಮಾರು ಐದಾರು ಮೊಮ್ಮಕ್ಕಳಿದ್ದರು. ಅವರೆಲ್ಲಾ ಮಾತನಾಡುತ್ತಿದ್ದುದು ಇಂಗ್ಲಿಷ್ನಲ್ಲಿ. ಪುಟ್ಟ ಪುಟ್ಟ ಮಕ್ಕಳೆಲ್ಲಾ ಇಂಗ್ಲಿಷ್ನಲ್ಲೇ ಅವರವರ ಅಪ್ಪ ಅಮ್ಮನನ್ನು ಮಾತನಾಡಿಸುತ್ತಿದ್ದರು. ಅದಕ್ಕೆ ಅವರ ಹೆತ್ತವರು ಕೂಡ ಇಂಗ್ಲಿಷ್ನಲ್ಲೇ ಉತ್ತರ ಕೊಡುತ್ತಿದ್ದರು. ಸೇರಿದ ನಮಗೆ ಏಲ್ಲೋ ಒಂದು ಕಡೆ ಸಣ್ಣ ಮುಜುಗರವೆನಿಸಿತು. ಅಲ್ಲಿ ನಮ್ಮ ಜೊತೆ ಬಂದಿದ್ದ  ಹಿರಿಯರೊಬ್ಬರು ನಿಮ್ಮ ಮಾತೃಭಾಷೆ ಯಾವುದು ಅಂತ ಕೇಳೇ ಬಿಟ್ಟರು. ಅದಕ್ಕೆ ಶಿಕ್ಷಕಿ ನಮ್ಮ ಮಾತೃಭಾಷೆ ಕನ್ನಡವೇ. ಆದರೆ ನಮ್ಮ ಮಕ್ಕಳ ಕಾಲದಲ್ಲಿ ಇಂಗ್ಲಿಷ್ ಮಾತೃಭಾಷೆಯಾಗಿದೆ ಅಂತ ಹೇಳಿದರು. ಅವರ ಮಾತು ನಮಗೆ ರುಚಿಸಲಿಲ್ಲ. ಜೊತೆಗೆ ಅದು ಎಲ್ಲರೂ ಹೇಳುವ ಸಾಧಾರಣ ಉತ್ತರವಾಗಿತ್ತು. ಭಾರತದಲ್ಲಿ, ವಿಶೇಷವಾಗಿ ಕನ್ನಡನಾಡಿನಲ್ಲಿ ಹುಟ್ಟಿದವರಿಗೆ ಇಂಗ್ಲಿಷ್ ಹೇಗೆ ಮಾತೃಭಾಷೆಯಾಗುತ್ತದೆ. ಇಂಗ್ಲಿಷ್ ಕೇವಲ ಕಲಿಕೆ ಭಾಷೆ, ವ್ಯವಹಾರಿಕ ಭಾಷೆ ಅಂತ ಮಾತ್ರ ಹೇಳಬಹುದು. ಇಂಗ್ಲಿಷ್ ನಮ್ಮ ಮಾತೃಭಾಷೆಯಾಗಲು ನಾವೇನು ಅಮೇರಿಕನ್ನರೇ ಇಲ್ಲವೇ ಇಂಗ್ಲೆಂಡ್ನವರೇ? ನಮಗೆ ನೋವಾದಾಗ `ಅಯ್ಯೋ...ಅಮ್ಮ..!'  ಅಂತ ಹೇಳುತ್ತೇವೆಯೇ ಹೊರತು ` ಮೈ ಗಾಡ್' ಅಂತ ನಮ್ಮ ಬಾಯಿಗೆ ಮೊದಲು ಬರುವುದಿಲ್ಲ. ಮಾತೃಭಾಷೆ ಅನ್ನುವುದು ಹೃದಯದ ಭಾಷೆ.  ಭಾಷೆಯಲ್ಲಿ ನಮ್ಮ ನೋವಿದೆ, ಖುಷಿಯಿದೆ, ನಮ್ಮ ಜೀವವೇ ಮಾತಿನಲ್ಲಿ ಅಡಗಿ ಕುಳಿತಿರುತ್ತದೆ. ಹೀಗಿರುವಾಗ ಇಂಗ್ಲಿಷ್ ನಮ್ಮ ಮಾತೃಭಾಷೆಯಾಗುವ ಅರ್ಹತೆ ಇದೆಯೇ? ಇಂಗ್ಲಿಷ್ನಲ್ಲಿ ಒಮ್ಮೆ ಚೆನ್ನಾಗಿ ಓದಲು, ಬರೆಯಲು, ವ್ಯವಹರಿಸಲು, ದೇಶ ಸುತ್ತಲು ಕಲಿತ ಮೇಲೆ ಅದರ ಸ್ಥಾನವನ್ನು ನಾವು ಅರಿತು ಅದನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡಬೇಕು. ಅದೇ ತಟ್ಟೆ ತುಂಬುವ ಅನ್ನವಾಗಬಾರದು. ಇಂದು ಹೆಚ್ಚಿನ ಕನ್ನಡಿಗರು ತಮ್ಮ ತಮ್ಮ ಮಾತೃಭಾಷೆ ಕನ್ನಡವನ್ನು ಮರೆಯುತ್ತಿದ್ದಾರೆ. ಅವರವರ ಮನಸಿನ ಭಾಷೆ ಯಾವುದೇ ಆಗಲಿ, ಮಾತೃಭಾಷೆಯಾದ ಕನ್ನಡವನ್ನು ಮಾತ್ರ ಖಂಡಿತ ಎಂದಿಗೂ ಮರೆಯಬಾರದು. ಇಂಗ್ಲಿಷ್ ಭಾಷೆಗಿಂತಲೂ ಶ್ರೀಮಂತ ಹಾಗೂ ಹಿನ್ನಲೆ, ಸಂಸ್ಕೃತಿಯನ್ನು ನಮ್ಮ ಭಾರತೀಯ ಭಾಷೆಗಳು ಹೊಂದಿವೆ. ನಮ್ಮ ನಮ್ಮ ಭಾಷೆಯಲ್ಲಿ ಮಾತನಾಡುವ, ಹಂಚಿಕೊಳ್ಳುವ ಖುಷಿ, ನೋವು ಇಂಗ್ಲಿಷ್ನಲ್ಲಿಲ್ಲ. ನೀವು ಇದುವರೆಗೂ ಹೇಳಿರುವುದು ತಪ್ಪು, ಇಂಗ್ಲಿಷ್ ಭಾಷೆಯೇ ಸರ್ವಶ್ರೇಷ್ಟ ಅಂತ ವಾದಿಸುವವರೂ ಕೂಡ ಇರಬಹುದು. ಆದರೆ ಬೆಂಗಳೂರಿಂತಹ ನಗರ ಪ್ರದೇಶಗಳಲ್ಲಿ ವಾಸಿಸುವ ಪ್ರತಿ ಹತ್ತು ಕನ್ನಡ ಮನೆಗಳಲ್ಲಿ ಆರು ಮನೆಗಳು ಮೇಲಿನ ಎರಡು ಘಟನೆಗಳಲ್ಲಿ ಯಾವುದಾದರೂ ಒಂದಕ್ಕೆ ಉದಾಹರಣೆಯಾಗುತ್ತಾರೆ. ರೀತಿಯ ಕನ್ನಡ ಅನಾರೋಗ್ಯ ವಾತಾವರಣವನ್ನು  ಮೊದಲು ನಮ್ಮ ಮನೆಯಲ್ಲಿ ಇಲ್ಲದಂತೆ ಮಾಡಿಕೊಂಡಾಗ ಮಾತ್ರ ಮುಂದಿನ ಪೀಳಿಗೆಯ ನಡುವೆ ಒಳ್ಳೆಯ ಕನ್ನಡ ಮನಸ್ಸುಗಳನ್ನು ಕಾಣಿಕೆಯಾಗಿ ನಮ್ಮ ನಾಡಿಗೆ ನೀಡಬಹುದು.