Saturday 15 September 2012

ಗಣೇಶನ ನೆನಪು!

ಪ್ರತಿವರ್ಷ ಗಣೇಶನ ಹಬ್ಬ ಬಂದಾಗೆಲ್ಲಾ ಆಗುವ ಸಂತೋಷ  ಅಷ್ಟಿಷ್ಟಲ್ಲ. ಇದಕ್ಕೆ ನೂರು ಕಾರಣಗಳಿವೆ, ಹತ್ತು ಹಲವು ನೆನಪುಗಳಿವೆ. ಅದರಲ್ಲಿ ಒಂದು ನೆನಪು ಫೋಟೋ.
ನಾನು ಧರ್ಮಸ್ಥಳದ ಉಜಿರೆಯಲ್ಲಿ ಪಿಯುಸಿ ಓದುತ್ತಿದ್ದಾಗ ಸಿದ್ದವನದಲ್ಲಿ ಉಳಿದುಕೊಂಡಿದ್ದೆ. ಸಿದ್ದವನದಲ್ಲಿ ಪ್ರತಿವರ್ಷ ಗಣೇಶನ ಮೂರ್ತಿಯನ್ನು ಅಲ್ಲಿದ್ದ ವಿಧ್ಯಾರ್ಥಿಗಳೇ ಮಾಡುತ್ತಿದ್ದರು. 2002 ನೇ ಇಸವಿಯಲ್ಲಿ ನಾನು ಸೆಕೆಂಡ್ ಪಿಯುಸಿ ಮಾಡುವಾಗ ಅಲ್ಲಿದ್ದ ಗಣೇಶ  ಮೂರ್ತಿಯನ್ನು ನಾನು ಮಾಡಿದ್ದೆ. ಸುಮಾರು ನಾಲ್ಕು ಅಡಿಯ ಗಣೇಶ್ ಮೂರ್ತಿಯನ್ನು ನಾನು ಒಬ್ಬನೇ ಮಾಡಿದ್ದೆ. ಇದು ನನ್ನ ಪಾಲಿಗೆ ಒಲಿದ ದೇವರ ಕೆಲಸವಾಗಿತ್ತು.
ಅಲ್ಲಿಯವರೆಗೆ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದ ನಾನು, ಇಷ್ಟು ದೊಡ್ಡ ಗಾತ್ರದ ಗಣಪತಿಯನ್ನು ಮಾಡಿದ್ದು ಇದೇ ಮೊದಲು. ನಿಜವಾಗಿಯೂ ದೊಡ್ಡ ಗಣೇಶನನ್ನು  ಚಿಕ್ಕವಯಸ್ಸಿನಲ್ಲಿ ನಾನು ಮಾಡಿದ್ದೆ  ಅನ್ನುವುದನ್ನು ಈಗ ನಂಬಲು ನನಗೆ ಕಷ್ಟವಾಗುತ್ತಿದೆ. ಖಂಡಿತ ಕೆಲಸಕ್ಕೆ ಗಣೇಶನ ಪ್ರೇರಣೆ ಇತ್ತು.

ನಾನು ಗಣೇಶನನ್ನು ಮಾಡಿದುದನ್ನು ಸಿಬಂತಿ ಪದ್ಮನಾಭನವರು ಕಾಲೇಜಿನ ವಾರ್ಷಿಕ ಪತ್ರಿಕೆಯಲ್ಲಿ  ನನ್ನ ಸಂದರ್ಶನ ಮಾಡಿದ್ದರು. ಸಂದರ್ಶನದ ಮೂಲಕ ಬನವಾಸಿಯ ಹುಡುಗನೊಬ್ಬ ಮಾಡಿದ  ಕೆಲಸ ಇಡೀ ಕಾಲೇಜಿಗೆ ಗೊತ್ತಾಗಿತ್ತು. ಸೈನ್ಸ್ ಸೆಕ್ಷನ್ನಲ್ಲಿ ನಾನು ಇದ್ದೇನೋ ಅನ್ನುವುದು  ನನ್ನ ಕ್ಲಾಸ್ ಮೇಟ್ ಗಳಿಗೂ ಗೊತ್ತಿರಲಿಲ್ಲ.ಆದರೆ ಮೂರ್ತಿ ಮಾಡಿದ  ಮೇಲೆ ಕ್ಲಾಸ್ ಮೇಟ್ಗಳೆಲ್ಲಾ ನನ್ನ ಮಾತನಾಡಿಸತೊಡಗಿದರು. ಆಗಲೇ ನಾನು ಅವರ ಜೊತೆ ಎರಡು ವರ್ಷ ಕ್ಲಾಸಲ್ಲಿ ಇದ್ದೆ ಎಂಬುದು ಕ್ಲಾಸ್ ಮೇಟ್ ಗಳಿಗೆ ಗೊತ್ತಾಗಿದ್ದು. ಗಣೇಶ ನನಗೆ ಸಿದ್ದವನ ಹಾಗೂ ಕಾಲೇಜಿನಲ್ಲಿ ಒಳ್ಳೆಯ ಹೆಸರು ತಂದುಕೊಟ್ಟಿದ್ದ.
 ಮಣ್ಣಿನಿಂದ ಗಣೇಶನನ್ನು ಮಾಡುವುದು ನಮ್ಮ ಕುಟುಂಬದಿಂದ ಬಂದ ನಮಗೆ ಕಲೆಯಾಗಿತ್ತು. ನಾನು ಮಾಡಿದ ಗಣೇಶ್ ಮೂರ್ತಿಯನ್ನು ನೋಡಿ ಮೆಚ್ಚಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹಗ್ಗೆಡೆಯವರು ಪಂಚಲೋಹದ ನಾಟ್ಯ ಗಣಪತಿಯನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ಅವರು ನೀಡಿದ ಉಡುಗೊರೆ ಇಂದಿಗೂ  ದೇವರಕೋಣೆಯಲ್ಲಿ  ಬೆಳಗುತ್ತಿದೆ. ವಿರೇಂದ್ರ ಹೆಗ್ಗರೆಯವರಿಗೆ ಸದಾ ಚಿರಋಣಿಯಾಗಿರುತ್ತೇನೆ.